ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ತರಕಾರಿ ಬೆಲೆ

ರಾಜ್ಯದ ಬರಗಾಲ, ಕೆಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯ ಕೊರತೆಯಿಂದಾಗಿ ತರಕಾರಿ, ಸೊಪ್ಪು, ಹಣ್ಣು, ಹೂಗಳ ಬೆಲೆಗಳು ಹೆಚ್ಚಾಗುತ್ತಲಿವೆ. ತರಕಾರಿ ಬೆಲೆಯಂತೂ ಅಧಿಕವಾಗಿ ಹೆಚ್ಚಾಗಿದ್ದು, ವ್ಯಾಪಾರಸ್ತರು ಮತ್ತು ಗ್ರಾಹಕರನ್ನು ಕಂಗೆಡಿಸಿದೆ.
ಮೇ ತಿಂಗಳ ಅಂತ್ಯ ಮತ್ತು ಜೂನ್ ಮೊದಲವಾರದಲ್ಲಿ ಹಲವಾರು ಸಮಾರಂಭಗಳು ಇರುವುದರಿಂದಲೂ ಬೇಡಿಕೆ ಹೆಚ್ಚಾಗಿ, ತರಕಾರಿ ಬೆಲೆ ಏರಿದೆ ಎಂದು ವಿಶ್ಲೇಷಿಸಲಾಗುತ್ತದ್ದರೂ, ನೀರಿನ ಕೊರತೆ ಇಂದಾಗಿ ತರಕಾರಿ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆ ಆಗಿದೆ ಎಂದು ಹಾಪ್ ಕಾಮ್ಸ್ ಅಧಿಕಾರಿಗಳು ಹೇಳಿದ್ದಾರೆ.
ಎಷ್ಟು ಹೆಚ್ಚಾಗಿದೆ : ಕಳೆದ ವಾರ ಕೆ.ಜಿಗೆ 30ರೂ ಇದ್ದ ಟೊಮೆಟೋ ದರ ಇಂದು 60ರೂ. ಬೀನ್ಸ್ 50ರೂ ಇದ್ದದ್ದು, 100 - 120 ಆಗಿದೆ.ರೂ ಆಗಿದೆ. ಯಾವಾಗಲೂ ಕಡಿಮೆಗೆ ದೊರೆಯುತ್ತಿದ್ದ ಬದನೇಕಾಯಿ 45 ರೂ. ಆಗಿದೆ. ಕ್ಯಾರೆಟ್ ಕೆ.ಜಿಗೆ 60ರೂ ಆಗಿದೆ.
ಯಾವಾಗಲೂ ಕಡಿಮೆ ದರದಲ್ಲಿ ದೊರೆಯುತ್ತಿದ್ದ ಆಲೂಗಡ್ಡೆ 60 ರೂ. ಬೆಂಡೆಕಾಯಿ 40-50ರೂ. ಆಗಿ ಗ್ರಾಹಕರನ್ನು ಆತಂಕಗೊಳಿಸಿದೆ. ಬೆಲೆ ಏರಿಕೆ ಕೇವಲ ತರಕಾರಿಗಳನ್ನು ಮಾತ್ರ ಕಾಡುತ್ತಿಲ್ಲ. ಹಣ್ಣು, ಹೂವು, ಸೊಪ್ಪು ಮುಂತಾದವುಗಳಿಗೂ ದರ ಹೆಚ್ಚಳದ ಬಿಸಿ ತಟ್ಟಿದೆ.
ಬೆಂಗಳೂರು ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಕೊರತೆ ಉಂಟಾಗಿರುವುದರಿಂದ ಟೊಮೆಟೋ ಬೆಳೆಯಲಾಗುತ್ತಿಲ್ಲ ಆದ್ದರಿಂದ ದರ ಹೆಚ್ಚಾಗಿದೆ. ಟೊಮೆಟೋ ದರ ಇತ್ತೀಚೆಗೆ 50 ರೂ. ದಾಟಿದ ಉದಾಹರಣೆ ಇಲ್ಲ ಎಂದು ಕೆ.ಆರ್.ಮಾರುಕಟ್ಟೆಯ ವ್ಯಾಪಾರಿ ಸುಂದರಂ ಹೇಳಿದ್ದಾರೆ.
ಹಾಪ್ಸ್ ಕಾಮ್ ಅಧಿಕಾರಿಗಳ ಪ್ರಕಾರ ಮಳೆ ಸರಿಯಾಗಿ ಮಳೆ ಬೀಳುವ ತನಕ ತರಕಾರಿ ಬೆಲೆಗಳು ಕಡಿಮೆ ಆಗುವುದಿಲ್ಲ. ಜೂನ್ ಮೊದಲ ವಾರದಲ್ಲಿ ಮುಂಗಾರು ರಾಜ್ಯ ಪ್ರವೇಶಿಸುವ ಸಾಧ್ಯತೆ ಇದ್ದು, ನಂತರ ತರಕಾರಿ ಬೆಲೆ ಕಡಿಮೆ ಆಗಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.
ಅಕ್ಕಿ, ಬೇಳೆಗಳ ಬೆಲೆಗಳು ಗಗನಕ್ಕೆ ಏರಿದ ನಂತರ ಈಗ ತರಕಾರಿಗಳ ಬೆಲೆ ಅಧಿಕವಾಗಿದೆ. ಬೆಲೆ ಏರಿಕೆಯಿಂದ ತತ್ತರಿಸುವ ಗ್ರಾಹಕರು ತರಕಾರಿ ಬೆಲೆಯೂ ಹೆಚ್ಚಾಗಿರುವುದರಿಂದ ಪರಿತಪಿಸುವಂತಾಗಿದೆ. ವರುಣಾ ದೇವನ ಕೃಪೆ ಮಾತ್ರ ತರಕಾರಿ ಬೆಲೆ ಮತ್ತು ಕುಡಿಯುವ ನೀರಿನ ಸಮಸ್ಯೆಯಿಂದ ಪಾರುಮಾಡಬಲ್ಲದು.












Click it and Unblock the Notifications