ಬೊಮ್ಮಾಯಿಯವರೇ ಕಬ್ಬು ಬೆಳೆಗಾರರ ಸಂಕಷ್ಟ ಪರಿಹರಿಸಿ: ಕುರುಬೂರು ಶಾಂತಕುಮಾರ್
ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ ಈಗಾಗಲೇ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವ ಕೆಲಸ ಆರಂಭಿಸಿವೆ. ಈವರೆಗೆ ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿ ಆಗಿಲ್ಲ. ಸಕ್ಕರೆ ನಿಯಂತ್ರಣ ಕಾಯಿದೆ 1966ರ ಪ್ರಕಾರ ಕಬ್ಬು ಪೂರೈಕೆ ಮಾಡಿದ ರೈತರಿಗೆ 14 ದಿನಗಳೊಳಗೆ ಹಣ ಪಾವತಿಸಬೇಕೆಂಬ ನಿಯಮವಿದೆ.
ಪ್ರಸಕ್ತ ಸಾಲಿನಲ್ಲಿ ಕಬ್ಬು ಬೆಳೆದ ಪ್ರದೇಶ ಏರಿಕೆಯಾಗಿದೆ. ಸಕ್ಕರೆ ಕಾರ್ಖಾನೆಗಳು ಅವಧಿಗೂ ಮೊದಲೆ ಪ್ರಾರಂಭಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಹಾಗಾಗಿ 2021-22ನೇ ಸಾಲಿಗೆ ಕಬ್ಬಿನ ಎಫ್ಆರ್ಪಿ ದರ ನಿಗದಿ ಮಾಡಲು ರಾಜ್ಯ ಸರ್ಕಾರದ ಕಬ್ಬು ಖರೀದಿ ಸರಬರಾಜು ನಿಯಂತ್ರಣ ಕಾಯಿದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಕಬ್ಬು ಸರಬರಾಜು ನಿಯಂತ್ರಣ ಮಂಡಳಿ ಸಭೆ ಕರೆದು ಚರ್ಚಿಸಿ ತುರ್ತು ತೀರ್ಮಾನ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದೆ.
ಕೇಂದ್ರ ಸರ್ಕಾರ ಕಬ್ಬಿನ ಎಫ್ಆರ್ಪಿ ಬೆಲೆ ನಿಗದಿ ಬಗ್ಗೆ ಸಕ್ಕರೆ ನಿಯಂತ್ರಣ ಕಾಯಿದೆ ತಿದ್ದುಪಡಿ ಮಾಡಿ 22 ಅಕ್ಟೋಬರ್ 2020 ರಂದು ಗೆಜೆಟ್ ಆದೇಶ ಹೊರಡಿಸಿ ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನು ನೀಡಿದೆ, ಇದರನ್ವಯ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು. 2019-20ನೇ, 2020-21 ನೇ ಸಾಲಿನ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರಾಜ್ಯ ಸರ್ಕಾರದ ಕಬ್ಬು ಖರೀದಿ ಸರಬರಾಜು ನಿಯಂತ್ರಣ ಕಾಯಿದೆ ಅನ್ವಯ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಸರಬರಾಜು ಮಾಡಿದ ರೈತರಿಗೆ ಲಾಭ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು.
ಕಬ್ಬು ಖರೀದಿ ಸರಬರಾಜು ನಿಯಂತ್ರಣ ಮಂಡಳಿ ನಿರ್ಧರಿಸಿರುವ ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು 2021-22ನೇ ಸಾಲಿಗೆ ನಿಗದಿ ಮಾಡಬೇಕು. ಕಬ್ಬಿನಿಂದ ಎಥೆನಾಲ್ ಉತ್ಪಾದಿಸಲು ಹಾಗೂ ಬಳಕೆ ಮಾಡಲು ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಕಡ್ಡಾಯಗೊಳಿಸಬೇಕು. ಎಥನಾಲ್ನಿಂದ ಬರುವ ಲಾಭವನ್ನು ರೈತರಿಗೆ ಹಂಚಬೇಕು. ರೈತರಿಗೆ ಆಲೆಮನೆಗಳಲ್ಲಿ ಎಥೆನಾಲ್ ಉತ್ಪಾದನೆ ಮಾಡಿಕೊಳ್ಳಲು ಬೇಕಾದ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು.
2019-20 ಹಾಗೂ 2020-21ನೇ ಸಾಲಿನಲ್ಲಿ ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಬಿಜಾಪುರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಬಾಕಿ ಕೊಡಬೇಕಾಗಿರುವ ಕಬ್ಬಿನ ಹಣವನ್ನು ಕೊಡಿಸಲು ಕ್ರಮ ಕೈಗೊಳ್ಳಬೇಕು.
ಸಕ್ಕರೆ ಕಾರ್ಖಾನೆಗಳು ಕಬ್ಬು ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಹೇಳಿ ರೈತರ ದಾಖಲಾತಿಗಳನ್ನು ಪಡೆದು ಬ್ಯಾಂಕಿನಲ್ಲಿ ಅಡಮಾನ ಮಾಡಿ ಸಾಲ ಪಡೆಯುತ್ತಿವೆ. ಇಂಥಹ ಕೆಲಸಗಳನ್ನು ವಂಚನೆ ಎಂದು ಪರಿಗಣಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ಕೆಲವು ಸಕ್ಕರೆ ಕಾರ್ಖಾನೆಗಳು ಸಹಕಾರಿ ಬ್ಯಾಂಕುಗಳನ್ನು ಆರಂಭಿಸಿ ಆ ಮೂಲಕ ಕಬ್ಬಿನ ಹಣ ಪಾವತಿ ಮತ್ತಿತರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇದರಿಂದಲೂ ರೈತರಿಗೆ ವಂಚನೆಯಾಗುತ್ತಿದೆ. ರೈತರಿಗೆ ಕಬ್ಬಿನ ಹಣ ಪಾವತಿ ಆಗದಿದ್ದರೂ ಬ್ಯಾಂಕ್ ಮೂಲಕ ಪಾವತಿಸುತ್ತಿದ್ದೇವೆ ಎಂದು ಲೆಕ್ಕ ತೋರಿಸುತ್ತಿದ್ದಾರೆ.
ಅತಿವೃಷ್ಟಿ- ಪ್ರವಾಹದಿಂದ ಕಬ್ಬು ಬೆಳೆ ನಾಶವಾದರೆ ರೈತರಿಗೆ ಪರಿಹಾರ ಸಿಗುತ್ತಿಲ್ಲ. ಆದ್ದರಿಂದ ಕಬ್ಬು ಬೆಳೆಯನ್ನು ಫಸಲ್ ಭಿಮಾ ವಿಮೆ ಯೋಜನೆಯ ವ್ಯಾಪ್ತಿಯಡಿಯಲ್ಲಿ ತರಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಇಂದು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದೆ.