Vande Bharat; ಬೆಳಗಾವಿಗೆ ವಂದೇ ಭಾರತ್ ರೈಲು, ಸಚಿವರ ಭೇಟಿ
ಬೆಳಗಾವಿ, ಸೆಪ್ಟೆಂಬರ್ 19; ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಕರ್ನಾಟಕದಲ್ಲಿ ಭಾರೀ ಬೇಡಿಕೆ ಇದೆ. ಸದ್ಯ ಎರಡು ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸುತ್ತಿದೆ. ಬೆಳಗಾವಿಗೆ ವಂದೇ ಭಾರತ್ ರೈಲು ಬೇಕು ಎನ್ನುವ ಬೇಡಿಕೆ ಜೋರಾಗಿ ಕೇಳಿ ಬರುತ್ತಿದೆ.
ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತು ಸಂಸದ ಕೆ. ನಾರಾಯಣ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ರನ್ನು ಭೇಟಿ ಮಾಡಿದರು. ಬೆಳಗಾವಿ-ಗೋವಾ ಫಾಸ್ಟ್ ಪ್ಯಾಸೆಂಜರ್ & ಬೆಳಗಾವಿ-ಪುಣೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭಿಸಬೇಕು ಎಂದು ಮನವಿ ಸಲ್ಲಿಕೆ ಮಾಡಿದರು.

ಕರ್ನಾಟಕದಲ್ಲಿ 10 ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲಾಗುತ್ತದೆ ಎಂಬ ಮಾಹಿತಿ ಇದೆ. ಆದರೆ ಯಾವ ಮಾರ್ಗದಲ್ಲಿ ಓಡಿಸಲಾಗುತ್ತದೆ? ಎಂಬುದು ಇನ್ನೂ ಖಚಿತವಾಗಿಲ್ಲ. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಸಹ ಬೇಡಿಕೆ ಇಡಲಾಗಿತ್ತು.
ಫೇಸ್ಬುಕ್ ಪೋಸ್ಟ್; ರೈಲ್ವೆ ಸಚಿವರ ಭೇಟಿ ಕುರಿತು ಈರಣ್ಣ ಕಡಾಡಿ ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ. 'ನವದೆಹಲಿಯಲ್ಲಿ ಇಂದು ಕೇಂದ್ರ ರೈಲ್ವೆ ಸಚಿವರಾದ ಶ್ರೀ Ashwini Vaishnaw ಅವರನ್ನು ಭೇಟಿಯಾಗಿ, ಬೆಳಗಾವಿ- ಗೋವಾ ಫಾಸ್ಟ್ ಪ್ಯಾಸೆಂಜರ್ & ಬೆಳಗಾವಿ-ಪುಣೆ ವಂದೇ ಭಾರತ್ ರೈಲನ್ನು ಪ್ರಾರಂಭಿಸಲು ಒತ್ತಾಯಿಸಲಾಯಿತು' ಎಂದು ಹೇಳಿದ್ದಾರೆ.
'ಕಿತ್ತೂರಿನಲ್ಲಿ ರೈಲು ಬಿಡಿಭಾಗಗಳ ತಯಾರಿಕೆಗೆ ಕಾರ್ಖಾನೆ ಪ್ರಾರಂಭಿಸುವುದು ಮತ್ತು ಮುಂಬೈ-ಗದಗ ರೈಲನ್ನು ಬಳ್ಳಾರಿವರೆಗೆ ವಿಸ್ತರಿಸಲು ವಿನಂತಿಸಲಾಯಿತು. ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ' ಎಂದು ಪೋಸ್ಟ್ನಲ್ಲಿ ಹೇಳಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ರೈಲ್ವೆ ಇಲಾಖೆಯ ಸುತ್ತೋಲೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನೈಋತ್ಯ ರೈಲ್ವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲು ಬೇಕಾದ ಮೂಲಸೌಕರ್ಯ ಒದಗಿಸಲು ಹೊರಡಿಸಿದ ಸುತ್ತೋಲೆ ಇದಾಗಿತ್ತು. ಇದರಲ್ಲಿ ಕರ್ನಾಟಕದಲ್ಲಿ 10 ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲಾಗುತ್ತದೆ ಎಂಬ ಮಾಹಿತಿ ಇತ್ತು.
ಈ 10 ಮಾರ್ಗಗಳ ಪೈಕಿ ಬೆಂಗಳೂರು-ಬೆಳಗಾವಿ ಮಾರ್ಗವು ಸೇರಿತ್ತು. ಈಗ ಸಂಸದ ಈರಣ್ಣ ಕಡಾಡಿ ರೈಲ್ವೆ ಸಚಿವರನ್ನು ಭೇಟಿಯಾಗಿ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು ಓಡಿಸಬೇಕು ಎಂದು ಮನವಿ ಮಾಡಿದ್ದಾರೆ. ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿಯನ್ನು ಹಂಚಿಕೊಂಡಿವೆ. ದಿನನಿತ್ಯ ನೂರಾರು ಜನರು ಉಭಯ ರಾಜ್ಯಗಳ ನಡುವೆ ಸಂಚಾರ ನಡೆಸುತ್ತಾರೆ.
ಭಾರತೀಯ ರೈಲ್ವೆ ಈಗ 16 ಮತ್ತು 8 ಬೋಗಿಯ ವಂದೇ ಭಾರತ್ ರೈಲುಗಳನ್ನು ಓಡಿಸುತ್ತಿದೆ. ರೈಲುಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರು ಮಾಡಲಾಗುತ್ತದೆ. ಹೊಸ ರೈಲು ಬೋಗಿ ಲಭ್ಯತೆಯ ಆಧಾರದ ಮೇಲೆ ವಿವಿಧ ರಾಜ್ಯಗಳಿಗೆ ರೈಲುಗಳನ್ನು ಹಂಚಿಕೆ ಮಾಡಲಾಗುತ್ತದೆ.
ಸದ್ಯ ಕೇಸರಿ ಬಣ್ಣದ ವಂದೇ ಭಾರತ್ ರೈಲನ್ನು ತಯಾರು ಮಾಡಿದ್ದು, ಅದು ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ. ವಿಧಾನಸಭೆ ಚುನಾವಣೆ ಎದುರಾಗುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ. ಆದ್ದರಿಂದ ಬೆಳಗಾವಿ-ಪುಣೆ ರೈಲಿಗೆ ಶೀಘ್ರವೇ ಅನುಮತಿ ಸಿಗಲಿದೆಯೇ? ಎಂದು ಕಾದು ನೋಡಬೇಕು.
ಕರ್ನಾಟಕದಲ್ಲಿ ಸದ್ಯ ಬೇಡಿಕೆ ಇರುವ ಮಾರ್ಗಗಳು
* ಬೆಂಗಳೂರು-ಬೆಳಗಾವಿ
* ಬೆಂಗಳೂರು-ಹೊಸಪೇಟೆ
* ಬೆಂಗಳೂರು-ಕಾಚಿಗುಡ
* ಬೆಂಗಳೂರು-ಕೊಯಮತ್ತೂರು
* ಬೆಂಗಳೂರು-ತಿರುಪತಿ
* ಬೆಂಗಳೂರು-ಮುಧುರೈ
* ಬೆಂಗಳೂರು-ಪುದುಚೇರಿ
* ಬೆಂಗಳೂರು-ಕಲಬುರಗಿ
* ಬೆಂಗಳೂರು-ಶಿವಮೊಗ್ಗ
* ಬೀದರ್-ಹುಬ್ಬಳ್ಳಿ
2022ರ ನವೆಂಬರ್ನಲ್ಲಿ ಕರ್ನಾಟಕದಲ್ಲಿ ಮೊದಲ ವಂದೇ ಭಾರತ್ ರೈಲು ಬಂದಿತು. ಮೈಸೂರು-ಚೆನ್ನೈ ಸೆಂಟ್ರಲ್ ವಯಾ ಬೆಂಗಳೂರು ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. 2023ರಲ್ಲಿ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿಗೆ ಚಾಲನೆ ನೀಡಲಾಯಿತು. ಈ ಎರಡೂ ರೈಲಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.












Click it and Unblock the Notifications