'ಈ ಚುನಾವಣೆ ವೇಳೆ ಅನಗತ್ಯ ಚರ್ಚೆಯೇ ಹೆಚ್ಚು ಸುದ್ದಿಯಾಗುತ್ತಿದೆ'
ಮೈಸೂರು, ಏಪ್ರಿಲ್ 8:ಚುನಾವಣೆ ವೇಳೆ ರಾಜಕೀಯ ನಾಯಕರು ರೈತರ ಸಮಸ್ಯೆಗಳತ್ತ ಗಮನ ಕೊಡದೆ, ಕೇವಲ ಪರಸ್ಪರ ಟೀಕೆ ಮಾಡುವಲ್ಲಿ ಬ್ಯುಸಿಯಾಗಿರುವುದು ಬೇಸರದ ಸಂಗತಿ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಕಿಡಿಕಾರಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಒಂದು ಕಡೆ ಬಿಸಿಲಿನ ಕಾವು. ಮತ್ತೊಂದೆಡೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕರ್ನಾಟಕದಲ್ಲಿ 156 ತಾಲೂಕಿನಲ್ಲಿ ಬರ ಇದೆ. ಕುಡಿಯುವ ನೀರಿನ ಸಮಸ್ಯೆ ವಿಪರೀತವಿದೆ. ಚುನಾವಣೆ ನಡೆಯಬೇಕಾದ್ದು ಜನರ ಸಮಸ್ಯೆಗಳ ಪರಿಹಾರಕ್ಕೆ. ಆದರೆ ಪರಸ್ಪರ ವ್ಯಕ್ತಿಗಳ ಆರೋಪ- ಪ್ರತ್ಯಾರೋಪ, ಭಾವನಾತ್ಮಕ ವಿಚಾರ, ಅನಗತ್ಯ ಚರ್ಚೆಯೇ ಹೆಚ್ಚು ಸುದ್ದಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಐದು ಹೇಳಿಕೆಗಳು ಚರ್ಚೆಯಾಗಬೇಕು. ಸಾಲ ಮುಕ್ತಿ ಕಾಯ್ದೆ ಹಾಗೂ ರಾಷ್ಟ್ರೀಯ ರೈತ ಆಯೋಗದ ಶಿಫಾರಸ್ಸಿನಂತೆ ದೇಶದ ಕೃಷಿ ಉತ್ಪನ್ನಗಳಿಗೆ ಬೆಲೆಯನ್ನು ಸ್ಪಷ್ಟಪಡಿಸಬೇಕು. ಗ್ರಾಮೀಣ ಉದ್ಯೋಗ ಸೃಷ್ಟಿಯನ್ನು ಪ್ರೋತ್ಸಾಹಿಸಬೇಕು, ದೇಶದ ಕೃಷಿ ಹಾಗೂ ಗ್ರಾಮೀಣ ಭಾಗವನ್ನು ಮತ್ತಷ್ಟು ದುಸ್ಥಿತಿಗೆ ತಳ್ಳುವ ಎಲ್ಲಾ ಅಂತರಾಷ್ಟ್ರೀಯ ಒಪ್ಪಂದಗಳನ್ನು ರದ್ದುಗೊಳಿಸಬೇಕು ಎಂದು ನಾಗೇಂದ್ರ ಒತ್ತಾಯಿಸಿದರು.

ಚುನಾವಣೆಯಲ್ಲಿ ಎಲ್ಲಾ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಅವರವರ ವೈಯಕ್ತಿಕ ಚರ್ಚೆ ಮಾಡಿಕೊಂಡಿರುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ ಅದೆಲ್ಲೋ ನಿಂತುಕೊಂಡರೂ ಸುದ್ದಿಯಾಗುತ್ತೆ. ಸುಮಲತಾ ಏನು ಹೇಳಿದರು ಅನ್ನೋದು ಸುದ್ದಿಯಾಗುತ್ತದೆ. ಆದರೆ ರೈತ ಸಮಸ್ಯೆ ಬಗ್ಗೆ ಚರ್ಚೆಯಾಗುತ್ತಿಲ್ಲ. ರೈತರು ಅಷ್ಟು ಬೇಡವಾದರೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ತಾವು ಯಾರನ್ನು ಬೆಂಬಲಿಸಿದರೆ ತಮ್ಮ ಕೆಲಸಗಳು ಕೇಂದ್ರ ಮಟ್ಟದಲ್ಲಿ ನಡೆಯುತ್ತದೆ ಎಂಬುದನ್ನು ಗಮನಿಸಿ ಮತ ಚಲಾಯಿಸುವಂತೆ ಕರೆ ನೀಡಿದರು.












Click it and Unblock the Notifications