ಕಾಯಕವೇ ಕೈಲಾಸ ಎನ್ನುತ್ತಿದ್ದಾರೆ ಪುಷ್ಪಗಿರಿ ಶ್ರೀಮಠದ ಸ್ವಾಮೀಜಿ
ಬೇಲೂರು, ಜುಲೈ 9: ಮಠಗಳೆಂದರೆ ಕೇವಲ ಆಧ್ಯಾತ್ಮ ಕೇಂದ್ರಗಳಲ್ಲ. ಅವು ಕಾಯಕ ಕೇಂದ್ರಗಳು ಕೂಡ ಹೌದು ಎಂಬುದನ್ನು ಬೇಲೂರು ತಾಲ್ಲೂಕಿನ ಹಳೇಬೀಡು ಸಮೀಪದ ಪುಷ್ಪಗಿರಿ ಶ್ರೀಮಠದ ಡಾ.ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ತೋರಿಸಿಕೊಟ್ಟಿದ್ದಾರೆ.
ಪುಷ್ಪಗಿರಿ ಶ್ರೀಮಠಕ್ಕೆ ಭೇಟಿ ನೀಡಿದರೆ ಅಲ್ಲಿ ಸುಮಾರು ಮೂವತ್ತು ಎಕರೆ ಪ್ರದೇಶದಲ್ಲಿ ಬೆಳೆದ ತರಕಾರಿಗಳು, ತೂಗಿ ತೊನೆಯುವ ತೆಂಗು, ಹಣ್ಣಿನ ಮರಗಳು ಕಾಣ ಸಿಗುತ್ತವೆ. ಇವುಗಳೊಂದಿಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡ ಸ್ವಾಮೀಜಿಯೂ ಕಾಣಿಸಿಕೊಳ್ಳುತ್ತಾರೆ.
ಕೃಷಿ ನಂಬಿದರೆ ಅದು ಎಂದಿಗೂ ಕೈಬಿಡುವುದಿಲ್ಲ. ಕೃಷಿ ಕಾಮಧೇನು, ಕಲ್ಪವೃಕ್ಷ ಇದ್ದಂತೆ. ಇದರ ಮಹತ್ವವನ್ನು ಅರಿತು ಕೃಷಿಯಲ್ಲಿ ತೊಡಗಿಕೊಂಡರೆ ಯಶಸ್ಸು ಖಂಡಿತ ಎನ್ನುವುದು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯ. ಅವರು ಚಿಲ್ಕೂರು ಬಳಿಯ ಸುಮಾರು 30 ಎಕರೆ ಪ್ರದೇಶದಲ್ಲಿ ಮಾವು, ತೆಂಗು ಅಡಿಕೆ ಸೇರಿದಂತೆ ಹತ್ತಾರು ಜಾತಿಯ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ.

ಜಮೀನಿನಲ್ಲಿ ಮಲೇಷಿಯಾ ಟೀಕ್ ಹಾಗೂ ತರಕಾರಿ, ಧಾನ್ಯಗಳನ್ನೂ ಬೆಳೆದಿದ್ದಾರೆ. ಕೃಷಿಗೆ ಹೆಚ್ಚಿನ ಒತ್ತು ಕೊಡುವ ಸ್ವಾಮೀಜಿಗಳು ಪ್ರತಿನಿತ್ಯ ಬೆಳಿಗ್ಗೆ 4.30ರಿಂದ ನಿತ್ಯಕರ್ಮಗಳನ್ನು ಮುಗಿಸಿ, ಲಿಂಗಪೂಜೆ ಹಾಗೂ ಗದ್ದುಗೆ ಪೂಜೆಗಳನ್ನು ಪೂರೈಸಿ, ಮಠದ ಮಕ್ಕಳಿಗೆ ವೇದಪಾಠದ ಬಳಿಕ ನೇರ ಹೊಲಕ್ಕೆ ತೆರಳುತ್ತಾರೆ. ತಾವೇ ಟ್ರ್ಯಾಕ್ಟರ್ ನಿಂದ ಉಳುಮೆ ಮಾಡುತ್ತಾ ಕೃಷಿ ಕಾರ್ಯ ಮಾಡುತ್ತಾರೆ. ಇವರ ಕಾರ್ಯ ಇತರರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಿದ್ದು, ಇವರ ಆಧುನಿಕ ಕೃಷಿ ಕಾರ್ಯಗಳ ಬಗ್ಗೆ ಸ್ಥಳೀಯ ರೈತರು ಮಾಹಿತಿ ಪಡೆದು ಬೆಳೆ ಬೆಳೆಯುತ್ತಿರುವುದು ವಿಶೇಷ.
ಪುಷ್ಪಗಿರಿ ಶ್ರೀಗಳು, ಭಕ್ತಿ ಶ್ರದ್ಧೆಯಿಂದ ಕಾಯಕ ಮಾಡಿ ಬಂದ ಆದಾಯವನ್ನು ಸದ್ವಿನಿಯೋಗ ಮಾಡುತ್ತಿದ್ದಾರೆ.
ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ, ದೈಹಿಕ ಶಕ್ತಿ ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಂಡು ಸದೃಢ ಆರೋಗ್ಯ ಪಡೆಯಲು ಸಾಧ್ಯ ಎನ್ನುವುದು ಅವರ ಅನುಭವದ ಮಾತು.












Click it and Unblock the Notifications