ವಿದೇಶಿ ಹಣದ ವಿವರ ಕೇಳಿದ ಸರ್ಕಾರ; ಹೋರಾಟ ಹತ್ತಿಕ್ಕುವ ತಂತ್ರವೆಂದ ರೈತರು
ಚಂಡೀಗಢ, ಡಿಸೆಂಬರ್ 21: "ರೈತರ ಈ ಹೋರಾಟ ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಲೇ ಇದೆ. ಇದೀಗ ವಿದೇಶಿ ಹಣದ ನೆಪವಿಟ್ಟುಕೊಂಡು ಹೋರಾಟಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದೆ. ವಿದೇಶಿ ಹಣ ಪಡೆಯಲಿರುವ ನೋಂದಣಿ ವಿವರಗಳನ್ನು ಕೇಳಿ ಹೋರಾಟಕ್ಕೆ ಹಿನ್ನಡೆ ತರುವ ಕೆಲಸ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ ಚಂಡೀಗಢ ರೈತ ಸಂಘದ ಸದಸ್ಯರು.
ಪಂಜಾಬ್ ನ ಅತಿ ದೊಡ್ಡ ರೈತ ಸಂಘ ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹಣ್) ಅಧ್ಯಕ್ಷ ಜೋಗಿಂದರ್ ಉಗ್ರಾಹಣ್ ಹಾಗೂ ಅದರ ಕಾರ್ಯದರ್ಶಿ ಸುಖದೇವ್ ಸಿಂಗ್ ಕೇಂದ್ರ ಸರ್ಕಾರದ ಈ ಹೊಸ ಬೇಡಿಕೆ ಕುರಿತು ಮಾಹಿತಿ ನೀಡಿದ್ದಾರೆ. ರೈತರ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಏನೆಲ್ಲಾ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಮುಂದೆ ಓದಿ...

"ಕೇಂದ್ರ ತನ್ನೆಲ್ಲಾ ತಂತ್ರ ಬಳಸುತ್ತಿದೆ"
ಕೇಂದ್ರವು ರೈತರ ಈ ಪ್ರತಿಭಟನೆಯನ್ನು ಹತ್ತಿಕ್ಕಲು ತನ್ನೆಲ್ಲಾ ತಂತ್ರಗಳನ್ನು ಬಳಸುತ್ತಿದೆ. ಈ ಹೋರಾಟವನ್ನು ಸೋಲಿಸುವುದೇ ಕೇಂದ್ರದ ಪರಮ ಉದ್ದೇಶವಾಗಿದೆ. ಹೀಗಾಗಿ ನೆಪಗಳನ್ನು ಇಟ್ಟುಕೊಂಡು ಮುಂದೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ವಿದೇಶದಿಂದ ಬರುವ ಹಣ ಪಡೆಯಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ ಸಿ ಆರ್ ಎ) ನೋಂದಣಿ ಕಡ್ಡಾಯವಾಗಿದೆ. ಕೇಂದ್ರದ ಇಲಾಖೆಯು ಪಂಜಾಬ್ ಬ್ಯಾಂಕ್ ವಿಭಾಗದ ಮೂಲಕ ತಮಗೆ ಇಮೇಲ್ ಕಳುಹಿಸಿದೆ. ವಿದೇಶಿ ಹಣ ಪಡೆಯುವ ಸಂಬಂಧ ನೋಂದಣಿಯ ವಿವರ ನೀಡಬೇಕು. ಇಲ್ಲವೆಂದರೆ ಅದನ್ನು ವಾಪಸ್ ಕಳುಹಿಸಬೇಕಾಗುತ್ತದೆ ಎಂದು ಇಮೇಲ್ ನಲ್ಲಿರುವುದಾಗಿ ಸುಖದೇವ್ ಸಿಂಗ್ ತಿಳಿಸಿದ್ದಾರೆ.

"ನಮ್ಮನ್ನು ಸೋಲಿಸುವುದೇ ಏಕಮಾತ್ರ ಉದ್ದೇಶ"
ಕೇಂದ್ರದ ಈ ನಡೆಯನ್ನು ರೈತರು, ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧದ ಈ ಹೋರಾಟಕ್ಕೆ ತಮ್ಮಿಂದ ಏನು ಸಾಧ್ಯವೋ ಆ ಎಲ್ಲಾ ಅಡ್ಡಿಗಳನ್ನು ಸರ್ಕಾರ ಮಾಡುತ್ತಿದೆ. ರೈತರ ಹೋರಾಟವನ್ನು ಸೋಲಿಸುವುದು ಅವರ ಏಕಮಾತ್ರ ಉದ್ದೇಶವಾಗಿರುವುದರಿಂದ ಎಲ್ಲಾ ತಂತ್ರಗಳನ್ನು ಬಳಸುತ್ತಿದೆ ಎಂದು ದೂರಿದ್ದಾರೆ.

ವಕೀಲರ ಸಲಹೆಗೆ ಮುಂದಾದ ರೈತರು
ಇದುವರೆಗೂ ಬಂದಿರುವ ವಿದೇಶಿ ಹಣದ ನಿಖರ ಮೊತ್ತದ ಅಂದಾಜು ಮಾಡಲಾಗುತ್ತಿದೆ. ಈ ಇಮೇಲ್ ಗೆ ಪ್ರತಿಕ್ರಿಯೆ ನೀಡಲು ವಕೀಲರ ಸಲಹೆ ತೆಗೆದುಕೊಳ್ಳಲಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ. ಐಟಿ ಇಲಾಖೆ ಮೊದಲು, ಕಮಿಷನ್ ಏಜೆಂಟ್ (ಅರ್ಹಿತ್ಯಾ) ಗಳ ಮೇಲೆ ದಾಳಿ ನಡೆಸಿತ್ತು. ಅವರು ರೈತರಿಗೆ ಬೆಂಬಲ ನೀಡುತ್ತಿದ್ದರು ಎಂಬ ಕಾರಣಕ್ಕೇ ದಾಳಿ ನಡೆಸಲಾಗಿತ್ತು ಎಂದು ದೂರಿದರು.

ಎನ್ ಆರ್ ಐಗಳ ಹಣದ ವಿವರ ನೀಡಲು ಸೂಚನೆ
ಈಗ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದರಿಂದ, ಕೇಂದ್ರ ನಮ್ಮನ್ನು ಗುರಿಯನ್ನಾಗಿ ಮಾಡಿಕೊಂಡಿದೆ. ಎನ್ ಆರ್ ಐಗಳ ಹಣದ ವಿವರವನ್ನು ಕೇಳುತ್ತಿದೆ. ಪಂಜಾಬ್ ನ ಎನ್ ಆರ್ ಐಗಳು ತಮ್ಮ ಶ್ರಮದ ಹಣದಲ್ಲಿ ನಮಗೆ ಹಣ ಕಳುಹಿಸಿದ್ದಾರೆ. ಅವರು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಅದರಲ್ಲಿ ತಪ್ಪೇನು? ನಮಗೆ ಎಂದಿಗೂ ಬೆಂಬಲ ಸಿಕ್ಕೇ ಸಿಗುತ್ತದೆ. ಇದೇ ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications