ಬಿಬಿಎಂಪಿ ದುರಾಡಳಿತವೇ ಬೆಂಗಳೂರಿನ ಕಟ್ಟಡಗಳ ಕುಸಿತಕ್ಕೆ ಕಾರಣವೇ?
ಬೆಂಗಳೂರು, ಅಕ್ಟೋಬರ್ 18: ಬೆಂಗಳೂರು ನಗರದ ಜನರಲ್ಲಿ ಕಟ್ಟಡ ಕುಸಿದ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಒಂದೆಡೆ ಮಳೆ ಹಾಗೂ ಇನ್ನೊಂದೆಡೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡ ಕುಸಿತ ಎನ್ನುವುದು ಜ್ವಲಂತ ಸಮಸ್ಯೆಯಾಗಿ ಕಾಣುತ್ತಿದೆ. ಕರ್ನಾಟಕ ಹೈಕೋರ್ಟ್ನ ಕಟ್ಟಪ್ಪಣೆ ಹೊರತಾಗಿಯೂ ಬಿಬಿಎಂಪಿಯು ಶಿಥಿಲ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಮೀನಮೇಷ ಎಣಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಸೆಪ್ಟೆಂಬರ್ 28 ರಂದು ಕೆಎಂಎಫ್ ಆವರಣದಲ್ಲಿ ಬಮೂಲ್ ನೌಕರರ ವಾಸಕ್ಕಾಗಿ ನಿರ್ಮಿಸಿದ ಮೂರು ಅಂತಸ್ತಿನ ಕಟ್ಟಡ ನೆಲದೊಳಕ್ಕೆ ಕುಸಿದಿತ್ತು. ಕಟ್ಟಡದ ಒಂದು ಭಾಗ ಕುಸಿಯುವುದನ್ನು ಗಮನಿಸಿ ಉಳಿದವರು ಹೊರಗೆ ಬಂದಿದ್ದರು. ನಾಲ್ವರಿಗೆ ಗಾಯಗಳಾಗಿತ್ತು.

ಸೆಪ್ಟೆಂಬರ್ 27 ರಂದು ವಿಲ್ಸನ್ ಗಾರ್ಡನ್ನ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿತ್ತು. ಕಟ್ಟಡದಲ್ಲಿ ನೆಲಸಿದ್ದ ಮೆಟ್ರೊ ಕೆಲಸಗಾರರು ಕೂದಲೆಳೆಯ ಅಂತರದಿಂದ ಪಾರಾಗಿದ್ದರು.
ಅಕ್ಟೋಬರ್ 8 ರಂದು ರಾಮಮೂರ್ತಿನಗರ ವಾರ್ಡ್ನ ಕಸ್ತೂರಿನಗರದ ಡಾಕ್ಟರ್ಸ್ ಲೇಔಟ್ನಲ್ಲಿ ನಾಲ್ಕಂತಸ್ತಿನ ಸನ್ಶೈನ್ ಅಪಾರ್ಟ್ಮೆಂಟ್ ಕಟ್ಟಡ ಕುಸಿದು ಬಿದ್ದಿದೆ. ಗುರುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಟ್ಟಡ ಕುಸಿದಿದೆ. ಕಟ್ಟಡದಲ್ಲಿದ್ದ ಮೂವರು ತಕ್ಷಣ ಹೊರ ಬಂದು ಬಚಾವಾಗಿದ್ದಾರೆ.
ಕಟ್ಟಡದಲ್ಲಿ8 ಫ್ಲ್ಯಾಟ್ಗಳಿದ್ದು, ಮೂರರಲ್ಲಿ ಮಾತ್ರ ಜನರು ವಾಸವಿದ್ದರು. ಎಲ್ಲ ಮನೆಗಳನ್ನು ಬಾಡಿಗೆಗೆ ಕೊಡಲಾಗಿತ್ತು. ಹೆಚ್ಚಿನವರು ಕಚೇರಿ, ಕೆಲಸ ನಿಮಿತ್ತ ಹೊರ ಹೋಗಿದ್ದರು. ಗುರುವಾರ ಮಧ್ಯಾಹ್ನ ತಳಮಹಡಿಯಲ್ಲಿ ಕುಸಿತದ ಶಬ್ದ ಕೇಳಿ ಬಂದಿದೆ. ತಕ್ಷಣ ಕಟ್ಟಡದಲ್ಲಿದ್ದ ಮೂವರು ಕೆಳಗೆ ಇಳಿದು ಬಂದಿದ್ದಾರೆ.
ಇನ್ನು ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಅಕ್ಟೋಬರ್ 17ರಂದು ಮತ್ತೊಂದು ಕಟ್ಟಡ ಕುಸಿತ ಉಂಟಾಗಿದೆ.
ಕೆಲಸ ಮರೆತ ಬಿಬಿಎಂಪಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020ನ್ನು ಪಾಲಿಸಲು ಅಧಿಕಾರಿಗಳು ಮೈಮರೆತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕಾಯ್ದೆಯ ಸೆಕ್ಷನ್ 256ರ ಪ್ರಕಾರ ನಗರದಲ್ಲಿರುವ ಅನಧಿಕೃತ, ಶಿಥಿಲ ಹಾಗೂ ಅಪಾಯಕಾರಿ ಕಟ್ಟಡಗಳ ತೆರವು ಹಾಗೂ ಮಾಲೀಕರ ವಿರುದ್ಧ ಕ್ರಮಕ್ಕೆ ಅವಕಾಶವಿದೆ. ಅಂತಹ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ, ತೆರವು ಅಥವಾ ರಿಪೇರಿ ಮಾಡಿಸಲು ಅನುವು ಮಾಡಿಕೊಡಲಾಗಿದೆ.
ಈ ಕುರಿತು ಕರ್ನಾಟಕ ಹೈಕೋರ್ಟ್ ಕೂಡ ಬಿಬಿಎಂಪಿಗೆ ಸೂಚನೆ ನೀಡಿದೆ, ಇದರ ಹೊರತಾಗಿಯೂ ಬಿಬಿಎಂಪಿ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಸೆಪ್ಟೆಂಬರ್ ತಿಂಗಳ ಕೊನೆಯ ವಾರ ಎರಡು ಕಟ್ಟಡಗಳು ಕುಸಿದ ಬಳಿಕ ಇಂತಹ ಅಪಾಯಕಾರಿ ಕಟ್ಟಡಗಳ ಸಮೀಕ್ಷೆ ನಡೆಸಲು ಒಂದು ತಿಂಗಳ ಗಡುವು ನೀಡಿದ್ದಾರೆ.
ಹಾಗೆಯೇ ಒಂದೊಮ್ಮೆ ಕಟ್ಟಡ ಮಾಲೀಕರು ಈ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ ಬಿಬಿಎಂಪಿಯಿಂದಲೇ ಕಟ್ಟಡ ತೆರವು ಅನಿವಾರ್ಯವಾಗುತ್ತದೆ ಎಂದು ಆಯುಕ್ತ ಗೌರವ್ ಗುಪ್ತ ಸೂಚಿಸಿದ್ದಾರೆ.
2019ರಲ್ಲೂ ಇದೇ ರೀತಿ ಸಮೀಕ್ಷೆ ನಡೆಸಿ 194 ಅಪಾಯಕಾರಿ ಕಟ್ಟಡಗಳನ್ನು ಗುರುತಿಸಲಾಗಿತ್ತು, ಆದರೆ 77 ಕಟ್ಟಡಗಳ ವಿರುದ್ಧ ಮಾತ್ರ ಕ್ರಮ ಜರುಗಿಸಲಾಗಿತ್ತು, ಆ ಬಳಿಕ ಬಿಬಿಎಂಪಿ ಯಾವುದೇ ನಿರ್ಧಾರವನ್ನು ಮಾಡಿರಲಿಲ್ಲ, ಹಿಂದಿನ ಸಮೀಕ್ಷೆಗೂ ಕರ್ನಾಟಕ ಹೈಕೋರ್ಟ್ನ ಆದೇಶವೇ ಕಾರಣವಾಗಿತ್ತು.
ಈ ನಿರ್ಲಕ್ಷ್ಯಕ್ಕೆ ಬಿಬಿಎಂಪಿಯು ಕೊರೊನಾ ಸಾಂಕ್ರಾಮಿಕ ರೋಗದ ನೆಪವನ್ನು ನೀಡುತ್ತಿದೆ, ಈಗ ಹೊಸ ಮೀಕ್ಷೆಯಲ್ಲಿ 600ಕ್ಕೂ ಅಧಿಕ ಅಪಾಯಕಾರಿ ಕಟ್ಟಡಗಳು ಕಂಡುಬಂದಿರುವುದಾಗಿ ಬಿಬಿಎಂಪಿ ಮೂಲಗಳಿಂದ ತಿಳಿದುಬಂದಿದೆ. ಅಕ್ಟೋಬರ್ ಅಂತ್ಯಕ್ಕೆ ಸಮೀಕ್ಷೆಯ ವರದಿ ಸಂಪೂರ್ಣವಾಗಿ ಬಿಬಿಎಂಪಿಗೆ ಲಭ್ಯವಾಗುವ ಸಾಧ್ಯತೆ ಇದೆ.
ಕಟ್ಟಡ ಕುಸಿತಕ್ಕೆ ಕಾರಣವೇನು?
ಕಟ್ಟಡಕುಸಿತವಾಗಿರುವುದರಲ್ಲಿ ಬಹುತೇಕ ಹಳೆಯದ್ದಾಗಿದೆ, ಕೆಲವು ಹೊಸ ಕಟ್ಟಡಗಳೂ ಬಿದ್ದಿರುವುದಕ್ಕೆ ಕಳಪೆ ಕಾಮಗಾರಿಯೂ ಕಾರಣವಾಗಿರಬಹುದು ಎನ್ನಲಾಗಿದೆ. ಐಐಎಸ್ಸಿ ತಜ್ಞರ ಪ್ರಕಾರ ಕಟ್ಟಡ ಕಾಮಗಾರಿಗೂ ಮುಂಚೆ ಮಣ್ಣು ಪರೀಕ್ಷೆ ಕಡ್ಡಾಯ ಎಂದು ರಾಷ್ಟ್ರೀಯ ಕಟ್ಟಡ ಕಾಮಗಾರಿ ನೀತಿಯಲ್ಲಿ ಹೇಳಲಾಗಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಇದು ಪಾಲನೆ ಆಗುತ್ತಿಲ್ಲ.
ಹಾಗೆಯೇ ಕಟ್ಟಡಗಳಿಗೆ ಅನುಮತಿ ನೀಡುವಾಗ ಬಿಬಿಎಂಪಿಯಲ್ಲಿ ಸರಿಯಾದ ಸ್ಥಳ ಪರಿಶೀಲನೆ ಆಗುತ್ತಿಲ್ಲ. ಅನುಮತಿ ನೀಡಿದ ಕಟ್ಟಡಕ್ಕೂ, ನಂತರ ನಿರ್ಮಾಣವಾದ ಕಟ್ಟಡದಲ್ಲೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಈ ಬಗ್ಗೆಯೂ ಬಿಬಿಎಂಪಿ ಸರಿಯಾಗಿ ಪರಿಶೀಲನೆ ಮಾಡುತ್ತಿಲ್ಲ.
ಇನ್ನೊಂದೆಡೆ ಈ ವರ್ಷ ಮಳೆಯ ಪ್ರಮಾಣ ಹೆಚ್ಚಾಗಿದೆ, ನಗರದಲ್ಲಿನ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ನೀರು ಮನೆಯ ಅಡಿಪಾಯದ ನುಗ್ಗುವ ಸಾಧ್ಯತೆ ಇದೆ, ಇದರಿಂದ ಕಟ್ಟಡಗಲೂ ಕುಸಿದಿರಲೂಬಹುದು ಎನ್ನಲಾಗುತ್ತಿದೆ.
ಭ್ರಷ್ಟಾಚಾರ ಹಾಗೂ ದುರಾಡಳಿತ: ಈ ಮೊದಲು ಕಟ್ಟಡಗಳ ಪರಿಶೀಲನೆ ಜವಾಬ್ದಾರಿಯು ವಾರ್ಡ್ ಎಂಜಿನಿಯರ್ಗಿತ್ತು ಆದರೆ ಈಗ ಬಿಬಿಎಂಪಿ ಟೌನ್ ಪ್ಲಾನಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಬಿಬಿಎಂಪಿಯಲ್ಲಿನ ಸಿಬ್ಬಂದಿ ಕೊರತೆಯಿಂದ ನಿಗದಿಪಡಿಸಿರುವ ಜವಾಬ್ದಾರಿಯನ್ನು ನಿಭಾಯಿಸಲು ಅಧಿಕಾರಿಗಳಿಗೆ ಆಗುತ್ತಿಲ್ಲ. ಪರಿಣಾಮವಾಗಿ ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ ಎನ್ನುವ ಆರೋಪಗಳಿವೆ.
ಇನ್ನೊಂದೆಡೆ 2013ರಲ್ಲಿ ಸರ್ಕಾರದ ಬೊಕ್ಕಸವನ್ನು ತುಂಬಿಸಲು ನಗರ ಎರಡೂವರೆ ಲಕ್ಷ ಕಟ್ಟಡಗಳನ್ನು ಅಕ್ರಮ ಸಕ್ರಮ ಯೋಜನೆಯಲ್ಲಿ ಸಕ್ರಮಗೊಳಿಸಲು ನಿರ್ಧರಿಸಲಾಯಿತು ಇದೂ ಕೂ ಸಮಸ್ಯೆಗೆ ಕಾರಣ ಎನ್ನಲಾಗಿದೆ.












Click it and Unblock the Notifications