ನಾಜಿ ಆಡಳಿತಕ್ಕಿಂತಲೂ ಕೆಟ್ಟ ವರ್ತನೆ ಎಎಪಿ ಖಂಡನೆ
ಕೇಂದ್ರ ಸರ್ಕಾರದ ಅಣತಿಯಂತೆ ಕುಣಿಯುತ್ತಿರುವ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರುವ ರೈತ, ಕಾರ್ಮಿಕ, ಜನಸಾಮಾನ್ಯ ವಿರೋಧಿ ಕಾಯ್ದೆಗಳ ತಿದ್ದುಪಡಿಯನ್ನು ಖಂಡಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಆಮ್ ಆದ್ಮಿ ಪಕ್ಷದಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 250 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪಪಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಅವರು, ರಾಜ್ಯ ಸರ್ಕಾರ ತನ್ನ ಸ್ವಂತಿಕೆಯನ್ನೆ ಮರೆತು, ಒಕ್ಕೂಟ ವ್ಯವಸ್ಥೆಯ ಕಲ್ಪನೆಯನ್ನೇ ಗಾಳಿಗೆ ತೂರಿ ಗುಲಾಮಿ ಸರ್ಕಾರದಂತೆ ಕೆಲಸ ಮಾಡುತ್ತಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ( ನಿಯಂತ್ರಣ ಮತ್ತು ಅಭಿವೃದ್ಧಿ )ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ, ಕಾರ್ಮಿಕ ಕಾಯ್ದೆ ಸೇರಿದಂತೆ ಒಟ್ಟು 30 ಕ್ಕೂ ಹೆಚ್ಚು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿ ಅನುಮೋದಿಸಲು ಹೊರಟಿರುವ ರಾಜ್ಯ ಸರ್ಕಾರ ಯಾವುದೇ ಚರ್ಚೆಗೆ ಅವಕಾಶ ನೀಡದೆ ನಾಜಿ ಸರ್ಕಾರಕ್ಕಿಂತಲೂ ಕೆಟ್ಟದಾಗಿ ನಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರವೂ ಸಹ ಇದೇ ರೀತ ನಡೆದುಕೊಳ್ಳುತ್ತಿದ್ದು ಈ ನೀಚ ರಾಜಕಾರಣವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
ಈ ರೀತಿ ತಿದ್ದುಪಡಿ ಮಾಡಿ ಜಾರಿಗೆ ತರಲು ಹೊರಟಿರುವ ಹೆಚ್ಚು ಮಸೂದೆಗಳು ರೈತ ವಿರೋಧಿ ಹುನ್ನಾರಗಳನ್ನು ಹೊಂದಿವೆ, ಯಾವುದೇ ಕಾರಣಕ್ಕೂ ಈ ರೈತ ವಿರೋದಿ, ಜನ ವಿರೋದಿ ಮಸೂದೆಗಳನ್ನು ಆಮ್ ಆದ್ಮಿ ಪಕ್ಷ ಒಪ್ಪುವುದಿಲ್ಲ. ಇಡೀ ದೇಶದಲ್ಲಿ ಡ್ರಗ್ ಮಾಫಿಯಾವನ್ನು ಮುನ್ನೆಲೆಗೆ ತಂದು ಇಂತಹ ಮಾರಕ ಮಸೂದೆಗಳ ಬಗ್ಗೆ ಜನರು ಯೋಚಿಸದಂತೆ ಮಾಡಿದ ರೈತರ ಪಾಲಿಗೆ ಬಿಜೆಪಿ ಸರ್ಕಾರ ಮರಣ ಶಾಸನ ಬರೆಯುತ್ತಿದೆ. ಎಂದು ಹೇಳಿದರು. ಪ್ರತಿಭಟನೆಯಲ್ಲಿ ರಾಜ್ಯ ಮಾದ್ಯಮ ಸಂಚಾಲಕರಾದ ಜಗದೀಶ್ ಸದಂ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್ ಇದ್ದರು.

ಎಪಿಎಂಸಿ ಕಾಯ್ದೆ ಏಕೆ ಬೇಡ
ನೂತನ ಎಪಿಎಂಸಿ ಕಾಯ್ದೆಯಿಂದ ಖಾಸಗಿ ಅವರಿಗೆ ದೊಡ್ಡ ಖಜಾನೆಯ ಕೀಲಿ ಕೈ ನೀಡಿದಂತೆ ಆಗುತ್ತದೆ. ಮೊದಲಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ರೈತರಿಂದ ಕೊಂಡುಕೊಂಡು ಬರುಬರುತ್ತಾ ರೈತರನ್ನು ಅಡಿಯಾಳಾಗಿಸಿಕೊಳ್ಳುವ ಹುನ್ನಾರ. ಇನ್ನೂ ಅಸಂಘಟಿತರಾಗೇ ಇರುವ ಶೇ 80ರಷ್ಟು ಸಣ್ಣ ಮತ್ತು ಮಧ್ಯಮ ರೈತರ ವ್ಯಾಪಾರದ ಮೂಲವಾದ ಎಪಿಎಂಸಿಯನ್ನು ನಾಶಮಾಡಿ ಕೃಷಿಕ್ಷೇತ್ರವನ್ನು ಉಳ್ಳವರ ಪಾಲು ಮಾಡುವ ತಂತ್ರ. ನಮ್ಮ ರೈತರು ಸ್ವತಂತ್ರವಾಗಿ ವ್ಯಾಪಾರ ಮಾಡುವಷ್ಟು ಸಂಘಟಿತರಾಗಿಲ್ಲ, ಈ ಕೆಲಸ ಮಾಡುತ್ತಿದ್ದ ಎಪಿಎಂಸಿ ಹಾಳು ಮಾಡಿ, ಖಾಸಗಿಯವರಿಗೆ ಗುಲಾಮರನ್ನಾಗಿ ಮಾಡುವುದು. ಜೊತೆಗೆ ರೈತರ ಜತೆ ಅಮಾಲಿಗಳು, ಸಣ್ಣ ಪುಟ್ಟ ಕೆಲಸ ಮಾಡುವವರು, ಕೃಷಿ ಕಾರ್ಮಿಕರು ಬೀದಿ ಪಾಲಾಗುವುದಂತು ಖಚಿತ.

ಬೆಂಬಲ ಬೆಲೆಯ ಬಗ್ಗೆ ನಿಖರತೆ ಇಲ್ಲ
ಬೆಂಬಲ ಬೆಲೆಯ ಬಗ್ಗೆ ನಿಖರವಾಗಿ ಈ ತಿದ್ದುಪಡಿಯಲ್ಲಿ ಏನನ್ನೂ ಹೇಳುವುದಿಲ್ಲ. ಬೆಂಬಲ ಬೆಲೆಗಿಂತ ಹೆಚ್ಚು ಖರೀದಿ ದರ ಇದ್ದರೆ ಅದು ರೈತನಿಗೆ ಸಿಗುವ ಬಗ್ಗೆ ಖಾತ್ರಿ ನೀಡಿಲ್ಲ. ಅಲ್ಲದೇ ಈ ತಿದ್ದುಪಡಿಯಿಂದ ಕಾರ್ಪೋರೇಟ್ ಕಂಪೆನಿಗಳು ಕೃಷಿಗೆ ಕಾಲಿಡುವುದರಿಂದ (ಈಗಾಗಲೇ ಕಾಲಿಟ್ಟಾಗಿದೆ) ರೈತನಿಗೆ ಬ್ಯಾಂಕಿನಿಂದ ಸುಲಭವಾಗಿ ಸಾಲ ದೊರೆಯುವಂತೆ ಮಾಡಲಾಗುತ್ತದೆ, ನಿಧಾನಕ್ಕೆ ರೈತ ಅಡಕತ್ತರಿಯಲ್ಲಿ ಸಿಲುಕುತ್ತಾ ಹೋಗುತ್ತಾನೆ. ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳುವ ಸಂರ್ಭದಲ್ಲಿ ನಮೂದಿಸಿದ ಮಾರಾಟ ದರದ ಪ್ರಕಾರವೇ ಕಂಪೆನಿಗಳಿಗೆ ಬೆಳೆದ ಬೆಳೆಯನ್ನು ಮಾರಾಟ ಮಾಡಬೇಕು.
ಅಕಸ್ಮಾತ್ ಹೆಚ್ಚು ಬೆಲೆ ದೊರೆತರೆ ಆ ಹಣ ರೈತನಿಗೆ ದೊರೆಯುವುದಿಲ್ಲ, ಅದು ಒಪ್ಪಂದ ಮಾಡಿಕೊಂಡ ಕಂಪೆನಿಗೆ ಹೋಗುತ್ತದೆ, ಈ ಅಂಶವನ್ನು ಜನರಿಂದ ಮಾಚಲಾಗುತ್ತಿದೆ. ಅಲ್ಲದೇ ಈ ಕಂಪೆನಿಗಳು ಆಧುನಿಕ ವ್ಯವಸಾಯ ಉಪಕರಣಗಳನ್ನು ಬೇಸಾಯ ಮಾಡಲು ನೀಡುತ್ತದೆ ಎಂದು ಹೇಳಲಾಗಿದೆ ಆದರೆ ಇದು ಪುಕ್ಕಟ್ಟೆಯಲ್ಲ ಆನಂತರ ಈ ಮೊತ್ತವನ್ನು ಕಡಿದುಕೊಳ್ಳಲಾಗುತ್ತದೆ. ಬೆಳೆ ಕೈಗೆ ಸಿಗದೆ ನಷ್ಟವಾದರೆ ಭೂಮಿಯನ್ನೇ ಮುಟ್ಟುಗೋಲು ಹಾಕಿಕೊಳ್ಳುವ ಅಂಶವೂ ಇದೆ. ಈ ಅನ್ಯಾಯಕ್ಕೆ ನಿರ್ದಿಷ್ಟವಾದ ನಿಯಮವನ್ನೇ ಮಾಡಿಲ್ಲ,
ಶೇ 90 ಕ್ಕೂ ಹೆಚ್ಚು ರೈತರು ಸರಿಯಾದ ಮಾರುಕಟ್ಟೆ ಸೌಲಭ್ಯ ಇಲ್ಲದೆ ಪರದಾಡುತ್ತಿದ್ದಾರೆ, ಇವರೆಲ್ಲ ಈ ತಿದ್ದುಪಡಿಯಿಂದ ಖಾಸಗಿ ಅವರ ಅಡಿಯಾಳಾಗುವುದರಲ್ಲಿ ಸಂಶಯವಿಲ್ಲ. ಹೊಸ ತಿದ್ದುಪಡಿಯಲ್ಲಿ ಬೆಂಬಲ ಬೆಲೆಯ ಅಂಶವನ್ನೇ ಕಿತ್ತುಹಾಕಿ ರೈತರನ್ನು ಬಿಕಾರಿಗಳನ್ನಾಗಿ ಮಾಡುವ, ಭೂಹೀನರನ್ನಾಗಿ ಮಾಡಿ ಮತ್ತೆ ಉಳಿಗಮಾನ್ಯ ಪದ್ದತಿಯ ಕಡೆ ತಳ್ಳುವ ಸೂಚನೆ, ಆದ ಕಾರಣ ಇದನ್ನು ಆಮ್ ಆದ್ಮಿ ಪಕ್ಷ ಬಲವಾಗಿ ಖಂಡಿಸುತ್ತದೆ.

ಹೊಟ್ಟೆ ತುಂಬಿದವನಿಗೆ ಊಟ ಬಡಿಸುತ್ತಿರುವ ಸರ್ಕಾರ
ಸರ್ಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರಲ್ಲಿ ತಿದ್ದುಪಡಿ ಮಾಡಿದ್ದು, ಭೂಮಿ ಖರೀದಿ ಮಾಡಲು ಒಬ್ಬ ವ್ಯಕ್ತಿಗಿದ್ದ ಮಿತಿಯನ್ನು ತಿದ್ದುಪಡಿಯ ಮೂಲಕ ಹೆಚ್ಚಿಸಲಾಗಿದೆ. ಅಲ್ಲದೇ ರೈತರಲ್ಲದವರೂ ಭೂಮಿ ಹೊಂದಬಹುದು ಎಂದು ತಿಳಿಸಲಾಗಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆಯಲ್ಲಿದ್ದ ಸೆಕ್ಷನ್ 63 (a), 79 (a), (b) (c) ಸೇರಿದಂತೆ. ಸೆಕ್ಷನ್ 63 (a) ಪ್ರಕಾರ ಐದು ಜನ ಸದಸ್ಯರಿರುವ ಕುಟುಂಬಕ್ಕೆ ಭೂಮಿ ಖರೀದಿಸಲು 10 ಎಕರೆಯಗಳ ಮಿತಿಯಿತ್ತು ಅದನ್ನೀಗ 70 ಎಕರೆಗೆ ಹೆಚ್ಚಿಸಿದ್ದು. ಐದಕ್ಕಿಂತಲೂ ಹೆಚ್ಚಿನ ಸದಸ್ಯರಿರುವ ಕುಟುಂಬಕ್ಕೆ ಭೂಮಿ ಖರೀದಿಸಲು ಇದ್ದ 20 ಎಕರೆಗಳ ಮಿತಿಯನ್ನು 40 ಎಕರೆಗಳಿಗೆ ಹೆಚ್ಚಿಸಲಾಗಿದೆ.
ಸೆಕ್ಷನ್ 79 (a) ಪ್ರಕಾರ ಯಾವುದೇ ವ್ಯಕ್ತಿಯ ವಾರ್ಷಿಕ ಆದಾಯ ಕಾಯ್ದೆಯಲ್ಲಿ ಉಲ್ಲೇಖಿಸಿರುವ ಆದಾಯಕ್ಕಿಂತ ಹೆಚ್ಚಿದ್ದರೆ ಅವರಿಗೆ ಕೃಷಿ ಭೂಮಿ ಖರೀದಿಗೆ ಅವಕಾಶವಿರಲಿಲ್ಲ. 79(b) ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಹಾಗೂ ಸೇವಾ ಸಂಘಗಳು, ಕಂಪನಿ, ಸಹಕಾರ ಸಂಘಗಳಂತಹ ಸಂಸ್ಥೆಗಳು ಕೃಷಿ ಭೂಮಿ ಖರೀದಿಸುವುದನ್ನು ನಿರ್ಬಂಧಿಸಿತ್ತು. ಸೆಕ್ಷನ್ 79(c) ಮೇಲೆ ದಂಡ ಮತ್ತು ಶಿಕ್ಷೆ ನಿಡಬಹುದಿತ್ತು. ಆದರೆ ಸರ್ಕಾರ ಈ ನಿಯಮವನ್ನೆ ತೆಗೆದುಹಾಕುವ ಮೂಲಕ ಸುಮಾರು 100ಕ್ಕೂ ಹೆಚ್ಚು ಎಕರೆಗಳ ವರೆಗೆ ಕೃಷಿ ಭೂಮಿ ಖರೀದಿಸಲು ಅನುಮತಿ ನೀಡಿದೆ.

ಆರ್ಥಿಕ ಸಂಕಷ್ಟದಲ್ಲಿ ಇರುವ ರಾಜ್ಯ ಸರ್ಕಾರ
ಇದರಿಂದ ಆರ್ಥಿಕ ಸಂಕಷ್ಟದಲ್ಲಿ ಇರುವ ರಾಜ್ಯ ಸರ್ಕಾರಕ್ಕೆ ಲಾಭ ಬರಬಹುದು ಆದರೆ ದುಡ್ಡಿದ್ದವರು ಎಷ್ಟು ಬೇಕಾದರೂ ಭೂಮಿಯನ್ನು ಖರೀದಿಸಿ ಸಣ್ಣ ಸಣ್ಣ ರೈತರನ್ನು ನಾಶ ಮಾಡುವುದಿಲ್ಲವೇ? ಇದರಿಂದ ಹೆಚ್ಚು ಶೋಷಣೆಗೆ ಒಳಗಾಗುವವರು ದಲಿತರು ಹಾಗೂ ಹಿಂದುಳಿದವರು. ಹಣದ ಆಸೆಗೆ ಭೂಮಿ ಮಾರಿದರೇ ಮುಂದಿನ ಭವಿಷ್ಯ ಏನು ಎಂದು ತಿಳಿಯದವರು ಇದರಿಂದ ಬೀದಿಪಾಲಾಗುವುದಂತೂ ಖಂಡಿತ.
ಅಲ್ಲದೇ ಗುತ್ತಿಗೆ ಆಧಾರದ ಕೃಷಿ ಉತ್ತೇಜನಕ್ಕೂ ಕೈ ಹಾಕಿರುವ ಸರ್ಕಾರ ರೈತರ ಬಳಿ ದೊಡ್ಡ ಕಂಪೆನಿಯೊಂದು ಎಷ್ಟಾದರೂ ಭೂಮಿಯನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡಬಹುದು. ಇದರಿಂದ ತನ್ನ ಭೂಮಿಯಲ್ಲೇ ರೈತ ಕೂಲಿಯವನಾಗಿ ದುಡಿಯಬೇಕಾಗುತ್ತದೆ. ತನ್ನ ಭೂಮಿಯಲ್ಲೇ ಬೆಳೆದ ಬೆಳೆಯನ್ನೂ ಸಹ ಅನುಭವಿಸದ ಸ್ಥಿತಿಗೆ ರೈತ ತಲುಪುತ್ತಾನೆ. ಇದೊಂದು ರೀತಿ ರಿಯಲ್ ಎಸ್ಟೇಟ್ ಮಾಫಿಯಾದಂತೆ ರೈತನನ್ನು ಬಲಿ ಪಡೆಯುವುದರಲ್ಲಿ ಸಂಶಯವಿಲ್ಲ.
Recommended Video

ಕೃಷಿ ಕ್ಷೇತ್ರ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ
ಈಗಾಗಲೇ ಭಾರತದಲ್ಲಿ ಕೃಷಿ ಕ್ಷೇತ್ರ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಪಕ್ಕಾ ಬಂಡವಾಳಶಾಹಿ ರಾಷ್ಟ್ರಗಳಾದ ಅಮೇರಿಕಾ, ಯುರೋಪ್ ಹಾಗೂ ಇತರೆಡೆ ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಸಬ್ಸಿಡಿ ನಮ್ಮ ಭಾರತಕ್ಕಿಂತ ನೂರಾರು ಪಟ್ಟು ಹೆಚ್ಚಿದೆ. ಆದರೆ ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಸಹಾಯಧನಕ್ಕೆ ಪ್ರತಿ ವರ್ಷದಿಂದ ವರ್ಷಕ್ಕೆ ಕತ್ತರಿ ಹಾಕುತ್ತಲೇ ಇದ್ದಾರೆ.
ಈ ಅಂಶವನ್ನು ಗಮನಿಸುವುದಾದರೆ ಕೆಳಗಿನ ದೇಶಗಳ ರೈತರ ಆದಾಯ ಇಂತಿದೆ ಅಮೇರಿಕಾ 7,253 ಡಾಲರ್, ಕೆನಡಾ $7,414 ಡಾಲರ್, ಆಸ್ಟ್ರೇಲಿಯಾ 222 ಡಾಲರ್, ಯುರೋಪ್ $1,068 ಡಾಲರ್, ಭಾರತದಲ್ಲಿ 49 ಡಾಲರ್ ಅಂದರೆ ಕೇವಲ 3,675 ರೂಗಳು ಮಾತ್ರ.
ಜತೆಗೆ ಸರ್ಕಾರಗಳ ಸಬ್ಸಿಡಿ ಸೇರಿದಂತೆ ಕೃಷಿಗೆ ಎಷ್ಟು ಒತ್ತು ನೀಡಲಾಗಿದೆ ಎಂಬುದನ್ನು ಈ ಅಂಕಿ ಅಂಶಗಳು ಬಹಿರಂಗಗೊಳಿಸುತ್ತವೆ. ಯುಎಸ್ನಲ್ಲಿ 61,286 ಡಾಲರ್ ಹಣವನ್ನು 2016ರಲ್ಲೇ ರೈತನ ಮೇಲೆ ಖರ್ಚು ಮಾಡಲಾಗುತ್ತಿತ್ತು. ಕೆನಡಾದಲ್ಲಿ 13,010 ಡಾಲರ್, ಯುರೋಪಿನಲ್ಲಿ 8,588 ಡಾಲರ್. ಆದರೆ ಭಾರತದಲ್ಲಿ ಕಳೆದ 2018-19 ಸಾಲಿನಲ್ಲಿ ಖರ್ಚು ಮಾಡಿರುವುದು ಕೇವಲ 282 ಡಾಲರ್ ಅಂದರೆ 21 ಸಾವಿರ ರೂಗಳು ಮಾತ್ರ.
|
ಬಂಡವಾಳಶಾಯಿಗಳ ಹಿಡಿತಕ್ಕೆ ಕೃಷಿ ಕ್ಷೇತ್ರ
ಮುಂದುವರೆದ ಬಂಡವಾಳಶಾಹಿ ದೇಶಗಳಲ್ಲಿ ಒಂದು ವರ್ಷ ಏನಾದರೂ ಹೆಚ್ಚಿನ ಇಳುವರಿ ಬಂದರೆ, ಮುಂದಿನ ವರ್ಷ ಆ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ ನೀಡಲಾಗುತ್ತದೆ, ಅಲ್ಲದೇ ವರ್ಷದ ಖರ್ಚಿಗೆ ಆಗುವಷ್ಟು ಹಣವನ್ನು ನೀಡುತ್ತದೆ, ಆದರೆ ನಮ್ಮಲ್ಲಿ?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂವಿಧಾನಿಕವಾಗಿ ತಂದಿರುವ ತಿದ್ದುಪಡಿಗಳಿಂದ ದೇಶದ ಬೆನ್ನೆಲುಬಾಗಿರುವ ಗ್ರಾಮೀಣ ಪ್ರದೇಶಗಳ ನಾಶ, ಅವೈಜ್ಞಾನಿಕ ನಗರೀಕರಣ, ಬಂಡವಾಳಶಾಯಿಗಳ ಹಿಡಿತಕ್ಕೆ ಕೃಷಿ ತಲುಪಿ ಬಡವ ಬಡವನಾಗೇ ಸಾಯಬೇಕಾಗುತ್ತದೆ. ನಮ್ಮ ಆಹಾರದ ಹಕ್ಕು ಮತ್ಯಾರಿಗೋ ನೀಡಿದಂತಾಗುತ್ತದೆ.
ಇದೆಲ್ಲದರ ಜತೆಗೆ ನೂರಾರು ವರ್ಷಗಳ ಹೋರಾಟದ ಫಲವಾಗಿ ಪಡೆದಿರುವ ಕಾರ್ಮಿಕ ಕಾಯ್ದೆಯನ್ನು ಸಹ ಬದಲಾವಣೆ ಮಾಡಿ ಪ್ರಜಾಪ್ರಭುತ್ವ ದೇಶವನ್ನು ಕೇವಲ ಒಂದಿಬ್ಬರ ಕೈಗೆ ನೀಡಿ ಗುಲಾಮತನಕ್ಕೆ ತಳ್ಳಿದಂತೆ.
ಕೇಂದ್ರ ಸರ್ಕಾರದ ಅಣತಿಯಂತೆ ರಾಜ್ಯ ಸರ್ಕಾರ ತರಲು ಹೊರಟಿರುವ ಕಾಯ್ದೆಗಳು ಹಾಗೂ ರಾಜ್ಯ ಸರ್ಕಾರವೇ ಸ್ವಂತವಾಗಿ ತರಲು ಬಯಸಿರುವ ತಿದ್ದುಪಡಿಗಳನ್ನು ಯಾವುದೇ ಸಾರ್ವಜನಿಕ ಚರ್ಚೆ ಇಲ್ಲದೇ ಆಮ್ ಆದ್ಮಿ ಪಕ್ಷ ಒಪ್ಪುವುದಿಲ್ಲ ಹಾಗೂ ಇದನ್ನು ಮೀರಿ ತಂದರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತದೆ.












Click it and Unblock the Notifications