ಮಂಗಗಳಿಗೆ ಹಾಕಿದ್ದ ನೈಲಾನ್ ಬಲೆಯಲ್ಲಿ ಸಿಲುಕಿ ಪಕ್ಷಿಗಳ ಸಾವು
ಮೈಸೂರು, ಜೂನ್ 6: ಮಂಗಗಳಿಂದ ಹಣ್ಣನ್ನು ರಕ್ಷಿಸಲು ರೈತರೊಬ್ಬರು ಹಾಕಿದ ಬಲೆಗೆ ಪಕ್ಷಿಗಳು ಸಿಕ್ಕಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾನ ಗುಂಬಸ್ ಬಳಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಎರಡು ಎಕರೆ ತೋಟದಲ್ಲಿ ಸೀಬೆ ಮತ್ತು ಪನ್ನೇರಳೆ ಹಣ್ಣಿನ ಗಿಡಗಳನ್ನು ಬೆಳೆದಿರುವ ರೈತ ಅಂದಾನಯ್ಯ ಎಂಬುವರು ಫಸಲನ್ನು ತಿನ್ನಲು ಬರುವ ಮಂಗಗಳ ಹಾವಳಿಯಿಂದ ಬೇಸತ್ತು ತೋಟದ ಸುತ್ತ ನೈಲಾನ್ ಬಲೆಯನ್ನು ಹಾಕಿದ್ದರು.

ತೋಟದಲ್ಲಿ ಬಲೆಯನ್ನು ಹಾಕಿರುವುದರಿಂದ ಮಂಗಗಳು ತೋಟಕ್ಕೆ ನುಗ್ಗಿ ಫಸಲನ್ನು ಹಾಳು ಮಾಡುವುದು ಕಡಿಮೆಯಾಯಿತು. ಆದರೆ ಪರಿಣಾಮ ಮಾತ್ರ ಬೇರೆಯೇ ಆಗಿರುವುದು ಈಗ ಬೆಳಕಿಗೆ ಬಂದಿದೆ. ಇದೀಗ ಈ ಬಲೆಗೆ ಬಿಳಿಚುಕ್ಕೆ ಗೂಬೆ, ಮರಕುಟಕ, ಸನ್ ಬರ್ಡ್, ಬುಲ್ ಬುಲ್, ಕಿಂಗ್ ಫಿಷರ್, ಹಸಿರು ಗಿಳಿ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಸಿಕ್ಕಿ ಹಾಕಿಕೊಂಡು ಹೊರಬರಲಾರದೆ ಸಾವನ್ನಪ್ಪಿವೆ.[ಬೆಳಗಾವಿಯಲ್ಲಿ ಗೂಬೆಗೂ ಬಂತು ಕೇಡುಗಾಲ!]
ಇದು ಇತ್ತೀಚೆಗೆ ತೋಟದ ಬಳಿ ಪಕ್ಷಿಗಳ ಕಳೇಬರಗಳು ಪತ್ತೆಯಾಗಿತ್ತು. ಆಗ ಬಲೆಗೆ ಸಿಕ್ಕಿ ಪಕ್ಷಿಗಳು ಸಾವನ್ನಪ್ಪಿರುವುದು ಗೊತ್ತಾಗಿದೆ.

ಈ ಬಗ್ಗೆ ತೋಟದ ಮಾಲೀಕ ಅಂದಾನಯ್ಯ ಸ್ಪಷ್ಟನೆ ನೀಡಿದ್ದು, ಪಕ್ಷಿಗಳನ್ನು ಕೊಲ್ಲುವ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ನೈಲಾನ್ ಬಲೆ ಹಾಕಿಲ್ಲ. ಮಂಗಗಳು ಪನ್ನೇರಳೆ ಮತ್ತು ಸೀಬೆ ತೋಟಕ್ಕೆ ದಾಳಿಯಿಟ್ಟು ನಾಶ ಮಾಡುತ್ತಿದ್ದವು. ಅವುಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಹಾಕಿದ್ದೆ. ಪಕ್ಷಿಗಳು ಬಲೆಯಲ್ಲಿ ಸಿಲುಕಿ ಸಾವನ್ನಪ್ಪುತ್ತವೆ ಎನ್ನುವುದು ನನಗೆ ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications