ಹಿಂದಿ ಬರದೆಂದ ಮಂಡ್ಯ ರೈತನನ್ನು ಹೊರಗಟ್ಟಿದ ಬ್ಯಾಂಕ್ ನೌಕರ
ಮಂಡ್ಯ, ಮೇ 05: 'ಹಿಂದಿ ಬರುವುದಿಲ್ಲ ಎಂಬ ಮೇಲೆ ಬ್ಯಾಂಕ್ ನಿಂದ ಹೊರಗೆ ನಡಿ' ಎಂದು ಎಸ್ಬಿಐ ಬ್ಯಾಂಕ್ನ ಸಿಬ್ಬಂದಿಯೊಬ್ಬ ಮಂಡ್ಯದ ರೈತರೊಬ್ಬರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ.
'ಹಿಂದಿ ಬೇಡ', 'ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಮಾತ್ರ' ಅಭಿಯಾನಗಳು ಜೋರು ಪಡೆಯುತ್ತಿರುವ ಹೊತ್ತಿನಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮದ್ದೂರಿನ ಕೆ.ಎಂ.ದೊಡ್ಡಿ ಬ್ರಾಂಚ್ನ ಎಸ್ಬಿಐ ಬ್ಯಾಂಕ್ನ ಅಕೌಂಟೆಂಟ್ ಸುನಿಲ್ ಎಂಬುವರು, ಬ್ಯಾಂಕ್ಗೆ ಬಂದ ರೈತನೊಟ್ಟಿಗೆ ಹಿಂದಿಯಲ್ಲಿ ಮಾತನಾಡಿದ್ದಾರೆ, ಆದರೆ ರೈತ ತನಗೆ ಹಿಂದಿ ಬರುವುದಿಲ್ಲ ಎಂದು ಹೇಳಿದ್ದಕ್ಕೆ ಸಿಟ್ಟಾದ ಸುನಿಲ್ ಹಿಂದಿ ಬುರುವುದಿಲ್ಲವಾದರೆ ಬ್ಯಾಂಕ್ ನಿಂದ ಹೊರಗೆ ಹೋಗು ಎಂದು ದಬ್ಬಾಳಿಕೆ ಮಾಡಿದ್ದಾರೆ.

ಇದು ಹಿಂದೂಸ್ತಾನ, ನಾನು ಇಲ್ಲಿ ಕನ್ನಡ ಕಲಿಯಬೇಕಾದ ಅವಶ್ಯಕತೆ ಇಲ್ಲ, ನಿನಗೆ ಹಿಂದು ಬರದೇ ಇದ್ದರೆ ಬ್ಯಾಂಕಿನಿಂದ ಹೊರಗೆ ಹೋಗು ಎಂದು ಹೇಳಿದ್ದಾರೆ.
ನಮಗೆ ಕನ್ನಡವೇ ಓದಲು ಬರುವುದಿಲ್ಲ ಇನ್ನು ಹಿಂದಿಯನ್ನು ಹೇಗೆ ಮಾತನಾಡಬಲ್ಲೆವು ಎಂದು ಆ ರೈತ ಉತ್ತರ ಭಾರತ ಮೂಲದ ಸುನಿಲ್ ಬಳಿ ವಾದ ಮಾಡಿದ್ದಾರೆ, ಆದರೆ ಸುನಿಲ್ ದನಿ ಏರಿಸಿ ರೈತನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಅಲ್ಲಿಯೇ ಇದ್ದ ಕೆಲವರು ಇದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ರೈತನ ವಿರುದ್ಧ ಸುನಿಲ್ ದಬ್ಬಾಳಿಕೆ ಹೆಚ್ಚು ಮಾಡುತ್ತಿದ್ದಂತೆ ಬ್ಯಾಂಕ್ ನ ಇತರ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೆ ಈ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಒಂದು ಹಂತದಲ್ಲಿ ಸುನಿಲ್, 'ಹಿಂದಿ ಬರದೇ ಇದ್ದರೆ ದೇಶವನ್ನೇ ಬಿಟ್ಟು ಹೋಗು ಎಂದು ಅಬ್ಬರಿಸಿದರು' ಎಂದೂ ಸಹ ಹೇಳಲಾಗುತ್ತಿದೆ.












Click it and Unblock the Notifications