ರೈತರ ಉದ್ಧಾರಕ್ಕೆ 'ರೈತ ಕೇಂದ್ರಿತ ಕೃಷಿ ಯೋಜನೆ' ಅಗತ್ಯ: ಸಿಎಂ ಬೊಮ್ಮಾಯಿ
ಆಧುನಿಕರಣ ಮತ್ತು ಸಂಶೋಧನೆಗಳು ಮಧ್ಯೆ ದೇಶದ 130 ಕೋಟಿ ಜನರಿಗೆ ಆಹಾರ ಭದ್ರತೆ ಸಾಧಿಸಲಾಗಿದೆ. ಆದರೆ ಅನ್ನು ನೀಡುವ ರೈತ ಮಾತ್ರ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದಾನೆ ಎಂದು ಬಸವರಾಜ ಬೊಮ್ಮಾಯಿ ವಿಷಾಧಿಸಿದರು.
ಬೆಂಗಳೂರು, ಫೆಬ್ರವರಿ 03: ಆಧುನಿಕರಣ ಮತ್ತು ಸಂಶೋಧನೆಗಳು ಮಧ್ಯೆ ದೇಶದ 130 ಕೋಟಿ ಜನರಿಗೆ ಆಹಾರ ಭದ್ರತೆ ಸಾಧಿಸಲಾಗಿದೆ. ಆದರೆ ಅನ್ನು ನೀಡುವ ರೈತ ಮಾತ್ರ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದಾನೆ. ರೈತ ಕೇಂದ್ರಿಕೃತ 'ಕೃಷಿ ಯೋಜನೆ'ಗಳು ರೂಪಿಸಿದಾಗ ಮಾತ್ರ ರೈತರು ಉದ್ಧಾರವಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಕಾಸಿನಸರ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮೌಲ್ಯಗಳಿಂದ ಕೂಡಿದ ಕಾಯಕ ಕೃಷಿ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಒಕ್ಕಲುತನವಿರುತ್ತದೆ. ಅನಿಶ್ಚಿತತೆಯ ಮಧ್ಯೆಯೂ ರೈತರು ಸದಾ ಭರವಸೆ ಉಳ್ಳವರಾಗಿದ್ದಾರೆ. ಈ ಭೂಮಿಯಲ್ಲಿ ಒಂದು ಕಾಳು ಹಾಕಿದರೆ ನೂರಾರು ಕಾಳು ಬೆಳೆಯಬಹುದು ಎಂದು ರೈತನ ಮಹತ್ವ ತಿಳಿಸಿದರು.
ನಮ್ಮ ಸರ್ಕಾರ ರೈತನ ಬದುಕಿಗೆ ಎಲ್ಲ ಸಹಾಯ, ಕೃಷಿ ಉತ್ತೇಜನದಂತ ಕಾರ್ಯಕ್ರಮ ಮೂಲಕ ಅಗತ್ಯ ಪ್ರಯತ್ನ ಮಾಡುತ್ತಿದೆ. ವರ್ಷಗಳ ಹಿಂದೆ ಹೆಣ್ಣುಮಕ್ಕಳ ಭ್ರೂಣ ಹತ್ಯೆ ಹೆಚ್ಚಿತ್ತು. ತನ್ನ ಅಣ್ಣತಮ್ಮಂದಿರ ರೀತಿ ನನ್ನನ್ನೂ ಉಳಿಸಿಕೋ, ನಾನು ಕುಟುಂಬವನ್ನು ನೋಡಿಕೊಳ್ಳುತ್ತೇನೆ ಎಂದು ಹೆಣ್ಣು ಭ್ರೂಣ ಹೇಳುವಂತೆ ಭೂಮಿತಾಯಿಯು ತಾನು ಜನರಿಗೆ ಅನ್ನ, ಬದುಕು, ಜೀವ, ಆಸರೆ ನೀಡುತ್ತಿದ್ದರೂ ನನಗೇಕೆ ವಿಷ ಬೆರೆಸುತ್ತೀರಿ ಎಂದು ಭೂಮಿ ಕೂಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಎಲ್ಲರ ಅನ್ನದ ಚೀಲವೂ ತುಂಬಬೇಕು. ಅಂತೆಯೇ ಭೂಮಿಗೆ ವಿಷ ಬೆರೆಸಬಾರದೆಂಬ ಸವಾಲು ನಮ್ಮ ಮುಂದಿದೆ. ಇದನ್ನು ಸಮರ್ಥವಾಗಿ ನಿರ್ವಹಿಸುವುದು ಬಹಳ ಮುಖ್ಯ ಎಂದು ಅವರು ತಿಳಿಸಿದರು.

ಭವಿಷ್ಯದಲ್ಲಿ ಆಹಾರ ಹಾಹಾಕಾರ
ಬರುವ ದಿನಗಳಲ್ಲಿ ವಿಶ್ವದಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾಗಲಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ಸಾವಯವ ಕೃಷಿ, ನೈಸರ್ಗಿಕ ಕೃಷಿಯನ್ನು ಹಂತಹಂತವಾಗಿ, ವ್ಯವಸ್ಥಿತವಾಗಿ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಬೇಕು. ಈ ನಿಟ್ಟಿನಲ್ಲಿ ತಜ್ಞರು ಹೆಚ್ಚು ಗಮನಹರಿಸಬೇಕಿದೆ. ಆಹಾರದ ಸುರಕ್ಷತೆಯನ್ನು ಗಮನದಲ್ಲಿರಿಸಿ, ಸಾವಯವ ಕೃಷಿಯ ಮೂಲಕ ಹೆಚ್ಚು ಆಹಾರ ಉತ್ಪಾದನೆಗೆ ಒತ್ತು ನೀಡಬೇಕು. ಆರೋಗ್ಯಕರ ಆಹಾರ ಉತ್ಪಾದನೆ ಮೂಲಕ ದೊಡ್ಡ ಬದಲಾವಣೆಯನ್ನು ತರಬಹುದಾಗಿದೆ ಎಂದರು.
ಕಾಸಿನಸರ ಹೆಣ್ಣುಮಕ್ಕಳ ಕನಸು
ಮೌಲ್ಯಾಧಾರಿತ ಹಾಗೂ ಗುಣಾತ್ಮಕ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರಬೇಕು. ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಕಾಸಿನಸರ ಸರ ಮಾಡಿಸಿಕೊಳ್ಳಬೇಕು ಎಂಬ ಕನಸಿರುತ್ತದೆ. ಅದು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಕನಸು. ಕಾಸಿನಸರದ ಹಿಂದಿರುವ ಕಥೆಯನ್ನು ಊಹಿಸಿಕೊಳ್ಳಬಹುದು. ಅಂಥ ಪ್ರಯೋಗವನ್ನು ಮಾಡಿರುವ ನಿರ್ದೇಶಕ ನಂಜುಂಡೇಗೌಡರಿಗೆ ಅಭಿನಂದನೆಗಳು. ನಿರ್ಮಾಪಕ ದೊಡ್ಡನಾಗೇಗೌಡರು ನಾಡಿಗೆ ಒಂದು ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು.












Click it and Unblock the Notifications