Orange: ನೇಪಥ್ಯಕ್ಕೆ ಸರಿದ ಕೊಡಗಿನ ಕಿತ್ತಳೆ: ಮರುಕಳಿಸುತ್ತಾ ವೈಭವ?
ಮಡಿಕೇರಿ, ಡಿಸೆಂಬರ್ 11: ಕೊಡಗಿನ ಬ್ರಾಂಡ್ಗಳಲ್ಲಿ ಒಂದಾಗಿರುವ ಕಿತ್ತಳೆ ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿನ ಕಾಫಿ ತೋಟಗಳ ನಡುವಿನಿಂದ ಸದ್ದಿಲ್ಲದೆ ಮರೆಯಾಗುತ್ತಿದೆ. ಮೊದಲೆಲ್ಲ ಈ ವೇಳೆಗೆ ತೋಟದ ನಡುವಿನ ಗಿಡಗಳಲ್ಲಿ ತೂಗಿ ತೊನೆಯುತ್ತಿದ್ದ ಹಣ್ಣುಗಳು ಕಾಣಿಸುತ್ತಿದ್ದವು. ಆದರೀಗ ಅಂತಹ ದೃಶ್ಯಗಳು ಅಪರೂಪವಾಗುತ್ತಿವೆ. ಇದಕ್ಕೆ ಕಾರಣಗಳು ಅನೇಕ ಇರಬಹುದಾದರೂ ಅವುಗಳನ್ನು ನೆಟ್ಟು ಬೆಳೆಸಿ ಮತ್ತೆ ಕಿತ್ತಳೆಯ ವೈಭವ ತರಬೇಕೆಂದು ಬೆಳೆಗಾರರು ಹೋರಾಟ ಮಾಡುತ್ತಿದ್ದರೂ ಮೊದಲಿನಂತೆ ಬೆಳೆಯದಿರುವುದು ಆಸಕ್ತಿ ಕಳೆದುಕೊಳ್ಳಲು ಕಾರಣವಾಗುತ್ತಿವೆ.
ಇತ್ತೀಚೆಗಿನ ವರ್ಷಗಳಲ್ಲಿ ಹೊಸ ತಳಿಗಳನ್ನು ಬೆಳೆಸುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಕೊಡಗಿನಲ್ಲಿ ಬೆಳೆಯುತ್ತಿದ್ದ ತಳಿ ಮಾಯವಾಗಿದೆ. ಈಗ ಗಿಡಗಳನ್ನು ನೆಟ್ಟು ಬೆಳೆಸಿದರೂ ಅದು ಫಸಲಿಗೆ ಬರುವ ವೇಳೆಗೆ ರೋಗಗಳು ತಗುಲಿ ಒಣಗಿ ಹೋಗುತ್ತಿವೆ. ಇನ್ನೊಂದೆಡೆ ಅವುಗಳನ್ನು ಪ್ರತ್ಯೇಕವಾಗಿ ನೆಡದೆ ಕಾಫಿ ತೋಟಗಳ ನಡುವೆ ನೆಡುತ್ತಿರುವುದರಿಂದ ಕಾಫಿ ಗಿಡಗಳ ಕೆಲಸ ಮಾಡುವಾಗ ಕಿತ್ತಳೆ ಗಿಡಗಳ ಬೇರಿಗೆ ಹಾನಿಯಾಗುತ್ತಿದ್ದು ಇದರಿಂದ ಅವುಗಳ ಬೆಳವಣಿಗೆ ಕುಂಠಿತವಾಗಿ ಸಾವನ್ನಪ್ಪುತ್ತಿವೆ ಎಂಬುದಾಗಿ ಕೆಲವು ಬೆಳೆಗಾರರು ಹೇಳುತ್ತಾರೆ.

ಕಿತ್ತಳೆ ಕುರಿತಂತೆ ನೋಡಿದ್ದೇ ಆದರೆ ಇದು ರೊಟೇಸಿ ಕುಟುಂಬಕ್ಕೆ ಸೇರಿದ್ದು, ಸಿಟ್ರಸ್ ಎಂಬ ವೈಜ್ಞಾನಿಕ ಹೆಸರಿದೆ. ಇದನ್ನು ಮ್ಯಾಂಡರಿನ್ ಆರಿಂಜ್ ಅಥವಾ ಮ್ಯಾಂಡರಿನ್ ಎಂದು ಕೂಡ ಕರೆಯಲಾಗುತ್ತದೆ. ಉಷ್ಣ ಮತ್ತು ಉಪೋಷ್ಣ ವಲಯಗಳಲ್ಲಿ ಮುಖ್ಯ ಬೆಳೆಯಾಗಿ ಬೆಳೆಸುವುದನ್ನು ಕಾಣಬಹುದಾಗಿದೆ. ಇದರ ತವರು ಏಷ್ಯಾ ಖಂಡದ ಉಷ್ಣವಲಯ ಅದರಲ್ಲಿಯೂ ವಲಯ ದ್ವೀಪಸ್ತೋಮಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇಲ್ಲಿಂದಲೇ ಅದು ತನ್ನ ಬೆಳವಣಿಗೆಗೆ ಅನುಕೂಲವಿರುವ ವಾತಾವರಣದ ಪ್ರದೇಶಗಳಿಗೆ ಹರಡಿತೆಂದು ಹೇಳಲಾಗುತ್ತಿದೆ.
ಬೇಡಿಕೆಯಿದ್ದರೂ ಬೆಳೆಸುವುದೇ ಸವಾಲ್
ಇಂದು ಕಿತ್ತಳೆ ಭಾರತ, ಅಮೇರಿಕಾ, ಇಂಗ್ಲೆಂಡ್, ಯುರೋಪಿನ ಮೆಡಿಟೇರಿಯನ್ ಪ್ರದೇಶ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಲ್ಲಿ ಬೆಳೆಯುತ್ತಿದ್ದರೆ, ಭಾರತದ ಮಟ್ಟಿಗೆ ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಅಸ್ಸಾಂ ಹಾಗೂ ಕರ್ನಾಟಕದಲ್ಲಿ ಬೆಳೆಯುತ್ತಿದ್ದು, ಕರ್ನಾಟಕದಲ್ಲಿ ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಬೆಳೆಯಲಾಗುತ್ತಿದೆ. ಆದರೆ ಕೊಡಗಿನ ಕಿತ್ತಳೆ ಬ್ರಾಂಡ್ ಆಗಿದ್ದು ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿದೆ.

ಕೊಡಗು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಕಿತ್ತಳೆಯನ್ನು ಬೆಳೆದರೂ ಇದನ್ನು ಪ್ರತ್ಯೇಕವಾಗಿ ಹೆಚ್ಚಿನವರು ಬೆಳೆಯುತ್ತಿಲ್ಲ. ಕಾಫಿ ತೋಟದ ನಡುವೆ ಅಥವಾ ಬದಿಯಲ್ಲಿ ಬೆಳೆಯುತ್ತಾರೆ. ಪ್ರತ್ಯೇಕವಾಗಿ ಎಕರೆಗಟ್ಟಲೆ ಬೆಳೆದು ಅದರಿಂದ ಆದಾಯ ಪಡೆಯುವುದು ಸುಲಭವಾಗಿ ಉಳಿದಿಲ್ಲ. ಹೀಗಾಗಿ ಉಪಬೆಳೆಯಾಗಿ ಬೆಳೆಸುತ್ತಾರೆ. ಆದರೆ ಬೇರೆಡೆಗಳಲ್ಲಿ ಇದನ್ನು ಪ್ರತ್ಯೇಕವಾಗಿ ಬೆಳೆಸುತ್ತಾರೆ.
ಎರಡು ರೀತಿಯಲ್ಲಿ ಸಸ್ಯಾಭಿವೃದ್ಧಿ ಸಾಧ್ಯ
ನಲವತ್ತರಿಂದ ನೂರು ಇಂಚು ಮಳೆ ಸುರಿಯುವ ಮತ್ತು ಸಮುದ್ರ ಮಟ್ಟದಿಂದ ಸುಮಾರು ಎರಡು ಸಾವಿರ ಅಡಿ ಎತ್ತರವಿರುವ ತಂಪು ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ. ಮೆಕ್ಕಲು, ಜಂಬಿಟ್ಟಿಗೆ ಜೌಗಿಲ್ಲದ ಕಪ್ಪು ಜೇಡಿ ಮಣ್ಣುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಗಿಡದ ತಾಯಿ ಬೇರು ಭೂಮಿಯ ಆಳಕ್ಕೆ ಇಳಿದರೂ ನೀರನ್ನು ಹೀರಿಕೊಳ್ಳಲು ಭೂಮಿಯ ಮೇಲ್ಭಾಗದಲ್ಲಿಯೇ ಹರಡಿಕೊಂಡಿರುತ್ತವೆ. ಹೀಗಾಗಿ ಅತಿ ಆಳದ ಮಣ್ಣಿನ ಅವಶ್ಯಕತೆ ಇರುವುದಿಲ್ಲ.

ಇನ್ನು ಸಸ್ಯಾಭಿವೃದ್ಧಿಯನ್ನು ಲಿಂಗರೀತಿ ಮತ್ತು ನಿರ್ಲಿಂಗ ರೀತಿಯಲ್ಲಿ ಮಾಡುತ್ತಾರೆ. ನಮಗೆ ಬೇಕಾದ ತಳಿಗಳನ್ನು ಬೀಜದಿಂದ ಪಡೆದು ಬೂದಿಯನ್ನು ಬೆರೆಸಿ ಪಾತಿಗಳಲ್ಲಿ ಬಿತ್ತಬೇಕು. ಇದು ಸಾಮಾನ್ಯ ಸಸ್ಯಾಭಿವೃದ್ಧಿಯ ಕ್ರಮವಾಗಿದೆ. ಹೀಗೆ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಣ್ಣಿನಿಂದ ತೆಗೆದ ಬೀಜಗಳನ್ನು ತಕ್ಷಣವೇ ಬಿತ್ತನೆ ಮಾಡಬೇಕು. ಹೆಚ್ಚು ದಿನ ಇಟ್ಟರೆ ಮೊಳಕೆ ಒಡೆಯುವ ಸಾಮರ್ಥ್ಯ ಕಳೆದುಕೊಳ್ಳಬಹುದು.
ಮುಂಗಾರಿನಲ್ಲಿ ಗಿಡ ನೆಡುವುದು ಒಳ್ಳೆಯದು
ಬೀಜಗಳು ಬಿತ್ತಿದ ಇಪ್ಪತ್ತು ದಿನಗಳ ನಂತರ ಮೊಳಕೆ ಒಡೆಯಲು ಆರಂಭಿಸುತ್ತವೆ. ಅವುಗಳನ್ನು ತೆಗೆದು ಕೊಟ್ಟಿಗೆ ಗೊಬ್ಬರ ಮಿಶ್ರಿತ ಪಾಲಿಥಿನ್ ಕವರ್ ನಲ್ಲಿ ನೆಟ್ಟು ನೆರಳಿನಲ್ಲಿ ಆರೈಕೆ ಮಾಡಬೇಕು. ಗಿಡಗಳು ಬೆಳೆದ ನಂತರ ಮುಂಗಾರಿನಲ್ಲಿ ತೋಟಗಳಲ್ಲಿ ನೆಡಬೇಕು. ಗಿಡ ನೆಡಲು ಯೋಜಿಸಿದ ಸ್ಥಳದಲ್ಲಿ ಒಂದು ಗುಂಡಿಯಿಂದ ಮತ್ತೊಂದು ಗುಂಡಿಗೆ ಸುಮಾರು 20ರಿಂದ 25 ಅಡಿಯಷ್ಟು ಅಂತರವನ್ನು ಕಾಪಾಡಿಕೊಳ್ಳಬೇಕು. ಎರಡೂವರೆ ಅಡಿ ಆಳ, ಉದ್ದ ಗುಂಡಿಗಳನ್ನು ತೋಡಿ ಅದರಲ್ಲಿ ಕೊಟ್ಟಿಗೆ ಗೊಬ್ಬರ ಬೆರೆಸಿ ಗಿಡಗಳನ್ನು ನೆಡಬೇಕಾಗುತ್ತದೆ. ಗಿಡಗಳನ್ನು ನೆಟ್ಟ ನಂತರ ಗೊಬ್ಬರ ನೀರು ಹಾಕಿ ಚೆನ್ನಾಗಿ ಆರೈಕೆ ಮಾಡಿದ್ದೇ ಆದರೆ ನಾಲ್ಕೈದು ವರ್ಷಗಳಲ್ಲಿ ಫಸಲು ನೀಡಲು ಆರಂಭಿಸುತ್ತವೆ.
ಕೆಲವು ಗಿಡಗಳು ಒಂಬತ್ತು ಹತ್ತು ವರ್ಷಗಳ ನಂತರ ಫಸಲು ನೀಡುತ್ತವೆ. ಒಂದು ಕಿತ್ತಳೆ ಗಿಡವು ಯಾವುದೇ ರೋಗ ಬಾಧೆಯಿಲ್ಲದೆ ಚೆನ್ನಾಗಿದ್ದರೆ ನಲುವತ್ತಕ್ಕೂ ಹೆಚ್ಚು ವರುಷ ಬದುಕಿ ಫಸಲು ನೀಡಬಲ್ಲದು. ಒಂದು ಗಿಡವು ಅದರ ಸಾಮರ್ಥ್ಯಕ್ಕೆ ತಕ್ಕಂತೆ ಹಣ್ಣುಗಳನ್ನು ಬಿಡುತ್ತದೆ. ಬದಲಾದ ವಾತಾವರಣದಲ್ಲಿ ಗಿಡಕ್ಕೆ ಕೀಟ ಹಾಗೂ ರೋಗಗಳು ತಗಲುತ್ತಿದ್ದು, ಇದರಿಂದ ಅವು ಸಾಯುತ್ತಿವೆ. ಇನ್ನು ಕೆಲಿದೋನಿಯಂ ಸಿಂಕ್ಟಂ ಎಂಬ ಹುಳು ಮತ್ತು ಹುರುಪೆ ಎಂಬ ಕೀಟವು ಕಾಂಡಗಳನ್ನು ಕೊರೆದು ನಾಶಪಡಿಸುತ್ತವೆ.
ಕೊಡಗಿನ ಕಿತ್ತಳೆಗೆ ಉತ್ತೇಜನ ಅಗತ್ಯ
ಇದರ ಜತೆಗೆ ಚಿಟ್ಟೆ ಹೇನು, ತಿಗಣೆಗಳು ಹಣ್ಣಿನ ರಸವನ್ನು ಹೀರಿ ನಾಶಮಾಡುತ್ತವೆ. ಗಿಡಕ್ಕೆ ಏಕಾಣು ಜೀವಿಯಿಂದ ಬರುವ ಕಜ್ಜಿರೋಗ, ಶಿಲೀಂದ್ರ ರೋಗಗಳು ಬಾಧಿಸುತ್ತವೆ. ಫೈಟಾಪ್ತರ ಜಾತಿಯ ಶಿಲೀಂದ್ರದಿಂದ ಹಾನಿಕಾರಕ ಬ್ರೌನ್ ರಾಟ್ ಗಮ್ಮೋಸಿಸ್ ಅಥವಾ ಫುಟ್ ರಾಟ್ ರೋಗಗಳು ಬಾಧಿಸುತ್ತವೆ. ಈ ರೋಗದ ಮುಖ್ಯ ಲಕ್ಷಣಗಳು ಏನೆಂದರೆ ಕಾಂಡದ ಕೆಳಭಾಗ ಮತ್ತು ಬೇರುಗಳು ಕೊಳೆಯುತ್ತವೆ. ಇನ್ನು ಶೀತ ಹವೆಯಲ್ಲಿ ಹಣ್ಣುಗಳಿಗೆ ಬ್ರೌನ್ ರಾಟ್ ಹರಡಿ ಹಣ್ಣುಗಳು ಕೊಳೆತು ಗಿಡದಿಂದ ಉದುರುತ್ತವೆ. ಗಿಡಕ್ಕೆ ಕಾಂಡ ಒಣಗುವಿಕೆ, ಎಲೆಗಳಿಗೆ ಮಚ್ಚೆರೋಗ. ಬೂದುರೋಗ ಮೊದಲಾದ ರೋಗಗಳು ಬಾಧಿಸುತ್ತವೆ.
ಇವುಗಳೆಲ್ಲವನ್ನು ರಾಸಾಯನಿಕ ಸಿಂಪಡಣೆ ಮೂಲಕ ನಿಯಂತ್ರಿಸಬೇಕಾಗುತ್ತದೆ. ಕೊಡಗಿನಲ್ಲಿ ಕಿತ್ತಳೆ ಬಗ್ಗೆ ಬೆಳೆಗಾರರು ಕಾಫಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಅದರ ನಡುವೆ ಕರಿಮೆಣಸು ಮತ್ತು ಕಿತ್ತಳೆಯನ್ನು ಬೆಳೆಯುತ್ತಾರೆಯಾದರೂ ವಾಣಿಜ್ಯ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದು ಕಡಿಮೆಯೇ.. ಇದರಿಂದ ಹೆಚ್ಚಿನ ಆದಾಯ ಪಡೆಯುವುದು ಕೊಡಗಿನ ಮಟ್ಟಿಗೆ ಕಷ್ಟಸಾಧ್ಯವಾಗಿದೆ. ಕೊಡಗಿನ ಕಿತ್ತಳೆಗೆ ಒಳ್ಳೆಯ ಹೆಸರಿದ್ದು ಅದನ್ನು ಉಳಿಸಿಕೊಳ್ಳಬೇಕಾದರೆ ಬೆಳೆಗಾರರು ಕಿತ್ತಳೆಗೆ ಆದ್ಯತೆ ನೀಡಬೇಕಾಗಿದೆ. ಜೊತೆಗೆ ಸರ್ಕಾರ ಕೂಡ ಉತ್ತೇಜನ ನೀಡಬೇಕಾಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications