ಕೊರೊನಾ ಎರಡನೇ ಅಲೆ; ಬಿತ್ತನೆ ಬೀಜ ವಹಿವಾಟಿಗೆ ತೊಡಕು
ಕೊರೊನಾ ಎರಡನೆಯ ಅಲೆ ಬಿತ್ತನೆ ಬೀಜ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಲಿದೆ. ಮುಂಗಾರು ಮಳೆ ಆರಂಭಕ್ಕೂ ಮುನ್ನ ಏಪ್ರಿಲ್-ಮೇ ಬೀಜ ವಹಿವಾಟಿಗೆ ಬಹಳ ಪ್ರಮುಖವಾದ ಮಾಸಗಳು.
ಈ ತಿಂಗಳುಗಳಲ್ಲಿ ಬೀಜಗಳ ಸಂಗ್ರಹ, ಬೀಜೋಪಚಾರ, ಪ್ಯಾಕಿಂಗ್ ಮಾಡುವುದು ಮತ್ತು ಸರಬರಾಜು ಮಾಡುವುದು ಹೀಗೆ ಎಲ್ಲಾ ಚಟುವಟಿಕೆಗಳು ಭರದಿಂದ ಸಾಗುತ್ತದೆ. ಈ ವಹಿವಾಟು ಸುಮಾರು ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳಷ್ಟು ಮೊತ್ತದ್ದಾಗಿದೆ.
ಆದರೆ ಇದೀಗ ಕೊರೊನಾ ಹಿನ್ನೆಲೆಯಲ್ಲಿ ಭಾಗಶಃ ಲಾಕ್ ಡೌನ್, ಕರ್ಫ್ಯೂ, 144 ಸೆಕ್ಷನ್ ನಂತಹ ನಿಯಮಗಳಿಂದ ಬಿತ್ತನೆ ಬೀಜಗಳ ಇಡೀ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಬಿತ್ತನೆ ಬೀಜ ಕಂಪನಿಗಳು ದಕ್ಷಿಣ ಭಾರತದಲ್ಲಿ, ಅಂದರೆ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೇ ಕೇದ್ರೀಕೃತವಾಗಿವೆ. ಇದೀಗ ಕೋವಿಡ್ ನಿಯಮಗಳು ಬಿತ್ತನೆ ಬೀಜ ಕಂಪನಿಗಳ ಕೆಲಸಗಳಿಗೆ ತೊಡಕು ತರುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಭಾರತೀಯ ಬೀಜ ಸಂಸ್ಥೆಯ ಮುಖ್ಯಸ್ಥರಾದ ಎಂ ಪ್ರಭಾಕರ್ ರಾವ್ ಬಿತ್ತನೆ ಬೀಜ ಕಂಪನಿಗಳಿಗೆ ಲಾಕ್ ಡೌನ್ ವಿನಾಯಿತಿ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ಶೇಕಡಾ 10-15ರಷ್ಟು ಕಾರ್ಮಿಕರು ತಮ್ಮೂರುಗಳಿಗೆ ತೆರಳಿರುವುದರಿಂದ ಕಾರ್ಮಿಕರ ಕೊರತೆಯನ್ನೂ ಈ ಕೈಗಾರಿಕೆ ಎದುರಿಸುತ್ತಿದೆ. ಬೀಜ ಕಂಪನಿಗಳಿಗೆ ಉತ್ಪಾದನಾ ವೆಚ್ಚ ಶೇಕಡಾ ಐದರಿಂದ ಹತ್ತರಷ್ಟು ಹೆಚ್ಚಾಗಲಿದೆ ಎಂಬುದಾಗಿ ಅಂದಾಜು ಮಾಡಲಾಗಿದೆ. ಈ ಹೊರೆಯು ಕಡೆಗೆ ರೈತರ ಮೇಲೆಯೇ ಬೀಳುವುದರಲ್ಲಿ ಸಂಶಯವಿಲ್ಲ.












Click it and Unblock the Notifications