ರೈತರಿಗೆ ಮೋಸ: ಯುನೈಟೆಡ್ ಇಂಡಿಯ ಇನ್ಸೂರೆನ್ಸ್ ಕಂಪೆನಿಗೆ ನೋಟೀಸ್!
ಬೆಂಗಳೂರು, ಅ.03: ರೈತರಿಗೆ ಸರಿಯಾಗಿ ವಿಮೆ ಪಾವತಿಸದ ಹಾಗೂ ಕೃಷಿ ಇಲಾಖೆಯ ಸಭೆಗಳಿಗೆ ಸರಿಯಾಗಿ ಹಾಜರಾಗಿ ಮಾಹಿತಿ ನೀಡದ ಯುನೈಟೆಡ್ ಇಂಡಿಯ ಇನ್ಸೂರೆನ್ಸ್ ಕಂಪೆನಿಗೆ ನೋಟೀಸ್ ನೀಡುವಂತೆ ಕೃಷಿ ಇಲಾಖಾಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಸೂಚನೆ ನೀಡಿದ್ದಾರೆ.
ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಕೃಷಿ ಸಚಿವರು ಶನಿವಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳು ಎನ್.ಐ.ಸಿ ಹಾಗೂ ವಿಮಾ ಕಂಪೆನಿಗಳ ಮುಖ್ಯಸ್ಥರ ಜೊತೆ ಪ್ರಗತಿಪರಿಶೀಲನಾ ಸಭೆ ನಡೆಯಿತು.
ಬಜಾಜ್ ಅಲೈಯನ್ಸ್, ಭಾರತಿ ಎಎಕ್ಸೆ, ಫ್ಯೂಚರ್ ಜೆನರಲ್, ಯುನಿವರ್ಸಲ್ ಸೋಂಪೋ ಎಚ್.ಡಿ.ಎಫ್.ಸಿ. ಸೇರಿದಂತೆ ಇನ್ನಿತರೆ ವಿಮಾ ಕಂಪೆನಿಗಳ ಮುಖ್ಯಸ್ಥರು ಭಾಗವಹಿಸಿ ಬೆಳೆ ವಿಮೆ ಸಂಬಂಧ ಮಾಹಿತಿ ಹಾಗೂ ರೈತರ ಬ್ಯಾಂಕ್ ಖಾತೆಯಲ್ಲಾಗಿರುವ ತಾಂತ್ರಿಕ ತೊಂದರೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಆದರೆ ಯುನೈಟೆಡ್ ಇಂಡಿಯ ಇನ್ಸೂರೆನ್ಸ್ ಕಂಪೆನಿಯಿಂದ ಯಾರೊಬ್ಬ ಪ್ರತಿನಿಧಿಯಾಗಲೀ ಮುಖ್ಯಸ್ಥರಾಗಲೀ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೇ ಸರಿಯಾದ ಮಾಹಿತಿಯನ್ನು ಕೂಡ ಇಲಾಖೆಗೆ ನೀಡದಿರುವುದನ್ನು ಗಮನಿಸಿದ ಕೃಷಿ ಸಚಿವರು, ಈ ಕಂಪೆನಿ ವಿರುದ್ಧ ನೊಟೀಸ್ ನೀಡುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಇಲಾಖೆಗೆ ಕೆಟ್ಟ ಹೆಸರು ಸಹಿಸಲ್ಲ!
ಯಾವುದೋ ಒಂದೆರಡು ಕಂಪೆನಿಗಳು ಮಾಡುವ ತಪ್ಪಿಗೆ ಇಲಾಖೆಗೆ ಕೆಟ್ಟ ಹೆಸರು ಬರುವಂತೆ ಆಗುತ್ತದೆ. ಅಲ್ಲದೇ ಇನ್ಸೂರೆನ್ಸ್ ಕಂಪೆನಿಗಳು ಪ್ರೀಮಿಯಮ್ ಕಟ್ಟಿಸಿಕೊಳ್ಳುವಾಗ ಷರತ್ತುಗಳನ್ನು ಸಡಿಲಿಸಿ ಕ್ಲೇಮ್ ಮಾಡುವಾಗ ಷರತ್ತುಗಳನ್ನು ಬಿಗಿಗೊಳಿಸುವುದು ಸರಿಯಲ್ಲ. ಇಲ್ಲಿಯವರೆಗೆ ರೈತರಿಗೆ ವಿಮಾ ಹಣವನ್ನು ನೀಡದೇ ಬಾಕಿ ಉಳಿಸಿಕೊಂಡಿರುವ ವಿಮಾ ಕಂಪೆನಿಗಳು ಆದಷ್ಟು ಬೇಗ ಹಣವನ್ನು ರೈತರ ಖಾತೆಗೆ ಪಾವತಿಯಾಗುವಂತೆ ನೋಡಿಕೊಳ್ಳಬೇಕುಎಂದರು.
ಇಲಾಖೆ ಗಮನಕ್ಕೆ ತನ್ನಿ
ರೈತರ ಖಾತೆಗಳಲ್ಲಿ ಏನಾದರೂ ತಾಂತ್ರಿಕ ತೊಂದರೆಗಳಾಗಿದ್ದರೆ ಅವುಗಳನ್ನು ರೈತರ ಗಮನಕ್ಕೂ ಹಾಗೂ ಇಲಾಖೆಯ ಗಮನಕ್ಕೂ ತಂದು ಸರಿಪಡಿಸಬೇಕು. ವಿಮಾ ಕಂಪೆನಿಗಳಿಗೆ ಸರಿಯಾಗಿ ಕಂತು ಪಾವತಿಸಿದ ಯಾವುದೇ ರೈತರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಬಿ.ಸಿ. ಪಾಟೀಲ್ ಸೂಚಿಸಿದರು.
50 ಸಾವಿರಕ್ಕೂ ಮೇಲ್ಪಟ್ಟ ಹಣ ರೈತರ ಖಾತೆಗೆ ಜಮೆ ಮಾಡಲು ಆರ್.ಬಿ.ಐ ನಿಯಮಾವಳಿ ಪ್ರಕಾರ ಕೆಲವು ಬ್ಯಾಂಕ್ ಗಳ ಖಾತೆಗಳಿಗೆ ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಕೇಂದ್ರದ ಗಮನಕ್ಕೆ ತರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಹೇಳಿದರು.
ಬಿ.ಸಿ. ಪಾಟೀಲ್ ಮನವಿ
ಕೆಲವು ಬ್ಯಾಂಕುಗಳ ವಿಲೀಕರಣವಾಗಿರುವುದರಿಂದ ಬ್ಯಾಂಕ್ಗಳ IFSC ಕೋಡ್ ಬದಲಾವಣೆಯಾಗಿರುತ್ತದೆ. ಆದ್ದರಿಂದ ರೈತರು ಆದಷ್ಟು ಬೇಗ ತಮ್ಮ ಬ್ಯಾಂಕ್ ಖಾತೆಗೆ ಸರಿಯಾದ ಆಧಾರ್ ಸಂಖ್ಯೆ IFSC ಸಂಖ್ಯೆ, ಖಾತೆ ಸಂಖ್ಯೆ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಂಡು ಕೃಷಿ ಇಲಾಖೆಯ ಗಮನಕ್ಕೆ ತರಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ರೈತರಿಗೆ ಮನವಿ ಮಾಡಿದ್ದಾರೆ.
ವಿಮಾ ಕಂಪನಿಗೆ ನೋಟೀಸ್
ಯುನೈಟೆಡ್ ಇಂಡಿಯ ಇನ್ಸೂರೆನ್ಸ್ ಕಂಪೆನಿ ರೈತರಿಗೆ ಸರಿಯಾಗಿ ವಿಮೆ ಪಾವತಿಸಿಲ್ಲ. ಕೃಷಿ ಇಲಾಖೆ ನೀಡುವ ಸೂಚನೆಯನ್ನಾಗಲೀ ಸರ್ಕಾರದ ಆದೇಶವನ್ನಾಗಲೀ ಪಾಲಿಸದೇ ರೈತರಿಗೆ ವಿಮೆ ಪಾವತಿಸದೇ ವಿಳಂಬ ನೀತಿ ಅನುಸರಿಸಿರುವುದು ಕಂಡುಬಂದಿರುವುದರಿಂದ ಕಂಪೆನಿಗೆ ನೋಟೀಸ್ ನೀಡಲಾಗುತ್ತಿದೆ ಎಂದು ಅಪರ ಕೃಷಿ ನಿರ್ದೇಶಕ ಆ್ಯಂತೋನಿ ಎಂ.ಇ. ಅವರು ಕೃಷಿ ಸಚಿವರ ಸೂಚನೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.