ಮೋಡ, ಮಂಜು, ಚಳಿಯಲ್ಲಿ ಬಂಧಿಯಾದ ಅರಮನೆ ನಗರಿ: ಯಾಕೆ ಹೀಗೆ?
ಮೈಸೂರು, ಡಿಸೆಂಬರ್ 13: ಈಗಾಗಲೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಸಣ್ಣಗೆ ಮಳೆ ಸುರಿಯುತ್ತಿದೆ. ಜತೆಗೆ ಮೈಕೊರೆಯುವ ಚಳಿ, ಮೋಡದ ಜೊತೆಗೆ ಮಂಜು ಮುಸುಕಿದ ವಾತಾವರಣ ಅರಮನೆ ನಗರಿ ಮೈಸೂರನ್ನು ಆವರಿಸಿದ್ದು, ಮಂಕುಕವಿದ ವಾತಾವರಣದಿಂದಾಗಿ ಮನೆಯಿಂದ ಹೊರಗೆ ಬಂದು ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗಿ ಪರಿಣಮಿಸುತ್ತಿದೆ.
ಮುಂಜಾನೆ ಎದ್ದು ವಾಕಿಂಗ್ ಮಾಡುವವರು ವಾತಾವರಣದ ಏರುಪೇರಿನಿಂದಾಗಿ ಯಾವ ಕಾಯಿಲೆ ಅಡರಿಕೊಳ್ಳುತ್ತದೆಯೋ ಎಂಬ ಭಯದಿಂದ ತಲೆಗೆ ಟೋಪಿ, ಮೈಗೆ ಸ್ವೆಟರ್ ಹಾಕಿಕೊಂಡು ಬೆಚ್ಚಗೆ ನಡೆಯಬೇಕಾಗಿದೆ. ಈ ವಾತಾವರಣದಲ್ಲಿ ಸಾಮಾನ್ಯವಾಗಿ ಏನಾದರೊಂದು ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಜನ ಸಾಮಾನ್ಯರು ಎಚ್ಚರಿಕೆ ವಹಿಸುತ್ತಿದ್ದಾರೆ. ಈ ಸಮಯದಲ್ಲಿ ಚಳಿ, ಮಂಜು ಇರುತ್ತಿತ್ತಾದರೂ ಬಿಸಿಲು ಬರುತ್ತಿದ್ದಂತೆಯೇ ಎಲ್ಲವು ಮಾಯವಾಗಿ ಬಿಡುತ್ತಿತ್ತು. ಆದರೆ ಈ ಬಾರಿ ಎಲ್ಲವೂ ವಿಚಿತ್ರ ಎನಿಸುತ್ತಿದೆ.

ಈ ಬಾರಿ ಮೈಸೂರಿನಲ್ಲಿ ಬಿಟ್ಟು ಬಿಡದೆ ಮಳೆ ಸುರಿದಿದೆ. ಜೊತೆಗೆ ಚಂಡಮಾರುತದ ಅಬ್ಬರವೂ ಮಳೆ ಸುರಿಸುವಂತೆ ಮಾಡಿದೆ. ಹೀಗಾಗಿ ರೈತರು ಸಮಸ್ಯೆ ಎದುರಿಸುವಂತಾಗಿದೆ. ಇದರ ಜತೆಗೆ ಜನ ಸಾಮಾನ್ಯರು ಕೂಡ ಆರೋಗ್ಯ ತಪ್ಪುತ್ತಿದ್ದಾರೆ. ಇದರಿಂದ ಆಸ್ಪತ್ರೆಯತ್ತ ಧಾವಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಉಂಟಾಗಿರುವ ಮೋಡ ಕವಿದ ವಾತಾವರಣದಿಂದ ಪರಿಣಾಮ ತಣ್ಣನೆಯ ಗಾಳಿ ಒಂದೆಡೆಯಾದರೆ, ಮಾಗಿಯ ಕೊರೆವ ಚಳಿ ಇನ್ನೊಂದೆಡೆಯಾಗಿದೆ.
ಸಹ ಸಂಶೋಧಕ ಡಾ.ಸುಮಂತ್ ಕುಮಾರ್ ಹೇಳಿದ್ದೇನು?
ಹವಾಮಾನ ಬದಲಾವಣೆ ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾದ ಕಾರಣ ಈ ಬಾರಿ ಕಳೆದ ವರ್ಷಕ್ಕಿಂತಲೂ ಕೊಂಚ ಹೆಚ್ಚಿನ ಪ್ರಮಾಣದ ಚಳಿ ಇರಲಿದೆ ಎಂಬುದು ತಜ್ಞರು ಅಭಿಪ್ರಾಯವಾಗಿದೆ. ಹೀಗಾಗಿ ಇದನ್ನು ಎದುರಿಸಲು ಜನ ಸಾಮಾನ್ಯರು ಸಜ್ಜಾಗಬೇಕಾಗಿದೆ. ಜಿಲ್ಲೆಯಲ್ಲಿ ವಾರದ ಹಿಂದೆ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಸದ್ಯ ನಗರ ಪ್ರದೇಶದಲ್ಲಿ ಕನಿಷ್ಠ 19, ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಗ್ರಾಮಾಂತರ ಭಾಗದಲ್ಲಿ ಕನಿಷ್ಠ 18, ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿ ಮೈ ನಡುಗಿಸಿದೆ.
ಈ ಬಾರಿ ನವೆಂಬರ್ ಸಮಯದಲ್ಲೂ ಕೆಆರ್ಎಸ್ ಜಲಾಶಯ ತುಂಬಿದ್ದ ಕಾರಣ ಚಳಿ ಹೆಚ್ಚಾಗಿರಲಿದೆ. ಈ ವರ್ಷ ಮುಖ್ಯವಾಗಿ ಡಿಸೆಂಬರ್ 15ರಿಂದ ಜನವರಿ 15ರ ನಡುವೆ ಹೆಚ್ಚಿನ ಚಳಿ ಕಂಡು ಬರಲಿದೆ. ಕಳೆದ ವರ್ಷಕಿಂತ ಈ ಬಾರಿ ಚಳಿ ಪ್ರಮಾಣ ಹೆಚ್ಚಾಗಿರಲಿದೆ. ಜಿಲ್ಲೆಯಲ್ಲಿ ಹದಿನೈದು ದಿನದ ಹಿಂದೆ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂಬುದಾಗಿ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧಕ ಡಾ.ಸುಮಂತ್ ಕುಮಾರ್ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಚಳಿಗಾಲದ ಫ್ಯಾಷನ್ ಉಡುಪು
ನಗರ ಪ್ರದೇಶದಲ್ಲಿ ಪರಿಸ್ಥಿತಿ ಹೇಗಾಗಿದೆ ಎಂದರೆ ಈಗ ಬೆಳಗ್ಗೆ ಸೂರ್ಯನ ದರ್ಶನವೇ ಅಪರೂಪವಾಗಿದೆ. ಹೀಗಾಗಿ ಚಳಿಗೆ ಮೈಕೊಡವಿಕೊಂಡು ಹೊರಗೆ ಬರುವುದು ಕಷ್ಟ ಎನಿಸುತ್ತದೆ. ಸಂಜೆಯಾಗುತ್ತಿದ್ದಂತೆ ಶೀತಗಾಳಿಯೊಂದಿಗೆ ನಿಧಾನವಾಗಿ ಮೈ ಕೊರೆಯುವ ಚಳಿ ಶುರುವಾಗುತ್ತಿದೆ. ಹಗಲಿನಲ್ಲಿ ಮೋಡ ಕವಿದ ವಾತಾವರಣ, ರಾತ್ರಿ ಮೈ ಕೊರೆಯುವ ಚಳಿ. ಇದು ಈಗಿನ ವಾತಾವರಣವಾಗಿದ್ದು ಇದರಿಂದ ಬೆಳಿಗ್ಗೆ ವಾಕಿಂಗ್ ಮಾಡುವವರು, ರಾತ್ರಿ ಪಾಳಿಯಲ್ಲಿ ದುಡಿಯುವವರು, ಪೇಪರ್ ಹಾಕುವ ಹುಡುಗರು, ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರು, ಹಾಲು ಹಾಕುವವರು ಮತ್ತಿತರರು ಸಂಕಷ್ಟ ಅನುಭವಿಸುವಂತಾಗಿದೆ.
ಮೈ ಕೊರೆಯುವ ಚಳಿಗೆ ತತ್ತರಿಸಿರುವ ನಗರದ ಜನರು ಬೆಚ್ಚನೆಯ ಉಡುಪುಗಳಿಗೆ ಮೊರೆ ಹೋಗುತ್ತಿzರೆ. ಚಳಿ ಹೆಚ್ಚುತ್ತಿರುವುದರಿಂದ ಬೆಚ್ಚನೆ ಉಡುಪುಗಳಾದ ಸ್ವೆಟರ್, ಜಾಕೆಟ್, ಶಾಲು, ಕಾಲುಚೀಲ, ಕೈಚೀಲ, ಟೋಪಿ, ಕಿವಿ ಮುಚ್ಚುವ ಬಟ್ಟೆ ಸೇರಿದಂತೆ ದಪ್ಪನೆಯ ಹೊದಿಕೆಗಳಿಗೆ ಈಗ ಬೇಡಿಕೆ ಬಂದಿದೆ. ಹೀಗಾಗಿ ಇವುಗಳ ಬೆಲೆ ತುಸು ದುಬಾರಿಯಾದರೂ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಕೆಲ ಮಹಿಳೆಯರು ಚೆನ್ನಾಗಿ ಕಾಣಲು ಚಳಿಯಾದರೂ ಪರವಾಗಿಲ್ಲ ಎಂದು ಫ್ಯಾಷನ್ ಉಡುಪುಗಳನ್ನೇ ಧರಿಸುತ್ತಾರೆ. ಅಂಥ ಮಹಿಳೆಯರಿಗಾಗಿ ಚಳಿಗಾಲದ ಫ್ಯಾಷನ್ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಎಚ್ಚರವಾಗಿರುವಂತೆ ವೈದ್ಯರ ಸಲಹೆ
ಈ ಬೆಚ್ಚನೆಯ ಉಡುಪುಗಳು ನಗರದ ಪ್ರಮುಖ ಮಾಲ್ಗಳಲ್ಲಿ, ಡಿ.ದೇವರಾಜ ಅರಸು ರಸ್ತೆ, ಸಯ್ಯಜಿರಾವ್ ರಸ್ತೆಗಳಲ್ಲಿರುವ ಬಟ್ಟೆ ಮಳಿಗೆಗಳು, ನಗರ ವ್ಯಾಪ್ತಿಯ ಫುಟ್ಪಾತ್ಗಳಲ್ಲಿ ಹೆಚ್ಚಾಗಿ ವ್ಯಾಪಾರವಾಗುತ್ತಿವೆ. ಇದೆಲ್ಲದರ ನಡುವೆ ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಶೀತ, ಜ್ವರ ಬರುವ ಸಾಧ್ಯತೆಗಳಿವೆ. ದೇಹದ ಕೈ, ಕಾಲುಗಳ ಚರ್ಮ ಒಡೆಯುವ ಸಾಧ್ಯತೆಯಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ. ವಾತಾವರಣದ ಬದಲಾವಣೆಯಿಂದಾಗಿ ಮಕ್ಕಳಿಗೆ ನೆಗಡಿ, ಕೆಮ್ಮು, ಶೀತ, ಜ್ವರ ಬಾಧಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಬೆಚ್ಚನೆಯ ಉಡುಪುಗಳನ್ನು ಧರಿಸಿ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ವಾಯುಭಾರ ಕುಸಿತದ ಪರಿಣಾಮ ಮೈಸೂರಿಗೆ ಬೀರದೆ ಹೋಗಿದ್ದರೆ ಈ ಬಾರಿ ಈ ಸಮಯದಲ್ಲಿ ಮುಂಜಾನೆ ಮಂಜು ಮುಸುಕು ಹಾಸಿ ಅದರ ನಡುವೆ ತಣ್ಣಗೆ ಮೈನಡುಗಿಸುವ ಚಳಿಯಿರುತ್ತಿತ್ತು. ಸೂರ್ಯ ರಶ್ಮಿ ಸ್ಪರ್ಶಿಸುತ್ತಿದ್ದಂತೆಯೇ ಮೈಮನ ಆಹ್ಲಾದಗೊಳ್ಳುತ್ತಿತ್ತು. ಈ ಸುಂದರ ಕ್ಷಣಗಳನ್ನು ಅನುಭವಿಸಲು ಜನ ಮನೆಯಿಂದ ಹೊರಗೆ ಬರುತ್ತಿದ್ದರು. ಹಾಗೆಯೇ ಪ್ರವಾಸಿಗರು ಇತ್ತ ದೌಡಾಯಿಸುತ್ತಿದ್ದರು. ಆದರೆ ಈಗ ಅದ್ಯಾವುದೂ ಕಾಣದಂತಾಗಿದೆ.












Click it and Unblock the Notifications