Weekend Travel: ಬೆಂಗಳೂರಿನಿಂದ ಭಾನುವಾರದ ವೀಕೆಂಡ್ ಟ್ರಿಪ್ಗೆ ಈ ಸ್ಥಳಗಳನ್ನು ಮಿಸ್ ಮಾಡಬೇಡಿ..!
ಬೆಂಗಳೂರು, ನವೆಂಬರ್ 25: ಬೆಂಗಳೂರಿನ ಬ್ಯುಸಿ ಲೈಫ್ಅಲ್ಲಿ ಒಂದು ದಿನ ಬಿಡುವು ಸಿಕ್ಕರೂ ಸಾಕು ಮೈಡ್ ರಿಲೀಫ್ಗಾಗಿ ಪ್ರವಾಸ ಕೈಗೊಳ್ಳುವುದು ಹಲವರ ಅಭ್ಯಾಸ. ಸಾಮಾನ್ಯವಾಗಿ ವೀಕೆಂಡ್ ಅಂದ್ರೆ ಶನಿವಾರ ಹಾಗೂ ಭಾನುವಾರ ಕೆಲಸಗಳಿಗೆ ರಜೆ ಇರುತ್ತದೆ. ಆದರೆ ಹಲವಾರು ಸಂಸ್ಥೆಗಳಲ್ಲಿ ಭಾನುವಾರ ಮಾತ್ರ ರಜೆ ಇರುತ್ತದೆ.
ಹೀಗಾಗಿ ಒಂದೇ ದಿನದಲ್ಲಿ ವೀಕೆಂಡ್ ಟ್ರಿಪ್ಗೆ ಪ್ಲಾನ್ ಮಾಡುತ್ತೀದ್ದೀರಾ..? ಒಂದೇ ದಿನದ ರಜೆಯಲ್ಲಿ ಬೆಂಗಳೂರಿನಿಂದ ಪ್ರಯಾಣಿಸಬಹುದಾದ ಸ್ಥಳಗಳ ಹುಡುಕಾಟದಲ್ಲಿದ್ದೀರಾ..? ಹಾಗಾದರೆ ಇಲ್ಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಒಂದೇ ದಿನದಲ್ಲಿ ಪೂರೈಸಬಹುದಾದ ಬೆಂಗಳೂರಿನ ಸಮೀಪದ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

ನಂದಿ ಬೆಟ್ಟ
ಬೆಂಗಳೂರಿನ ನಗರಕ್ಕೆ ಅತ್ಯಂತ ಸಮೀಪವಾದ ಸುಂದರವಾದ ಪ್ರವಾಸಿ ತಾಣ ನಂದಿ ಬೆಟ್ಟ. ನಗರದಿಂದ ಸುಮಾರು ಒಂದು ಗಂಟೆ ಪ್ರಯಾಣದಲ್ಲಿ ನಂದಿ ಬೆಟ್ಟಕ್ಕೆ ಭೇಟಿ ನೀಡಬಹುದು. ಬೆಂಗಳೂರಿನಿಂದ ಸುಮಾರು 61 ಕಿಲೋ ಮೀಟರ್ ದೂರದಲ್ಲಿರುವ ನಂದಿ ಬೆಟ್ಟವು ಸಮುದ್ರ ಮಟ್ಟದಿಂದ 4850 ಅಡಿಗಳಷ್ಟು ಎತ್ತರದಲ್ಲಿದೆ. ಸ್ಟೇ ಆಗಲು ರೆಸಾರ್ಟ್ ವ್ಯವಸ್ಥೆ ಕೂಡ ಇದ್ದು, ಒಂದು ದಿನದ ಪ್ರವಾಸ ಕೂಡ ಮಾಡಬಹುದುದಾಗಿದೆ. ಸಾಹಸ ಕ್ರೀಡಾ ಪ್ರಿಯರು ಪ್ಯಾರಾಸೈಲಿಂಗ್ ಸಾಹಸ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ. ಚಳಿಗಾಳಿ, ಮಂಜುಗಳಿಂದ ಕೂಡಿರುವ ಈ ಪ್ರದೇಶವು ವರ್ಷದ ಎಲ್ಲ ಸಮಯದಲ್ಲೂ ಆಹ್ಲಾದಕರವಾಗಿರುತ್ತದೆ.

ಅವಲ ಬೆಟ್ಟ
ಅವಲ ಬೆಟ್ಟವು ಬೆಂಗಳೂರಿಗೆ ಸಮೀಪದಲ್ಲಿರುವ ಈ ಸ್ಥಳವು ನಿಸರ್ಗ ನಿರ್ಮಿತ ಸುಂದರವಾದ ಸ್ಥಳ. ಬೆಂಗಳೂರಿನಿಂದ ಅವಳ ಬೆಟ್ಟ ಸೇರುವವರೆವಿಗೂ ನೀವು ಅನೇಕ ಬೆಟ್ಟಗಳನ್ನು ನೋಡುತ್ತಾ ಸಾಗಬಹುದು. ಅವಲ ಬೆಟ್ಟವು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ಇದು ಬೆಂಗಳೂರಿನಿಂದ ಸುಮಾರು 100 ಕಿಮೀ ದೂರದಲ್ಲಿದೆ. ಫೋಟೋ ಕ್ಲಿಕ್ಕಿಸಲು ಇದೊಂದು ಸೂಕ್ತವಾದ ಸ್ಥಳವಾಗಿದೆ.
ರಾಮನಗರ
ರಾಮನಗರ ಬೆಂಗಳೂರಿಗೆ ಸಮೀಪದಲ್ಲಿರುವ ಪ್ರವಾಸಿ ತಾಣ. ಬೆಂಗಳೂರಿನಿಂದ 50 ಕಿಲೋಮೀಟರ್ ದೂರದಲ್ಲಿರುವ ರಾಮನಗರ ಟ್ರಕ್ಕಿಂಗ್ ಹಾಟ್ ಸ್ಪಾಟ್ ಆಗಿದೆ. ಈಗ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಿಂದ ಪ್ರಯಾಣ ಕೂಡ ಸುಲಭವಾಗಿದೆ. ಚನ್ನಪಟ್ಟಣ ಸಮೀಪದ ಕೆಂಗಲ್ ಆಂಜನೇಯ ದೇಗುಲ, ಕಣ್ವ ಡ್ಯಾಂ, ಅಂಬೆಗಾಲು ಕೃಷ್ಣ ದೇಗುಲ, ಇಗ್ಗಲೂರು ಡ್ಯಾಂ, ಮಾಗಡಿಯ ಮಂಚನಬೆಲೆ, ತಿಪ್ಪಗೊಂಡನಹಳ್ಳಿ ಜಲಾಶಯ, ಕನಕಪುರದ ಮುತ್ತಿತ್ತಿಯ ಮುತ್ತುರಾಯ, ಕಲ್ಲಹಳ್ಳಿಯ ವೆಂಕಟೇಶ್ವರ, ಸಂಗಮ ಪಕ್ಕದ ಶಿವನಾಂಕೇಶ್ವರ ದೇಗುಲ, ಕಾವೇರಿ ವನ್ಯಜೀವಿಧಾಮಕ್ಕೆ ಸೇರಿದ ಮುತ್ತತ್ತಿ, ಸಂಗಮ, ಮೇಕೆದಾಟು ಅರಣ್ಯ ಪ್ರದೇಶಗಳು ರಾಮನಗರದಲ್ಲಿದೆ.
ಶಿವಗಂಗೆ
ದಕ್ಷಿಣ ಕಾಶಿ ಎಂದೇ ಹೆಸರಾದ ಶಿವಗಂಗೆ ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿದೆ. ಶಿವಗಂಗೆ ಕ್ಷೇತ್ರವು ಭಕ್ತಿಯ ಕೇಂದ್ರವಾಗಿದೆ. ಶಿವಗಂಗೆ ಸುಮಾರು 804.8 ಮೀಟರ್ ಅಥವಾ 2,640.3 ಅಡಿ ಎತ್ತರವಿದೆ. ನೆಲಮಟ್ಟದಿಂದ ಒಂದುವರೆಯಿಂದ 2ಗಂಟೆ ಅವಧಿ ಕ್ರಮಿಸಿದರೆ ಈ ಸುಂದರವಾದ ಶಿಖರವನ್ನು ನೋಡಬಹುದು.
ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಿಂದ 6 ಕಿ.ಮೀ ದೂರದಲ್ಲಿ ಶಿವಗಂಗೆ ಬೆಟ್ಟ ಕಾಣಿಸುತ್ತದೆ. ಪಶ್ಚಿಮದಿಂದ ನೋಡಿದರೆ ಇಡೀ ಬೆಟ್ಟವೇ ಶಿವಲಿಂಗದ ಆಕಾರದಲ್ಲಿ ಕಾಣಿಸುತ್ತದೆ. ಪೂರ್ವದಿಂದ ನೋಡಿದರೆ ಹೋರಿಯಂತೆಯೂ, ಉತ್ತರದಿಂದ ಸರ್ಪದಂತೆಯೂ ಹಾಗೂ ದಕ್ಷಿಣದಿಂದ ಗಣೇಶನಂತೆಯೂ ಕಾಣಿಸುತ್ತದೆ. ಈ ಬೆಟ್ಟದ ಮೇಲೆ ಗಂಗಾಧರೇಶ್ವರ ಹಾಗೂ ಹೊನ್ನಮ್ಮದೇವಿ ದೇವಾಲಯಗಳಿವೆ. ಪುರಾಣಗಳ ಪ್ರಕಾರ ನೀರು ಗಂಗೆಯ ಸ್ವರೂಪ. ಅದೇ ಕಾರಣಕ್ಕೆ ಈ ಸ್ಥಳಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರದ ಆದಿಯೋಗಿ
ಆದಿಯೋಗಿ ಬೆಂಗಳೂರು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಬಳಿಯಿದ್ದು, ಬೆಂಗಳೂರಿನ ಉತ್ತರಕ್ಕೆ 65 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 45 ಕಿಮೀ ದೂರದಲ್ಲಿದೆ . ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ 63 ಕಿಮೀ ದೂರದಲ್ಲಿದೆ. ಈ ಆದಿಯೋಗಿ ಮೂರ್ತಿ ಕೊಯಂಬತ್ತೂರಿನಲ್ಲಿರುವ ಮೂರ್ತಿಯಷ್ಟೇ ಅಂದರೆ ಬರೋಬ್ಬರಿ 112 ಅಡಿ ಎತ್ತರವಿದೆ. ಚಿಕ್ಕಬಳ್ಳಾಪುರದ ಆದಿಯೋಗಿ ಮೂರ್ತಿ ಆವರಣದಲ್ಲೇ ನವಗ್ರಹ ದೇಗುಲವಿದೆ. ಹೀಗಾಗಿ ವಿಶೇಷವಾಗಿ ಶಿವ ಭಕ್ತರಿಗೆ ಈ ಸ್ಥಳ ಪ್ರಿಯವಾಗಲಿದೆ.












Click it and Unblock the Notifications