ಕಿಸಾನ್ ಸಮ್ಮಾನ್ ಯೋಜನೆ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ
ಶಿವಮೊಗ್ಗ, ಜೂನ್ 10; ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೆರವು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆರ್ಥಿಕ ನೆರವು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಬೇಕಾದರೆ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ.
ಕೃಷಿ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಈ ಕುರಿತು ರೈತರಿಗೆ ಮಾಹಿತಿಯನ್ನು ನೀಡುತ್ತಿದೆ. ಕರ್ನಾಟಕದಲ್ಲಿಯೂ ಹಲವಾರು ರೈತರು ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ ರೂ. 6000 ಆರ್ಥಿಕ ನೆರವನ್ನು ಪಡೆಯುತ್ತಿದ್ದಾರೆ.
ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ಮೂಲಕ ಆರ್ಥಿಕ ನೆರವು ವರ್ಗಾವಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಪಡೆಯಲು e-KYC ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇ-ಕೆವೈಸಿ ಮಾಡಿಸಲು ಜುಲೈ 31 ಕೊನೆಯ ದಿನವಾಗಿದೆ.
ಯೋಜನೆಯ ಅರ್ಹ ರೈತರು ಓಟಿಪಿ ಆಧಾರಿತ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಸಬೇಕೆಂದು ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.
ಯೋಜನೆ ಆರಂಭದಿಂದ ಹಿಡಿದು 24/2/2021ರ ವರೆಗೆ 10.75 ಕೋಟಿ ಫಲಾನುಭವಿಗಳಿಗೆ 1,15,638.87 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ. ಇದು ಕೃಷಿ ಕ್ಷೇತ್ರದ ಒಂದು ಮೈಲಿಗಲ್ಲು, ಮುಂದಿನ ಪೀಳಿಗೆಯು ಇದನ್ನು ಸ್ಮರಿಸಲಿದೆ ಎಂದು ಕೃಷಿ ಸಚಿವಾಲಯ ಹೇಳಿದೆ.

ರಾಜ್ಯ ಸರ್ಕಾರದಿಂದಲೂ ಸಹಾಯ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹರಾಗಿರುವ ಎಲ್ಲಾ ರೈತರಿಗೆ ಕರ್ನಾಟಕ ಸರ್ಕಾರದಿಂದಲೂ ಹೆಚ್ಚುವರಿಯಾಗಿ 4000 ರೂ. ಗಳನ್ನು ಎರಡು ಸಮಾನ ಕಂತುಗಳಲ್ಲಿ (ರೂ. 2000 ಪ್ರತಿ ಕಂತು) ನೆರವನ್ನು ನೇರ ನಗದು ವರ್ಗಾವಣೆ ಮುಖಾಂತರ ನೀಡಲಾಗುತ್ತಿದೆ.
ಯೋಜನೆಯ ಪ್ರಯೋಜನ ಪಡೆಯುತ್ತಿರುವ ಅನರ್ಹ ರೈತರನ್ನು ಕೈಬಿಡಲು ಹಲವು ನಿಯಮಾವಳಿಗಳನ್ನು ಜಾರಿಗೆ ತರಲಾಗುತ್ತಿದೆ. ಯೋಜನೆಯಡಿ ನೋಂದಣಿಯಾದ ರೈತರು ಆಧಾರ್ ಕಾರ್ಡ್ ನಂಬರ್ ಸಹ ಬ್ಯಾಂಕ್ ಖಾತೆಗೆ ಜೋಡಣೆ ಮಾಡಬೇಕಿದೆ.

ಇದೊಂದು ಐತಿಹಾಸಿಕ ಯೋಜನೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಒಂದು ಐತಿಹಾಸಿಕ ಯೋಜನೆಯಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಬಣ್ಣಿಸಿದ್ದಾರೆ. ಯೋಜನೆ ಕುರಿತು ಮಾತನಾಡಿದ ಸಚಿವ ನರೇಂದ್ರ ಸಿಂಗ್ ತೋಮರ್, ಕೋವಿಡ್ ಸಮಯದಲ್ಲಿ ರೈತರ ಕೊಡುಗೆಯನ್ನು ಸ್ಮರಿಸಿದರು. ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ, ರೈತರ ಪರಿಶ್ರಮವು ದೇಶವನ್ನು ಬಿಕ್ಕಟ್ಟಿನಿಂದ ಪಾರು ಮಾಡುವ ಸಾಮರ್ಥ್ಯ ಹೊಂದಿದೆ ಎಂದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ತಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡ ಎಲ್ಲ ರಾಜ್ಯ ಸರ್ಕಾರಗಳಿಗೂ ಸಚಿವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಯೋಜನೆಗೆ ಸಾಕಷ್ಟು ಅನುದಾನ ಮೀಸಲಿರಿಸಲಾಗಿದೆ, ರಾಜ್ಯ ಸರಕಾರಗಳು ಫಲಾನುಭವಿಗಳ ನೋಂದಣಿಗಾಗಿ ವಿಶೇಷ ಅಭಿಯಾನ ನಡೆಸಬೇಕು ಯಾವೊಬ್ಬ ಅರ್ಹ ರೈತ ಸಹ ಯೋಜನೆಯ ಪ್ರಯೋಜನದಿಂದ ವಂಚಿತರಾಗದಂತೆ ತಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಕಿಸಾನ್ ಸಮ್ಮಾನ್ ಯೋಜನೆ ಕುರಿತು
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019ರ ಫೆಬ್ರವರಿ 24ರಂದು ಆರಂಭಿಸಲಾಯಿತು. ದೇಶಾದ್ಯಂತ ಎಲ್ಲಾ ಸಣ್ಣ ಮತ್ತು ಮಧ್ಯಮ ಗಾತ್ರದ ಭೂ ಹಿಡುವಳಿದಾರ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದು, ಆ ಮೂಲಕ ಅವರಿಗೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಹಾಗೂ ದೈನಂದಿನ ಕೌಟುಂಬಿಕ ಅಗತ್ಯಗಳ ಖರ್ಚು-ವೆಚ್ಚಗಳನ್ನು ಭರಿಸಲು ಸಹಾಯ ಮಾಡುವುದು ಯೋಜನೆ ಉದ್ದೇಶ. ಯೋಜನೆಯಡಿ 2 ಹೆಕ್ಟೇರ್ವರೆಗೆ ಸಾಗುವಳಿ ಯೋಗ್ಯ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಕೆಲವೊಂದು ವಿನಾಯಿತಗಳ ಹೊರತಾಗಿ ವಾರ್ಷಿಕ 6000 ರೂ. ನೆರವು ನೀಡಲಾಗುತ್ತಿದೆ. ಕೇಂದ್ರ ಸರಕಾರ ನಗದು ನೇರ ವರ್ಗಾವಣೆ ಯೋಜನೆಯಡಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ 4 ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ತಲಾ 2000 ರೂ.ಗಳನ್ನು ವರ್ಗಾವಣೆ ಮಾಡಲಾಗುತ್ತಿದೆ.

ರಾಜ್ಯ/ ಕೇಂದ್ರಡಾಳಿತ ಪ್ರದೇಶಕ್ಕೆ ಜವಾಬ್ದಾರಿ
ಯೋಜನೆಗೆ ಅರ್ಹ ರೈತರನ್ನು ಗುರುತಿಸುವ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ವಹಿಸಲಾಗಿದೆ. ಈ ಯೋಜನೆಗಾಗಿ www.pmkisan.gov.in ಎಂಬ ಪ್ರತ್ಯೇಕ ವೆಬ್-ಪೋರ್ಟಲ್ ಆರಂಭಿಸಲಾಗಿದೆ. ಪಿಎಂ-ಕಿಸಾನ್ ವೆಬ್- ಪೋರ್ಟಲ್ನಲ್ಲಿ ರೈತರು ಸಿದ್ಧಪಡಿಸಿದ ಮತ್ತು ಅಪ್ಲೋಡ್ ಮಾಡಿದ ಮಾಹಿತಿ ಆಧರಿಸಿ ಫಲಾನುಭವಿಗಳಿಗೆ ಆರ್ಥಿಕ ನೆರವು ಬಿಡುಗಡೆ ಮಾಡಲಾಗುತ್ತದೆ. ಪೋರ್ಟಲ್ನಲ್ಲಿ ರಾಜ್ಯ ನೋಡಲ್ ಅಧಿಕಾರಿ ರೈತರ ಹೆಸರನ್ನು ಅಪ್ಲೋಡ್ ಮಾಡುತ್ತಾರೆ.
ಪಿಎಂ-ಕಿಸಾನ್ ಯೋಜನೆಯ ಅನುಷ್ಠಾನ ಹಾಗೂ ಕಾರ್ಯನಿರ್ವಹಣೆಯಲ್ಲಿ ನಿರಂತರ ಬದಲಾವಣೆಗಳನ್ನು ತರಲಾಗುತ್ತಿದೆ. ಭೂಹಿಡುವಳಿಯ ಗಾತ್ರದ ಮಾನದಂಡವನ್ನು ಪರಿಗಣಿಸದೆ ಎಲ್ಲಾ ರೈತರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಆದರೆ, ಚಾಲ್ತಿಯಲ್ಲಿರುವ ಹಲವು ವಿನಾಯ್ತಿ ಮಾನದಂಡಗಳು ಮುಂದುವರಿದಿವೆ.












Click it and Unblock the Notifications