ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಬೋನ್ಸಾಯ್ ಗಾರ್ಡನ್‌ಗೆ ಭೇಟಿ ನೀಡಲು ಮರೆಯದಿರಿ!

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹಳಷ್ಟು ಪ್ರವಾಸಿಗರು ಕೆಲವೇ ಕೆಲವು ಪ್ರವಾಸಿ ತಾಣಗಳನ್ನು ನೋಡಿಕೊಂಡು ಹಿಂತಿರುಗಿ ಬಿಡುತ್ತಾರೆ. ಆದರೆ ಪ್ರವಾಸಿಗರು ಮನಸ್ಸಿಗೆ ಖುಷಿಕೊಡುವ ನೆಮ್ಮದಿ ನೀಡುವ ತಾಣವನ್ನು ನೋಡಲು ಬಯಸಿದರೆ ನೇರವಾಗಿ ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಅವಧೂತ ಆಶ್ರಮಕ್ಕೆ ಭೇಟಿ ನೀಡುವುದು ಉತ್ತಮ.

ಆಶ್ರಮದಲ್ಲಿ ಅಡ್ಡಾಡಿದರೆ ವೆಂಕಟೇಶ್ವರ ದೇಗುಲ, ಬೃಹತ್ ಹನುಮನ ಮೂರ್ತಿ, ವಸ್ತು ಸಂಗ್ರಹಾಲಯ, ಬೋನ್ಸಾಯ್ ಗಾರ್ಡನ್, ಶುಕವನ ಹೀಗೆ ಹಲವು ನೋಡಲೇ ಬೇಕಾದ ವಿಶೇಷತೆಗಳಿವೆ. ಇವುಗಳ ನಡುವೆ ಬೋನ್ಸಾಯ್ ಗಾರ್ಡನ್ ಅರ್ಥಾತ್ ಕುಬ್ಜ ಮರಗಳ ಲೋಕದಲ್ಲಿ ಅಡ್ಡಾಡಿದರೆ ಹೊಸತೊಂದು ಅನುಭವವಾಗುತ್ತದೆ. ಏಕೆಂದರೆ ಇಲ್ಲಿರುವ ಬೋನ್ಸಾಯ್ ಗಾರ್ಡನ್ ವೈಶಿಷ್ಟ್ಯತೆಯೇ ಹಾಗಿದೆ. ಬಹುಶಃ ಇಂತಹವೊಂದು ಅಪರೂಪದ ಗಾರ್ಡನ್ ನೀವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಹಾಗಾಗಿಯೇ ಪ್ರವಾಸಿಗರು ಅಗತ್ಯವಾಗಿ ಇಲ್ಲಿಗೆ ಭೇಟಿ ನೀಡಬೇಕಾಗಿದೆ.

ಇದನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ತಾವು ಭೇಟಿ ನೀಡಿದ ದೇಶವಿದೇಶಗಳಲ್ಲಿ ತಾವು ನೋಡಿದ ಅಪರೂಪವಾದಂತಹ ಸಸ್ಯಗಳನ್ನೆಲ್ಲಾ ತಂದು ಈ ಸುಂದರ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ನಿರ್ಮಿಸಿದ್ದಾರೆ. ಇಲ್ಲಿ ನಮ್ಮ ಸುತ್ತ ಮುತ್ತ ಕಾಣಸಿಗುವ ಬೇಲಿ ಗಿಡಗಳಿಂದ ಹಿಡಿದು ವರ್ಷದ ಎಲ್ಲಾ ಕಾಲದಲ್ಲೂ ಹೂಬಿಟ್ಟು ಕಂಗೊಳಿಸುವ ಅಪರೂಪದ "ಅಮೃತಪುಷ್ಪ"ದವರೆಗೆ ಎಲ್ಲಾ ಬಗೆಯ ಗಿಡಮರಗಳು ಸ್ಥಾನಪಡೆದಿರುವುದು ಎದ್ದು ಕಾಣಿಸುತ್ತಿದೆ.

 ಒಂದು ಎಕರೆಯಲ್ಲಿ ನೆಲೆನಿಂತಿರುವ ಗಾರ್ಡನ್‍

ಒಂದು ಎಕರೆಯಲ್ಲಿ ನೆಲೆನಿಂತಿರುವ ಗಾರ್ಡನ್‍

ಸುಮಾರು ಒಂದು ಎಕರೆ ಪ್ರದೇಶದಲ್ಲಿ ನೆಲೆನಿಂತಿರುವ ಬೋನ್ಸಾಯ್ ಗಾರ್ಡನ್‍ ಗೆ ಭೇಟಿ ನೀಡಿದವರು ಈ ಗಾರ್ಡನ್‍ ನಲ್ಲಿ ಕಂಡು ಬರುವ ಸುಂದರ ದೃಶ್ಯಗಳಿಗೆ ಮನಸೋಲದಿರಲಾರರು. ಏಕೆಂದರೆ ಬೋನ್ಸಾಯ್ ಗಾರ್ಡನ್‍ ನ ನಿರ್ಮಾಣವೇ ವಿಶಿಷ್ಟವಾಗಿದೆ. ಪ್ರತಿ ಸಸ್ಯ ಕುಂಡಗಳನ್ನು ಜೋಡಿಸಿಟ್ಟ ರೀತಿ ಅದ್ಭುತವಾಗಿದೆ. ಸುಂದರ ಹಚ್ಚ ಹಸುರಿನ ಹುಲ್ಲುಹಾಸಿನ ಮಧ್ಯೆ ಕೃತಕವಾಗಿ ನಿರ್ಮಿಸಿದ ತೊರೆ. ಅದರಲ್ಲಿ ಜುಳುಜುಳು ನಿನಾದಗೈಯ್ಯುತ್ತಾ ಹರಿಯುವ ನೀರು. ಭೋರ್ಗರೆದು ಧುಮುಕುವ ಪುಟ್ಟ ಜಲಧಾರೆಗಳು... ಸ್ಪಟಿಕದಂತೆ ಹೊಳೆಯುವ ಪುಟ್ಟಕೊಳಗಳು... ಅಲ್ಲಲ್ಲಿ ಸಿಮೆಂಟ್ ಕಲ್ಲುಗಳು ಅವುಗಳ ಮೇಲೆ ಬೃಹತ್ ಕುಂಡದಲ್ಲಿ ವೀರಾಜಮಾನವಾದ ವಿವಿಧ ದೇಶಗಳ, ವಿವಿಧ ಜಾತಿಯ ಕುಬ್ಜ ಗಿಡಗಳು... ಮರಗಳು... ಗಮನಸೆಳೆಯುತ್ತವೆ.

 ದೇಶ ವಿದೇಶಗಳ ಅಪರೂಪದ ಸಸ್ಯಗಳು

ದೇಶ ವಿದೇಶಗಳ ಅಪರೂಪದ ಸಸ್ಯಗಳು

ಬೋನ್ಸಾಯ್ ಗಾರ್ಡನ್ನೊಳಗೊಂದು ಸುತ್ತು ಬಂದದ್ದೇ ಅದರೆ ಈ ಗಾರ್ಡನ್ ಮಹತ್ವ ಅರಿವಾಗುತ್ತದೆ. ಈ ಗಾರ್ಡನ್‍ ನಲ್ಲಿ ವಿದೇಶದ ಜಪಾನ್, ಚೀನಾ, ಅಮೇರಿಕ, ವೆಸ್ಟ್ ಇಂಡೀಸ್, ಕೆನಡಾ, ಇಂಗ್ಲೆಂಡ್, ಮಲೇಶಿಯಾ, ಇಂಡೋನೇಶಿಯಾ, ಯುರೋಪ್ ಮೊದಲಾದ ದೇಶಗಳಿಂದ ತಂದಂತಹ ಅಪರೂಪದ ಸಸ್ಯಗಳಿವೆ. ಅವುಗಳನ್ನು ಜತನದಿಂದ ಆರೈಕೆ ಮಾಡಿಕೊಂಡು ಬರಲಾಗುತ್ತಿದೆ. ಪ್ರತಿಯೊಂದು ಗಿಡದ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗಿದೆ. ಇದರಿಂದ ವೀಕ್ಷಿಸುವ ಪ್ರವಾಸಿಗನಿಗೆ ಸಸ್ಯದ ಪರಿಚಯ ಸುಲಭವಾಗಿ ಆಗಲಿದೆ.

 ಸಿಹಿ ನೀರಿನ ಬದಲಾಗಿ ಉಪ್ಪು ನೀರು

ಸಿಹಿ ನೀರಿನ ಬದಲಾಗಿ ಉಪ್ಪು ನೀರು

ಗಾರ್ಡನ್ ಮಧ್ಯೆ ನಡೆದಾಡಲು ಕಾಲುದಾರಿಗಳಿದ್ದು, ಅದರಲ್ಲಿ ನಡೆಯುತ್ತಾ ಹೋದರೆ ಕಾಲುವೆಯಲ್ಲಿ ಹರಿಯುವ ನೀರು, ಪುಟ್ಟ ಜಲಧಾರೆ, ಸಣ್ಣಪುಟ್ಟ ಸುಂದರ ಕಲ್ಲುಗಳಿಂದ ನಿರ್ಮಿಸಿದ ಸುಂದರ ಕೊಳಗಳು. ಅವುಗಳನ್ನು ಹಾದುಹೋಗಲೆಂದೇ ನಿರ್ಮಾಣಗೊಂಡ ಸೇತುವೆಗಳು ಕಾಣಸಿಗುತ್ತವೆ. ಈ ಗಾರ್ಡನ್‍ ನ ಮತ್ತೊಂದು ವಿಶೇಷತೆಯೆಂದರೆ ಇಲ್ಲಿನ ಸಸ್ಯವೊಂದನ್ನು ಸಮುದ್ರ ದಡದಿಂದ ತರಲಾಗಿದೆ. ಹಾಗಾಗಿ ಈ ಸಸ್ಯಕ್ಕೆ ಸಿಹಿ ನೀರಿನ ಬದಲಾಗಿ ಉಪ್ಪು ನೀರನ್ನೇ ನೀಡಿ ಬೆಳೆಸಲಾಗುತ್ತಿದೆ.

 ಇನ್ನೂರಕ್ಕೂ ಹೆಚ್ಚು ವರ್ಷಗಳನ್ನು ಪೂರೈಸಿದ ಮರ

ಇನ್ನೂರಕ್ಕೂ ಹೆಚ್ಚು ವರ್ಷಗಳನ್ನು ಪೂರೈಸಿದ ಮರ

"ಅಮೃತಪುಷ್ಪ" ಹೆಸರಿನ ಸಸ್ಯದ ಮತ್ತೊಂದು ವಿಶೇಷತೆ ವರ್ಷದ ಎಲ್ಲಾ ಕಾಲದಲ್ಲಿಯೂ ತಿಂಗಳಿಗೊಮ್ಮೆ ಹೂ ಬಿಡುತ್ತದೆ. ಈ ಹೂವಿನ ಮೊತ್ತ ಒಂದು ಲಕ್ಷವಂತೆ!. ಈ ಸಸ್ಯ ಹೂ ಬಿಡುವುದು ಮಾತ್ರವಲ್ಲ ಇದರಲ್ಲಿ ಔಷಧೀಯ ಗುಣಗಳೂ ಇವೆಯಂತೆ. ಈ ಅಪರೂಪದ ಬೊನ್ಸಾಯ್ ಗಾರ್ಡನ್ ಸ್ವಾಮಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಕನಸಿನ ಕೂಸು. ಇದನ್ನು ಭಾರತದಲ್ಲಿಯೇ ಪ್ರಥಮವಾಗಿ, ಅದ್ಭುತವಾಗಿ ನಿರ್ಮಿಸುವಲ್ಲಿ ಅವರ ಶ್ರಮ ನಿಜಕ್ಕೂ ಶ್ಲಾಘನೀಯ. ಇಲ್ಲಿರುವ ಗಿಡಮರಗಳ ಪೈಕಿ ಸುಮಾರು ಇನ್ನೂರಕ್ಕೂ ಹೆಚ್ಚು ವರ್ಷಗಳನ್ನು ಪೂರೈಸಿದ ಗಿಡಗಳು (ಮರಗಳು) ಇವೆ ಎನ್ನುವುದೇ ವಿಸ್ಮಯ. ಜೊತೆಗೆ ಪುಟ್ಟ ಕೊಳದಲ್ಲಿ ತೇಲುವ ರಾಮಶಿಲೆ ಗಮನಸೆಳೆಯುತ್ತದೆ.

 ಶುಕವನ ಗಿನ್ನಿಸ್ ಪುಸ್ತಕ ಸೇರಿರುವ ಶುಕವನ

ಶುಕವನ ಗಿನ್ನಿಸ್ ಪುಸ್ತಕ ಸೇರಿರುವ ಶುಕವನ

ಇನ್ನು ದೇಶ ವಿದೇಶಗಳ ಗಿಳಿಗಳಿಂದ ಗೂಡಿರುವ 'ಶುಕವನ' ಮತ್ತೊಂದು ಆಕರ್ಷಣೆಯಾಗಿದೆ. ಇದೊಂದು ಗಿಣಿಗಳ ಉದ್ಯಾನವಾಗಿದ್ದು, ಬಗೆಬಗೆಯ ಗಿಣಿಗಳನ್ನು ಸಾಕಲಾಗುತ್ತದೆ. ಇಲ್ಲಿ 2012ರಲ್ಲಿ ಪಕ್ಷಿಗಳ ಪುನರ್ವಸತಿ ಕೇಂದ್ರನ್ನು ನಿರ್ಮಿಸಲಾಗಿದೆ. ಸುಮಾರು 470ಕ್ಕೂ ಹೆಚ್ಚು ಅಪರೂಪದ ಪ್ರಭೇದದ 2 ಸಾವಿರಕ್ಕೂ ಪಕ್ಷಿಗಳಿಗೆ ಆಶ್ರಯ ಕಲ್ಪಿಸಿರುವ ಈ ಶುಕವನ ಗಿನ್ನಿಸ್ ಪುಸ್ತಕದಲ್ಲೂ ದಾಖಲಾಗಿರುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.

 ಮುಂದಿನ ತಲೆಮಾರಿಗೆ ಉಳಿಸುವ ಕಾರ್ಯ

ಮುಂದಿನ ತಲೆಮಾರಿಗೆ ಉಳಿಸುವ ಕಾರ್ಯ

ಇಂದು ಬಹಳಷ್ಟು ಗಿಡಮೂಲಿಕೆಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಆದುದರಿಂದ ಬೋನ್ಸಾಯ್ ಗಾರ್ಡನ್ ಮೂಲಕ ಆ ಕಾರ್ಯವನ್ನು ನಾವು ಮಾಡಬಹುದು ಎಂಬುವುದನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ತಮ್ಮ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ಮೂಲಕ ತೋರಿಸಿಕೊಟ್ಟಿದ್ದಾರೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರು ಇಲ್ಲಿಗೆ ತೆರಳಿದ್ದೇ ಆದರೆ ಕುಬ್ಜ ಗಿಡಮರಗಳ ಸಸ್ಯಲೋಕದಲ್ಲಿ ಮತ್ತು ಶುಕವನದಲ್ಲಿ ನೆಲೆನಿಂತ ಗಿಳಿಗಳೊಂದಿಗೆ ಕಳೆದ ಕ್ಷಣಗಳು ಮರೆಯಲಾರದ ನೆನಪುಗಳಾಗಿ ಉಳಿಯುವುದರಲ್ಲಿ ಎರಡು ಮಾತಿಲ್ಲ.

ಅವಧೂತ ದತ್ತ ಪೀಠಂ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ, ದತ್ತ ನಗರ, ಮೈಸೂರು, ಈ ಗಾರ್ಡನ್‌ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಮತ್ತು ಸಂಜೆ 4 ರಿಂದ ಸಂಜೆ 6ರವರೆಗೆ ತೆರೆದಿರುತ್ತದೆ.

English summary
Mysuru bonsai Garden is Paradise for Nature Lovers and makes for a very good education trip for school children, more than 100 bonsai trees are planted in the garden. good place for one day trip,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X