ಅಧಿಕಾರಿಗಳ ನಿರ್ಲಕ್ಷ್ಯ: ನಿವರ್ಹಣೆ ಇಲ್ಲದೇ ಅವ್ಯವಸ್ಥೆಯ ಆಗರವಾದ ಕೋಲಾರ ಜಿಲ್ಲೆಯ ಪ್ರವಾಸಿ ತಾಣಗಳು
ಕೋಲಾರ, ಡಿಸೆಂಬರ್, 20: ಮಹಾಮಾರಿ ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಜನರು ಹೊಸವರ್ಷ ಸಂಭ್ರಮಾಚರಣೆಯಿಂದ ದೂರ ಉಳಿದಿದ್ದರು. ಇದೀಗ ಮಹಾಮಾರಿ ತೊಲಗಿದ್ದು, ಈ ಬಾರಿ ಹೊಸವರ್ಷವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ ಹೊಸವರ್ಷಕ್ಕೆ ಆಚರಿಸಲು ಪ್ರಮುಖ ಪ್ರವಾಸಿ ತಾಣಗಳನ್ನು ಹುಡುಕುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಹೊಸವರ್ಷ ಆಚರಿಸಲು ಜನರು ತೀರ್ಮಾನ ಮಾಡಿದ್ದಾರೆ. ಆದರೆ ಇಲ್ಲಿ ಅದ್ಭುತ ಪ್ರವಾಸಿ ತಾಣಗಳಿದ್ದರೂ ಕೂಡ, ಸೂಕ್ತ ನಿರ್ವಹಣೆ ಇಲ್ಲದೇ ಈ ತಾಣಗಳು ಪ್ರವಾಸಿಗರಿಲ್ಲದೆ ಸೊರಗುತ್ತಿವೆ. ಮತ್ತೊಂದೆಡೆ ಈ ಸ್ಥಳಗಳಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗಿದ್ದು, ಇದನ್ನು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ನಿಯಂತ್ರಣಕ್ಕೆ ತರಬೇಕು ಎಂಬುದು ಸ್ಥಳೀಯರು ಒತ್ತಾಯಸಿದ್ದಾರೆ.
ಹಂಪಿಯಲ್ಲಿ ರಾತ್ರಿ ಪ್ರವಾಸೋದ್ಯಮ ಯೋಜನೆಗೆ ಮುಂದಾದ ಸರ್ಕಾರ
ಕೋಲಾರ ಜಿಲ್ಲೆ ಪಾರಂಪರಿಕ ತಾಣವೆಂದು ಬಿರುದು ಪಡೆದಿರುವ ಕ್ಷೇತ್ರವಾಗಿದೆ. ಹಲವು ಗುಹೆಗಳು, ಪ್ರಾಣಿ ಪಕ್ಷಿಗಳು ಸೇರಿದಂತೆ ಅನೇಕ ವನ್ಯಜೀವಿಗಳಿಗೆ ಆಶ್ರಯ ನೀಡಿರುವ ಈ ಕ್ಷೇತ್ರ ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತದೆ. ಕಾಶಿ ವಿಶ್ವೇಶ್ವರ ದರ್ಶನ ಪಡೆದು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಪ್ರತಿನಿತ್ಯ ಆಗಮಿಸುತ್ತಲೇ ಇರುತ್ತಾರೆ. ಬರದ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಕೋಲಾರದಲ್ಲಿ ಸ್ಪಲ್ಪ ಪ್ರಮಾಣದಲ್ಲಿ ಮಳೆ ಸುರಿದರೆ ಸಾಕು ಈ ಪ್ರದೇಶ ಮಲೆನಾಡಾಗಿ ಪರಿವರ್ತನೆಗೊಳ್ಳುತ್ತದೆ. ಹಾಗೆಯೇ ಇಲ್ಲಿನ ಸಪ್ತರ್ಷಿಗಳ ಬೆಟ್ಟದಲ್ಲಿ ಫಾಲ್ಸ್ಗಳು ನಿರ್ಮಾಣವಾಗಿ, ಪ್ರವಾಸಿಗರು ಈ ಸುಂದರ ದೃಶ್ಯವನ್ನು ಸವಿಯಲು ಕಾತುರದಿಂದ ಕಾಯುತ್ತಿರುತ್ತಾರೆ. ಇಂತಹ ಅದ್ಭುತ ರಮಣೀಯ ಪ್ರವಾಸಿ ಕ್ಷೇತ್ರಕ್ಕೆ ಹೊಸ ವರ್ಷಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ.
ಪ್ರವಾಸಿ ತಾಣಗಳ ಪ್ರಾಮುಖ್ಯತೆ ಏನು?
ಇನ್ನೇನು ಹೊಸ ವರ್ಷಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು, ಪ್ರತಿಯೊಬ್ಬರು ಕೂಡ ಹೊಸ ವರ್ಷಕ್ಕೆ ಒಂದೊಂದು ರೀತಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. ಅದರಲ್ಲೂ ಉತ್ತಮವಾದ ಪ್ರವಾಸಿ ತಾಣಗಳಿಗೆ ಹೋಗಿ ಸಮಯ ಕಲಿಯೋಣ ಅಂದುಕೊಳ್ಳುತ್ತಾರೆ. ಅಂತಹವರಿಗೆ ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಪ್ರಪಂಚ ಪ್ರಸಿದ್ದ ದಕ್ಷಿಣ ಕಾಶಿ ಅಂತರಗಂತೆ ಒಂದು ಸುಂದರ ತಾಣವಾಗಿದೆ. ಈ ಕ್ಷೇತ್ರ ಅಂತರಗಂಗೆ ಜೀವ ವೈವಿದ್ಯ ಪಾರಂಪರಿಕ ತಾಣ ಅಂತಲೇ ಹೆಸರುವಾಸಿ ಆಗಿದೆ. ಇಲ್ಲಿ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯವಿದ್ದು, ವಿಶೇಷವೆಂದರೆ ವರ್ಷಪೂರ್ತಿ ಬಿರು ಬೇಸಿಗೆಯಲ್ಲೂ ನಿಲ್ಲದೆ ಬಸವಣ್ಣನ ಬಾಯಿಯಲ್ಲಿ ನೀರು ಬರುವುದನ್ನು ಇಲ್ಲಿ ಕಾಣಬಹುದಾಗಿದೆ. ಆ ನೀರನ್ನು ನಗರದ ಅನೇಕರು ಕುಡಿಯಲು ಬಳಸುತ್ತಾರೆ. ಜೊತೆಗೆ ಈ ನೀರಿನಲ್ಲಿ ಹಲವು ರೋಗಗಳನ್ನು ಹೋಗಲಾಡಿಸುವ ಗುಣ ಹೊಂದಿದೆ ಎನ್ನುವ ಎಂದು ಹಿರಿಯರು ಹೇಳಿತ್ತಿದ್ದಾರೆ.
ಕಿಕ್ಕಿರಿದು ಬರುವ ಪ್ರವಾಸಿಗರ ದಂಡು
ದೇಶ ವಿದೇಶದಿಂದ ಪ್ರವಾಸಿಗರು ಬಂದು ಇಲ್ಲಿನ ಸೌದರ್ಯಕ್ಕೆ ಮಾರುಹೋಗುತ್ತಾರೆ. ಆದರೆ ಇಲ್ಲಿಗೆ ಬಂದ ಪ್ರವಾಸಿಗರು ಮಾತ್ರ ನಿಬ್ಬೆರಗಾಗಿ ಹಿಂತಿರುಗುತ್ತಿದ್ದಾರೆ. ಅಂತರಗಂಗೆ ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಪುಂಡಪೋಕರಿಗಳ ಹಾವಳಿ, ದೇವಾಲಯಕ್ಕೆ ಹೋಗುವ ಹಾದಿ ಮಧ್ಯೆ ಮದ್ಯದ ಬಾಟಲಿಗಳಿಂದ ದಿವ್ಯ ಸ್ವಾಗತ ಕೋರುತ್ತಿರುವುದರ ಜೊತೆಗೆ ಸ್ಚಚ್ಚತೆ ಇಲ್ಲದೆ ಸೊರಗುತ್ತಿದೆ.
ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿ
ಹೆಸರಿಗಷ್ಟೆ ಅಂತರಗಂಗೆಯಾಗಿದ್ದು, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಆದರೂ ಕೂಡ ಇಲ್ಲಿನ ಮುಜುರಾಯಿ ಇಲಾಖೆ ಹಾಗೂ ಜಿಲ್ಲಾಡಳಿತ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿವೆ. ನೋಡಲು ಅದ್ಭುತ ಪ್ರವಾಸಿ ತಾಣಗಳೇನೋ ಇವೆ. ಆದರೆ ಇಲ್ಲಿನ ಮ್ಯಾನೆಜ್ಮೆಂಟ್ ಸರಿಯಿಲ್ಲದ ಕಾರಣ ಈ ತಾಣ ಇದೀಗ ಪುಂಡರ ಅಡ್ಡವಾಗಿ ಮಾರ್ಪಟ್ಟಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರ ಆರೋಪವಾಗಿದೆ.
ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಿ
ಒಂದು ಕಾಲದಲ್ಲಿ ಕೋಲಾರ ಗಂಗರು ಆಳಿದ ನಾಡಾಗಿದೆ. ಇಲ್ಲಿನ ಅಂತರಗಂಗೆ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರದಂದು ಲಕ್ಷದೀಪೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯುತ್ತದೆ. ಇನ್ನು ಮಳೆಗಾಲದಲ್ಲಂತೂ ಸಣ್ಣ ಸಣ್ಣ ಜಲದಾರೆಗಳು ಕಲ್ಲು ಮನಸ್ಸಿನವರನ್ನು ಕೈಬೀಸಿ ತನ್ನತ್ತ ಸೆಳೆಯುತ್ತಿರುತ್ತವೆ. ಒಂದು ಉದ್ಯಾನವಿದ್ದು, ಇಲ್ಲಿ ಮೊದಲಿಗೆ ಕೃಷ್ಣ ಮೃಗಗಳಿದ್ದವು. ಅವುಗಳನ್ನು ನೋಡಲು ಇಲ್ಲಿಗೆ ಪ್ರವಾಸಿಗರು ಕಿಕ್ಕಿರಿದು ಆಗಮಿಸುತ್ತಿದ್ದರು. ಆದರೆ ಕಾಲ ಕ್ರಮೇಣ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಇತ್ತ ಗಮನ ಹರಿಸದೇ ಇರುವುದರಿಂದ ಈ ಸ್ಥಳಲ್ಲಿ ಪುಂಡರದ್ದೇ ಅಟ್ಟಹಾಸ ಮುಂದುವರೆದಿದೆ. ಆದ್ದರಿಂದ ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಇದಕ್ಕೆ ಸೂಕ್ತ ಪರಿಹಾರ ಕಂಡುಕೊಂಡು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.