'ರಾಜಕೀಯಕ್ಕೆ ರಜನಿಕಾಂತ್ ಬರುವುದು ಬೇಡ'
ಚೆನ್ನೈ, ನ.6: ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಿಜೆಪಿಗೆ ಸೇರುತ್ತಾರೋ ಇಲ್ಲವೋ ಗೊತ್ತಿಲ್ಲ. ಅದರೆ, ತಮಿಳುನಾಡಿನ ಕಾಂಗ್ರೆಸ್ ಪಕ್ಷವಂತೂ ರಾಜಕೀಯಕ್ಕೆ ರಜನಿಕಾಂತ್ ಬರುವುದು ಬೇಡ, ನಮ್ಮ ಪಕ್ಷದಿಂದ ಆಹ್ವಾನವನ್ನು ನೀಡುವುದಿಲ್ಲ ಎಂದು ಹೇಳಿದೆ.
ಜಿಕೆ ವಾಸನ್ ಅವರು ತಮಿಳುನಾಡಿನ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿ ಇವಿಕೆಎಸ್ ಇಳಂಗೋವನ್ ರನ್ನು ಅಧ್ಯಕ್ಷರನ್ನಾಗಿ ಕೂರಿಸಲಾಗಿದೆ. ಪಟ್ಟಕ್ಕೇರಿದ ಮರುಕ್ಷಣವೇ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ರಜನಿಕಾಂತ್ ಅವರು ರಾಜಕೀಯಕ್ಕೆ ಬರುವುದೇ ಬೇಡ ಎಂಬುದು ನನ್ನ ಅಭಿಪ್ರಾಯ. ಅವರ ಅಭಿಮಾನಿಗಳು ಎಲ್ಲಾ ಪಕ್ಷಗಳಲಿದ್ದಾರೆ. ತಮಿಳುನಾಡಿನ ಎಲ್ಲಾ ಜನರಿಗೂ ಅವರು ಬೇಕಾದವರು. ಒಂದು ಪಕ್ಷಕ್ಕೆ ಸೀಮಿತವಾಗುವುದು ಬೇಡ ಎಂದು ಪಿಟಿಐ ಪ್ರತಿನಿಧಿಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜಿಕೆ ವಾಸನ್ ಅವರ ತಂದೆ ಜಿಕೆ ಮೂಪನರ್ ಅವರು 1996ರಲ್ಲಿ ತಮಿಳು ಮನಿಲಾ ಕಾಂಗ್ರೆಸ್ ಸ್ಥಾಪಿಸಿದಾಗ ರಜನಿಕಾಂತ್ ಅವರು ಬೆಂಬಲ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷ ಜಾತ್ಯಾತೀತವಾಗಿದ್ದು, ರಜನಿಕಾಂತ್ ಸೇರಿದಂತೆ ಯಾರೇ ಆಗಲಿ ಪಕ್ಷಕ್ಕೆ ಸೇರಬಯಸಿದರೆ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಇಳಂಗೋವನ್ ಹೇಳಿದ್ದಾರೆ.[ಜಯಲಲಿತಾ ಸ್ವಾಗತಿಸಿದ ರಜನಿ, ಬಿಜೆಪಿಗೆ ಆತಂಕ]
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದರು. ಅಲ್ಲಿಂದ ಮೊದಲುಗೊಂಡು ಇಂದಿನ ತನಕ ಬಿಜೆಪಿ ರಜನಿಕಾಂತ್ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸಾಹ ತೋರಿದೆ.[ಬಿಜೆಪಿಗೆ ಕರೆ ತರಲು ಇದೇ ಸಕಾಲ]
2016ರ ಅಸೆಂಬ್ಲಿ ಚುನಾವಣೆಯಲ್ಲಿ ಎಐಎಡಿಎಂಕೆ ಮಟ್ಟ ಹಾಕಲು ಡಿಎಂಕೆವೊಂದಕ್ಕೆ ಸಾಧ್ಯವಿಲ್ಲದ ಕಾರಣ ಬಿಜೆಪಿ ಬಲಿಷ್ಠವಾಗಿ ಬೆಳೆಯಲು ಯತ್ನಿಸುತ್ತಿದೆ. ಈ ಹಿಂದೆ ಟಿಎಂಸಿ ಹಾಗೂ ಡಿಎಂಕೆಗೆ ಬೆಂಬಲ ನೀಡಿದ್ದ ರಜನಿಕಾಂತ್ ಮಾತ್ರ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ನಿಖರವಾದ ಹೇಳಿಕೆ ನೀಡಿಲ್ಲ.(ಪಿಟಿಐ)