ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು?
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ ಆದರೆ ತಿಂಗಳಿಂದೀಚೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ತಲೆದೋರಿದೆ.
ತಜ್ಞರು ನೀಡಿರುವ ಮಾಹಿತಿ ಪ್ರಕಾರ ಬೆಸ್ಕಾಂನ ವಿದ್ಯುತ್ ವಿತರಣಾ ವ್ಯವಸ್ಥೆ ತುಂಬಾ ದುರ್ಬಲವಾಗಿದೆ.
ಕಳೆದ ಕೆಲವು ವರ್ಷಗಳಿಂದ ದೇಶದ ಐಟಿ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ವಿದ್ಯುತ್ ಸಮಸ್ಯೆ ಇದೆ. ಬೆಂಗಳೂರು ನಗರ ಹೊರ ವಲಯ ಸೇರಿದಂತೆ ವಿದ್ಯುತ್ ಸಮಸ್ಯೆ ಎದುರಿಸದ ಪ್ರದೇಶಗಳೇ ಇಲ್ಲ.
ಕೊರೊನಾ ಸೋಂಕಿನ ಸಂದರ್ಭದಲ್ಲಿ ಸಾಕಷ್ಟು ಕೈಗಾರಿಕೆಗಳು ಬಾಗಿಲು ಮುಚ್ಚಿದ್ದವು, ಸಾವಿರಾರು ಮಂದಿ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲೂ ಕೂಡ ವಿದ್ಯುತ್ ವ್ಯತ್ಯಯ ಕಡಿಮೆಯಾಗಿರಲಿಲ್ಲ.
ಬೆಸ್ಕಾಂನ ಸಾಮಾಜಿಕ ಜಾಲತಾಣಗಳಲ್ಲಂತೂ ಪೂರ್ತಿಯಾಗಿ ದಿನನಿತ್ಯ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎನ್ನುವ ಮಾಹಿತಿಯೇ ತುಂಬಿರುತ್ತದೆ.
ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ ಅಲ್ಲದೇ ಲ್ಯಾಪ್ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ.
ಹಾಗೆಯೇ ಇಲ್ಲರ ಮನೆಯಲ್ಲಿ ಯುಪಿಎಸ್ ಸೌಲಭ್ಯ ಕೂಡ ಇರುವುದಿಲ್ಲ. ಹಾಗಾಗಿ ಬೆಸ್ಕಾಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಸ್ಕಾಂ ಯಾವ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂಬುದನ್ನ ಸಹ ತಿಳಿಸದಿರುವುದು ಜನರ ಕೋಪಕ್ಕೆ ಮುಖ್ಯ ಕಾರಣವಾಗಿದೆ.
ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು ಅಸಾಧ್ಯ ಎಂಬುದು ಜನರ ವಾದ. ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು?
ವಿದ್ಯುತ್ ವಲಯದ ಸಂಶೋಧನಾ ವಿಜ್ಞಾನಿ ರಿಶು ಗರ್ಗ್ ಅವರು ನೀಡಿರುವ ಮಾಹಿತಿ ಪ್ರಕಾರ, ಬೆಸ್ಕಾಂ ಸೇರಿದಂತೆ ಇತರೆ ವಿತರಣಾ ವಲಯದ ವ್ಯವಸ್ಥೆ ದುರ್ಬಲವಾಗಿದೆ ಎಂದು ತಿಳಿಸಿದ್ದಾರೆ. ಸರಿಯಾದ ವಿತರಣಾ ಮೂಲಸೌಕರ್ಯದ ಕೊರತೆ, ಅದರ ಅಸಮರ್ಪಕ ಕಾರ್ಯಾಚರಣೆ ಮತ್ತು ನಿರ್ವಹಣೆ ಈ ವಿದ್ಯುತ್ ಕಡಿತದ ಪ್ರಮುಖ ಕಾರಣಗಳಾಗಿವೆ. ಕಳಪೆ ನೆಟ್ವರ್ಕ್ , ಓವರ್ಲೋಡ್ನಿಂದಾಗಿ ವಿತರಣಾ ಟ್ರಾನ್ಸ್ಫಾರ್ಮರ್ಗಳು ಪದೇ ಪದೇ ಕೈಕೊಡುತ್ತಿವೆ.
ಬೆಸ್ಕಾಂ ವಿದ್ಯುತ್ ಕಡಿತವನ್ನು ಎರಡು ವಿಧವಾಗಿ ವಿಂಗಡಿಸುತ್ತದೆ. ಒಂದು ಯೋಜಿತ ಸ್ಥಗಿತ ಮತ್ತೊಂದು ಯೋಜಿತವಲ್ಲದ ಸ್ಥಗಿತ. ಕೆಲವು ಯೋಜಿತವಲ್ಲದ ಸ್ಥಗಿತಗಳು ಭಾರಿ ಮಳೆ, ಗಾಳಿಯಿರುವ ಸಂದರ್ಭದಲ್ಲಿ ತಂತಿಗಳು ಅಥವಾ ವಿದ್ಯುತ್ ಕಂಬಗಳು ಹಾಳಾಗಬಹುದು ಅಥವಾ ಅದರಿಂದ ಜನರಿಗೆ ಹಾನಿಯುಂಟಾಗಬಹುದು ಎಂದು ಹೆದರಿ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲಾಗುತ್ತದೆ.ಆದರೆ ಇವುಗಳನ್ನು ಬಹುಪಾಲು ವಿದ್ಯುತ್ ಕಡಿತಗಳು ಯೋಜಿತವಾಗಿರುತ್ತವೆ. ಬೆಸ್ಕಾಂ ಪ್ರತಿ ದಿನವೂ ಯೋಜಿತ ಸ್ಥಗಿತಗಳನ್ನು ಪಟ್ಟಿ ಮಾಡಿದೆ.
ವೃತ್ತಿಪರತೆ ಕೊರತೆಯೂ ಕಾರಣ
ನಗರದ ವಿದ್ಯುತ್ ಸಮಸ್ಯೆ ಬಗ್ಗೆ ಧ್ವನಿ ಎತ್ತಿರುವ ಕಾರ್ಯಕರ್ತ ಮುರಳೀಧರ ರಾವ್, ''ಹೆಚ್ಚಿನ ವಿದ್ಯುತ್ ವ್ಯತ್ಯಯಗಳಿಗೆ ಅಸಮರ್ಥ ಕೆಲಸದ ಸಂಸ್ಕೃತಿಯೇ ಕಾರಣ'' ಎಂದು ಹೇಳುತ್ತಾರೆ. ಇದೀಗ ಇರುವ ಎಲ್ಲಾ ಕೇಬಲ್ಗಳು ಉತ್ತಮವಾದದ್ದಾಗಿದೆ. ಆದರೆ ಕೆಲಸ ಮಾಡುವವರು ತಂತಿಗಳನ್ನು ತಪ್ಪು ಕ್ರಮದಲ್ಲಿ ಇಡುವ ಕಾರಣ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
ಮನೆಗಳು ಹಾಗೂ ಕಾಂಪ್ಲೆಕ್ಸ್ಗಳಿಗೆ ವಿದ್ಯುತ್ ಸಂಪರ್ಕ ಕೊಡುವಾಗ ಕೆಂಪು, ಹಳದಿ, ನೀಲಿ ಹಾಗೂ ಕಪ್ಪು ಕ್ರಮದಲ್ಲಿ ಹಾಕಿದ ತಂತಿಗಳ ಮೂಲಕ ಕೊಡಲಾಗುತ್ತದೆ. ಆದರೆ ಕೆಲಸಗಾರರು ತಂತಿಗಳನ್ನು ತಪ್ಪಾದ ಕ್ರಮದಲ್ಲಿ ಹಾಕುತ್ತಿರುವುದರಿಂದ ಟ್ರಿಪ್ ಆಗುತ್ತವೆ" ಎಂದರು.
ಕಲ್ಲಿದ್ದಿಲು ಕೊರತೆಗೆ ಕಾರಣ
ಭಾರತದಲ್ಲಿ ಈಗ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಮೂಲಗಳೆರಡರಿಂದಲೂ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕಲ್ಲಿದ್ದಲು ಅನ್ನು ಬಳಸಿ ಉಷ್ಣ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಅನ್ನು ಉತ್ಪಾದನೆ ಮಾಡಲಾಗುತ್ತಿದೆ. ಜೊತೆಗೆ ಪವನ ಶಕ್ತಿ, ಜಲಶಕ್ತಿ, ಸೌರಶಕ್ತಿಯನ್ನು ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. 1902 ರಲ್ಲೇ ನಮ್ಮ ಕರ್ನಾಟಕದ ಶಿವನಸಮುದ್ರದಲ್ಲಿ ಕಾವೇರಿ ನದಿ ನೀರು ಬಳಸಿ ವಿದ್ಯುತ್ ಉತ್ಪಾದಿಸಲಾಗಿತ್ತು. ಆ ವಿದ್ಯುತ್ ಅನ್ನು ಕೆಜಿಎಫ್ ನ ಗೋಲ್ಡ್ ಫೀಲ್ಡ್ ಗೆ ಹಾಗೂ ಬೆಂಗಳೂರಿಗೆ ಪೂರೈಸಲಾಗಿತ್ತು. ಏಷ್ಯಾದಲ್ಲಿ ವಿದ್ಯುತ್ ಕಂಡ ಮೊದಲ ನಗರ ಬೆಂಗಳೂರು ನಗರ ಎಂಬ ಖ್ಯಾತಿ ಕೂಡ ಇದೆ.
ಕೇಂದ್ರ ಸರ್ಕಾರದ ಶಿಫಾರಸ್ಸಿನ ಪ್ರಕಾರ, ದೇಶದ ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ಕನಿಷ್ಠ 14 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರಬೇಕು. ಆದರೆ, ಅಕ್ಟೋಬರ್ 4ರಂದು ದೇಶದ 16 ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ಒಂದು ದಿನಕ್ಕಾಗುವಷ್ಟು ಕಲ್ಲಿದ್ದಲು ಕೂಡ ದಾಸ್ತಾನು ಇರಲಿಲ್ಲ. ಈ 16 ಥರ್ಮಲ್ ಪವರ್ ಪ್ಲಾಂಟ್ ಗಳಿಂದ 17,475 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತೆ. ಇನ್ನೂ 45 ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ಎರಡು ದಿನಕ್ಕಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನು ಇತ್ತು. 45 ಥರ್ಮಲ್ ಪವರ್ ಪ್ಲಾಂಟ್ ಗಳಿಂದ 59,790 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ.
ಆದರೆ, ಈಗ ಭಾರತದಲ್ಲಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಉಷ್ಣ ವಿದ್ಯುತ್ ಸ್ಥಾವರ (ಥರ್ಮಲ್ ಪವರ್ ಪ್ಲಾಂಟ್)ಗಳಲ್ಲಿ ಕಲ್ಲಿದ್ದಲಿನ ಕೊರತೆ ಇದೆ. ಆಕ್ಟೋಬರ್ 4ರಂದು ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ದಾಖಲೆಯ ಪ್ರಕಾರ, ದೇಶದ 64 ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ನಾಲ್ಕು ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಮಾತ್ರ ಇದೆ. ದೇಶದ 25 ಉಷ್ಣು ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ 7 ದಿನಕ್ಕಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನು ಇದೆ. ದೇಶದ 135 ವಿದ್ಯುತ್ ಉತ್ಪಾದನಾ ಘಟಕಗಳನ್ನು ಕೇಂದ್ರೀಯ ವಿದ್ಯುತ್ ಪ್ರಾಧಿಕಾರ ಮಾನಿಟರ್ ಮಾಡುತ್ತದೆ. ದೇಶದ 135 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಪ್ರತಿ ನಿತ್ಯ ಒಟ್ಟಾರೆ 165 ಗೀಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆ. ಆದರೇ, ದೇಶದಲ್ಲಿ ಕಲ್ಲಿದ್ದಲಿನ ಕೊರತೆಯಿಂದ ದೇಶದ ಯಾವುದೇ ಭಾಗದಲ್ಲೂ ಈಗ ವಿದ್ಯುತ್ ಪೂರೈಕೆಯಲ್ಲಿ ಕೊರತೆಯಾಗಿಲ್ಲ ಎಂದು ಕೇಂದ್ರದ ಇಂಧನ ಖಾತೆ ಸಚಿವ ರಾಜಕುಮಾರ್ ಸಿಂಗ್ ಹೇಳಿದ್ದಾರೆ. ಆದರೆ, ಕಲ್ಲಿದ್ದಲ್ಲಿನ ಕೊರತೆಯ ಅಹಿತಕರ ಸ್ಥಿತಿಯು ಮುಂದಿನ 6 ತಿಂಗಳವರೆಗೂ ಮುಂದುವರಿಯಬಹುದು ಎಂದು ರಾಜಕುಮಾರ್ ಸಿಂಗ್ ಹೇಳಿದ್ದಾರೆ.

ಲೋಡ್ಶೆಡ್ಡಿಂಗ್ ಅನಿವಾರ್ಯ
ದೇಶಾದ್ಯಂತ ಕಲ್ಲಿದ್ದಿಲು ಕೊರತೆ ಉಂಟಾಗಿದ್ದು, ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ಕರ್ನಾಟಕದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಲೋಡ್ಶೆಡ್ಡಿಂಗ್ ಜಾರಿಯಾಗುವುದು ಸಂಭಾವ್ಯ.
ರಾಜ್ಯದ ಎಲ್ಲಾ ಶಾಖೋತ್ಪನ್ನ ವಿದ್ಯುತ್ ಘಟಕಗಳು ಸೇರಿ ನಿತ್ಯ 12-14 ರೇಕ್ ಕಲ್ಲಿದ್ದಿಲಿನ ಅವಶ್ಯಕತೆ ಇದೆ. ಆದರೆ ಸದ್ಯ ಪೂರೈಕೆ ಆಗುತ್ತಿರುವುದು 6-7 ರೇಕ್ಗಳು ಮಾತ್ರ. ಈ ಹಿನ್ನೆಲೆಯಲ್ಲಿ ಮೀಸಲು ದಾಸ್ತಾನನ್ನು ಬಳಸಲಾಗುತ್ತಿದ್ದು, ಹೆಚ್ಚೆಂದರೆ ಒಂದೆರಡು ದಿನಗಳಿಗೆ ಆಗುವಷ್ಟು ಉಳಿದಿದೆ. ರಾಷ್ಟ್ರೀಯ ಮಾನದಂಡದ ಪ್ರಕಾರ ಮೂರ್ನಾಲ್ಕು ದಿನಗಳಿಗೆ ಆಗುವಷ್ಟು ಕಲ್ಲಿದ್ದಿಲು ದಾಸ್ತಾನು ಇರಬೇಕು.ಇನ್ನು ಮೂರ್ನಾಲ್ಕು ದಿನ ಇದೇ ಕೊರತೆ ಮುಂದುವರೆದರೆ ಲೋಡ್ಶೆಡ್ಡಿಂಗ್ ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ಮೂಗಳು ತಿಳಿಸಿವೆ.











Click it and Unblock the Notifications