ವಿಶ್ವ ಕನ್ನಡ ಕುಸ್ತಿ: ತೊಡೆತಟ್ಟಿ ನಿಂತ ವಿದೇಶೀ ಪೈಲ್ವಾನರು

ನಗರದ ಕ್ಲಬ್ ರಸ್ತೆಯ ಸಿಪಿಎಡ್ ಮೈದಾನ ಈ ರೋಮಾಂಚನಕ್ಕಾಗಿ ಸಿಂಗಾರಗೊಂಡಿದೆ. ಈ ಮೈದಾನದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಲಿದ್ದಾರೆ. ಸಿಪಿಎಡ್ ಮೈದಾನ ಮೂರೂವರೆ ಅಡಿ ಎತ್ತರ ಮತ್ತು 40 ಅಡಿ ವ್ಯಾಸದ ಅಖಾಡವನ್ನು ಕೆಂಪು ಮಣ್ಣಿನಿಂದ ಸಜ್ಜುಗೊಳಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಆರಂಭವಾಗಿ ರಾತ್ರಿ 10 ಗಂಟೆವರೆಗೂ ಹೊನಲು ಬೆಳಕಿನಲ್ಲಿ ಕುಸ್ತಿ ಪ್ರದರ್ಶನ ನಡೆಯಲಿದೆ. ಮಹಿಳಾ ವಿಭಾಗದಲ್ಲೂ ಕುಸ್ತಿ ಸ್ಪರ್ಧೆಗಳಿವೆ.
ರಷ್ಯಾದ ಇಲ್ದರ್ ಲುಕಾ ಕುರ್ತಾನಿಜೆ ಅವರು ಒಲಿಂಪಿಕ್ಸ್-ನಲ್ಲಿ ರಜತ ಪದಕ ಗೆದ್ದವರು. ಗ್ರೋಕೊ ರೋಮನ್ ಶೈಲಿಯ ಕುಸ್ತಿಯಲ್ಲಿ ವಿಶ್ವ ಕಿರೀಟವನ್ನೂ ಎತ್ತಿಹಿಡಿದವರು. ಇತ್ತೀಚೆಗೆ ಅವರು ಮರಳ ಮೇಲಿನ ಕುಸ್ತಿಯಲ್ಲಿ ಪ್ರಾವಿಣ್ಯತೆ ಗಳಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಣ್ಣಿನ ಅಖಾಡದಲ್ಲಿ ಪೈಪೋಟಿಗೆ ಇಳಿಯುತ್ತಿದ್ದಾರೆ. ಇವರ ವಿರುದ್ಧ ಭಾರತ್ ಕೇಸರಿ, ಹಿಂದ್ ಕೇಸರಿ ಪ್ರಶಸ್ತಿ ವಿಜೇತ ದೆಹಲಿಯ ಜೋಗಿಂದರ್ ಸಿಂಗ್ ತೊಡೆ ತಟ್ಟಿ ನಿಂತಿದ್ದಾರೆ. ಪೈಲ್ವಾನ್ ಕುರ್ತಾನಜೆ ಮತ್ತು ಸೆತುರಿಜೆ ಅವರಿಗೆ ಒಟ್ಟು 12 ಲಕ್ಷ ರುಪಾಯಿ ನೀಡಿ ಇಲ್ಲಿಗೆ ಕರೆಸಿಕೊಳ್ಳಾಗಿದೆ. ಜೋಗಿಂದರ್ ಮತ್ತು ವರುಣ್ ಕುಮಾರ್ ಅವರಿಗೂ ತಲಾ 3 ಲಕ್ಷ ರು. ನೀಡಲಾಗಿದೆ.
ಕನ್ನಡ ಮತ್ತು ಮರಾಠಿ ಜನರ ನಡುವೆ ರಾಜಕಾರಣದಲ್ಲಿನ ಕಿತ್ತಾಟಕ್ಕಿಂತ ಕುಸ್ತಿ ಸೆಣಸಾಟದ ಮೇಲೆ ಸ್ಥಳೀಯರಿಗೆ ಬಲು ಪ್ರೀತಿ. ಮಹಾರಾಷ್ಟ್ರದ ವರಾಣದ ಸಂಗ್ರಾಮ ಪೋಳ ಮತ್ತು ಬೆಳಗಾವಿಯ ಮಂಜು ಕಕ್ಕೇರಿ ಮಧ್ಯೆ ನಡೆಯುವ ಕದನ ಜನರನ್ನು ರೋಮಾಂಚದ ಅಲೆಯಲ್ಲಿ ತೇಲಿಸಲಿದೆ. ವಿದೇಶೀ ಪೈಲ್ವಾನರು ಕೃತಕ ಹಾಸಿನ ಮೇಲಿನ ಕುಸ್ತಿಗೇ ಹೊಂದುಕೊಂಡಿರುವವರಾಗಿದ್ದು, ಮಣ್ಣಿನ ಅಖಾಡದಲ್ಲಿ ಹೇಗೆ ಸೆಣಸಾಡಬಹುದು ಎಂಬುದು ಇಲ್ಲಿನ ಕುಸ್ತಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.











Click it and Unblock the Notifications