ದಸರಾ ಮುಗಿದರೂ ಮೈಸೂರಿನತ್ತ ಪ್ರವಾಸಿಗರ ದಂಡು; ಬೆಟ್ಟಕ್ಕೆ ಆಗಮಿಸಿದ ಜನಸಾಗರ
ಮೈಸೂರು, ಅಕ್ಟೋಬರ್, 09: ದಸರಾ ಉತ್ಸವ ಮುಗಿದರೂ ಕೂಡ ಸಾಂಸ್ಕೃತಿಕ ನಗರಿಗೆ ಬರುವ ಪ್ರವಾಸಿಗರ ಸಂಖ್ಯೆ ಮಾತ್ರ ಇನ್ನು ಕಡಿಮೆ ಆಗಿಲ್ಲ. ವಾರಗಳ ಕಾಲ ಪ್ಲ್ಯಾನ್ ಮಾಡಿಕೊಂಡು ಪ್ರವಾಸಿಗರು ಮೈಸೂರಿಗೆ ಬಂದ ಕಾರಣ ಭಾನುವಾರದವರೆಗೂ ಶೇಕಡಾ 80 ಷ್ಟು ಹೋಟೆಲ್ ಹಾಗೂ ಲಾಡ್ಜ್ಗಳು ಬುಕ್ಕಿಂಗ್ ಆಗಿವೆ.
ಕಳೆದ ಎರಡು ವರ್ಷ ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವ ಸರಳವಾಗಿ ನಡೆದಿತ್ತು. ಹಾಗಾಗಿ ಈ ವೇಳೆ ವ್ಯಾಪಾರ, ವಹಿವಾಟು ಮತ್ತು ಪ್ರವಾಸೋದ್ಯಮ ನೆಲಕಚ್ಚಿತ್ತು. ಆದರೆ ಈ ಬಾರಿ ಸರ್ಕಾರದಿಂದ ಅದ್ಧೂರಿ ದಸರಾ ಆಚರಣೆ ಮಾಡಿದ ಪರಿಣಾಮ ಪ್ರವಾಸೋದ್ಯಮ ಚೇತರಿಕೆಗೆ ಅವಕಾಶ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಪ್ರವಾಸಿಗರು ಸುತ್ತಾಡುತ್ತಿದ್ದಾರೆ.
ಜಂಬೂ ಸವಾರಿ ಯಶಸ್ವಿಗೊಳಿಸಿ ರಿಲ್ಯಾಕ್ಸ್ ಮೂಡ್ಗೆ ತೆರಳಿದ ಗಜಪಡೆ
ಇನ್ನು ಮೈಸೂರಿನತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ಚಾಮುಂಡಿಬೆಟ್ಟ, ಅರಮನೆ, ಮೃಗಾಲಯದಲ್ಲಿ ಜನಸಾಗರ ಕಂಡು ಬಂದಿತ್ತು. ಬುಧವಾರ ದಸರಾ ಜಂಬೂಸವಾರಿ ಹಿನ್ನೆಲೆಯಲ್ಲಿ ಸಾಕಷ್ಟು ಜನ ವಾರಗಳ ಕಾಲ ಪ್ಲ್ಯಾನ್ ಮಾಡಿಕೊಂಡು ಮೈಸೂರಿಗೆ ಆಗಮಿಸಿದ್ದಾರೆ. ಹಾಗಾಗಿ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡಿದರು. ಅತ್ತ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಉದ್ಯಾನದಲ್ಲೂ ಸಫಾರಿ ಪ್ರಿಯರು ಕಂಡು ಬಂದರು.
ಬೃಂದಾವನ & ಕೆಆರ್ಎಸ್ ಹಿನ್ನೀರಿನ ವೈಭವ
ನಾಗರಹೊಳೆಯ ದಮ್ಮನಕಟ್ಟೆಯಲ್ಲಿ ಹೆಚ್ಚು ಹುಲಿಗಳ ದರ್ಶನ ಆಗುವುದರಿಂದ ಪ್ರವಾಸಿಗರು ಬೀಡುಬಿಟ್ಟಿದ್ದರು. ಅಲ್ಲದೆ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಗಳಿಗೂ ಬೇಡಿಕೆ ಹೆಚ್ಚಾಗಿತ್ತು. ಬೃಂದಾವನ ಹಾಗೂ ಕೆಆರ್ಎಸ್ ಹಿನ್ನೀರಿನ ಪ್ರದೇಶದಲ್ಲೂ ಪ್ರವಾಸಿಗರು ದಂಡೇ ನೆರೆದಿತ್ತು. ''ಮೈಸೂರು ಮೃಗಾಲಯವು ದಸರಾ ಸಮಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕಿತು. ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಕುಟುಂಬ ಸಮೇತ ಆಗಮಿಸಿದ ಜನರು ಪ್ರಾಣಿಪಕ್ಷಿಗಳನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿತ್ತು'' ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
Wodeyar Express : ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ಪ್ರೆಸ್ ಎಂದು ಮರು ನಾಮಕರಣ
ಪ್ರವಾಸಿಗರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ
ದಸರಾ ಮಹೋತ್ಸವ ಮುಗಿದ ಬೆನ್ನಲ್ಲೇ ನಾಡದೇವಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ಜನರು ಮುಗಿಬಿದ್ದಿದ್ದರು. ಜಂಬೂ ಸವಾರಿ ನೋಡಲು ಮೈಸೂರಿಗೆ ಆಗಮಿಸಿದ್ದ ಜನರು ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ವಿಶೇಷ ಪ್ರವೇಶ, ಸಾಮಾನ್ಯ ಪ್ರವೇಶ ದ್ವಾರಗಳಲ್ಲಿ ಕಿಲೋ ಮೀಟರ್ಗಟ್ಟಲೇ ಜನರು ಸರದಿಯಲ್ಲಿ ನಿಂತಿದ್ದು, ಭಾನುವಾರ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ದಸರಾ ದೀಪಾಲಂಕಾರ ವೀಕ್ಷಣೆಗೆ ಇನ್ನೂ 10 ದಿನಗಳ ಅವಕಾಶ ಇದ್ದು, ಭಾನುವಾರ ಬೆಟ್ಟದಲ್ಲಿ ತೇರು ಇರುವ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಮೃಗಾಲಯಕ್ಕೆ ಬಂದ ಪ್ರವಾಸಿಗರ ದಂಡು
ಕಳೆದ ಹತ್ತು ದಿನಗಳಲ್ಲಿ 1.55 ಲಕ್ಷ ಪ್ರವಾಸಿಗರು ಮೃಗಾಲಯ ವೀಕ್ಷಣೆ ಮಾಡಿದ್ದಾರೆ. ವಿಜಯದಶಮಿಯಂದು ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ 30,420 ಪ್ರವಾಸಿಗರು ಭೇಟಿ ಕೊಟ್ಟಿದ್ದು, 35,92,100 ರೂಪಾಯಿ ಸಂಗ್ರಹವಾಗಿದೆ. ಇದರಿಂದ ಮೃಗಾಲಯ ಆದಾಯವೂ ದ್ವಿಗುಣಗೊಂಡಿದೆ ಎಂದು ಅಲ್ಲಿನ ಮೂಲಗಳಿಂದ ತಿಳಿದುಬಂದಿದೆ.
ಟ್ವಿಟರ್ನಲ್ಲಿ ಮೈಸೂರು ಜನತೆಗೆ ಶ್ಲಾಘನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಕಾಳನಾಥ ಭಟ್ ಎಂಬುವವರು ದಸರಾ ಜಂಬೂಸವಾರಿ ಫೋಟೋವನ್ನು ಟ್ವೀಟ್ ಮಾಡಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದರು. ಇದನ್ನು ರೀ ಟ್ವೀಟ್ ಮಾಡಿರುವ ಮೋದಿ, ''ಮೈಸೂರು ದಸರಾ ಅದ್ಭುತವಾಗಿದೆ. ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸುಂದರವಾಗಿ ಉಳಿಸಿಕೊಂಡಿರುವ ಮೈಸೂರಿನ ಜನತೆಯನ್ನು ನಾನು ಶ್ಲಾಘಿಸುತ್ತೇನೆ ಎಂದು ನಾಡಹಬ್ಬ ದಸರೆಯನ್ನು ಹಾಡಿ ಹೊಗಳಿದ್ದಾರೆ.