ಅಪಘಾತದಲ್ಲಿ ಆಂಧ್ರ ಪ್ರದೇಶ ಸಚಿವರ ಪುತ್ರ ಸೇರಿ ಇಬ್ಬರ ಸಾವು
ಹೈದರಾಬಾದ್, ಮೇ 10 : ಇಲ್ಲಿನ ಜುಬಿಲಿ ಹಿಲ್ಸ್ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಆಂಧ್ರ ಪ್ರದೇಶದ ಸಚಿವ ಪಿ. ನಾರಾಯಣ ಅವರ ಪುತ್ರ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಸಚಿವ ಪಿ. ನಾರಾಯಣ ಅವರ ಪುತ್ರ 25 ವರ್ಷದ ನಿಷಿತ್ ನಾರಾಯಣ ಮತ್ತು ಗೆಳೆಯ ರಾಜಾ ರವಿ ವರ್ಮ ಅವರು ಪ್ರಯಾಣಿಸುತ್ತಿದ್ದ TS07FK7117 ನಂಬರಿನ ಮರ್ಸಿಡಿಸ್ ಬೆಂಜ್ ಕಾರು ಬುಧವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ರಸ್ತೆ ಪಕ್ಕದಲ್ಲಿದ್ದ ಮೆಟ್ರೋ ರೈಲ್ವೆ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಕೂಡಲೇ ಸ್ಥಳೀಯರ ಸಹಾಯದಿಂದ ನಿಷಿತ್ ಹಾಗೂ ರಾಜಾ ರವಿವರ್ಮ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸಧ್ಯ ಸಚಿವ ನಾರಾಯಣ ಅವರು ಲಂಡನ್ ಪ್ರವಾಸದಲ್ಲಿದ್ದು, ತಮ್ಮ ಪುತ್ರನ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೃತ ನಿಷಿತ್ ನಾರಾಯಣ ವಿದ್ಯಾಸಂಸ್ಥೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಗುರುವಾರ ನೆಲ್ಲೂರಿನಲ್ಲಿ ನಿಷಿತ್ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.