Hubballi-Ankola Railway Line: ಪರಿಷ್ಕೃತ ಡಿಪಿಆರ್, ಯೋಜನೆಯ ವಿವರಗಳು
ಹುಬ್ಬಳ್ಳಿ, ಮಾರ್ಚ್ 30: ಕರ್ನಾಟಕದ ಮಹಾತ್ವಾಕಾಂಕ್ಷಿ ರೈಲು ಯೋಜನೆಗಳಲ್ಲಿ ಒಂದು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ. ವಿವಿಧ ಕಾರಣಕ್ಕೆ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಹುಬ್ಬಳ್ಳಿ-ಅಂಕೋಲಾ ನಡುವಿನ 164.44 ಕಿ. ಮೀ. ಉದ್ದದ ರೈಲು ಮಾರ್ಗ ನಿರ್ಮಾಣ ವಿಳಂಬವಾಗುತ್ತದೇ ಇದೆ. ಈ ರೈಲು ಯೋಜನೆಯಿಂದ ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟದ ಅರಣ್ಯಕ್ಕೆ ಹಾನಿಯಾಗಲಿದೆ ಎಂದು ಪರಿಸರವಾದಿಗಳು ಕೋರ್ಟ್ ಮೊರೆ ಹೋಗಿದ್ದರು. ಈಗ ಮಾರ್ಗದ ವಿನ್ಯಾಸವನ್ನು ಪರಿಷ್ಕರಣೆ ಮಾಡಿ, ಯೋಜನೆ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್) ಅನ್ನು ರೈಲ್ವೆ ಮಂಡಳಿಗೆ ಸಲ್ಲಿಕೆ ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, " ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗದ ಕಾಮಗಾರಿಯನ್ನು 2027ರ ಒಳಗೆ ಪೂರ್ಣಗೊಳಿಸುತ್ತೇವೆ" ಎಂದು ಭರವಸೆ ನೀಡಿದ್ದರು. ಈಗ ಡಿಪಿಆರ್ ಸಲ್ಲಿಕೆಯಾಗಿದ್ದು, ರೈಲ್ವೆ ಮಂಡಳಿ ಯೋಜನೆಗೆ ಒಪ್ಪಿಗೆ ನೀಡಲಿದೆಯೇ?, ದಶಕಗಳ ಕಾಲದ ಜನರ ಬೇಡಿಕೆ ಈಡೇರಲಿದೆಯೇ? ಎಂದು ಕಾದು ನೋಡಬೇಕಿದೆ.

ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆಯಿಂದ ಪಶ್ಚಿಮ ಘಟ್ಟದ ಅರಣ್ಯಕ್ಕೆ ಹಾನಿಯಾಗಲಿದೆ, ಯೋಜನೆಗೆ ಸಾವಿರಾರು ಮರಗಳನ್ನು ಕಡಿಯಬೇಕಿದೆ ಎಂದು ಮೊದಲ ಯೋಜನಾ ವಿನ್ಯಾಸ ನೋಡಿ ಅಂದಾಜಿಸಲಾಗಿತ್ತು. ಆದ್ದರಿಂದ ಎಂದು ಪರಿಸರವಾದಿಗಳು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆದೇಶದಂತೆ ಈಗ ಮಾರ್ಗದ ವಿನ್ಯಾಸವನ್ನು ಪರಿಷ್ಕರಣೆ ಮಾಡಲಾಗಿದ್ದು, ಯೋಜನೆ ಡಿಪಿಆರ್ ಅನ್ನು ತಯಾರು ಮಾಡಿ, ಸಲ್ಲಿಕೆ ಮಾಡಲಾಗಿದೆ.
ಯೋಜನೆಯ ವಿವರ: ಪರಿಷ್ಕೃತ ಮಾರ್ಗದ ವಿನ್ಯಾಸ ಮತ್ತು ಡಿಪಿಆರ್ ಹಿನ್ನಲೆಯಲ್ಲಿ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆಯ ವೆಚ್ಚ ಅಧಿಕವಾಗಲಿದೆ. ಯೋಜನೆಗೆ ಅಂದಾಜು 17,147 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಪರಿಷ್ಕರಣೆ ಮಾಡಲಾದ ವಿನ್ಯಾಸದ ಅನ್ವಯ ಈ ರೈಲು ಯೋಜನೆ ರಾಷ್ಟ್ರೀಯ ಹೆದ್ದಾರಿ 263ರ ಪಕ್ಕದಲ್ಲಿಯೇ ಹಾದು ಹೋಗಲಿದ್ದು, ಜೋಡಿ ಮಾರ್ಗ ನಿರ್ಮಾಣಕ್ಕೆ ಡಿಪಿಆರ್ನಲ್ಲಿ ಆದ್ಯತೆ ನೀಡಲಾಗಿದೆ.
ಡಿಪಿಆರ್ ಪ್ರಕಾರ ಈಗ ಅರಣ್ಯ ನಾಶದ ಪ್ರಮಾಣ 10 ಹೆಕ್ಟೇರ್ನಷ್ಟು ಕಡಿಮೆಯಾಗಲಿದೆ. ಅಲ್ಲದೇ 164.44 ಕಿ. ಮೀ. ಉದ್ದದ ರೈಲು ಮಾರ್ಗದಲ್ಲಿ 97 ಕಿ. ಮೀ. ಮಾರ್ಗ ಅರಣ್ಯದಲ್ಲಿ ಹಾದು ಹೋಗಲಿದೆ. ಅದರಲ್ಲಿ 46.57 ಕಿ. ಮೀ. ಅಂತರದಲ್ಲಿ 57 ಸುರಂಗವನ್ನು ನಿರ್ಮಾಣ ಮಾಡಬೇಕಾಗುತ್ತದೆ, ಇದಕ್ಕಾಗಿ ಯಲ್ಲಾಪುರ-ಸುಂಕಸಾಳ ತನಕ 55 ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗುಡ್ಡವನ್ನು ಕರೆಯಬೇಕು. 13.89 ಕಿ. ಮೀ. ಮೇಲ್ಸೇತುವೆ ಯೋಜನೆಯಲ್ಲಿ ಅಗತ್ಯವಿದೆ ಎಂದು ಡಿಪಿಆರ್ ಹೇಳಿದೆ.
ಯೋಜನೆಗೆ ಒಟ್ಟು 995 ಹೆಕ್ಟೇರ್ ಭೂಮಿ ಅಗತ್ಯವಿದೆ ಎಂದು ಡಿಪಿಆರ್ ಅಂದಾಜಿಸಿದೆ. ಇದರಲ್ಲಿ ಹುಬ್ಬಳ್ಳಿ-ಯಲ್ಲಾಪುರ ನಡುವೆ 75 ಕಿ. ಮೀ. ಬಯಲು ಪ್ರದೇಶ, 585 ಹೆಕ್ಟೇರ್ ಅರಣ್ಯ, 184 ಹೆಕ್ಟೇರ್ ನೀರಾವರಿ ಭೂಮಿ, 185 ಹೆಕ್ಟೇರ್ ಒಣಭೂಮಿ, 1.40 ಹೆಕ್ಟೇರ್ ನಗರ ಪ್ರದೇಶದ ಭೂಮಿ ಬಳಕೆಯಾಗಲಿದೆ. ಈ ಯೋಜನೆಯನ್ನು ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ 50:50ರ ವೆಚ್ಚ ಹಂಚಿಕೆಯಲ್ಲಿ ಕೈಗೊಳ್ಳಬೇಕೆ? ಎಂಬ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ. ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಲಾಗುತ್ತಿದೆ.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಪ್ರಸ್ತಾವನೆ ದಶಕಗಳಷ್ಟು ಹಿಂದಿನದು. 1999ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಯೋಜನೆಗೆ ಚಾಲನೆ ಸಿಕ್ಕಿ ಹುಬ್ಬಳ್ಳಿ-ಕಲಘಟಗಿ ತನಕ 34 ಕಿ. ಮೀ. ರೈಲು ಮಾರ್ಗ ನಿರ್ಮಾಣ ಮಾಡಲಾಗಿದೆ. ಆಗ ಈ ಯೋಜನೆಗೆ 494 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು.
1996-97ರ ಬಳಿಕ ಮೂರು ಬಾರಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಯೋಜನೆಯ ನಕ್ಷೆಯನ್ನು ಬದಲಾವಣೆ ಮಾಡಲಾಗಿದೆ. ಇದಕ್ಕೆ ಪ್ರಮುಖ ಕಾರಣ ಯೋಜನೆ ಪಶ್ಚಿಮ ಘಟ್ಟದಲ್ಲಿ ಹಾದು ಹೋಗುವುದು. ರೈಲು ಮಾರ್ಗ ಪರಿಸರ ಸೂಕ್ಷ್ಮ ಪ್ರದೇಶಗಳಾದ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಆನೆ ಕಾರಿಡಾರ್ ಮೂಲಕ ಸಾಗುತ್ತಿದೆ ಎಂದು ಪರಿಸರವಾದಿಗಳು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದರು. ಕೋರ್ಟ್ ಮೊರೆ ಹೋದರು.
ಪರಿಸರವಾರದಿಗಳ ತೀವ್ರ ಆಕ್ರೋಶದ ಹಿನ್ನಲೆಯಲ್ಲಿ ಕೇಂದ್ರ ವನ್ಯಜೀವಿ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮೀಕ್ಷೆ ನಡೆಸಿದ್ದಾರೆ, ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ವಿವಿಧ ಕೋರ್ಟ್ಗಳ ಸೂಚನೆಯಂತೆ ಯೋಜನೆಯ ನಕ್ಷೆಯನ್ನು ಬದಲಾವಣೆ ಮಾಡಿ, ಈಗ ಡಿಪಿಆರ್ಅನ್ನು ಸಲ್ಲಿಕೆ ಮಾಡಲಾಗಿದೆ. ಯೋಜನೆಗೆ ರೈಲ್ವೆ ಮಂಡಳಿಯ ಅಂತಿಮ ಒಪ್ಪಿಗೆ ಬಾಕಿ ಇದೆ.
ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಮಾತನಾಡಿ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣದ ಯೋಜನೆಯ ನಕ್ಷೆ ಬದಲಾವಣೆ ಮಾಡಿ, ಪರಿಷ್ಕೃತ ಡಿಪಿಆರ್ ರೈಲ್ವೆ ಮಂಡಳಿಗೆ ಸಲ್ಲಿಕೆ ಮಾಡಲಾಗಿದೆ. ಜೋಡಿ ಮಾರ್ಗ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಪಿಆರ್ಗೆ ಅನುಮೋದನೆ ನೀಡಿದಲ್ಲಿ ಮುಂದಿನ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ 2024ರ ಡಿಸೆಂಬರ್ನಲ್ಲಿಯೇ ಪರಿಷ್ಕೃತ ಡಿಪಿಆರ್ ಅನ್ನು ರೈಲ್ವೆ ಮಂಡಳಿಗೆ ಸಲ್ಲಿಕೆ ಮಾಡಬೇಕಿತ್ತು. ಆದರೆ ವಿಳಂಬವಾಗಿದೆ ಅಗತ್ಯ ಮಾಹಿತಿ, ಯೋಜನೆಯಿಂದ ಅರಣ್ಯಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಡಿಪಿಆರ್ ತಯಾರಿಕೆ ಮಾಡಿ ಸಲ್ಲಿಕೆ ಮಾಡಲಾಗಿದೆ. ಡಿಪಿಆರ್ ಬಗ್ಗೆ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಒಪ್ಪಿಗೆ ಪಡೆಯಬೇಕಿದೆ. ಬಳಿಕ ಯೋಜನೆ ಕುರಿತು ರೈಲ್ವೆ ಮಂಡಳಿ ಅಂತಿಮ ತೀರ್ಮಾನ ಮಾಡಲಿದೆ.
ಈ ರೈಲು ಮಾರ್ಗದ ಯೋಜನೆಯಂತೆ ಹುಬ್ಬಳ್ಳಿಯಿಂದ ರೈಲು ಹೊರಟು ಕಲಘಟಗಿ, ಕಿರವತ್ತಿ, ಯಲ್ಲಾಪುರ, ಇಡಗುಂದಿ ಮೂಲಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾವನ್ನು ತಲುಪಲಿದೆ. ಆದರೆ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಈ ರೈಲು ಮಾರ್ಗ ಸಾಗಬೇಕಾದ ಕಾರಣಕ್ಕೆ ಯೋಜನೆಗೆ ವಿರೋಧಗಳು ವ್ಯಕ್ತವಾಗುತ್ತಿದ್ದವು. ಆದ್ದರಿಂದ ಯೋಜನಾ ನಕ್ಷೆಯನ್ನು ತಿದ್ದುಪಡಿ ಮಾಡಲಾಗಿದೆ.












Click it and Unblock the Notifications