ರಣ ಬಿಸಿಲಿಗೆ ಬೆಂಡಾದ ಗಡಿಜಿಲ್ಲೆ ಜನ, ಮತ್ತೊಂದೆಡೆ ರೋಗಿಗಳ ಪರದಾಟ
ಚಾಮರಾಜನಗರ, ಏಪ್ರಿಲ್, 04: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅದೇ ರೀತಿ ಈ ಹೊತ್ತಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಲೇ ಇದೆ. ಹಾಗಯೇ ಕಳೆದ 1 ವಾರದಿಂದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಇಲ್ಲಿನ ಜನರು ಹೈರಣಾಗಿದ್ದು, ಅಲ್ಲದೆ ಆಸ್ಪತ್ರೆಗೆ ತೆರಳುವ ರೋಗಿಗಳು ಕೂಡ ಬೇಗ ಸುಸ್ತಾಗುತ್ತಿರುವುದು ಕಂಡುಬಂದಿದೆ.
ಚಾಮರಾಜನಗರದಲ್ಲಿ ಕಳೆದ ಹಲವು ದಿನಗಳಿಂದ 37°-38° ದಾಖಲೆ ಮಟ್ಟದಲ್ಲಿ ತಾಪಮಾನ ದಾಖಲಾಗುತ್ತಿದ್ದು, ಮಧ್ಯಾಹ್ನದ ವೇಳೆ ಜನರು ಹೊರಕ್ಕೆ ಕಾಲಿಡಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ನಡುವೆ ಹವಾಮಾನ ಇಲಾಖೆ ಗಡಿಜಿಲ್ಲೆ ಚಾಮರಾಜನಗರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆ ಆಗಲಿದೆ ಎಂದು ಎಚ್ಚರಿಕೆ ಸಂದೇವನ್ನು ರವಾನಿಸಿದೆ.

ಇನ್ನು, ಈ ಬಗ್ಗೆ ಚಾಮರಾಜನಗರ ಡಿಎಚ್ಇ ಡಾ.ಚಿದಂಬರ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದ್ದು, ಜನರು ಎಚ್ಚರಿಕೆ ವಹಿಸುವುದು ಅಗತ್ಯ ಇದೆ. ಆಸ್ಪತ್ರೆಗೆ ಬರುವ ರೋಗಿಗಳು ಬಿಸಿಲಿನ ಧಗೆಗೆ ಬೆಂದು ಬೆಂಡಾಗಿರವ ದೃಶ್ಯಗಳು ಕಂಡುಬಂದಿದೆ. ನಿರಂತರವಾಗಿ ಬಿಸಿಲಿಗೆ ಮೈಯೊಡ್ಡುವ ಬದಲು ಆಗಾಗ್ಗೆ ನೆರಳನ್ನು ಆಶ್ರಯಿಸಬೇಕು. ಜೊತೆಗೆ ಸಾಧ್ಯವಾದಷ್ಟು ನೀರನ್ನು ಹೆಚ್ಚು ಕುಡಿಯಬೇಕು ಎಂದು ಸಲಹೆ ನೀಡಿದ್ದಾರೆ.
ಹಣ್ಣು, ಜ್ಯೂಸ್ ಅಂಗಡಿಗಳಿಗೆ ಜನವೋ ಜನ: ಇನ್ನು ಸೂರ್ಯನ ಶಾಖಕ್ಕೆ ಕಂಗೆಡುತ್ತಿರುವ ಜನರು ಹಣ್ಣು, ಎಳನೀರು, ಹಣ್ಣಿನ ಜ್ಯೂಸ್ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಮತ್ತೊಂದೆಡೆ ತಾಪಮಾನ ಹೆಚ್ಚಿದ ಹಿನ್ನೆಲೆ ನಿಂಬೆಹಣ್ಣಿನ ದರವೂ ಕೂಡ ಗಗನಕ್ಕೇರಿದ್ದು, ಇದರಿಂದ ವ್ಯಾಪಾಸ್ಥರು ದಂಗಾಗಿದ್ದಾರೆ.
ಕಳೆದ 2023ರಲ್ಲಿ ಮಳೆ ಇಲ್ಲದ ಕಾರಣ ಜನರು ಕಂಗಾಲಾಗಿದ್ದರು. ಹಾಗೆಯೇ ಇದೀಗ 2024ರ ಏಪ್ರಿಲ್ ಆರಂಭವಾಗಿದ್ದರೂ ಕೂಡ ಒಂದು ಹನಿಯೂ ಮಳೆ ಬಿದ್ದಿಲ್ಲ. ಇದರಿಂದ ಪ್ರತಿದಿನವೂ ತಾಪಮಾನದ ಪ್ರಮಾಣ ಹೆಚ್ಚಾಗುತ್ತಿದ್ದು, ಜನರು ಮೋಡದ ಕಡೆ ಮುಖ ಮಾಡಿ ಕೂತಿದ್ದಾರೆ. ಇನ್ನೂ ಈ ತಿಂಗಳೂಏನಾದರೂ ಮಳೆ ಬಾರದಿದ್ದರೆ ಏನೆಲ್ಲ ಕಷ್ಟಗಳು ಎದುರಾಗುತ್ತವೇಯೋ ಗೊತ್ತಿಲ್ಲ ಅಂತಿದ್ದಾರೆ ಇಲ್ಲಿನ ಜನರು. ಒಟ್ಟಿನಲ್ಲಿ ಗಡಿಜಿಲ್ಲೆ ಜನರು ಈ ವರ್ಷ ಬಿಸಿಲಿಗೆ ಹೈರಾಣಾಗಿದ್ದು, ಮಳೆಗಾಗಿ ಪರಿತಪಿಸುತ್ತಿದ್ದಾರೆ.












Click it and Unblock the Notifications