ಉತ್ತರ ಕರ್ನಾಟಕ ಮುಖಂಡರ ಜೊತೆ ಸಿಎಂ ಸಭೆ, ಹಳೆ ಹೇಳಿಕೆಗಳಿಗೆ ತೇಪೆ
ಬೆಂಗಳೂರು, ಜುಲೈ 31: ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆಯೆಂಬ ಕೂಗು ಪ್ರಬಲಗೊಂಡು, ಪ್ರತ್ಯೇಕ ರಾಜ್ಯ ಕೂಗಿನ ಮಟ್ಟಕ್ಕೆ ಹೋದ ಬೆನ್ನಲ್ಲೇ ಇಂದು ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟಗಾರರ ನಿಯೋಗ ಜೊತೆ ಸಭೆ ನಡೆಸಿ ಉತ್ತರ ಕರ್ನಾಟಕದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಮಾಡಿದ್ದಾರೆ.
ವಿಧಾನಸೌಧದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟಗಾರರ ನಿಯೋಗದ ಸದಸ್ಯರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸೌಲಭ್ಯ ನೀಡುವ ಭರವಸೆ ನೀಡಿದ್ದಾರೆ.
ನಮ್ಮ ಭಾಗದ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಕ್ಕಿಲ್ಲ, ನೀರಾವರಿ ದೊರೆಯುತ್ತಿಲ್ಲ, ಶಿಕ್ಷಣ, ಉದ್ಯೋಗಗಳಲ್ಲೂ ನಮಗೆ ಅನ್ಯಾಯವಾಗಿದೆ ಎಂದು ಉತ್ತರ ಕರ್ನಾಟಕದಿಂದ ಬಂದಿದ್ದ ಮುಖಂಡರು ಮುಖ್ಯಮಂತ್ರಿಗಳ ಬಳಿ ಅಳಲು ತೋಡಿಕೊಂಡರು.

ಬೆಳಗಾವಿಯನ್ನು ರಾಜಧಾನಿ ಮಾಡುವವನಿದ್ದೆ
ಉತ್ತರ ಕರ್ನಾಟಕವನ್ನು ನಾನೆಂದೂ ನಿರ್ಲಕ್ಷ ಮಾಡಿಲ್ಲ ಎಂದ ಕುಮಾರಸ್ವಾಮಿ, ಕಳೆದ ಬಾರಿ 20 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಅತಿ ಹೆಚ್ಚು ಗ್ರಾಮ ವಾಸ್ಥವ್ಯ ಉತ್ತರ ಕರ್ನಾಟಕದಲ್ಲಿ ಮಾಡಿದ್ದೆ, 450 ಕೋಟಿ ವೆಚ್ಚದಲ್ಲಿ ಸುವರ್ಣಸೌಧ ನಿರ್ಮಿಸಿದ್ದೆ, ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡಲು ಸಹ ಚಿಂತಿಸಿದ್ದೆ ಎಂದು ಮನವರಿಕೆ ಮಾಡಿಕೊಟ್ಟರು.

ಸಾಲಮನ್ನಾದಿಂದ ಉ.ಕರ್ನಾಟ ರೈತರಿಗೆ ಹೆಚ್ಚಿನ ಲಾಭ
ಈಗಾಗಲೇ ಕೃಷಿ ಸಾಲ ಮನ್ನಾ ಮಾಡಿದ್ದೇನೆ ಅದರಿಂದ ಉತ್ತರ ಕರ್ನಾಟಕದ ರೈತರಿಗೆ ಹೆಚ್ಚಿನ ಲಾಭವಾಗಿದೆ. ಕಳೆದ ಬಾರಿಯ ಸರ್ಕಾರದ 4000 ಕೋಟಿ ಸಾಲವನ್ನೂ ನಾನೇ ಮನ್ನಾ ಮಾಡಬೇಕಿದೆ, ರೈತರಿಗೆ ಇನ್ನೂ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವನಿದ್ದೇನೆ ಎಂದು ಅವರು ಹೇಳಿದರು.

ಕಡಿಮೆ ಸೀಟು ಬಂದರೂ ಸಾಲಮನ್ನಾ ಮಾಡಿದ್ದೇನೆ
ಉತ್ತರ ಕರ್ನಾಟಕದ ಜನ ನನಗೆ ಹೆಚ್ಚಿನ ಪ್ರೀತಿ ತೋರಿದ್ದಾರೆ ಎಂದ ಸಿಎಂ, 'ಪೂರ್ಣ ಬಹುಮತ ನೀಡಿದರೆ ಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದೆ, ಆದರೆ 37 ಸೀಟುಗಳು ಬಂದಿದ್ದರೂ ಸಹ ಏನೋ ಕಷ್ಟಪಟ್ಟು ಸಾಲಮನ್ನಾ ಮಾಡಿದ್ದೇನೆ ಎಂದರು.

ರೈತರನ್ನು ಬೈದಿಲ್ಲ
ಉತ್ತರ ಕರ್ನಾಟಕದ ರೈತರನ್ನು ನಾನು ಬೈದಿಲ್ಲ, ಚುನಾವಣೆ ವೇಳೆ ನನ್ನನ್ನು ಯಾಕೆ ಮರೆತಿರಿ ಎಂದು ಕೇಳಿದ್ದೆ ಅಷ್ಟೆ ಎಂದು ಸಮಜಾಯಿಷಿ ನೀಡಿದ ಕುಮಾರಸ್ವಾಮಿ, ಆದರೆ ರೈತ ಮುಖಂಡರು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.











Click it and Unblock the Notifications