ಬೆಳಗಾವಿ-ಬೆಂಗಳೂರು ನಡುವೆ ಇಂಡಿಗೋ ಏರ್ಬಸ್ ಎ320 ಸಂಚಾರ, ವೇಳಾಪಟ್ಟಿ
ಬೆಂಗಳೂರು, ಡಿಸೆಂಬರ್ 05: ಕುಂದಾ ನಗರಿ ಜನರಿಗೆ ಸಿಹಿಸುದ್ದಿಯೊಂದಿದೆ. ಬೆಂಗಳೂರು-ಬೆಳಗಾವಿ ನಡುವೆ ಇಂಡಿಗೋ ಏರ್ಲೈನ್ಸ್ ಏರ್ಬಸ್ ಎ320 ವಿಮಾನವನ್ನು ಓಡಿಸಲಿದೆ. ಚಳಿಗಾಳದ ವೇಳಾಪಟ್ಟಿಯ ಅನ್ವಯ ಈ ವಿಮಾನ ಸಂಚಾರ ನಡೆಸಲಿದ್ದು, ವಿಮಾನದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಬೆಳಗಾವಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಮಾತ್ರ ಈ ವಿಮಾನ ಹಾರಾಟ ನಡೆಸಲಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9 ರಿಂದ 19ರ ತನಕ ಕರ್ನಾಟಕದ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಇದಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು, ಜನರು ಹೆಚ್ಚಾಗಿ ಬೆಂಗಳೂರು-ಬೆಳಗಾವಿ ನಡುವೆ ಸಂಚಾರವನ್ನು ನಡೆಸಲಿದ್ದಾರೆ.

ಆದ್ದರಿಂದ ಇವರ ಅನುಕೂಲಕ್ಕಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ವಿಶೇಷವಾದ ಏರ್ಬಸ್ ಎ320 ವಿಮಾನವನ್ನು ಉಭಯ ನಗರಗಳ ನಡುವೆ ಓಡಿಸಲಿದೆ. ಡಿಸೆಂಬರ್ 9 ರಿಂದ 19ರ ತನಕ ಮಾತ್ರ ಈ ವಿಶೇಷ ವಿಮಾನ ಸಂಚಾರವನ್ನು ನಡೆಸಲಿದೆ.
ವಿಮಾನದ ವೇಳಾಪಟ್ಟಿ: ಇಂಡಿಗೋ ವೆಬ್ಸೈಟ್ ಮಾಹಿತಿಯಂತೆ ಏರ್ಬಸ್ ಎ320 ವಿಮಾನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಡಲಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ 7 ಗಂಟೆಗೆ ತಲುಪಲಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಮಾನ 7.30ಕ್ಕೆ ಹೊರಟು, ಬೆಳಗ್ಗೆ 8.30ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಲಿದೆ.
ಡಿಸೆಂಬರ್ 20ರಿಂದ ಇಂಡಿಗೋ ಈ ಸೇವೆಯನ್ನು ಎಟಿಆರ್ (78 ಆಸನ)ದ ವಿಮಾನದ ಮೂಲಕ ಮುಂದುವರೆಸಲಿದೆ. ಏರ್ಬಸ್ ಎ320ನಲ್ಲಿ ಎಲ್ಲಾ 78 ಸೀಟುಗಳು ಎಕಾನಮಿ ದರ್ಜೆಯದ್ದಾಗಿದೆ. ಅಧಿವೇಶನಕ್ಕೆ ಹೋಗುವವರನ್ನು ಗಮನದಲ್ಲಿಟ್ಟುಕೊಂಡು ಈ ವಿಮಾನ ಹಾರಾಟ ನಡೆಸಲಿದೆ.
ಚಳಿಗಾಲದ ವೇಳಾಪಟ್ಟಿ ಘೋಷಣೆ ಮಾಡಿದ್ದ ಇಂಡಿಗೋ ಅಕ್ಟೋಬರ್ 27ರಿಂದ ಬೆಂಗಳೂರು-ಬೆಳಗಾವಿ ನಡುವಿನ ಬೆಳಗ್ಗೆಯ ವಿಮಾನ ಸಂಚಾರವನ್ನು ರದ್ದುಗೊಳಿಸಿತ್ತು. ಸುಮಾರು 2 ವರ್ಷಗಳಿಂದ ಸಂಚಾರ ನಡೆಸುತ್ತಿದ್ದು, ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದ ವಿಮಾನವನ್ನು ರದ್ದುಗೊಳಿಸಿದ್ದು, ಬೆಳಗಾವಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಬಳಿಕ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಕೇಂದ್ರ ವಿಮಾನಯಾನ ಖಾತೆ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಭೇಟಿ ಮಾಡಿದ್ದರು. ಬೆಳಗಾವ-ಬೆಂಗಳೂರು ನಡುವಿನ ವಿಮಾನ ಸೇವೆ ಮತ್ತೆ ಆರಂಭಿಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು.
ಬಳಿಕ ಇಂಡಿಗೋ ನವೆಂಬರ್ 10ರಂದು ಡಿಸೆಂಬರ್ 20ರಿಂದ ಬೆಂಗಳೂರು-ಬೆಳಗಾವಿ ವಿಮಾನ ಸೇವೆಯನ್ನು ಮತ್ತೆ ಆರಂಭಿಸುವುದಾಗಿ ಘೋಷಣೆ ಮಾಡಿತ್ತು. ಆದರೆ ಡಿಸೆಂಬರ್ 9 ರಿಂದ 19ರ ತನಕ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಈಗ ಏರ್ಬಸ್ ಸಂಚಾರವನ್ನು ಘೋಷಣೆ ಮಾಡಿದೆ.
ಬೆಳಗಾವಿ ಅಧಿವೇಶನ: ವಿಧಾನ ಮಂಡಲ ಚಳಿಗಾಲದ ಅಧಿವೇಶನ ಡಿಸೆಂಬರ್ 9 ರಿಂದ 19ರ ತನಕ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ ಎಂದು ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಹೇಳಿದ್ದಾರೆ. ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಇರುವುದರಿಂದ ಅಧಿವೇಶನವನ್ನು ಡಿಸೆಂಬರ್ 20ರ ಬದಲು 19ಕ್ಕೆ ಮುಕ್ತಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.
ಅಧಿವೇಶನ ಮುಂದುವರಿಸುವ ಕುರಿತು ಡಿಸೆಂಬರ್ 9ರಂದು ಸ್ಪೀಕರ್ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕಾನೂನು ಸಚಿವರು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ವಿರೋಧ ಪಕ್ಷದ ಮುಖಂಡರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚೆಯಾಗಬೇಕಿದೆ. ಇದರಿಂದ ಆ ಭಾಗದ ಜನರ ಭಾವನೆಗಳನ್ನು ಗೌರವಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಸಹಕರಿಸಬೇಕು ಎಂದು ಸ್ಪೀಕರ್ ಮನವಿ ಮಾಡಿದ್ದಾರೆ.












Click it and Unblock the Notifications