ಕೊಲ್ಲೂರು-ಕೊಡಚಾದ್ರಿ ರೋಪ್-ವೇ; ಕೇಂದ್ರ ತಂಡದ ಸ್ಥಳ ಪರಿಶೀಲನೆ
ಕೇಂದ್ರ ಸರ್ಕಾರ ಕೊಲ್ಲೂರು-ಕೊಡಚಾದ್ರಿ ನಡುವಿನ ರೋಪ್-ವೇ ಯೋಜನೆಗೆ ಒಪ್ಪಿಗೆ ನೀಡಿದೆ. 2022-23ನೇ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಿದ್ದ ಪರ್ವತಮಾಲಾ ಯೋಜನೆಯಡಿ ಕೊಡಚಾದ್ರಿಗೆ ರೋಪ್-ವೇ ನಿರ್ಮಾಣ ಮಾಡಲಾಗುತ್ತದೆ. ಯೋಜನೆಯ ಪ್ರಾಥಮಿಕ ಕಾರ್ಯಗಳು ಆರಂಭವಾಗಿವೆ.
ಕೇಂದ್ರದ ಭೂ ಸಾರಿಗೆ ಮಂತ್ರಾಲಯದ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿಯ ಸರ್ವಜ್ಞ ಪೀಠದಿಂದ-ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ತನಕ ಕೇಬಲ್ ಕಾರ್ ಅಳವಡಿಸುವ ಕಾಮಗಾರಿ ಕುರಿತು ಸ್ಥಳ ಪರಿಶೀಲನೆ ನಡೆಸುತ್ತಿದೆ.
ಕೊಡಚಾದ್ರಿ ರೋಪ್-ವೇ ಯೋಜನೆಗೆ ಅಸ್ತು, ಏನಿದು ಯೋಜನೆ?
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಫೇಸ್ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ತಂಡವು ಡಿಪಿಆರ್ ಮತ್ತು ಪತನ ನಕ್ಷೆಯನ್ನು ಅಂತಿಮಗೊಳಿಸಲು ಹಾಗೂ ಡಿಪಿಆರ್ ಅನುಮೋದನೆಗೆ ಇರುವ ತೊಡಕುಗಳ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ಎರಡು ದಿನದ ಸಮೀಕ್ಷೆ ಮತ್ತು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೊಲ್ಲೂರು-ಕೊಡಚಾದ್ರಿ ನಡುವೆ ಕೇಬಲ್ ಕಾರ್ ಸಂಪರ್ಕ..!
ಹಲವು ವರ್ಷಗಳಿಂದ ಕೊಲ್ಲೂರು-ಕೊಡಚಾದ್ರಿ ನಡುವಿನ ರೋಪ್-ವೇ ಯೋಜನೆ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಈ ವರ್ಷದ ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರ ದೇಶದ 18 ಕಡೆಗಳಲ್ಲಿ ರೋಪ್-ವೇ ನಿರ್ಮಾಣ ಮಾಡುವ ಯೋಜನೆಗೆ ಒಪ್ಪಿಗೆ ನೀಡಿತ್ತು. ಅದರಲ್ಲಿ ಕೊಲ್ಲೂರು-ಕೊಡಚಾದ್ರಿ ಸಹ ಸೇರಿತ್ತು.
ಕೊಡಚಾದ್ರಿ ಚಾರಣ ಮಾಡುವವರಿಗೆ ಸಿಹಿ ಸುದ್ದಿ
ಒಂದು ತಿಂಗಳಿನಲ್ಲಿ ಡಿಪಿಆರ್ಗೆ ಮಂಜೂರಾತಿ
ಕೊಡಚಾದ್ರಿ-ಕೊಲ್ಲೂರು ಕೇಬಲ್ ಕಾರ್ ನಿರ್ಮಾಣಕ್ಕೆ ಇರುವ ಸಮಸ್ಯೆಯ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಕೇಂದ್ರದ ಪರ್ವತ ಮಾಲಾ ಅಡಿಯಲ್ಲಿ ಬರುವ ನೂತನ ಕೇಬಲ್ ಕಾರ್ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.
ಯೋಜನೆಗೆ ಇರುವ ತೊಡಕುಗಳನ್ನು ಪ್ರವಾಸೋದ್ಯಮ, ಅರಣ್ಯ, ರಾಷ್ಟೀಯ ಹೆದ್ದಾರಿ ಅಧಿಕಾರಿಗಳ ಜೊತೆಗೆ ಸೇರಿ ಪರಿಹರಿಸಿ, ಕನಿಷ್ಠ ಒಂದು ತಿಂಗಳ ಅವಧಿಯಲ್ಲಿ ಡಿಪಿಆರ್ ಮಂಜೂರಾತಿ ಪಡೆಯುವುದಾಗಿ ಅಧಿಕಾರಿಗಳ ತಂಡ ಹೇಳಿದೆ.
ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಕೊಡಚಾದ್ರಿ-ಕೊಲ್ಲೂರು ರೋಪ್-ವೇ ಯೋಜನೆ ಕುರಿತು ಸ್ಥಳ ಪರಿಶೀಲನೆ ನಡೆಸಲು NHLML ದೆಹಲಿಯ ಹಿರಿಯ ಮ್ಯಾನೇಜರ್ ಅನುರಾಗ್ ತ್ರಿಪಾಟಿ, NHLML ಬೆಂಗಳೂರು ಮ್ಯಾನೇಜರ್ ರೀನಾ ಪವಾರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಶಿವಮೊಗ್ಗದ ಪೀರ್ ಪಾಷಾ, ಡಿಪಿಆರ್ ಕನ್ಸಲ್ಟೆಂಟ್ ಶ್ರವಣ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಗುರುಪ್ರಸಾದ್, ವೆಂಕಟೇಶ್ ಕಿಣಿ ಮುಂತಾದವರ ತಂಡ ಸ್ಥಳ ಪರಿಶೀಲನೆ ನಡೆಸಿತು.
ಯೋಜನೆಯ ವಿಸ್ತ್ರತ ಯೋಜನಾ ವರದಿ ತಯಾರು ಮಾಡಲು ಬೇಕಾದ ಅಂಶಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಂದ ಪಡೆಯಿತು. ಈ ಮೂಲಕ ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದ ಯೋಜನೆ ಅನುಷ್ಠಾನದ ಪ್ರಾಥಮಿಕ ಕಾರ್ಯಗಳು ಆರಂಭವಾಗಿವೆ.
ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ
ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಪ್ರಸಿದ್ಧ ಪ್ರವಾಸಿ ತಾಣ. ಕರ್ನಾಟಕ ಮಾತ್ರವಲ್ಲದೇ ಅಕ್ಕ-ಪಕ್ಕದ ರಾಜ್ಯಗಳ ಪ್ರವಾಸಿಗರು ಸಹ ಇಲ್ಲಿಗೆ ಆಗಮಿಸುತ್ತಾರೆ. ಶಂಕರಾಚಾರ್ಯರು ತಪಸ್ಸು ಮಾಡಿದ ಪವಿತ್ರ ಕ್ಷೇತ್ರವಾದ ಕೊಡಚಾದ್ರಿಯಲ್ಲಿ ಸರ್ವಜ್ಞ ಪೀಠವೂ ಇದೆ. ಶ್ರೀ ಮೂಕಾಂಬಿಕೆ ದೇವಾಲಯ ಇರುವ ಕೊಲ್ಲೂರಿನಿಂದ ಕೊಡಚಾದ್ರಿಗೆ ರೋಪ್-ವೇ ನಿರ್ಮಾಣ ಮಾಡಬೇಕು ಎಂದು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿತ್ತು.
ಕೊಡಚಾದ್ರಿ ಬೆಟ್ಟದ ಮೇಲೆ ತೆರಳಲು ಸರಿಯಾದ ರಸ್ತೆ ಇಲ್ಲ. ರಸ್ತೆ ನಿರ್ಮಾಣ ಮಾಡಲು ಅರಣ್ಯ ಇಲಾಖೆಯ ನಿಯಮಗಳು ಅಡ್ಡಿಯಾಗಿವೆ. ಕೊಲ್ಲೂರಿನಿಂದ ಕೊಡಚಾದ್ರಿಗೆ ರೋಪ್-ವೇ ನಿರ್ಮಾಣ ಮಾಡಿದರೆ ಸಮಯ ಉಳಿತಾಯ ಆಗುವ ಜೊತೆಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ಎಂಬುದು ಯೋಜನೆಯಾಗಿದೆ.
ಪರಿಸರ ಸೂಕ್ಷ್ಮವಾದ ಪ್ರದೇಶವಾಗಿದೆ
ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿ ಪರಿಸರ ಸೂಕ್ಷ್ಮ ಪ್ರದೇಶ. ಇದು ಶ್ರೀ ಮೂಕಾಂಬಿಕ ಅಭಯಾರಣ್ಯದ ವ್ಯಾಪ್ತಿಗೆ ಸಹ ಸೇರುತ್ತದೆ. ಇಲ್ಲಿ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಕೇಂದ್ರ ಪರಿಸರ ಇಲಾಖೆ ಅನುಮತಿ ಬೇಕಿದೆ. ಆದರೆ ಈಗ ಕೇಂದ್ರ ಸರ್ಕಾರವೇ ಬಜೆಟ್ನಲ್ಲಿ ಘೋಷಣೆ ಮಾಡಿದ ಪರ್ವತಮಾಲಾ ಯೋಜನೆಯಡಿ ಯೋಜನೆ ಜಾರಿಗೆ ಬರುತ್ತಿದೆ.
ಡಿಸೆಂಬರ್ನಲ್ಲಿ ಯೋಜನೆ ಡಿಪಿಆರ್ ಸಿದ್ಧಗೊಂಡು ಅಂತಿಮ ಅನುಮೋದನೆ ಸಿಗುವ ನಿರೀಕ್ಷೆ ಇದೆ. 2023ರಲ್ಲಿ ಯೋಜನೆಯ ಕಾಮಗಾರಿ ಆರಂಭವಾಗುವ ನಿರೀಕ್ಷೆಇದೆ.
15 ನಿಮಿಷದಲ್ಲಿ ಕೊಡಚಾದ್ರಿ ತಲುಪಿ
ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಪ್ರತಿದಿನ ನೂರಾರು ಭಕ್ತರು ಭೇಟಿ ಕೊಡುತ್ತಾರೆ. ಇವರಲ್ಲಿ ಕೊಡಚಾದ್ರಿಯ ಸರ್ವಜ್ಞ ಪೀಠಕ್ಕೆ ಹಲವಾರು ಭಕ್ತರು ಆಗಮಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೊಲ್ಲೂರು-ಕೊಡಚಾದ್ರಿ ರೋಪ್-ವೇ ಯೋಜನೆ ರೂಪಿಸಲಾಗುತ್ತಿದೆ. ರೋಪ್-ವೇ ಯೋಜನೆ ಜಾರಿಯಾದರೆ ಪ್ರವಾಸಿಗರನ್ನು ಸೆಳೆಯಲು ಸಹ ಅನುಕೂಲವಾಗಲಿದೆ.
ಕೊಡಚಾದ್ರಿ ಮತ್ತು ಕೊಲ್ಲೂರು ನಡುವಿನ 40 ಕಿ. ಮೀ. ಸಂಚಾರ ನಡೆಸಲು ಯಾವುದೇ ಸರಿಯಾದ ರಸ್ತೆಗಳಿಲ್ಲ. ಸುಮಾರು ಒಂದೂವರೆಗಂಟೆ ಪ್ರಯಾಣ ಮಾಡಬೇಕಿದೆ. ಆದರೆ ಪ್ರಸ್ತುತ ಜಾರಿಯಾಗಲಿರುವ ರೋಪ್-ವೇ ನಿರ್ಮಾಣವಾದರೆ ಕೊಡಚಾದ್ರಿ-ಕೊಲ್ಲೂರು ನಡುವಿನ ಪ್ರಯಾಣದ ಅವಧಿ 7 ಕಿ. ಮೀ.ಗೆ ಇಳಿಕೆಯಾಗಲಿದ್ದು, 15 ನಿಮಿಷದಲ್ಲಿ ಸಾಗಬಹುದಾಗಿದೆ. 2023ರಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.