ಬೆಳಗಾವಿ: ಡಿ.ಕೆ.ಶಿವಕುಮಾರ್ ಸಂಧಾನ ಯಶಸ್ವಿ, ಕಬ್ಬು ಬೆಳೆಗಾರರ ಪ್ರತಿಭಟನೆ ವಾಪಸ್
ಬೆಳಗಾವಿ, ನವೆಂಬರ್ 23: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಬೆಳಗಾವಿಯ ಕಬ್ಬು ಬೆಳೆಗಾರರನ್ನು ಇಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬೆಳಗಾವಿಯ ಸುವರ್ಣಸೌಧದ ಮುಂದೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಕಬ್ಬು ಬೆಳೆಗಾರರನ್ನು ಭೇಟಿ ಮಾಡಿದ ಡಿ.ಕೆ.ಶಿವಕುಮಾರ್ ಅವರು, ರೈತರ ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.
ಡಿ.ಕೆ.ಶಿವಕುಮಾರ್ ಅವರ ಸಂಧಾನದಿಂದ ತೃಪ್ತರಾದ ರೈತರು ತಮ್ಮ ಪ್ರತಿಭಟನೆಯನ್ನು ಕೂಡಲೇ ವಾಪಸ್ ಪಡೆದರು. ಕುಮಾರಸ್ವಾಮಿ ಅವರು ಸಭೆ ನಡೆಸಿದ್ದರೂ ಈ ರೈತರು ಪ್ರತಿಭಟನೆ ನಿಲ್ಲಿಸಿರಲಿಲ್ಲ ಆದರೆ ಡಿ.ಕೆ.ಶಿವಕುಮಾರ್ ಅವರ ಸಂಧಾನಕ್ಕೆ ಒಪ್ಪಿ ಪ್ರತಿಭಟನೆ ಹಿಂಪಡೆದರು.

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮಾಡುತ್ತಿರುವ ಕಾರ್ಯಗಳು ಹಾಗೂ ಸಾಲಮನ್ನಾ ಕಾರ್ಯದ ಪ್ರಗತಿಯ ಬಗ್ಗೆಯೂ ಡಿ.ಕೆ.ಶಿವಕುಮಾರ್ ಅವರು ರೈತರಿಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತರ ಜೊತೆ ಕೂತ ಡಿ.ಕೆ.ಶಿವಕುಮಾರ್ ಆ ನಂತರ ಎಲ್ಲ ಪ್ರತಿಭಟನಾ ನಿರತ ರೈತರನ್ನು ಸರ್ಕಿಟ್ ಹೌಸ್ಗೆ ಕರೆಸಿ ಅಲ್ಲಿಯೂ ಸಹ ಮಾತುಕತೆ ನಡೆಸಿದರು.

ಬೆಳಗಾವಿಯಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಜಾರಕಿಹೊಳಿ ಸಹೋದರದ್ದೇ ಆಗಿದೆ. ಡಿ.ಕೆ.ಶಿವಕುಮಾರ್ ಅವರ ಹೊಸ ರಾಜಕೀಯ ಎದುರಾಳಿಯೂ ಅವರೇ ಆಗಿದ್ದಾರೆ. ಇಂತಹಾ ಸನ್ನಿವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ರೈತರ ಪರವಹಿಸಿರುವುದು ಜಾರಕಿಹೊಳಿ ಸಹೋದರರು ಹಾಗೂ ಡಿ.ಕೆ.ಶಿವಕುಮಾರ್ ನಡುವೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗುತ್ತದೆಯೇ ನೋಡಬೇಕು.












Click it and Unblock the Notifications