ವಿಜಯಪುರ-ಮಂಗಳೂರು ರೈಲು; ನೈಋತ್ಯ ರೈಲ್ವೆ ಮುಂದೆ ಹೊಸ ಬೇಡಿಕೆ
ಮಂಗಳೂರು, ಅಕ್ಟೋಬರ್ 12; ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುತ್ತದೆ ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲು. ಈ ರೈಲು ಸೇವೆಯನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆಯ ನಡುವೆಯೇ ಮತ್ತೊಂದು ಹೊಸ ಬೇಡಿಕೆಯನ್ನು ನೈಋತ್ಯ ರೈಲ್ವೆ ಮುಂದೆ ಇಡಲಾಗಿದೆ.
ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ನೈಋತ್ಯ ರೈಲ್ವೆಗೆ ಪತ್ರವನ್ನು ಬರೆದು ವಿಜಯಪುರ- ಮಂಗಳೂರು ಜಂಕ್ಷನ್ ರೈಲಿನ ಬಗ್ಗೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಇರುವ ರೈಲು ನಂಬರ್ 07377/ 07378 ರೈಲನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆ ಈಗಾಗಲೇ ನೈಋತ್ಯ ರೈಲ್ವೆ ಮುಂದಿದೆ.

ಸಂಸದರ ಮನವಿ ಏನು?; ಸಂಸದ ರಮೇಶ್ ಜಿಗಜಿಣಗಿ ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಎರಡು ಹೊಸ ಪ್ಲಾಟ್ಫಾರ್ಮ್ಗಳು ಸಿದ್ಧವಾಗಿವೆ. ಆದ್ದರಿಂದ ರೈಲಿನ ನಿಲುಗಡೆಗೆ ತೊಂದರೆ ಇಲ್ಲ.
ಆದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಂಗಳೂರು ಸೆಂಟ್ರಲ್ ತನಕ ರೈಲು ವಿಸ್ತರಣೆ ಮಾಡಬೇಕು. ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ಗೆ ಸಹ ಪತ್ರವನ್ನು ಬರೆಯಲಾಗಿದೆ ಎಂದು ಸಂಸದರು ನೈಋತ್ಯ ರೈಲ್ವೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಸುಮಾರು ಎರಡು ವರ್ಷಗಳಿಂದ ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನದ ರೈಲು ಸಂಚಾರ ನಡೆಸುತ್ತಿದೆ. ಆದರೆ ಇದನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಡಿಸೆಂಬರ್ 1, 2021ರಂದು ವಿಜಯಪುರದಿಂದ ಮತ್ತು ಡಿಸೆಂಬರ್ 2ರಿಂದ ಮಂಗಳೂರಿನಿಂದ ಈ ರೈಲು ಸೇವೆ ಆರಂಭವಾಯಿತು.
ಬಳಿಕ ಕೋವಿಡ್ ಕಾಲದಲ್ಲಿ ಎಲ್ಲಾ ರೈಲು ಸೇವೆ ಸ್ಥಗಿತವಾಯಿತು. ಆಗ ಈ ರೈಲನ್ನು ಸಹ ಸ್ಥಗಿತಗೊಳಿಸಲಾಯಿತು. ಬಳಿಕ ಮತ್ತೆ ಪ್ರಯಾಣಿಕರ ಬೇಡಿಕೆಯಂತೆ ರೈಲು ಸೇವೆ ಆರಂಭಿಸಲಾಯಿತು. ಆದರೆ ಇಂದಿಗೂ ಸಹ ರೈಲು ಕಾಯಂಗೊಳಿದೇ ತತ್ಕಾಲ್ ಮಾದರಿಯಲ್ಲಿ ಓಡಿಸಲಾಗುತ್ತಿದೆ. ಆದ್ದರಿಂದ ಸಾಮಾನ್ಯ ರೈಲಿಗಿಂತ ದರಗಳು ಸಹ ಹೆಚ್ಚಿದೆ.
ಸೆಪ್ಟೆಂಬರ್ 21ರಂದು ನೈಋತ್ಯ ರೈಲ್ವೆ ಆದೇಶವೊಂದನ್ನು ಹೊರಡಿಸಿತ್ತು. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ಡೈಲಿ ವಿಶೇಷ ರೈಲನ್ನು ಅಕ್ಟೋಬರ್ 1 ರಿಂದ ಡಿಸೆಂಬರ್ 31ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿತ್ತು.
ಅದೇ ರೀತಿ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಡೈಲಿ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಅಕ್ಟೋಬರ್ 2 ರಿಂದ ಜನವರಿ 1, 2024ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ ವೇಳಾಪಟ್ಟಿ, ನಿಲ್ದಾಣ, ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ವಿಜಯಪುರ-ಮಂಗಳೂರು ಜಂಕ್ಷನ್ ರೈಲಿನ ಬಗ್ಗೆ ಮೂರು ಪ್ರಮುಖ ಬೇಡಿಕೆಗಳಿವೆ. ಈ ರೈಲನ್ನು ಕಾಯಂಗೊಳಿಸುವುದು. ಪ್ರತಿದಿನ ಸಂಚಾರ ನಡೆಸುವ ಈ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡುವುದು ಮತ್ತು ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡುವುದು.
ಈ ರೈಲು ಈಗ ವಿಜಯಪುರದಿಂದ ಸಂಜೆ 6.35ಕ್ಕೆ ಹೊರಟು ಹುಬ್ಬಳ್ಳಿಗೆ 11.55ಕ್ಕೆ ಆಗಮಿಸಿ, ಮರುದಿನ 12.40ಕ್ಕೆ ಮಂಗಳೂರು ಜಂಕ್ಷನ್ಗೆ ತಲುಪುತ್ತದೆ. ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಡುವ ರೈಲು ಮರುದಿನ ಮುಂಜಾನೆ 3.35ಕ್ಕೆ ಹುಬ್ಬಳ್ಳಿಗೆ ಆಗಮನ, ಬಳಿಕ 9.35ಕ್ಕೆ ವಿಜಯಪುರ ತಲುಪುತ್ತದೆ. ಈ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಎಂದು ನೈಋತ್ಯ ರೈಲ್ವೆಗೆ ಒತ್ತಾಯಿಸಲಾಗುತ್ತಿದೆ.
ರೈಲು ವಿಜಯಪುರದಿಂದ ಸಂಜೆ 4 ಗಂಟೆಗೆ ಹೊರಟು, 9.30ಕ್ಕೆ ಹುಬ್ಬಳ್ಳಿ, ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ತಲುಪುವಂತೆ ಆಗಬೇಕು. ಮಂಗಳೂರಿನಿಂದ ಸಂಜೆ 5 ಗಂಟೆಗೆ ಹೊರಟು, ಮುಂಜಾನೆ 5ಕ್ಕೆ ಹುಬ್ಬಳ್ಳಿ, 10.30ಕ್ಕೆ ವಿಜಯಪುರ ತಲುಪುವಂತೆ ಮಾಡಬೇಕು ಎಂದು ಬೇಡಿಕೆ.












Click it and Unblock the Notifications