ಮೈಸೂರಿನಲ್ಲಿ ಹೊಸ ವರ್ಷ ಆಚರಣೆ ಮಾಡಲು ಈ ಪ್ರವಾಸಿ ತಾಣಗಳೇ ಸೂಕ್ತ
ಮೈಸೂರು, ಡಿಸೆಂಬರ್, 19: ನೂತನ ವರ್ಷ ಸ್ವಾಗತಿಸಲು ಇನ್ನೇನು ದಿನಗಣನೆ ಶುರುವಾಗಿದೆ. ಹೊಸ ವರ್ಷ ಬಂದರೆ ಸಾಕು ಸಾಂಸ್ಕೃತಿಕ ನಗರಿ ಮೈಸೂರಿನ ಹಲವು ಪ್ರವಾಸಿ ತಾಣಗಳಿಗೆ ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಅರಮನೆ, ಮೃಗಾಲಯ, ಸೆಂಟ್ ಫಿಲೋಮಿನಾ ಚರ್ಚ್, ಚಾಮುಂಡಿ ಬೆಟ್ಟ ಹಾಗೂ ಕಬಿನಿ, ಕೆಆರ್ಎಸ್ ಹಿನ್ನೀರು ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವುದು ವಾಡಿಕೆಯಾಗಿದೆ.
ಕಳೆದ ಎರಡು ವರ್ಷದಿಂದ ಮಹಾಮಾರಿ ಕೋವಿಡ್ ಕಾರಣಕ್ಕಾಗಿ ಹೊಸ ವರ್ಷ ಆಚರಣೆಯನ್ನು ಸಾರ್ವಜನಿಕರು ಸರಳವಾಗಿ ಆಚರಿಸಿದ್ದರು. ಆದರೆ, ಈ ವರ್ಷ ಕೊರೊನಾ ಕ್ಷೀಣಿಸಿರುವುದರಿಂದ ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಲು ಪ್ರವಾಸಿಗರು ಸಜ್ಜಾಗಿದ್ದಾರೆ. ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳ ಐಟಿಬಿಟಿ ಉದ್ಯೋಗಿಗಳು ಮೈಸೂರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಾರೆ. ಈ ವೇಳೆ ಸಾಕಷ್ಟು ಹೋಟೆಲ್, ಲಾಡ್ಜ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್ಗಳು ಪ್ರವಾಸಿಗರಿಂದ ತುಂಬಿತುಳುಕುತ್ತವೆ.
ಹೊಸ ವರ್ಷಕ್ಕೆ ಟ್ರಿಪ್ ಪ್ಲಾನ್: ದಾವಣಗೆರೆಯ ಈ 5 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ
ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಚಾಮುಂಡಿ ಬೆಟ್ಟಕ್ಕೆ ಹೊಸ ವರ್ಷದ ದಿನ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಈಗಾಗಲೇ ಶೈಕ್ಷಣಿಕ ಪ್ರವಾಸದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಶಾಲೆಗಳ ಮಕ್ಕಳು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ನಿತ್ಯ ದಾಸೋಹ ಕೂಡ ನಡೆಯುತ್ತಿದೆ. ವರ್ಷದ ಮೊದಲ ದಿನ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರೆ ವರ್ಷವೆಲ್ಲಾ ನಿಮ್ಮ ಜೀವನ ಸುಖಕರವಾಗಿರುತ್ತದೆ ಎನ್ನುವ ಉದ್ದೇಶದಿಂದ ಜನರು ಬೆಟ್ಟಕ್ಕೆ ಆಗಮಿಸುತ್ತಾರೆ.
ಫೋಟೋಗ್ರಫಿಗೆ ಹೇಳಿ ಮಾಡಿಸಿದ ಜಾಗ ಇದಾಗಿದೆ
ಅದರಲ್ಲೂ ಮೈಸೂರು ಅಂದರೆ ಮೊದಲು ನೆನಪಿಗೆ ಬರುವುದು ಭವ್ಯವವಾದ ಅರಮನೆ ಆಗಿದೆ. ರಾಜ ಮಹಾರಾಜನರ ಕಾಲದ ಈ ಅರಮನೆಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಪ್ರತಿನಿತ್ಯ ಕಿಕ್ಕಿರಿದು ಬರುತ್ತಲೇ ಇರುತ್ತಾರೆ. ಹಾಗೆಯೇ ಇಲ್ಲಿ ಬಂದವರು ಸುಮ್ಮನೆ ಅಂತೂ ಹಿಂತಿರುಗುವುದಿಲ್ಲ. ಇಲ್ಲಿನ ಪ್ರತಿಯೊಂದು ಸ್ಥಳಗಳು ಕೂಡ ಒಂದೊಂದು ಇತಿಹಾಸವನ್ನು ಹೊಂದಿವೆ. ಆದ್ದರಿಂದ ಫೋಟೋಗ್ರಫಿ ಮಾಡುವವರಿಗೂ ಇದು ಹೇಳಿ ಮಾಡಿಸಿದ ಜಾಗವಾಗಿದೆ.
ಕಾರವಾರದಲ್ಲಿ ಹೊಸ ವರ್ಷ ಆಚರಣೆಗೆ ಪ್ರವಾಸಿ ತಾಣಗಳು, ಇಲ್ಲಿದೆ ವಿವರ
ಡಿ.31ರಂದು ಕಾರ್ಯಕ್ರಮಗಳ ಆಯೋಜನೆ
ಸಾಮಾನ್ಯವಾಗಿ ಕ್ರಿಸ್ಮಸ್ ನಂತರ ಸೆಂಟ್ ಫಿಲೋಮಿನಾ ಚರ್ಚ್ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ. ಡಿಸೆಂಬರ್ 31ರಂದು ಚರ್ಚ್ನಲ್ಲಿ ನಾನಾ ಕಾರ್ಯಕ್ರಮ ಆಯೋಜನೆಗೊಂಡಿರುತ್ತವೆ. ಹಾಗಾಗಿ ಕ್ಯಾಂಡಲ್ ಹಚ್ಚಿ ಬಹುತೇಕರು ಹೊಸ ವರ್ಷವನ್ನು ಸ್ವಾಗತಿಸಲು ಕಾತರರಾಗಿದ್ದಾರೆ.
ಕಿಕ್ಕಿರಿದು ಆಗಮಿಸುವ ಐಟಿಬಿಟಿ ನೌಕರರು
ಈ ಬಾರಿ ಹೊಸ ವರ್ಷ ಭಾನುವಾರ ಬಂದಿದೆ. ಹಾಗಾಗಿ ಬಹುತೇಕ ಐಟಿಬಿಟಿ ನೌಕರರು ವಾರಾಂತ್ಯ ಪ್ರವಾಸಕ್ಕೆ ಹೊರಡಲು ನಿರ್ಧಾರ ಮಾಡಿದ್ದಾರೆ. ನಾಗರಹೊಳೆ ಹಾಗೂ ಬಂಡೀಪುರಕ್ಕೆ ಆಗಮಿಸಿ ಸಫಾರಿ ಮಾಡುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಹಾಗಾಗಿ ಹೊಸ ವರ್ಷದ ದಿನ ನಾಗರಹೊಳೆ ಹಾಗೂ ಬಂಡೀಪುರ ತುಂಬಿ ತುಳುಕುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಬುಕ್ಕಿಂಗ್ ಕೂಡ ಶುರುವಾಗಿದೆ. ಆದ್ದರಿಂದ ಪ್ರವಾಸಿಗರು ಬುಕ್ಕಿಂಗ್ ಮಾಡಿ ಮುಂಚೆಯೇ ಇಲ್ಲಿನ ಪ್ರಕೃತಿ ಸೌಂಧರ್ಯವನ್ನು ಸವಿಯಲು ಕಾತರದಿಂದ ಕಾಯುತ್ತಿದ್ದಾರೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವವರಿಗೆ ಮಾಹಿತಿ
ಹೇಳಿಕೇಳಿ ಇದು ಚಳಿಗಾಲ. ಬೆಳಗ್ಗೆ 9 ಗಂಟೆಯಾದರೂ ಇಬ್ಬನಿಯ ವಾತಾರಣ ಇರುತ್ತದೆ. ಹಾಗಾಗಿ ಸಾಕಷ್ಟು ಜನ ಸದಾ ಹಿಮದಿಂದ ಕೂಡಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಆಲೋಚಿಸುತ್ತಿದ್ದಾರೆ. ಜೊತೆಗೆ ಮೈಸೂರಿನ ಮೃಗಾಲಯ, ಕಬಿನಿ ಹಾಗೂ ಕೆಆರ್ಎಸ್ ಹಿನ್ನೀರು ಪ್ರದೇಶಕ್ಕೆ ಹೋಗಲು ಕೂಡ ಪ್ಲಾನ್ ಹಾಕಿಕೊಂಡಿದ್ದಾರೆ.