ಕೃಷಿ, ಕೈಗಾರಿಕೆಗೆ ಪೂರಕವಾಗಿ ಕಾನ್ ಕ್ಲೇವ್, ರಾಜ್ಯದಲ್ಲೇ ಮೊದಲು
ಶಿವಮೊಗ್ಗ, ಸೆಪ್ಟೆಂಬರ್ 18; ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ಕೃಷಿ ಆಧಾರಿತ ಪೂರಕ ಕೈಗಾರಿಕೆಗಳು ಮತ್ತು ಕೃಷಿ ಸಂಬಂಧಿತ ವಿದ್ಯಾಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಕೃಷಿ ಸಂಶೋಧನಾ ಕೇಂದ್ರಗಳ ನಡುವೆ ಸಂಪರ್ಕ ಬೆಸೆಯಲು 'ಇಂಡಸ್ಟ್ರಿ ಅಕಾಡೆಮಿಯಾ ಕಾನ್ ಕ್ಲೇವ್ 1.0' ಎಂಬ ಕಾರ್ಯಗಾರ ಆಯೋಜಿಸಲಾಗಿದೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಮುಖ್ಯ ಆವರಣ ಇರುವಕ್ಕಿ, ಶಿವಮೊಗ್ಗ ಇಲ್ಲಿ ಸೆಪ್ಟೆಂಬರ್ 20ರಂದು ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಪ್ರಾಯೋಜನೆಯಡಿಯಲ್ಲಿ ಈ ಕಾರ್ಯಗಾರ ನಡೆಯಲಿದೆ. ಈ ಕುರಿತು ಕೃಷಿ ವಿವಿಯ ಸಹ ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಕಾರ್ಯಗಾರವನ್ನು ಆರ್. ಸಿ. ಅಗರ್ವಾಲ್, ಉಪ ನಿರ್ದೇಶಕರು (ಶಿಕ್ಷಣ), ಭಾರತೀಯ ಕೃಷಿ ಅನುಸಂದಾನ ಪರಿಷತ್, ನವದೆಹಲಿ ಉದ್ಘಾಟಿಸಲಿದ್ದಾರೆ. ಕೃಷಿ / ಕೃಷಿ ಸಂಬಂಧಿತ ಪದವೀಧರರು ಹಾಗೂ ಶಿಕ್ಷಕರನ್ನು ಪ್ರಸ್ತುತ ಕೈಗಾರಿಕೆಗಳ ಅವಶ್ಯಕತೆಗೆ ಅನುಗುಣವಾಗಿ ಸಜ್ಜುಗೊಳಿಸುವುದು, ಕೈಗಾರಿಕೆಗಳು ಹಾಗೂ ವಿದ್ಯಾ ಸಂಶೋಧನಾ ಸಂಸ್ಥೆಗಳು ಪರಸ್ಪರ ಬೆಂಬಲಿಸಲು ಇರುವ ಅವಕಾಶಗಳು, ವಿಶ್ವವಿದ್ಯಾನಿಲಯಗಳು ಅಭಿವೃದ್ಧಿ ಪಡಿಸಿದ ತಾಂತ್ರಿಕತೆಗಳನ್ನು ವಾಣಿಜ್ಯೀಕರಣಗೊಳಿಸುವುದು ಹಾಗೂ ಕೈಗಾರಿಕೆಗಳಿಗೆ ನುರಿತ ಹಾಗೂ ಅರ್ಹ ಮಾನವ ಸಂಪನ್ಮೂಲಗಳನ್ನು ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಕಾರ್ಯಾಗಾರದ ಮಾಹಿತಿ; ಈ ಕಾರ್ಯಗಾರದಲ್ಲಿ ಕೃಷಿಗೆ ಸಂಬಂಧಿಸಿದ ಬೀಜೋತ್ಪಾದನೆ, ರಸಗೊಬ್ಬರ ಹಾಗೂ ರಾಸಾಯನಿಕಗಳು, ಯಂತ್ರೋಪಕರಣ ತಯಾರಿಕಾ ಕಾರ್ಖಾನೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಂದ ಸುಮಾರು 30ಕ್ಕೂ ಹೆಚ್ಚು ಪರಿಣಿತರು, ಕೈಗಾರಿಕೋದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.
ಪ್ರಸಿದ್ಧಿ ಸೀಡ್ ಕಂಪನಿ ಸಂಸ್ಥಾಪಕರಾದ ಡಾ. ಬಿ. ಕೆ. ಕುಮಾರಸ್ವಾಮಿ, ಜುವಾರಿ ಆಗ್ರೋ-ಕೆಮಿಕಲ್ಸ್ ನ ಡಾ. ಆದರ್ಶ್ ಟಿ. ಎಸ್., ಹೆಕ್ಸಗಾನ್ ಕಂಪನಿಯ ಡಾ. ಶಾಜೀ ಕೊಜಕುನಾನ್, ಸಿಯೋ ಎನರ್ಜಿಯ ಡಾ. ಆನಂದ ಗುಡಿಹಾಳ್ ಮತ್ತು ವರ್ಷ ಇಂಡಸ್ಟ್ರೀಯ ರಮೇಶ್ ಪ್ರಮುಖ ಭಾಷಣ ಮಾಡಲಿದ್ದಾರೆ.
ವಿಶ್ವವಿದ್ಯಾಲಯದ ಪ್ರಾಧ್ಯಾಪಕರು/ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ, ಕುಂದು ಕೊರತೆಗಳು, ಯಶೋಗಾಥೆಗಳು ಹಾಗೂ ಅವಕಾಶಗಳ ಸುಧಾರಣೆಗೆ ಇರುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿ ನೀತಿಗಳನ್ನು ರೂಪಿಸಲಾಗುತ್ತದೆ.
ಕಾರ್ಯಗಾರದ ಪ್ರಯುಕ್ತ ರಾಷ್ಟ್ರಮಟ್ಟದಲ್ಲಿ ಕೈಗಾರಿಕೋದ್ಯಮ ಹಾಗೂ ವಿದ್ಯಾಸಂಸ್ಥೆಗಳನ್ನು ಸಂಪರ್ಕದ ಕೊಂಡಿಯನ್ನು ಬಲಪಡಿಸುವುದು ಹೇಗೆ? ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 95ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ವಿಜೇತರಾದ ಅಮರ್ಜಿತ ಭಾರ್ತಿ (ಬಿಹಾರ), ಕುಮುದಾ ಪಿ. (ಕರ್ನಾಟಕ) ಹಾಗೂ ರವೀಂದ್ರ ಗೋದ್ರಾ (ಗುಜರಾತ್) ವಿದ್ಯಾರ್ಥಿಗಳ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಡಾ. ಅನಿಲ್ ಕುಮಾರ್ (ಕರ್ನಾಟಕ), ಡಾ.ವಿಜಯ್ ಕುಮಾರ್ (ಕೇರಳ), ತೀರ್ಥರ್ಥ ಚಟ್ಟೋಪಾಧ್ಯಾಯ (ಬಿಹಾರ) ವೃತ್ತಿಪರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಕಾರ್ಯಾಗಾರದ ಸಮಾರಂಭದಲ್ಲಿಯೇ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ.
ವಿವಿ ಕುರಿತ ಮಾಹಿತಿ; ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅನೇಕ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಸುಮಾರು 525.62 ಲಕ್ಷ ಅನುದಾನ ದೊರೆತಿದ್ದು 32 ಯೋಜನೆಗಳು ಅನುಷ್ಟಾನಗೊಳ್ಳಲಿವೆ.
ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಇರುವಕ್ಕಿಯಲ್ಲಿ ಅನಾನಸ್ ಹಾಗೂ ಇತರ ಹಣ್ಣುಗಳು ಮತ್ತು ಶುಂಠಿಯನ್ನು ಸಂಸ್ಕರಣೆ ಮಾಡಿ ಅಭಿವೃದ್ದಿಪಡಿಸಲಾಗುತ್ತಿದೆ. ವಿಶ್ವವಿದ್ಯಾಲಯದ ಬೀಜ ಘಟಕದಿಂದ ಎಲ್ಲಾ ಸಂಶೋಧನಾ ಕೇಂದ್ರಗಳು ಮತ್ತು ಪ್ರಗತಿಪರ ರೈತರ ಕ್ಷೇತ್ರಗಳಲ್ಲಿ ಬೀಜೋತ್ಪಾದನೆ ಮತ್ತು ಸಸ್ಯೋತ್ಪಾದನೆ ಕಾರ್ಯಕ್ರಮಗಳ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಶಿಲೀಂದ್ರ ರೋಗ (ಎಲೆ ಚುಕ್ಕಿ ಇತರೆ) ನಿಯಂತ್ರಣ, ಆದಾಯಕ್ಕೆ ಪೂರಕವಾದ ಅಡಿಕೆ ಪರ್ಯಾಯ ಬೆಳೆ ಪದ್ದತಿ ಸೇರಿದಂತೆ ಅನೇಕ ಪ್ರಯೋಗ ಮತ್ತು ಸಂಶೋಧನೆಗಳ ಮುಖಾಂತರ ಕೃಷಿಕರ ಬದುಕನ್ನು ಹಸನುಗೊಳಿಸುವಂತಹ ಹಾಗೂ ಅದಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ಅಭಿವೃದ್ದಿಪಡಿಸಿ ಕೃಷಿಕರ ಸರ್ವತೋಮುಖ ಅಭಿವೃದ್ದಿಗಾಗಿ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ.












Click it and Unblock the Notifications