ಯಶವಂತಪುರ-ಮುರುಡೇಶ್ವರ : ವಾರದ ವಿಶೇಷ ರೈಲು ಸೇವೆ ಮತ್ತೆ ವಿಸ್ತರಣೆ
ವಾರಾಂತ್ಯದಲ್ಲಿ ಸಂಚರಿಸುತ್ತಿರುವ ಯಶವಂತಪುರ-ಮುರುಡೇಶ್ವರ ನಡುವಿನ ವಿಶೇಷ ರೈಲು ಸೇವೆಯನ್ನು ಮತ್ತೆ ವಿಸ್ತರಣೆ ಮಾಡಿ ರೈಲ್ವೆ ಇಲಾಖೆ ಆದೇಶ ನೀಡಿದ್ದು, ಈ ಭಾಗದ ಪ್ರಯಾಣಕರಿಗೆ ಖುಷಿ ತಂದಿದೆ.
ಈ ಮೊದಲು ಪ್ರಯಾಣಿಕರ ಬೇಡಿಕೆ ಹಿನ್ನಲೆಯಿಲ್ಲಿ ಜುಲೈ 30ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿತ್ತು, ವಿಶೇಷ ರೈಲಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸೇವೆಯನ್ನು ಮತ್ತೆ ವಿಸ್ತರಿಸಿ ನೈಋತ್ಯ ರೈಲ್ವೆ ಇಲಾಖೆ ಆದೇಶ ನೀಡಿದೆ.

ಹೊಸ ಆದೇಶದ ಹಿನ್ನಲೆಯಲ್ಲಿ ಯಶವಂತಪುರ - ಮುರುಡೇಶ್ವರ ಸಾಪ್ತಾಹಿಕ ವಿಶೇಷ ರೈಲು ಆಗಸ್ಟ್ 27ರವರೆಗೆ ಸಂಚರಿಸಲಿದೆ. ಭಾರತೀಯ ರೈಲ್ವೆ ರೈಲು ಸಂಖ್ಯೆ 06563/ 06564 ಇನ್ನೂ ಒಂದು ತಿಂಗಳು ಸೇವೆ ನೀಡಲಿದೆ.
ರೈಲು ಸೇವೆ ವಿಸ್ತರಣೆ ಮಾಡಿರುವುದು ಬೆಂಗಳೂರು - ಕರಾವಳಿ ನಡುವಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಮೊದಲು ರೈಲು ಸಂಚಾರ ನಿಲ್ಲಿಸಲು ರೈಲ್ವೆ ಇಲಾಖೆ ನಿರ್ಧರಿಸಿತ್ತು, ಆದರೆ ರೈಲು ಸೇವೆ ನಿಲ್ಲಿಸಿದರೆ ಹೋರಾಟ ನಡೆಸುವುದಾಗಿ ಈ ಭಾಗದ ಪ್ರಯಾಣಿಕರು ಎಚ್ಚರಿಕೆ ನೀಡಿದ್ದರು.
ಹಳೆಯ ವೇಳಾಪಟ್ಟಿಯಂತೆ ಸಂಚಾರ
ಪ್ರತಿ ಶನಿವಾರ ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06563 ಯಶವಂತಪುರ ಮುರುಡೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಆಗಸ್ಟ್ 5, 12, 19 ಮತ್ತು ಆಗಸ್ಟ್ 26ರಂದು ಈ ಮೊದಲಿನ ವೇಳಾಪಟ್ಟಿಯಂತೆ ಪ್ರಯಾಣಿಸಲಿದೆ.
ಪ್ರತಿ ಭಾನುವಾರ ಮುರುಡೇಶ್ವರದಿಂದ ಹೊರಡುವ ರೈಲು ಸಂಖ್ಯೆ 06564 ಆಗಸ್ಟ್ 6, 13, 20 ಮತ್ತು ಆಗಸ್ಟ್ 27ರಂದು ಮೊದಲಿನ ವೇಳಾಪಟ್ಟಿಯಂತೆ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಕರಾವಳಿ ಭಾಗದ ಜನರಿಗೆ ಅನುಕೂಲ
ವಾರಾಂತ್ಯದಲ್ಲಿ ಈ ರೈಲು ಸಂಚರಿಸುವ ಕಾರಣ ಬೆಂಗಳೂರಿನಲ್ಲಿ ಕೆಲಸ ಮಾಡುವ ಕರಾವಳಿ ಭಾಗದ ಜನರು ಮತ್ತು ಕರಾವಳಿ ಪ್ರವಾಸಿ ತಾಣಗಳಿಗೆ ತೆರಳುವ ರಾಜಧಾನಿಯ ಪ್ರವಾಸಿಗರಿಗೂ ಅನುಕೂಲಕರವಾಗಿದೆ. ಬೈಂದೂರು, ಉಡುಪಿ, ಕುಂದಾಪುರ, ಮಂಗಳೂರು ಭಾಗದ ಜನರಿಗೆ ಈ ರೈಲು ಸಂಚರಿಸುತ್ತಿರುವುದು ಪ್ರಯಾಣಕ್ಕೆ ಅನುಕೂಲಕರವಾಗಿದೆ.
2022ರಲ್ಲಿ ಯಶವಂತಪುರ ಮತ್ತು ಮುರುಡೇಶ್ವರದ ನಡುವೆ ವಿಶೇಷ ಸಾಪ್ತಾಹಿಕ ರೈಲು ಸಂಚಾರವನ್ನು ಆರಂಭಿಸಲಾಗಿತ್ತು. ಈ ರೈಲು ಶೇಕಡಾ 100 ರಷ್ಟು ಭರ್ತಿಯಾಗುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶನಿವಾರ ರಾತ್ರಿ ಯಶವಂತಪುರ ರೈಲುನಿಲ್ದಾಣದಿಂದ ಹೊರಟು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ ಮಾರ್ಗವಾಗಿ ಮುರುಡೇಶ್ವರ ತಲುಪುತ್ತದೆ.












Click it and Unblock the Notifications