ನೀರಿಲ್ಲದೆ ಬದುಕಲು ಕಷ್ಟ, ನಿಮ್ಮೊಟ್ಟಿಗೆ ನಾನಿದ್ದೇನೆ: ಸುದೀಪ್
ನರಗುಂದ, ಸೆ. 03: ಕಳಸಾ ಬಂಡೂರಿ ನಾಲಾ ಯೋಜನೆಗಾಗಿ ಆಗ್ರಹಿಸಿ ರಾಜ್ಯದ ರೈತರು ಹಮ್ಮಿಕೊಂಡಿರುವ ಪ್ರತಿಭಟನೆ 50ನೇ ದಿನಕ್ಕೆ ಕಾಲಿರಿಸಿದೆ. ಗುರುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಭೆಯಲ್ಲಿ ನಟ ಕಿಚ್ಚ ಸುದೀಎಪ್ ಅವರು ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಊಟವಿಲ್ಲದೆ ಮನುಷ್ಯ ಬದುಕಬಹುದು, ಆದರೆ ನೀರಿಲ್ಲದೆ ಬದುಕಲು ಕಷ್ಟ. ನಿಮ್ಮ ಹೋರಾಟಕ್ಕೆ ನಿಮ್ಮ ಸುದೀಪ್ ನ ಬೆಂಬಲವಿದೆ ಎಂದು ಹೇಳಿದರು. ಕಳಸಾ ಬಂಡೂರಿ ಯೋಜನೆ ಜಾರಿಗೆ ಕನ್ನಡ ಚಿತ್ರರಂಗದ ಬೆಂಬಲವಿದೆ ಎಂದು ಸುದೀಪ್ ಹೇಳಿದರು.
ಕಳಸಾ, ಬಂಡೂರಿ, ಮಹಾದಾಯಿ-ಮಲಪ್ರಭಾ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡರೂ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲವೇಕೆ ಎಂದು ಸುದೀಪ್ ಅವರು ಸಿದ್ದರಾಮಯ್ಯ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿದರು. [ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ರೈತರ ಹೋರಾಟದ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದರೂ ರೈತರ ಬದುಕು ತಂಪಾಗುತ್ತಿಲ್ಲ. ಕಳಸಾ ಬಂಡೂರಿ, ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ದಶಕದಿಂದಲೂ ಹೋರಾಟ ನಡೆಯುತ್ತಲಿದೆ. ನದಿ ಜೋಡಣೆ ಕಾರ್ಯ ಕೈಗೆತ್ತಿಕೊಂಡಾಗಳೆಲ್ಲ ನೆರೆಯ ರಾಜ್ಯ ಗೋವಾ ಮೂರು ಬಾರಿ ಅಡ್ಡಗಲ್ಲು ಹಾಕಿದೆ.
ಕಾವೇರಿ ನದಿ ಹಂಚಿಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯ, ಕೃಷ್ಣಾ ನದಿಗೆ ಸಂಬಂಧಪಟ್ಟಂತೆ ಆಂಧ್ರಪ್ರದೇಶ ರಾಜ್ಯ ಮತ್ತು ಮಹದಾಯಿ ನದಿ ಜೋಡಣೆ ಸಂಬಂಧಪಟ್ಟಂತೆ ಗೋವಾ ರಾಜ್ಯವು ಪಕ್ಷಾತೀತವಾಗಿ ರಾಜ್ಯದ ಪ್ರತಿಯೊಬ್ಬರು ಬೀದಿಗಿಳಿದು ಹೋರಾಟ ನಡೆಸಿ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಅದರೆ, ನಮ್ಮಲ್ಲಿ ಮಾತ್ರ ಹೋರಾಟಕ್ಕೆ ಎಲ್ಲರೂ ಕೈಜೋಡಿಸುವುದೇ ಇಲ್ಲ ಎಂಬ ಕೊರಗು ಉತ್ತರ ಕರ್ನಾಟಕದ ರೈತರಲ್ಲಿದೆ.
ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) 2015ರ 4ನೇ ಆವೃತ್ತಿ ಪಂದ್ಯಾವಳಿಗಳು ಹುಬ್ಬಳ್ಳಿಯಲ್ಲಿ ಸೆ. 03ರಿಂದ ಆರಂಭಗೊಂಡಿದೆ. ಮೊದಲ ದಿನವೇ ಕಿಚ್ಚ ಸುದೀಪ್ ಅವರ ಮಾಲೀಕತ್ವದ ನಮ್ಮ ಶಿವಮೊಗ್ಗ ತಂಡ ಹಾಲಿ ಚಾಂಪಿಯನ್ಸ್ ಮೈಸೂರು ವಾರಿಯರ್ಸ್ ತಂಡವನ್ನು ಎದುರಿಸುತ್ತಿದೆ. ಕೆಪಿಎಲ್ ಗಾಗಿ ಬಂದ ಸುದೀಪ್ ರೈತರ ನೋವಿಗೆ ಸ್ಪಂದಿಸಲು ಬಂದಿದ್ದು ಯಾವ ರೀತಿ ಯಾರಿಗೆ ಪ್ರಯೋಜನವಾಗುತ್ತದೆಯೋ ಕಾದು ನೋಡಬೇಕಿದೆ.












Click it and Unblock the Notifications