ಧಾರವಾಡ; ನಿರ್ಮಾಣವಾಗಲಿದೆ 11 ಕಿ. ಮೀ. ಹೊಸ ರೈಲು ಮಾರ್ಗ
ಧಾರವಾಡದ ಕ್ಯಾರಕೊಪ್ಪ-ಮಮ್ಮಿಗಟ್ಟಿ ನಡುವೆ ಹೊಸ ರೈಲು ಮಾರ್ಗವನ್ನು ಭಾರತೀಯ ರೈಲ್ವೆ ನಿರ್ಮಾಣ ಮಾಡಲಿದೆ.
ಧಾರವಾಡ, ಫೆಬ್ರವರಿ 13; ಭಾರತೀಯ ರೈಲ್ವೆ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಯೋಜನೆ ಭಾಗವಾಗಿ ಕ್ಯಾರಕೊಪ್ಪ-ಮಮ್ಮಿಗಟ್ಟಿ ನಡುವೆ ಹೊಸ ಮಾರ್ಗ ನಿರ್ಮಾಣ ಮಾಡಲಿದೆ.
ಈ ನೂತನ ಬ್ರಾಡ್ ಗೇಜ್ ಮಾರ್ಗ 11.70 ಕಿ. ಮೀ. ಇರಲಿದೆ. ಇಪಿಸಿ (ಎಂಜಿನಿಯರಿಂಗ್, ಪ್ರೊಕ್ಯುರ್ಮೆಂಟ್ ಆ್ಯಂಡ್ ಕನ್ಸ್ಟ್ರಕ್ಷನ್) ಮಾದರಿಯಲ್ಲಿ ಮಾರ್ಗ ನಿರ್ಮಾಣಕ್ಕೆ ಟಂಡರ್ ಆಹ್ವಾನಿಸಲಾಗಿದೆ.
ಹೊಸ ಬ್ರಾಡ್ ಗೇಜ್ ಮಾರ್ಗ, ವಿದ್ಯುದೀಕರಣ ಕೆಲಸಗಳು ಈ ಟೆಂಡರ್ನಲ್ಲಿ ಒಳಗೊಂಡಿವೆ. ಈ ಮಾರ್ಗ 73.10 ಕಿ. ಮೀ. ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗದ ಯೋಜನೆಯಡಿ ಬರುತ್ತದೆ.

ಈ ಹೊಸ ಮಾರ್ಗದ ನಿರ್ಮಾಣಕ್ಕೆ 243.66 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 11.70 ಕಿ. ಮೀ. ಮಾರ್ಗದಲ್ಲಿ ಗಂಟೆಗೆ ರೈಲು 160 ಕಿ. ಮೀ. ವೇಗದಲ್ಲಿ ಸಾಗುವಂತೆ ಹಳಿಗಳನ್ನು ಜೋಡಣೆ ಮಾಡಲಾಗುತ್ತದೆ.
ಹೊಸ ರೈಲು ಮಾರ್ಗವನ್ನು 24 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 11 ಚಿಕ್ಕ ಸೇತುವೆಗಳು, 19 ಕೆಳ ಮತ್ತು ಮೇಲ್ಸೆತುವೆಗಳು, 1 ರೈಲ್ವೆ ಲೆವೆಲ್ ಕ್ರಾಸಿಂಗ್ ಅನ್ನು ಈ ಮಾರ್ಗ ಒಳಗೊಂಡಿದೆ.
ಪ್ರಸ್ತಾವಿತ ರೈಲು ಮಾರ್ಗದಿಂದ ಧಾರವಾಡ-ಬೆಳಗಾವಿ ನಡುವಿನ ಅಂತರ ಕಡಿಮೆಯಾಗಲಿದೆ. ಇದು ಒಂದು ಹಳಿಯ ಮಾರ್ಗವಾಗಿದೆ. ಈ ಮಾರ್ಗದ ಮೂಲಕ ಕ್ಯಾರಕೊಪ್ಪದಿಂದ ಹುಬ್ಬಳ್ಳಿ-ವಾಸ್ಕೋ ಮುಖ್ಯ ಮಾರ್ಗಕ್ಕೆ ಸಂಪರ್ಕ ಕಲ್ಪಿಸಬಹುದಾಗಿದೆ.

ಧಾರವಾಡ-ಬೆಳಗಾವಿ ನೇರ ಮಾರ್ಗ; ಧಾರವಾಡ ಮತ್ತು ಬೆಳಗಾವಿ ನಡುವಿನ ನೇರ ರೈಲು ಮಾರ್ಗ ಎರಡೂ ಜಿಲ್ಲೆಗಳ ಜನರ ದಶಕಗಳ ಬೇಡಿಕೆಯಾಗಿದೆ. ಬೆಳಗಾವಿ ಸಂಸದರಾಗಿದ್ದ ಸುರೇಶ್ ಅಂಗಡಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ಯೋಜನೆಗೆ ಮನ್ನಣೆ ನೀಡಿದರು. ಹುಬ್ಬಳ್ಳಿ-ಧಾರವಾಡ-ಬೆಳಗಾವಿ ತ್ರಿವಳಿ ನಗರವನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಕೊಡಿಸಿದರು.
ರಾಜ್ಯ ಸರ್ಕಾರವು ಯೋಜನೆಗೆ ಒಪ್ಪಿಗೆ ನೀಡಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಯೋಜನೆಯ ಅನುದಾನ ಹಂಚಿಕೆಯೂ ಆಯಿತು. ಕೋವಿಡ್ ಸೋಂಕು ತಗುಲಿದ್ದ ಸುರೇಶ್ ಅಂಗಡಿ ನಿಧನ ಹೊಂದಿದರು. ಯೋಜನೆಗೆ ಇನ್ನೂ ಶಂಕುಸ್ಥಾಪನೆ ಆಗಿಲ್ಲ.
ಭೂ ಸ್ವಾಧೀನದ ವಿಚಾರದಲ್ಲಿ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಯೋಜನೆ ವಿವಾದಕ್ಕೆ ಕಾರಣವಾಯಿತು. ಫಲವತ್ತಾದ ಕೃಷಿ ಜಮೀನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ವಿಚಾರದ ಗೊಂದಲ ಉಂಟಾಗಿ ಹೊಸದಾಗಿ ಮಾರ್ಗದ ಸಮೀಕ್ಷೆ ನಡೆಯಿತು. ಯೋಜನೆ ಯಾವಾಗ ಆರಂಭವಾಗಲಿದೆ? ಎಂಬ ಖಚಿತ ಮಾಹಿತಿ ಇನ್ನೂ ಇಲ್ಲವಾಗಿದೆ.
2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 73 ಕಿ. ಮೀ.ಯ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಯೋಜನೆಗೆ 10 ಕೋಟಿ ರೂ. ಅನುದಾನ ನೀಡಿದ್ದಾರೆ.
335 ಎಕರೆ ಭೂಮಿ; ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗಕ್ಕೆ ಸುಮಾರು 335 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. 927.40 ಕೋಟಿ ರೂ.ಗಳ ವೆಚ್ಚದಲ್ಲಿ ಈ ರೈಲು ಮಾರ್ಗ ನಿರ್ಮಾಣವಾಗುತ್ತಿದೆ.
ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ರೈಲ್ವೆಗೆ ಭೂಮಿ ಹಸ್ತಾಂತರ ಮಾಡಿದ ಬಳಿಕ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಧಾರವಾಡ-ಬೆಳಗಾವಿ ನಡುವೆ ನೇರ ರೈಲು ಮಾರ್ಗ ಇಲ್ಲದ ಕಾರಣ ಲೋಂಡಾ ಮಾರ್ಗವಾಗಿ ಸಾಗಲು ಸುಮಾರು 3 ಗಂಟೆ ಬೇಕಾಗುತ್ತಿದೆ. ಕಿತ್ತೂರು ಮೂಲಕ ಹೊಸ ಮಾರ್ಗವಾದರೆ ಉಭಯ ನಗರಗಳ ನಡುವೆ 1 ಗಂಟೆಯಲ್ಲಿ ಸಂಚಾರ ನಡೆಸಬಹುದಾಗಿದೆ.
ಈ ಮಾರ್ಗ ನಿರ್ಮಾಣಗೊಂಡರೆ ರೈಲು ಕ್ಯಾರಕೊಪ್ಪ, ಮಮ್ಮಿಗಟ್ಟಿ, ತೇಗೂರ, ಕಿತ್ತೂರ, ಹುಲಿಕಟ್ಟಿ, ಎಂ. ಕೆ. ಹುಬ್ಬಳ್ಳಿ, ಬಾಗೇವಾಡಿ, ಕಣವಿಕುರವಿನಕೊಪ್ಪ, ದೇಸೂರ ಮಾರ್ಗವಾಗಿ ಸಂಚಾರ ನಡೆಸಲಿದೆ.












Click it and Unblock the Notifications