Gopalaswamy Hills: ಗೋವರ್ಧನಗಿರಿ ಗೋಪಾಲಸ್ವಾಮಿ ಬೆಟ್ಟವಾಗಿದ್ದು ಹೇಗೆ?
ಚಾಮರಾಜನಗರ, ನವೆಂಬರ್ 08: ನಮ್ಮಲ್ಲಿರುವ ಹೆಚ್ಚಿನ ಬೆಟ್ಟಗುಡ್ಡಗಳಿಗೆ ಪೌರಾಣಿಕ ನಂಟಿದ್ದು, ರಾಮಾಯಣ, ಮಹಾಭಾರತದಲ್ಲಿ ಬರುವ ಹಲವು ಬೆಟ್ಟಗುಡ್ಡಗಳು ನಮ್ಮಲ್ಲಿರುವ ಬೆಟ್ಟಗಳೇ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಇದಕ್ಕೆ ಬೆಟ್ಟದಲ್ಲಿರುವ ದೇಗುಲಗಳು, ಶಿವಲಿಂಗಗಳು, ಬಂಡೆಕಲ್ಲುಗಳ ಮೇಲಿರುವ ಕುರುಹುಗಳನ್ನು ಸಾಕ್ಷಿಯಾಗಿವೆ. ಜತೆಗೆ ಸ್ಥಳದ ಮಹಿಮೆಗಳು ಕೂಡ ಅದನ್ನು ಸಾರುತ್ತಿವೆ. ಹೀಗಿರುವಾಗಲೇ ನಾವೆಲ್ಲರೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಗೋಪಾಲಸ್ವಾಮಿ ಬೆಟ್ಟ ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಗೋವುಗಳನ್ನು ಮೇಯಿಸುತ್ತಿದ್ದ ಗೋವರ್ಧನ ಗಿರಿ ಎಂದೇ ಹೇಳಲಾಗುತ್ತದೆ.
ಪ್ರತಿಯೊಂದು ಬೆಟ್ಟಗುಡ್ಡದ ಹಿಂದೆಯೂ ಪೌರಾಣಿಕ ಸಂಬಂಧವಿರುವ ಕಥೆಗಳು ಪ್ರಚಲಿತದಲ್ಲಿ ಇರುವುದನ್ನು ನಾವು ಕಾಣಬಹುದಾಗಿದೆ. ಅದರಂತೆ ಸದಾ ಮಂಜಿನ ಮಳೆಗೆರೆಯುವ ಗೋಪಾಲಸ್ವಾಮಿ ಬೆಟ್ಟಕ್ಕೂ ಪೌರಾಣಿಕ ನಂಟಿದ್ದು, ಇದು ಆಗಿನ ಗೋವರ್ಧನ ಗಿರಿಯೇ ಎಂದು ಜನ ನಂಬುತ್ತಾರೆ. ಜತೆಗೆ ಪೌರಾಣಿಕ ಕಥೆಗಳನ್ನು ಮುಂದಿಡುವುದನ್ನು ನಾವು ಕಾಣಬಹುದಾಗಿದೆ. ಬಹುತೇಕ ಕಥೆಗಳೆಲ್ಲವೂ ಬಾಯಿಂದ ಬಾಯಿಗೆ ಬಂದಿದ್ದಾಗಿದೆ. ಜತೆಗೆ ಈ ಬೆಟ್ಟ ದೂರದಿಂದ ನೋಡಲು ಹಸುವಿನ ರೀತಿ ಕಾಣುತ್ತದೆಯಂತೆ. ಹೀಗಾಗಿ ಗೋವರ್ಧನಗಿರಿ ಇದೇ ಆಗಿರಬಹುದು ಎಂಬುದು ಹಿಂದಿನವರು ಹೇಳುವ ಮಾತಾಗಿದೆ.

ಪುರಾಣದ ಕಾಲದಲ್ಲಿ ಈ ಬೆಟ್ಟ ಹಸಿರು ಸಂಪತ್ತಿನಿಂದ ಕಂಗೊಳಿಸುತ್ತಿದ್ದುದರಿಂದ ಗೋಪಾಲಕರು ದನಗಳನ್ನು ಮೇಯಿಸಲು ಬರುತ್ತಿದ್ದರಂತೆ ಗೋಪಾಲಕರು ಬರುತ್ತಿದ್ದರಿಂದ ಗೋವರ್ಧನಗಿರಿ ಗೋಪಾಲಸ್ವಾಮಿ ಬೆಟ್ಟವಾಯಿತು ಎನ್ನುವುದು ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತಾಗಿದೆ. ಇನ್ನು ಈ ಬೆಟ್ಟದ ಮಹಿಮೆಯನ್ನು ನೋಡುವುದಾದರೆ, ರುಕ್ಮಿಣಿ, ಸತ್ಯಭಾಮೆಯರ ಸಹಿತ ಇಲ್ಲಿ ನೆಲೆಸಿರುವ ಶ್ರೀಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಎಂದೂ ಕರೆಯುತ್ತಾರೆ. ಇಲ್ಲಿರುವ ಕೃಷ್ಣದ ಮೂಲ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದ್ದು ಎಂದು ಹೇಳಲಾಗುತ್ತಿದೆ.
ಎಂಟು ಬೆಟ್ಟಗಳಿಂದ ಸುತ್ತುವರಿದ ತಾಣ
ಇಷ್ಟಕ್ಕೆ ಮುಗಿಯುವುದಿಲ್ಲ ಗೋಪಾಲಸ್ವಾಮಿ ಬೆಟ್ಟವು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳಿಂದ ಸುತ್ತುವರೆದಿದ್ದು, ಹಂಸತೀರ್ಥ, ಪದ್ಮತೀರ್ಥ, ಶಂಖ ತೀರ್ಥ, ಚಕ್ರ ತೀರ್ಥ, ಗದಾ ತೀರ್ಥ, ಶಜ್ಞಾತೀರ್ಥ, ವನಮೂಲಿಕಾ ತೀರ್ಥ, ತೊಟ್ಲು ತೀರ್ಥ ಎಂಬ ಅಷ್ಟ ತೀರ್ಥಗಳಿವೆ. ಮಕ್ಕಳಿಲ್ಲದವರು ತೊಟ್ಲು ತೀರ್ಥದಲ್ಲಿ ಸ್ನಾನ ಮಾಡಿದರೆ ಮಕ್ಕಳಾಗುತ್ತವೆಂಬ ನಂಬಿಕೆಯೂ ಇಲ್ಲಿದೆ. ಹೀಗಾಗಿಯೇ ಇಲ್ಲಿನ ಕೃಷ್ಣನನ್ನು ದರ್ಶನ ಮಾಡಲು ಸಮಾರೋಪಾದಿಯಲ್ಲಿ ಭಕ್ತರು ಆಗಮಿಸುತ್ತಾರೆ.

ಇಲ್ಲಿರುವ ದೇಗುಲ ಕೂಡ ತನ್ನದೇ ಆದ ವಿಶೇಷತೆ ಮತ್ತು ಮಹಿಮೆಯನ್ನು ಹೊಂದಿದೆ. .ಈ ದೇಗುಲಕ್ಕೆ ಸುಮಾರು ಏಳು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದ್ದು, ದೇಗುಲವನ್ನು ಹೊಯ್ಸಳ ದೊರೆ ಚೋಳ ಬಲ್ಲಾಳ ನಿರ್ಮಿಸಿದನೆಂದೂ ಬಳಿಕ ಮೈಸೂರಿನ ಒಡೆಯರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲಾಯಿತು ಎನ್ನಲಾಗಿದೆ. ಒಂದೇ ಸುತ್ತುಪೌಳಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳು, ಬಲಿಪೀಠ, ಧ್ವಜ ಸ್ತಂಭಗಳು ಗಮನಾರ್ಹವಾಗಿದೆ.
ಇದು ಅತಿ ಎತ್ತರದ ಮೂರನೇ ಬೆಟ್ಟ
ಹಿಮವದ್ ಗೋಪಾಲಸ್ವಾಮಿ ಬೆಟ್ಟವು ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿದ್ದು, ಸುಮಾರು 1450 ಅಡಿ ಎತ್ತರವನ್ನು ಹೊಂದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿದೆ. ಇದು ಚಾರಣ ಪ್ರಿಯರಿಗೆ ಹುರುಪಿನ ತಾಣವಾಗಿಯೂ, ನಿಸರ್ಗ ಪ್ರೇಮಿಗಳಿಗೆ ಮುದ ನೀಡುವ, ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿ ಗಮನಸೆಳೆಯುತ್ತಿದೆ.

ಸದಾ ಮಂಜಿನಿಂದ ಆವರಿಸುವುದು ಈ ಬೆಟ್ಟದ ವಿಶೇಷತೆಯಾಗಿದೆ. ಹೀಗಾಗಿಯೇ ಹಿಮವದ್ ಗೋಪಾಲಸ್ವಾಮಿ ಬೆಟ್ಟವೆಂದು ಕರೆಯಲಾಗುತ್ತದೆ. ಗುಂಡ್ಲುಪೇಟೆಯ ಹಂಗಳದಿಂದ ಗೋಪಾಲಸ್ವಾಮಿ ಬೆಟ್ಟಕ್ಕೆ ಕಡಿದಾದ ಅಂಕುಡೊಂಕು ರಸ್ತೆಯಲ್ಲಿ ತೆರಳವುದೇ ಒಂದು ರೋಮಾಂಚನಕಾರಿ ಅನುಭವ. ಅದರಲ್ಲೂ ಇಲ್ಲಿಂದ ಕಂಡು ಬರುವ ನಿಸರ್ಗದ ನೋಟ ಮನಸ್ಸೆಳೆಯುತ್ತದೆ.
ಇಲ್ಲಿಗೆ ಆಗಮಿಸುವವರು ಪ್ರಕೃತಿಯ ಚೆಲುವಿಗೆ ಮಾರು ಹೋಗಿ ವಾರೆವ್ಹಾ ಎನ್ನುತ್ತಾರೆ. ಇದೆಲ್ಲದರ ನಡುವೆ ಈ ತಾಣಕ್ಕೆ ಯಾರೇ ಬಂದರೂ ಅವರದೇ ಭಾಷೆಯಲ್ಲಿ ಮಾತನಾಡುವ ವಾಕ್ಛಾತುರ್ಯತೆಯನ್ನು ಇಲ್ಲಿನ ಅರ್ಚಕ ವೃಂದ ಹೊಂದಿರುವುದು ವಿಶೇಷವಾಗಿದೆ. ಗೋಪಾಲಸ್ವಾಮಿಬೆಟ್ಟವು ರಾಜಧಾನಿ ಬೆಂಗಳೂರಿನಿಂದ 220 ಕಿ.ಮೀ. ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಿಂದ 74ಕಿ.ಮೀ. ದೂರದಲ್ಲಿದೆ. ಗುಂಡ್ಲುಪೇಟೆಯಿಂದ 20 ಕಿ.ಮೀ. ಊಟಿ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಹಂಗಳ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಮುಂದಕ್ಕೆ ಸರ್ಕಾರಿ ಬಸ್ ನಲ್ಲಿ ಸಾಗಿದರೆ ಶ್ರೀ ಗೋಪಾಲಸ್ವಾಮಿ ಬೆಟ್ಟವನ್ನು ತಲುಪಬಹುದಾಗಿದೆ.












Click it and Unblock the Notifications