ಅಧಿಕಾರಿಗಳ ಎಡವಟ್ಟಿಗೆ ಪಾಪಿರಂಗಯ್ಯನಪಾಳ್ಯದ ಬಡ ರೈತ ಕೋಟ್ಯಾಧೀಶನಾದ!
ಮಾಗಡಿ, ಜನವರಿ 30:ಕೆಲವೊಮ್ಮೆ ಅಧಿಕಾರಿಗಳು ಎಂತಹ ಎಡವಟ್ಟನ್ನೆಲ್ಲ ಮಾಡಿ ಬಿಡುತ್ತಾರೆ ಎಂಬುದಕ್ಕೆ ಬಡ ರೈತನೊಬ್ಬನಿಗೆ ನೀಡಿರುವ ಆದಾಯ ಪ್ರಮಾಣದ ಪತ್ರವನ್ನು ನೋಡಿದರೆ ಗೊತ್ತಾಗಿ ಬಿಡುತ್ತದೆ. ಇವತ್ತು ಅಧಿಕಾರಿಗಳು ನೀಡಿದ ಆದಾಯ ಪ್ರಮಾಣಪತ್ರದ ಪ್ರಕಾರ ಬಡ ರೈತನೊಬ್ಬ ಕೋಟ್ಯಾಧೀಶ.
ಆದರೆ ಈ ಪ್ರಮಾಣ ಪತ್ರವನ್ನು ಹಿಡಿದುಕೊಂಡು ಸಂಧ್ಯಾ ಸುರಕ್ಷ ಯೋಜನೆಗೆ ಅರ್ಜಿ ಸಲ್ಲಿಸಲು ಹೋದಾಗ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಇದೀಗ ಪ್ರಮಾಣ ಪತ್ರವನ್ನು ಬದಲಾಯಿಸಲು ಕಚೇರಿಯಿಂದ ಕಚೇರಿಗೆ ಅಲೆಯುವುದರಲ್ಲೇ ಬಡ ರೈತ ಸುಸ್ತಾಗಿ ಹೋಗಿದ್ದಾನೆ.
ಇಷ್ಟಕ್ಕೂ ಆಗಿದ್ದಾದರೂ ಏನು ಎಂಬುವುದನ್ನು ನೋಡುವುದಾದರೆ ತಾಲೂಕಿನ ತಿಪ್ಪಸಂದ್ರ ಹೋಬಳಿಯ ಚಿಕ್ಕಮುದಿಗೆರೆಯ ಪಾಪಿರಂಗಯ್ಯನಪಾಳ್ಯ ಗ್ರಾಮದ ನಿವಾಸಿ ಗೋವಿಂದ ಬಡ ರೈತನಾಗಿದ್ದು, ಸರ್ಕಾರ ಸರ್ಕಾರ ಕಡುಬಡವರಿಗೆ ನೀಡುವ ಸಂಧ್ಯಾ ಸುರಕ್ಷತೆ ಯೋಜನೆಯ ಫಲಾನುಭವಿಯಾಗಲು ಆದಾಯ ಪ್ರಮಾಣದ ಪತ್ರದ ಅಗತ್ಯವಿದ್ದುದರಿಂದಾಗಿ ಮಾಗಡಿ ತಾಲೂಕು ಕಚೇರಿಯಲ್ಲಿ ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು.
ಅಧಿಕಾರಿಗಳು ಬಡ ರೈತ ಗೋವಿಂದನಿಗೆ ಆದಾಯ ಪ್ರಮಾಣ ಪತ್ರವನ್ನು ನೀಡಿದ್ದರು. ಆದರೆ ಅವರು ನಮೂದಿಸಿದ್ದ ಆದಾಯ ಮಾತ್ರ 50 ಕೋಟಿ 11 ಸಾವಿರ ಆಗಿತ್ತು. ಮುಂದೆ ಓದಿ...

ಬೆಚ್ಚಿ ಬಿದ್ದ ಅಧಿಕಾರಿಗಳು
ಅಧಿಕಾರಿಗಳು ಆದಾಯ ಪ್ರಮಾಣ ಪತ್ರದಲ್ಲಿ ರೈತನ ವಾರ್ಷಿಕ ಆದಾಯ 50 ಕೋಟಿ 11 ಸಾವಿರ ಎಂದು ನಮೂದಿಸಿದ್ದು, ಬಡ ರೈತನ ಗಮನಕ್ಕೆ ಬರಲಿಲ್ಲ. ಇದನ್ನು ಹಿಡಿದುಕೊಂಡು ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಹೋದಾಗ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.

ಬದಲಾಯಿಸಿಕೊಂಡು ಬನ್ನಿ
ನಿಮ್ಮನ್ನು ಸಂಧ್ಯಾ ಸುರಕ್ಷಾ ಯೋಜನೆಗೆ ಸೇರಿಸಲು ಸಾಧ್ಯವಿಲ್ಲ. ವಾರ್ಷಿಕ ಆದಾಯ11 ಸಾವಿರ ಇರುವ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆ ಲಾಭವನ್ನು ಪಡೆಯಬಹುದು. ಆದರೆ ತಾಲೂಕು ಕಚೇರಿಯಲ್ಲಿ 11 ಸಾವಿರಕ್ಕೆ ಬದಲು 50 ಕೋಟಿ 11 ಸಾವಿರ ಎಂದು ನಮೂದಿಸಲಾಗಿದೆ. ಬದಲಾಯಿಸಿಕೊಂಡು ಬನ್ನಿ ಎಂದು ಕಳುಹಿಸಿದ್ದಾರೆ.

ಸರಿಪಡಿಸಲು ಕಚೇರಿಗೆ ಅಲೆದಾಟ
ಅದರಂತೆ ಗೋವಿಂದ 2017 ರಿಂದ ಇಲ್ಲಿಯವರೆಗೂ ಆದಾಯ ಪ್ರಮಾಣ ಪತ್ರವನ್ನು ಸರಿಪಡಿಸಲು ಕಚೇರಿಗೆ ಅಲೆದಾಡುತ್ತಿದ್ದಾರೆ. ಮಾಗಡಿ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ದಲಿತ ಮುಖಂಡ ಕಲ್ಕರೆ ಶಿವಣ್ಣನವರು ಈ ವಿಚಾರವನ್ನು ಶಾಸಕ ಎ.ಮಂಜುನಾಥ್ ಹಾಗೂ ತಹಸೀಲ್ದಾರ್ ರವರ ಗಮನಕ್ಕೆ ತಂದಿದ್ದಾರೆ.

ಇದು ನನ್ನ ಅವಧಿಯಲ್ಲಿ ನಡೆದಿಲ್ಲ
ಇದನ್ನು ಗಮನಿಸಿದ ತಹಸೀಲ್ದಾರ್ ತಪ್ಪಾಗಿ ಪ್ರಕಟವಾಗಿರಬೇಕು, ಇದು ನನ್ನ ಅವಧಿಯಲ್ಲಿ ನಡೆದಿಲ್ಲ. ಇದನ್ನು ಸರಿಪಡಿಸುವುದಾಗಿ ಹೇಳಿದರಲ್ಲದೆ ಮುಂದೆ ಈ ರೀತಿಯಾಗದಂತೆ ನಿಗಾವಹಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications