Maha Kumbh Mela: ಕರ್ನಾಟಕದಿಂದ ಮಹಾ ಕುಂಭಮೇಳಕ್ಕೆ ತೆರಳುವವರಿಗೆ ಭರ್ಜರಿ ಗುಡ್ ನ್ಯೂಸ್
Flight Tickets Prices Reduced: ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪ್ರತಿನಿತ್ಯ ಕೊಟ್ಯಂತರ ಜನ ಪ್ರಯಾಣ ಬೆಳೆಸುತ್ತಲೇ ಇದ್ದಾರೆ. ಆರಂಭದಲ್ಲಿ ವಿಮಾನ ಟಿಕೆಟ್ ದರ ಗಗನಕ್ಕೇರಿತ್ತು. ಆದರೆ ಇದೀಗ ವಿಮಾನಯಾನದ ಟಿಕೆಟ್ ದರವನ್ನು ಶೇಕಡಾ 50ರಷ್ಟು ಕಡಿಮೆ ಮಾಡಲಾಗಿದ್ದು, ಇದರಿಂದ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಹೋಗುತ್ತಲೇ ಇದ್ದಾರೆ. ಪ್ರಯಾಗ್ ರಾಜ್ಗೆ ಸೇವೆ ನೀಡುತ್ತಿರುವ ವಿಮಾನಯಾನ ಸಂಸ್ಥೆಗಳ ಟಿಕೆಟ್ ದರ ಏರಿಕೆಗೆ ಬ್ರೇಕ್ ಹಾಕಿ ದರವನ್ನು ಕಡಿಮೆ ಮಾಡುವಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಯಶಸ್ವಿಯಾಗಿದ್ದಾರೆ.

ವಿಮಾನಯಾನ ಕಂಪನಿಗಳ ಟಿಕೆಟ್ ದರ ಭಾರಿ ಏರಿಕೆಯ ಬಗ್ಗೆ ಪ್ರಹ್ಲಾದ್ ಜೋಶಿ ಬುಧವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯ ಟಿಕೆಟ್ ದರ ಕಡಿತಗೊಳಿಸಲು ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಟಿಕೆಟ್ ದರ ಮಿತಿಯಲ್ಲಿ ಇರಿಸುವಂತೆ ತಿಳಿಸಿದ್ದು, ವಿಮಾನಯಾನ ಟಿಕೆಟ್ ದರವನ್ನು 30 ರಿಂದ 50ರಷ್ಟು ಕಡಿಮೆ ಮಾಡಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಪ್ರಯಾಗ್ ರಾಜ್ಗೆ ಲಕ್ಷಾಂತರ ಜನ ತೆರಳುತ್ತಿದ್ದಾರೆ. ಬೇಡಿಕೆ ಹೆಚ್ಚಾಗಿದ್ದರಿಂದ ವಿಮಾನ ಟಿಕೆಟ್ ದರವನ್ನು ಭಾರಿ ಹೆಚ್ಚಳ ಮಾಡಲಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಧ್ಯ ಪ್ರವೇಶಿಸಿದ್ದರು. ಇದರ ಬೆನ್ನಲ್ಲೇ ವಿಮಾನ ಟಿಕೆಟ್ ದರ ಕಡಿಮೆ ಮಾಡಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪ್ರತಿನಿತ್ಯ ಭಕ್ತಸಾಗರವೇ ಹರಿದುಬರುತ್ತಿದೆ. ಅದರಲ್ಲೂ ಕರ್ನಾಟಕದಿಂದಲೂ ಕೂಡ ಮಹಾಕುಂಭಮೇಳ ಕಣ್ತುಂಬಿಕೊಳ್ಳಲು ಜನಸಾಗರವೇ ಪ್ರಯಾಗ್ ರಾಜ್ನತ್ತ ಪ್ರಯಾಣ ಬೆಳೆಸುತ್ತಿದೆ. ಕೆಲವರು ಈಗಾಗಲೇ ವಿಮಾನದ ಟಿಕೆಟ್ ಬುಕ್ ಮಾಡಿದ್ದರೆ, ಇನ್ನು ಕೆಲವರು ಫ್ಲೈಟ್ ಟಿಕೆಟ್ ಸಿಗದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕದಿಂದ ಪ್ರಯಾಗ್ ರಾಜ್ಗೆ ತೆರಳುವ ಎಲ್ಲಾ ಫ್ಲೈಟ್ಗಳ ಟಿಕೆಟ್ ಈಗಾಗಲೇ ಸೋಲ್ಡೌಟ್ ಆಗಿದ್ದು, ಪ್ರತಿದಿನ ಬೆಂಗಳೂರಿನಿಂದ ಪ್ರಯಾಗ್ ರಾಜ್ಗೆ 3 ವಿಮಾನಗಳು ಹೊರಡಲಿದ್ದು, ಪೆಬ್ರವರಿ 26ರ ವರೆಗೂ ಟಿಕೆಟ್ ಬುಕ್ ಆಗಿವೆ. 144 ವರ್ಷಗಳಿಗೊಮ್ಮೆ ನಡೆಯುತ್ತಿರುವುದರಿಂದ ನಮ್ಮ ಕಾಲದಲ್ಲೇ ನಡೆಯುತ್ತಿರುವುದು ಪುಣ್ಯ ಎಂದು ಜನರು ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಎಂದು ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದಾರೆ. ಇನ್ನೂ ಕೆಲವರು ದರ ಏರಿಕೆಯಿಂದ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದೆಡೆ ಹಣ ಕೊಟ್ಟರೂ ಸಹ ಫ್ಲೈಟ್ ಟಿಕೆಟ್ ಸಿಗುತ್ತಿಲ್ಲ. ಇದರಿಂದ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇಂಡಿಗೋದ ಒಂದು, ಸ್ಪೈಸ್ ಜೆಟ್ನ ಎರಡು ವಿಮಾನಗಳು ಪ್ರತಿದಿನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಯಾಗ್ರಾಜ್ ತೆರಳುತ್ತವೆ. ಇದೀಗ ಪ್ರಯಾಗ್ರಾಜ್ಗೆ ತೆರಳಲು ಒಬ್ಬರಿಗೆ ಫ್ಲೈಟ್ ಟಿಕೆಟ್ ದರ 22-30,000 ರೂಪಾಯಿ ಇದೆ. ಆದರೆ ಪೆಬ್ರವರಿ 26ರ ವರೆಗೂ ಪ್ರಯಾಗ್ ರಾಜ್ಗೆ ತೆರಳುವ ವಿಮಾನಗಳು ಪುಲ್ ಆಗಿವೆ.
ಪ್ರಯಾಗ್ ರಾಜ್ ಹೊರತುಪಡಿಸಿದರೆ, ವಾರಣಾಸಿಗೂ ತೆರಳಿ ಅಲ್ಲಿಂದ ಪ್ರಯಾಗ್ ರಾಜ್ಗೆ ತೆರಳಬಹುದು. ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಾರಣಾಸಿಗೆ ಪ್ರತಿದಿನ 15 ವಿಮಾನಗಳ ತೆರಳುತ್ತಿದ್ದು, ವಾರಣಾಸಿಗೆ ಸದ್ಯ ಬೆಂಗಳೂರಿನಿಂದ 20-28,000 ರೂಪಾಯಿ ಟಿಕೆಟ್ ದರ ಇದೆ. ಕೆಂಪೇಗೌಡ ಏರ್ಪೊಟ್ನಿಂದ ಲಕ್ನೋಗೂ ಪ್ರತಿದಿನ 22 ವಿಮಾನಗಳ ಹಾರಾಟ ಮಾಡುತ್ತಿದ್ದು, 16-22,000 ಸಾವಿರವರೆಗೂ ಟಿಕೆಟ್ ದರ ಇದೆ.
ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಯೋಧ್ಯೆಗೂ ಕೂಡ ಪ್ರತಿದಿನ 5 ವಿಮಾನಗಳ ತೆರಳುತ್ತಿದ್ದು, ಟಿಕೆಟ್ ದರ ಸದ್ಯ 16-30,000 ರೂಪಾಯಿ ಇದೆ. ಇದರಿಂದ ಬೇಸತ್ತ ಜನ ಆಕ್ರೋಶಗನ್ನು ಹೊರಹಾಕಿದ್ದರು. ಬಳಿಕ ಎಚ್ಚೆತ್ತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮನವಿಗೆ ಸ್ಪಂದಿಸಿ ಟಿಕೆಟ್ ದರವನ್ನು ವಿಮಾನಯಾಣ ಸಂಸ್ಥೆಗಳು ಕಡಿಮೆ ಮಾಡಿವೆ ಎಂದು ತಿಳಿದುಬಂದಿದೆ.












Click it and Unblock the Notifications