ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಸಾಲಮನ್ನಾ ಮಾಡಲಿ: ದೇವೇಗೌಡ
ಬೆಂಗಳೂರು, ಮೇ 23: ಸಾಲಮನ್ನಾ ಮಾಡಲು ನಮಗೆ ಬಹುಮತ ಸಿಕ್ಕಿದ್ಯಾ? 37 ಶಾಸಕರನ್ನು ಇಟ್ಟುಕೊಂಡು ಸಾಲಮನ್ನಾ ಸಾಧ್ಯವಾ? ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಸಾಲಮನ್ನಾ ಮಾಡಬೇಕಷ್ಟೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಹೇಳಿದ್ದಾರೆ.
ಪದ್ಮನಾಭನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳುವುದಕ್ಕಾಗಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ, ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ, ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿ ಎಂದು ನೂತನ ಸಿಎಂ ಕುಮಾರಸ್ವಾಮಿಗೆ ದೇವೇಗೌಡರು ಸಲಹೆ ಮಾಡಿದರು.
ಇಂದು ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷರಾಗಿ ಕುಮಾರಸ್ವಾಮಿ ಪ್ರಮಾಣವಚನಕ್ಕೆ ಹೋಗುತ್ತಿಲ್ಲ ಬದಲಿಗೆ ತಂದೆಯಾಗಿ ಆಶೀರ್ವಾದ ಮಾಡಲು ಹೋಗುತ್ತಿದ್ದೇನೆ, ತಂದೆ-ತಾಯಿಯಾಗಿ ಇದು ನಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಇಂದು ಪ್ರಮಾಣವಚನ ಸ್ವೀಕಾರ ಮಾಡಲು ತಯಾರಿ ನಡೆಸುತ್ತಿದ್ದಂತೆ ಸಾಲಮನ್ನಾ ಬಗ್ಗೆ ಚರ್ಚೆಗಳು ಹೆಚ್ಚಾಗಿದ್ದು, ಈ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸ್ವಲ್ಪ ಸಮಯಾವಕಾಶ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.











Click it and Unblock the Notifications