ಪ್ರವಾಸಿಗರಿಗೆ ಸೂಚನೆ: ಇಂದಿನಿಂದ ಚಿಕ್ಕಮಗಳೂರಿನ ಗಿರಿಧಾಮಗಳು ಬಂದ್, ಇಲ್ಲಿದೆ ಸಂಪೂರ್ಣ ವಿವರ
ಚಿಕ್ಕಮಗಳೂರು, ಡಿಸೆಂಬರ್ 22: ಹೊಸ ವರ್ಷಕ್ಕೆ ಇನ್ನೇನು ಕೌಂಟ್ಡೌನ್ ಶುರುವಾಗಿದೆ. ವರ್ಷಾಂತ್ಯದಲ್ಲಿ ಚಿಕ್ಕಮಗಳೂರಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಹೀಗಾಗಿ ಈ ವಾರಂತ್ಯವೇ ಚಿಕ್ಕಮಗಳೂರು ಪ್ರವಾಸಕ್ಕೆ ತೆರಳುವ ಪ್ಲಾನ್ ಮಾಡಿದವರು ಈ ಸ್ಟೋರಿಯನ್ನು ಮಿಸ್ ಮಾಡದೇ ಓದಿ.
ಈ ವೀಕೆಂಡ್ ಅಂದರೆ ಡಿಸೆಂಬರ್ 23 ಹಾಗೂ ಡಿಸೆಂಬರ್ 24ರಂದು ಚಿಕ್ಕಮಗಳೂರಿನ ಕಡೆಗೆ ಪ್ರವಾಸ ಬೆಳೆಸಿದೆ ನಿಮಗೆ ನಷ್ಟ ಏಕೆಂದರೆ ಇಂದಿನಿಂದ ರಿಂದ 6 ದಿನಗಳ ಕಾಲ ಚಿಕ್ಕಮಗಳೂರು ಗಿರಿ ಭಾಗಕ್ಕೆ ಪ್ರವಾಸಿಗರ ಭೇಟಿಗೆ ನಿರ್ಭಂಧ ವಿಧಿಸಲಾಗಿದೆ.

ದತ್ತ ಜಯಂತಿ ಆಚರಣೆ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಇಂದಿನಿಂದ(ಡಿಸೆಂಬರ್ 22) ಡಿಸೆಂಬರ್ 27ರವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ, ದತ್ತಪೀಠದಲ್ಲಿ ಡಿಸೆಂಬರ್ 24, 25 ಮತ್ತು 26ರಂದು ದತ್ತಜಯಂತಿ ನಡೆಯಲಿರುವ ಕಾರಣ ಜಿಲ್ಲೆಯ ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.
ಒಟ್ಟು ಆರು ದಿನಗಳ ಕಾಲ ಜಿಲ್ಲಾಡಳಿತದಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ದತ್ತಪೀಠ, ಮಾಣಿಕ್ಯಾಧಾರಾ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಡಿಸೆಂಬರ್ 26ಕ್ಕೆ 20 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿಸೆಂಬರ್ 24 ರಿಂದ 3 ದಿನಗಳವರೆಗೆ ನಡೆಯಲಿರುವ ದತ್ತಜಯಂತಿಗೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಆಯೋಜನೆ ಮಾಡಲಾಗಿದ್ದು, ಇಲಾಖೆಯ ಸಾವಿರಾರು ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ.

ದತ್ತಪೀಠದ ಅರ್ಚಕರಿಗೆ ಗನ್ ಮ್ಯಾನ್ ನೇಮಕ
ಚಿಕ್ಕಮಗಳೂರು: ಡಿಸೆಂಬರ್ 17ರಿಂದ ಆರಂಭಗೊಂಡಿರುವ ದತ್ತ ಜಯಂತಿ ಡಿಸೆಂಬರ್ 26ರವರೆಗೆ ನಡೆಯಲಿದೆ. ಈ ಬಾರಿ ಅತ್ಯಂತ ಕಟ್ಟೆಚ್ಚರದಿಂದ ದತ್ತ ಜಯಂತಿ ಆಚರಣೆಗೆ ಪ್ಲಾನ್ ಮಾಡಿಕೊಂಡಲಾಗಿದೆ. ಇದರ ಭಾಗವಾಗಿ ಮುಂಜಾಗ್ರತಾ ಕ್ರಮವಾಗಿ ಅರ್ಚಕರು, ಮುಜಾವರ್ ಸೇರಿದಂತೆ ಐವರಿಗೆ ಪೊಲೀಸ್ ಇಲಾಖೆ ಗನ್ ಮ್ಯಾನ್ ನೇಮಕ ಮಾಡಿದೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ನೇಮಕವಾಗಿರುವ ಇಬ್ಬರು ಅರ್ಚಕರು ಸೇರಿದಂತೆ ಐವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಗನ್ ಮ್ಯಾನ್ಗಳನ್ನು ನೇಮಿಸಿದ್ದು, ದತ್ತಪೀಠ ವ್ಯವಸ್ಥಾಪನಾ ಸಮಿತಿಯ ಎಸ್.ಎಂ ಬಾಷಾ, ಅರ್ಚಕರಾದ ಶ್ರೀಧರ್ ಪೂಜಾರ್, ಶಿವರಾಂ ಭಟ್ ಹಾಗೂ ಮುಜಾವರ್ಗಳಾದ ಸೈಯದ್ ಅಖಿಲ್ ಪಾಷಾ ಹಾಗೂ ಇಸ್ಮಾಯಿಲ್ ಸೇರಿದಂತೆ ಐವರಿಗೆ ಗನ್ ಮ್ಯಾನ್ಗಳನ್ನು ನೇಮಿಸಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮುಂದಿನ ಹದಿನೈದು ದಿನಗಳ ಕಾಲ ದಿನದ 24 ಗಂಟೆಗಳ ಕಾಲವೂ ಐವರಿಗೆ ಭದ್ರತೆ ನೀಡುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications