ಅಡಿಕೆ ಕುರಿತ ಅಫಿಡವಿಟ್ ಹಿಂಪಡೆಯಲು ಬಿಜೆಪಿ ಸಂಸದರ ನಿಯೋಗ ಮನವಿ
ಮಂಗಳೂರು, ಜುಲೈ 18: ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹಿಂದಿನ ಯುಪಿಎ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ಅನ್ನು ಹಿಂದಕ್ಕೆ ಪಡೆಯುವಂತೆ ಕೋರಿ ಬಿಜೆಪಿ ಸಂಸದರ ನಿಯೋಗವು ಇಂದು ದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಅವರನ್ನು ಭೇಟಿ ಮಾಡಿತ್ತು.
ಯಾವುದೇ ವೈಜ್ಞಾನಿಕ ಕಾರಣಗಳಿಲ್ಲದೇ ಕೇವಲ ಸುಪ್ರೀಂ ಕೋರ್ಟಿನಲ್ಲಿರುವ ಅಫಿಡವಿಟ್ ಆಧಾರದಲ್ಲಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಉತ್ತರವನ್ನು ಸಂಸತ್ತಿನಲ್ಲಿ ನೀಡಿದ ಸಚಿವಾಲಯದ ನಿಲುವಿಗೆ ಆಕ್ಷೇಪವನ್ನು ವ್ಯಕ್ತಪಡಿಸಲಾಯಿತು.
ಕೇಂದ್ರದ ಈ ನಿಲುವು ರಾಜ್ಯದ ಅಡಿಕೆ ಬೆಳೆಗಾರರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಡಿಕೆ ಕುರಿತ ಸಂಶೋಧನೆ ನಡೆಸುವ ICAR-CPCRI ಸಂಸ್ಥೆಗಳು ಅಡಿಕೆ ಸೇವನೆಯು ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತ ಕಾಯುವ ಭರವಸೆ ಮೂಡಿಸಬೇಕು. ಈ ಸಂಬಂಧ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ ಅನ್ನು ಹಿಂದಕ್ಕೆ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಈ ಬಗ್ಗೆ ಸ್ಪಂದಿಸಿರುವ ಸಚಿವರು, ಈ ಕುರಿತು ಈಗಾಗಲೇ ಎರಡು ಮೂರು ಬಾರಿ ಸಭೆ ನಡೆದಿದ್ದು, ಅಫಿಡವಿಟ್ ಹಿಂಪಡೆಯಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಅವರು ಮನವಿ ಮಾಡಿದರು. ಸಂಸದರಾದ ಜಿ.ಎಮ್.ಸಿದ್ದೇಶ್ವರ, ಎ.ನಾರಾಯಣಸ್ವಾಮಿ, ಅಣ್ಣಾಸಾಹೇಬ್ ಜೊಲ್ಲೆ ಅವರು ಜೊತೆಗಿದ್ದರು.











Click it and Unblock the Notifications