Karnataka to Ayodhya special trains: ಕರ್ನಾಟಕ-ಅಯೋಧ್ಯೆ ವಿಶೇಷ ರೈಲುಗಳ ಸೇವೆ-ದಿನಾಂಕ, ಸಮಯ, ಮಾರ್ಗಗಳ ವಿವರ
ಕರ್ನಾಟಕ, ಜನವರಿ, 22: ಇಂದು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಆಗಿದ್ದು, ಈ ಕ್ಷಣವನ್ನು ಇಡೀ ವಿಶ್ವವೇ ಕಣ್ತುಂಬಿಕೊಂಡಿದೆ. ಇನ್ನು ಜನರು ಹತ್ತಿರದಿಂದ ಬಾಲ ರಾಮನನ್ನು ನೋಡಲು ಅಯೋಧ್ಯೆಗೆ ತೆರಳಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಜನರ ಅನುಕೂಲಕ್ಕೆ ತಕ್ಕಂತೆ ಭಾರತೀಯ ರೈಲ್ವೆಯು ಕರ್ನಾಟಕದಿಂದ ವಿಶೇಷ ರೈಲುಗಳನ್ನು ಬಿಡಲು ಮುಂದಾಗಿದೆ. ಹಾಗಾದರೆ ಈ ರೈಲು ಸೇವೆ ಯಾವಾಗಿನಿಂದ ಆರಂಭವಾಗಲಿದೆ, ಸಮಯ ಹಾಗೂ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಚುರುಕುಗೊಳ್ಳುತ್ತಿದ್ದಂತೆ, ಕರ್ನಾಟಕದಿಂದ ಅಯೋಧ್ಯೆಗೆ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಇದನ್ನು ಗಮನಿಸಿದ ಭಾರತೀಯ ರೈಲ್ವೇ ಇಲಾಖೆಯು ಕರ್ನಾಟಕದಿಂದ ಆಯೋಧ್ಯೆಗೆ ಜನವರಿ 31ರಿಂದ 11 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲು ಮುಂದಾಗಿದೆ.

ಬೆಂಗಳೂರು ನೈರುತ್ಯ ರೈಲ್ವೇ ವಿಭಾಗದಿಂದ ಮೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ವಿಭಾಗದಿಂದ ತಲಾ ಎರಡು ಹಾಗೂ ಶಿವಮೊಗ್ಗ, ಬೆಳಗಾವಿ ವಿಭಾಗದಿಂದ ಒಂದು ವಿಶೇಷ ಆಸ್ತಾ ರೈಲು ಸಂಚಾರವನ್ನು ಜನವರಿ 31ರಿಂದ ಹಂತವಾಗಿ ಆರಂಭಿಸಿ ಮಾರ್ಚ್ 31ಕ್ಕೆ ಮುಕ್ತಾಯಗೊಳಿಸಲಿದೆ.
ಸದ್ಯ ಇದೀಗ ರಾಜ್ಯದಿಂದ ಅಯೋಧ್ಯೆಗೆ ನೈಋತ್ಯ ರೈಲ್ವೇಯ ಬೆಂಗಳೂರಿನ ಯಶವಂತಪುರದಿಂದ ನೇರವಾಗಿ ಒಂದು ರೈಲು ಸಂಚಾರ ಮಾಡುತ್ತಿದೆ. ಯಶವಂತಪುರ ನಿಲ್ದಾಣದಿಂದ ಪ್ರತಿ ಗುರುವಾರ ರಾತ್ರಿ 11.40ಕ್ಕೆ ಹೊರಟ ರೈಲು ಶನಿವಾರ ಮಧ್ಯಾಹ್ನ 4.24ಕ್ಕೆ ಅಯೋಧ್ಯೆ ಗಢ ನಿಲ್ದಾಣಕ್ಕೆ ತಲುಪಲಿದೆ. ನಂತರ ರೈಲು ಗೋರಖ್ಪುರದಲ್ಲಿ ನಿಲುಗಡೆ ಆಗಲಿದೆ. ಇದರ ಹೊರತಾಗಿ ಯಾವುದೇ ರೈಲು ಅಯೋಧ್ಯಗಢ ಮೂಲಕ ಹಾದು ಹೋಗುವುದಿಲ್ಲ.

ಬೆಂಗಳೂರಿನಿಂದ ತೆರಳುವ ಪ್ರಯಾಣಿಕರು ಲಕ್ನೋ ಹಾಗೂ ಬಾದಶಾ ರೈಲುಗಳ ಮೂಲಕ ತೆರಳಿದರೆ ಅಯೋಧ್ಯಗಢಕ್ಕೆ ಸಂಪರ್ಕ ಸಾಧಿಸಬಹುದಾಗಿದೆ. ಈ ಮಾರ್ಗವಾಗಿ ಪ್ರತಿ ಸೋಮವಾರ ಹಾಗೂ ಬುಧವಾರ ತಲಾ ಎರಡು ರೈಲುಗಳು ಸಂಚರಿಸಲಿದೆ. ಪ್ರಯಾಣಿಕರು ಲಕ್ನೋ ಹಾಗೂ ಬಾದಶಾ ರೈಲು ನಿಲ್ದಾಣದಲ್ಲಿ ಇಳಿದು 130ರಿಂದ 150 ಕಿಲೋ ಮೀಟರ್ ದೂರದಲ್ಲಿರುವ ಅಯೋಧ್ಯೆ ಗಢಕ್ಕೆ ರೈಲು, ಬಸ್ ಅಥವಾ ಇತರೆ ಸಾರಿಗೆ ಮೂಲಕ ಅಯೋಧ್ಯೆಗೆ ಹೋಗಬಹುದಾಗಿದೆ.
ವೈಟಿಂಗ್ ಲಿಸ್ಟ್ ಹೆಚ್ಚಳ: ರಾಮನವಮಿ ಸೇರಿದಂತೆ ವಿಶೇಷ ದಿನಗಳು ಹಾಗೂ ರಜಾ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವುದರಿಂದ ಕಳೆದೊಂದು ತಿಂಗಳಿನಿಂದ ಈ ರೈಲುಗಳಲ್ಲಿ ಆಸನಗಳ ಕಾಯ್ದಿರಿಸುವವರ ಸಂಖ್ಯೆಯಲ್ಲಿಯೂ ಹೆಚ್ಚಿದೆ. ಇದೀಗ ಒಟ್ಟಾರೆ 1,000ಕ್ಕೂ ಅಧಿಕ ಟಿಕೆಟ್ಗಳು ವೈಟಿಂಗ್ ಲಿಸ್ಟ್ನಲ್ಲಿವೆ.
ಬೆಂಗಳೂರಿನಿಂದ ಅಯೋಧ್ಯೆಗಢ ಹಾಗೂ ಲಖನೌ, ಬಾದಶಾ ನಗರದ ರೈಲ್ವೇ ನಿಲ್ದಾಣಕ್ಕೆ ವಾರದಲ್ಲಿ 5 ರೈಲುಗಳ ಸಂಚಾರವಿದೆ. ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಸೀಟು ಕಾಯ್ದಿರಿಸುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ನೈಋತ್ಯ ರೈಲ್ವೇ ಬೆಂಗಳೂರು ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಅವರಿಗೆ ಈಗಾಗಲೇ ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಶೇಷ ರೈಲು ಸಂಚಾರ ಪ್ರಾರಂಭಿಸುವ ಕುರಿತು ಮನವಿ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವೇಳಾಪಟ್ಟಿ ವಿವರ ಹೀಗಿದೆ
ಜನವರಿ 31, ಫೆಬ್ರವರಿ 14 ಮತ್ತು 28ರಂದು ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ನಿಲ್ದಾಣದಿಂದ ಹೊರಡಲಿರುವ ವಿಶೇಷ ರೈಲು ಅರಸೀಕೆರೆ, ರಾಯದುರ್ಗ, ಹೊಸಪೇಟೆ (ಮಧ್ಯಾಹ್ನ 3ಕ್ಕೆ), ಗದಗ, ವಿಜಯಪುರ ಮಾರ್ಗವಾಗಿ ಅಯೋಧ್ಯೆ ಧಾಮ ತಲುಪಲಿದೆ.
ಫೆಬ್ರವರಿ 04, 17, 18 ರಂದು ಮೈಸೂರಿನಿಂದ ಹೊರಡಲಿರುವ ರೈಲು ಬೆಂಗಳೂರು, ಅರಸಿಕೆರೆ, ಹೊಸಪೇಟೆ ಮಾರ್ಗವಾಗಿ ಅಯೋಧ್ಯೆ ತಲುಪಲಿದೆ. ಫೆಬ್ರವರಿ 07 ಮತ್ತು 21 ರಂದು ತುಮಕೂರಿನಿಂದ ಮತ್ತು ಫೆಬ್ರವರಿ 11 ಮತ್ತು 21ರಂದು ಚಿತ್ರದುರ್ಗದಿಂದ ಹೊಸಪೇಟೆ ಮಾರ್ಗವಾಗಿ ವಿಶೇಷ ರೈಲುಗಳು ಸಂಚಾರ ಮಾಡಲಿವೆ.
ಫೆಬ್ರವರಿ 17ರಂದು ಬೆಳಗಾವಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಸಂಜೆ 4:40ಕ್ಕೆ ಹೊಸಪೇಟೆಗೆ ಬರಲಿರುವ ರೈಲು ಬಳ್ಳಾರಿ, ರಾಯಚೂರು ಮಾರ್ಗವಾಗಿ ಅಯೋಧ್ಯೆ ತಲುಪಲಿದೆ. ಈ 11 ರೈಲುಗಳು ಕರ್ನಾಟಕದಿಂದ ಅಯೋಧ್ಯಗೆ ಮತ್ತು ಅಯೋಧ್ಯೆಯಿಂದ ಮರಳಿ ಅದೇ ನಿಲ್ದಾಣಗಳಿಗೆ ಹಿಂದಿರುಗಲಿವೆ ಎಂದು ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications