KSRTC: ಒಡಿಶಾಗೆ ಬೆಂಗಳೂರಿಂದ ಕೆಎಸ್ಆರ್ಟಿಸಿ ಬಸ್, ಪುರಿ ಜಗನ್ನಾಥ ಭಕ್ತರಿಗೆ ಅನುಕೂಲ
ಬೆಂಗಳೂರು, ಸೆಪ್ಟೆಂಬರ್ 17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬೆಂಗಳೂರು ನಗರದಿಂದ ಒಡಿಶಾ ರಾಜ್ಯದ ಮೂರು ನಗರಗಳಿಗೆ ಶೀಘ್ರವೇ ಬಸ್ ಸಂಚಾರವನ್ನು ಆರಂಭಿಸಲಿದೆ. 1000ಕ್ಕೂ ಅಧಿಕ ಕಿ. ಮೀ. ಉದ್ದದ ಮಾರ್ಗದಲ್ಲಿ ಬಸ್ ಸಂಚಾರ ನಡೆಸಲಿದ್ದು, ನಿಗಮದ ಅತಿ ಉದ್ದದ ಬಸ್ ಮಾರ್ಗವಿದು ಎಂಬ ಹೆಗ್ಗಳಿಕೆ ಸಿಗಲಿದೆ. ಉದ್ಯಾನ ನಗರಿ ಬೆಂಗಳೂರಿನಿಂದ ಪುರಿ ಜಗನ್ನಾಥ ದೇವಾಲಯಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿಯೇ ಭಕ್ತರು ಸಂಚಾರ ನಡೆಸಬಹುದಾಗಿದೆ.
ಕೆಎಸ್ಆರ್ಟಿಸಿ ಒಡಿಶಾ ರಾಜ್ಯದ ಪುರಿ, ಭುವನೇಶ್ವರ ಮತ್ತು ಕಟಕ್ ನಗರಗಳಿಗೆ ಬೆಂಗಳೂರಿನಿಂದ ಬಸ್ ಸೇವೆಯನ್ನು ಶೀಘ್ರವೇ ಆರಂಭಿಸಲಿದೆ. ಈ ಬಸ್ ಸೇವೆಗಳಿಗೆ ಇರುವ ಬೇಡಿಕೆ ಗಮನಿಸಿರುವ ನಿಗಮ ಪ್ರಾಯೋಗಿಕವಾಗಿ ಬಸ್ ಸಂಚಾರ ಆರಂಭಿಸಲು ಮುಂದಾಗಿದೆ. ಇದಕ್ಕಾಗಿ ಐಷಾರಾಮಿ ಅಂಬಾರಿ ಉತ್ಸವ ಮಾದರಿಯ ಸ್ಲೀಪರ್ ಬಸ್ಗಳನ್ನು ಬಳಕೆ ಮಾಡಲಾಗುತ್ತದೆ.

ಸುಮಾರು 1,500 ಕಿ. ಮೀ. ಉದ್ದದ ಬಸ್ ಮಾರ್ಗ ಇದಾಗಿದ್ದು, ಐಷಾರಾಮಿ ಅಂಬಾರಿ ಉತ್ಸವ ಮಾದರಿಯ ಬಸ್ನಲ್ಲಿಯೇ 18 ಗಂಟೆಗಳ ಕಾಲ ಪ್ರಯಾಣ ಮಾಡಬೇಕಿದೆ. ಈ ಪ್ರಯೋಗ ಯಶಸ್ವಿಯಾದರೆ ಗುಜರಾತ್ ರಾಜ್ಯದ ಕೆಲವು ನಗರಗಳಿಗೆ ಸಹ ಬಸ್ ಸಂಪರ್ಕವನ್ನು ಕಲ್ಪಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಪುರಿ ಜಗನ್ನಾಥ ದರ್ಶನಕ್ಕೆ ಅನುಕೂಲ: ಸದ್ಯ ಕೆಎಸ್ಆರ್ಟಿಸಿ ಬೆಂಗಳೂರು-ಮುಂಬೈ, ಬೆಂಗಳೂರು-ಶಿರಡಿ ನಡುವೆ ಐಷಾರಾಮಿ ಬಸ್ ಸೇವೆ ಒದಗಿಸುತ್ತಿದೆ. ಈ ಮಾರ್ಗದ ಬಸ್ಗಳು ಸುಮಾರು 1000 ಕಿ. ಮೀ. ಸಂಚಾರ ನಡೆಸುತ್ತಿವೆ. ಆದರೆ ಒಡಿಶಾ ರಾಜ್ಯದ ಮೂರು ಪ್ರಮುಖ ನಗರಗಳು ಇದಕ್ಕಿಂತ ದೂರ ಇದೆ. ಆದರೆ ಈ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸುವಂತೆ ಬೇಡಿಕೆ ಹೆಚ್ಚಾಗಿದೆ.
ಈಗಾಗಲೇ ಖಾಸಗಿ ಬಸ್ಗಳು ಬೆಂಗಳೂರು ನಗರದಿಂದ ಪುರಿ, ಭುವನೇಶ್ವರ ಮತ್ತು ಕಟಕ್ಗೆ ಬಸ್ ಸೇವೆಯನ್ನು ನೀಡುತ್ತಿದೆ. ಆದರೆ ದರಗಳು ಅಧಿಕವಾದ ಕಾರಣ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಬಹುದು ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು. ಈಗ ಪ್ರಾಯೋಗಿಕವಾಗಿ ಬಸ್ ಸಂಚಾರ ಆರಂಭಿಸಲು ನಿಗಮ ಮುಂದಾಗಿದ್ದು, ಕೆಲವೇ ದಿನಗಳಲ್ಲಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ.
ಬೆಂಗಳೂರು-ಪುರಿ ನಡುವೆ ನೇರ ಬಸ್ ಸಂಪರ್ಕವಿಲ್ಲ. ಆದ್ದರಿಂದ ಪುರಿ ಜಗನ್ನಾಥ ದರ್ಶನಕ್ಕೆ ತೆರಳುವ ಭಕ್ತರಿಗೆ ಅನಾನುಕೂಲವಾಗಲಿದೆ. ಈಗ ಕಡಿಮೆ ದರದ ಬಸ್ ಸೇವೆ ಆರಂಭಿಸಿದರೆ ಅನುಕೂಲವಾಗಲಿದೆ ಎಂಬುದು ಭಕ್ತರ ಬೇಡಿಕೆಯಾಗಿದೆ. ಕೆಎಸ್ಆರ್ಟಿಸಿ ಹಲವು ಸುತ್ತಿನ ಚರ್ಚೆಯ ಬಳಿಕ ಬಸ್ ಸೇವೆ ಆರಂಭಿಸಲು ತಯಾರಿ ನಡೆಸಿದೆ.
ಈಗಾಗಲೇ ಬೆಂಗಳೂರು ನಗರದಿಂದ ಆರಂಭಿಸಿರುವ ದೂರದ ಮಾರ್ಗಗಳು ಲಾಭದಲ್ಲಿದೆ. ಇದೇ ಮಾದರಿಯಲ್ಲಿ ಬೆಂಗಳೂರು-ಪುರಿ, ಬೆಂಗಳೂರು-ಕಟಕ್ ಮತ್ತು ಬೆಂಗಳೂರು-ಭುವನೇಶ್ವರ ಬಸ್ ಮಾರ್ಗವೂ ಆದಾಯ ತಂದುಕೊಡಲಿದೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. ಐಷಾರಾಮಿ ಬಸ್ಗಳನ್ನು ಬಳಕೆ ಮಾಡುವುದರಿಂದ ಜನರನ್ನು ಸಹ ಸೆಳೆಯಬಹುದು ಎಂಬುದು ಲೆಕ್ಕಾಚಾರವಾಗಿದೆ.
ಸದ್ಯದ ಮಾಹಿತಿ ಪ್ರಕಾರ ಕೆಎಸ್ಆರ್ಟಿಸಿ ಈ ಮಾರ್ಗದಲ್ಲಿ ಎರಡು ಬಸ್ಗಳನ್ನು ಓಡಿಸಲಿದೆ. ಈ ಬಸ್ಗಳು ಜೈವಿಕ ಶೌಚಾಲಯ ವ್ಯವಸ್ಥೆಯನ್ನು ಒಳಗೊಂಡಿವೆ. ಈ ಮಾರ್ಗದ ಪ್ರಯಾಣದರ 2,500 ರಿಂಧ 2,800 ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಯಾವಾಗ ಬಸ್ ಸೇವೆ ಆರಂಭವಾಗಲಿದೆ? ಎಂಬ ಕುರಿತು ಇನ್ನೂ ಮಾಹಿತಿ ತಿಳಿದಿಲ್ಲ.












Click it and Unblock the Notifications