ಕಾರಂಜಿಕೆರೆ ಪ್ರವಾಸಿ ತಾಣವಾಗಿಸುವುದಕ್ಕೆ ಮೃಗಾಲಯ ಪ್ರಾಧಿಕಾರ ವಿರೋಧಿಸಿದ್ದೇಕೆ?
ಮೈಸೂರು, ಮಾರ್ಚ್ 18: ಮೃಗಾಲಯ ಪ್ರಾಧಿಕಾರ ವ್ಯಾಪ್ತಿಗೆ ಒಳಪಡುವೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ವ್ಯಾಪ್ತಿಗೆ ಬರುವ ಕಾರಂಜಿ ಕೆರೆ ಪ್ರೇಮಿಗಳ ಕೆರೆಯೆಂದೇ ಜನಜನಿತವಾಗಿದೆ. ಇಲ್ಲಿಗೆ ಪ್ರೇಮಿಗಳು, ನಿಸರ್ಗ ಪ್ರೇಮಿಗಳು ಸೇರಿದಂತೆ ಹಲವರು ಬಂದು ಒಂದಷ್ಟು ಹೊತ್ತು ಇದ್ದು ಹೋಗುತ್ತಾರೆ. ನಗರದ ನಡುವೆಯಿದ್ದರೂ ಸುಂದರ ವಾತಾವರಣ ಹೊಂದಿರುವ ಕಾರಣದಿಂದಾಗಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಹೀಗಾಗಿ ಪ್ರವಾಸೋದ್ಯಮ ತಾಣವನ್ನಾಗಿ ಮಾಡಿದರೆ ಇನ್ನಷ್ಟು ಅಭಿವೃದ್ಧಿ ಮಾಡಬಹುದು ಎಂಬುದು ಪ್ರವಾಸೋದ್ಯಮ ಇಲಾಖೆಯ ಇರಾದೆಯಾಗಿತ್ತು. ಆದರೀಗ ಆ ಪ್ರಸ್ತಾವನೆಯನ್ನು ಮೃಗಾಲಯ ಪ್ರಾಧಿಕಾರ ತಿರಸ್ಕರಿಸಿದೆ.
ಇಷ್ಟಕ್ಕೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಪ್ರವಾಸೋದ್ಯಮ ಇಲಾಖೆಯ ಪ್ರಸ್ತಾವನೆಯನ್ನು ಶ್ರೀ ಚಾಮರಾಜೇಂದ್ರ ಮೃಗಾಲಯ ತಿರಸ್ಕರಿಸಿದ್ದೇಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದು ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಹುತೇಕರಿಗೆ ಕಾರಂಜಿ ಕೆರೆ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿರುವ ತಾಣವೆಂಬುದೇ ಗೊತ್ತಿಲ್ಲ. ಹೀಗಾಗಿ ಅವರು ಹಲವು ತಮ್ಮದೇ ಆದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪರಿಸರ ಸಂರಕ್ಷಣೆಯ ದೃ಼ಷ್ಟಿಯಿಂದ ಪ್ರವಾಸೋದ್ಯಮದ ಅಭಿವೃದ್ಧಿ ಸಾಧ್ಯವಿಲ್ಲದಾಗಿದೆ.

ಈಗಾಗಲೇ ಮೃಗಾಲಯಕ್ಕೆ ಆಗಮಿಸುವ ಬಹುತೇಕ ಪ್ರವಾಸಿಗರು ಕಾರಂಜಿಕೆರೆಗೆ ಹೋಗಿ ದೋಣಿ ವಿಹಾರ ನಡೆಸುವುದಲ್ಲದೆ, ಗಿಡಮರಗಳ ಹಸಿರು ಹುಲ್ಲು ಹಾಸಿನಲ್ಲಿ ಕುಳಿತು ಅಡ್ಡಾಡಿಕೊಂಡು ಬರುತ್ತಾರೆ. ಇಲ್ಲಿ ಕಾನೂನಿನ ಪರಿಮಿತಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಹೀಗಾಗಿ ಇದರತ್ತ ತಲೆಕೆಡಿಸಿಕೊಳ್ಳಬೇಡಿ ಅದರ ಬದಲಿಗೆ ಮೃಗಾಲಯದಲ್ಲಿ ಅರ್ಧಕ್ಕೆ ನಿಂತಿರುವ ಅಕ್ವೇರಿಯಂ ಕಾಮಗಾರಿ ಪೂರ್ಣಗೊಳಿಸಿ ಎಂಬುದು ಮೃಗಾಲಯ ಪ್ರಾಧಿಕಾರದ ಮನವಿಯಾಗಿದೆ. ಹಾಗಾದರೆ ಏಕೆ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ಮಾಡಬಾರದು ಎಂಬ ಪ್ರಶ್ನೆಗೆ ಮೃಗಾಲಯದ ನಿರ್ದೇಶಕರಾದ ರಂಗಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ
ಅವರು ಹೇಳುವಂತೆ ಕಾರಂಜಿಕೆರೆಯನ್ನು ಪ್ರವಾಸಿ ತಾಣವನ್ನಾಗಿ ಘೋಷಿಸಿ ಅಭಿವೃದ್ಧಿ ಮಾಡುವುದು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸರಿಯಿಲ್ಲ. ಸಂಭಾವ್ಯ ವಾಣಿಜ್ಯ ಶೋಷಣೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಆಗುವ ಸಾಧ್ಯತೆಯಿದ್ದು, ಹೀಗಾಗಿ ಪ್ರವಾಸೋದ್ಯಮ ಇಲಾಖೆಯ ಪ್ರಸ್ತಾವನೆಯನ್ನು ಮೃಗಾಲಯ ಪ್ರಾಧಿಕಾರ ತಿರಸ್ಕರಿಸಿದೆ. ಅದರ ಬದಲಿಗೆ ನಿಂತು ಹೋಗಿರುವ ಅಕ್ವೇರಿಯಂ ಅಭಿವೃದ್ಧಿಪಡಿಸಿ ಪ್ರಸಾಸಿಗರನ್ನು ಅಕರ್ಷಿಸುವಂತೆ ಸಲಹೆ ನೀಡಿದ್ದಾಗಿ ಹೇಳಿದ್ದಾರೆ.
ಇಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ 18 ಕೋಟಿ ವೆಚ್ಚದಲ್ಲಿ ಕಾರಂಜಿ ಕೆರೆಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಮೃಗಾಲಯ ಪ್ರಾಧಿಕಾರದ ಮುಂದಿಟ್ಟಿತ್ತು. ಈ ಯೋಜನೆ ಮೃಗಾಲಯದಿಂದ ಕಾರಂಜಿಕೆರೆಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್, ಜಿಫ್ ಲೈನ್ ಅಡ್ವೆಂಚರ್ ಚಟುವಟಿಕೆ ಒಳಗೊಂಡಿತ್ತು. ಆದರೆ ಇಂತಹ ಅಭಿವೃದ್ಧಿ ಕಾರ್ಯಗಳು ಪರಿಸರಕ್ಕೆ ಮಾರಕವಾಗಲಿದ್ದು, ಕೇಂದ್ರ ಹಾಗೂ ರಾಜ್ಯ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿವೆ. ಹೀಗಾಗಿ ಈ ಯೋಜನೆಯನ್ನು ಒಪ್ಪಿಕೊಳ್ಳದೆ ತಿರಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕಾರಂಜಿಕೆರೆ 1967ರಲ್ಲಿ ಮೃಗಾಲಯ ವ್ಯಾಪ್ತಿಗೆ
ಮೃಗಾಲಯ ಮೃಗಾಲಯವಾಗಿಯೇ ಉಳಿಯಬೇಕು. ಕಾರಂಜಿ ಕೆರೆ ಪರಿಸರ ಸೂಕ್ಷ್ಮ ವಲಯವಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅನುಮತಿ ನೀಡಲು ಅವಕಾಶವಿಲ್ಲ. ಹೀಗಾಗಿ ಪ್ರವಾಸೋದ್ಯಮ ಇಲಾಖೆ 20ರಿಂದ 50 ಕೋಟಿ ರೂ. ವೆಚ್ಚ ಮಾಡಿ ವಿಶ್ವದರ್ಜೆಯ ಅಕ್ವೇರಿಯಂ ನಿರ್ಮಿಸಿ ಪ್ರವೇಶ ಶುಲ್ಕ ನಿಗದಿ ಮಾಡಿದರೆ ಆದಾಯವೂ ಬರುತ್ತದೆ. ಈ ಯೋಜನೆಗೆ ಪ್ರಾಧಿಕಾರ ಮುಕ್ತವಾಗಿದೆ. ಆದರೆ, ಕಾರಂಜಿ ಕೆರೆಯ ಆವರಣದಲ್ಲಿ ಯಾವುದೇ ರೀತಿಯ ನಿರ್ಮಾಣ ಕಾರ್ಯಗಳಿಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಕಾರಂಜಿಕೆರೆ ವ್ಯಾಪ್ತಿಯಲ್ಲಿ ಪ್ರವಾಸೋದ್ಯಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿಗಳ ಅಗತ್ಯತೆಯಿಲ್ಲ. ಅದು ಹೇಗಿದೆಯೋ ಹಾಗೆಯೇ ಉಳಿಯಲಿ ಎಂಬುದು ಪರಿಸರ ಪ್ರೇಮಿಗಳ ಇರಾದೆಯೂ ಹೌದು.
ಸದಾ ಕೆಲಸದ ಜಂಜಾಟದಲ್ಲಿ ಕಳೆದು ಹೋಗುವವರಿಗೆ ಇದೊಂದು ನೆಮ್ಮದಿ ನೀಡುವ ತಾಣವಾಗಿದೆ. ಪ್ರಶಾಂತ ವಾತಾವರಣವನ್ನು ಉಳಿಸುವುದು ಅಗತ್ಯತೆಯಾಗಿದೆ. ಇನ್ನು ಕಾರಂಜಿಕೆರೆ ಬಗ್ಗೆ ಹೇಳಬೇಕೆಂದರೆ ಇದು 1967ರಲ್ಲಿ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬಂದಿದೆ.ಆ ನಂತರ ಹಾಗೆಯೇ ಇತ್ತಾದರೂ ಒಂದೆರಡು ದಶಕಗಳ ಹಿಂದೆ ಇಲ್ಲಿ ಚಿಟ್ಟೆಗಳು ವಾಸ್ತವ್ಯ ಹೂಡಿದ್ದನ್ನು ಕಂಡು ಚಿಟ್ಟೆ ಪಾರ್ಕ್ ಸ್ಥಾಪನೆ ಮಾಡಲಾಯಿತು. ಅಂದು ವಿಶ್ವವಿದ್ಯಾಲಯದ ಸದಾನಂದ ಎಂಬುವರು ಈ ಚಿಟ್ಟೆ ಪಾರ್ಕ್ ಗೆ ಜೀವ ತುಂಬಿದ್ದರು.
ಕಾರಂಜಿ ಪ್ರಕೃತಿ ಉದ್ಯಾನವನವೆಂದು ನಾಮಕರಣ
ಇದಾದ ಬಳಿಕ ಕಾರ್ಯನಿರ್ವಾಹಕ ನಿರ್ದೇಶಕರಾದ ಕುಮಾರ್ ಪುಷ್ಕರ್ ಹಾಗೂ ಮನೋಜ್ ಕುಮಾರ್ ಅವರು ಕಾರಂಜಿಕೆರೆಯ ಅಭಿವೃದ್ಧಿಯತ್ತ ಗಮನಹರಿಸಿ ಕೆರೆಯಲ್ಲಿ ತುಂಬಿದ್ದ ಹೂಳನ್ನೆಲ್ಲ ಹೊರ ತೆಗೆದು ಅಭಿವೃದ್ಧಿಗೊಳಿಸಿದರು. ಬೃಹತ್ ಕೆರೆಯ ನಡುವೆ ಕೃತಕ ದ್ವೀಪಗಳನ್ನು ನಿರ್ಮಿಸಿ ಅಲ್ಲಿ ಮರ ಬೆಳೆಸಿ ವಲಸೆ ಬರುವ ಹಕ್ಕಿಗಳಿಗೆ ನೆಲೆ ಕಲ್ಪಿಸಿಕೊಟ್ಟರು. ಕೆರೆಯ ನೀರಲ್ಲಿ ಸವಾರಿ ಮಾಡಲು ಬರುವವರಿಗೆ ದೋಣಿಗಳ ವ್ಯವಸ್ಥೆ ಮಾಡಿದರು. ಕೆರೆಯ ದಂಡೆಯಲ್ಲಿ ಸುಂದರ ಮರಗಿಡಗಳನ್ನು ಬೆಳೆಸಿದರು. ಓಡಾಡಲು ಅನುಕೂಲವಾಗುವಂತೆ ಕಾಲುದಾರಿಗಳನ್ನು ನಿರ್ಮಿಸಿದರು. ಕೆರೆಯ ಸುತ್ತಲೂ ಏರಿ ನಿರ್ಮಿಸಿ ಸುಂದರವಾದ ಆಕರ್ಷಣೀಯವಾದ ಪ್ರವೇಶ ದ್ವಾರವನ್ನು ನಿರ್ಮಿಸಲಾಯಿತು.

ಹೀಗೆ ನವೀಕರಣಗೊಂಡ ಕೆರೆಗೆ 2004 ಜನವರಿ 25 ರಂದು ಕಾರಂಜಿ ಪ್ರಕೃತಿ ಉದ್ಯಾನವನ ಎಂಬ ಹೆಸರನ್ನಿಟ್ಟು ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು. ಇವತ್ತು ಕಾರಂಜಿಕೆರೆಯಲ್ಲಿ ಮೀನು, ಮೊಸಳೆಯಂತಹ ಜಲಚರಗಳು, ಬ್ಲೂಜೆ, ಪೇಂಟೆಡ್ ಸ್ಟಾರ್ಕ್, ವೈಟ್ ಐಬೀಸ್, ಕಾಜಾಣಗಳಂತಹ ಬಾನಾಡಿಗಳು ಬೀಡು ಬಿಟ್ಟಿವೆ. ಸುಮಾರು ಎಪ್ಪತ್ತು ಪ್ರಭೇದದ ಚಿಟ್ಟೆಗಳು ವಾಸ್ತವ್ಯ ಹೂಡಿವೆ. ಔಷಧಿವನ, ಶ್ರೀಗಂಧದ ಮರಗಳು ಇಲ್ಲಿವೆ. ಪಕ್ಷಿಗಳ ಹಾರಾಟವನ್ನು ವೀಕ್ಷಿಸಲೆಂದೇ 'ವಾಚ್ ಟವರ್'ಅನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ಮೃಗಾಲಯದ ಜೊತೆಗೆ ಕಾರಂಜಿಕೆರೆಯನ್ನು ವೀಕ್ಷಿಸಲು ಅವಕಾಶ ನೀಡಿದ ಪರಿಣಾಮ ಪ್ರವಾಸಿಗರಿಗೆ ನಿಸರ್ಗದ ಸ್ವರ್ಗವಾಗಿ ವಿಶ್ರಾಂತಿಯ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.












Click it and Unblock the Notifications