Vande Bharat Express: ವಂದೇ ಭಾರತ್, ಯಾದಗಿರಿ ಜನತೆಗೆ ಸಿಹಿಸುದ್ದಿ
ಯಾದಗಿರಿ, ಜುಲೈ 18: ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭವಾಗಿದೆ. ಈ ಮಾರ್ಗದ ರೈಲಿಗೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರೈಲಿಗೆ ಮತ್ತೊಂದು ನಿಲುಗಡೆ ನೀಡಲು ಈಗ ಭಾರತೀಯ ರೈಲ್ವೆ ಒಪ್ಪಿಗೆ ನೀಡಿದೆ.
ಬೆಂಗಳೂರು- ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಯಾದಗಿರಿಯಲ್ಲಿ ನಿಲ್ಲಿಸಬೇಕು ಎಂದು ಬೇಡಿಕೆ ಇಡಲಾಗಿತ್ತು. ಈ ಬೇಡಿಕೆಗೆ ರೈಲು ಇಲಾಖೆ ಒಪ್ಪಿಗೆ ನೀಡಿದರೂ ಸಹ ರೈಲು ನಿಲುಗಡೆ ದಿನಾಂಕವನ್ನು ಘೋಷಣೆ ಮಾಡಿರಲಿಲ್ಲ.

ಈಗ ಯಾದಗಿರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಜುಲೈ 20 ರಿಂದ ಬೆಂಗಳೂರು ನಗರದ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವಿನ ರೈಲು ಯಾದಗಿರಿಯಲ್ಲಿ ನಿಲ್ಲಲಿದೆ.
ಭಾರತೀಯ ರೈಲ್ವೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವೆ ಕೇಸರಿ ಬಣ್ಣದ ವಂದೇ ಭಾರತ್ ರೈಲನ್ನು ಓಡಿಸುತ್ತಿದೆ. 2024 ಮಾರ್ಚ್ 15ರಿಂದ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿತ್ತು. ಯಾದಗಿರಿಯಲ್ಲಿ ನಿಲುಗಡೆ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು.
ಕಲ್ಬುರ್ಗಿ - ಬೆಂಗಳೂರಿ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಯಾದಗಿರಿಯಲ್ಲಿ ನಿಲುಗಡೆ ನೀಡುತ್ತಿರಲಿಲ್ಲ. ಇಲ್ಲಿನ ಜನರ ಒತ್ತಾಯದ ಮೇರೆಗೆ ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಪರಿಣಾಮವಾಗಿ ಜುಲೈ 20ರಿಂದ ರೈಲು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ. ತ್ವರಿತವಾಗಿ ಸ್ಪಂದಿಸಿದ ಭಾರತೀಯ ರೈಲ್ವೆ… pic.twitter.com/5sHbbhLySc
— G Kumar Naik (@IamGKumarNaik) July 18, 2024
ಸಂಸದರ ಟ್ವೀಟ್: ವಂದೇ ಭಾರತ್ ರೈಲನ್ನು ಯಾದಗಿರಿಯಲ್ಲಿ ನಿಲ್ಲಿಸುವ ಕುರಿತು ರಾಯಚೂರು ಸಂಸದ ಜಿ. ಕುಮಾರ್ ನಾಯಕ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಸಂಸದರು, "ಕಲಬುರಗಿ-ಬೆಂಗಳೂರಿ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಯಾದಗಿರಿಯಲ್ಲಿ ನಿಲುಗಡೆ ನೀಡುತ್ತಿರಲಿಲ್ಲ. ಇಲ್ಲಿನ ಜನರ ಒತ್ತಾಯದ ಮೇರೆಗೆ ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಪರಿಣಾಮವಾಗಿ ಜುಲೈ 20ರಿಂದ ರೈಲು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ. ತ್ವರಿತವಾಗಿ ಸ್ಪಂದಿಸಿದ ಭಾರತೀಯ ರೈಲ್ವೆ ಇಲಾಖೆಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.
ನೈಋತ್ಯ ರೈಲ್ವೆಯ ಮಾಹಿತಿಯಂತೆ ಜುಲೈ 20 ರಿಂದ ಅನ್ವಯವಾಗುವಂತೆ ರೈಲು ನಂಬರ್ 22232 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವಿನ ವಂದೇ ಭಾರತ್ ರೈಲು ಯಾದಗಿರಿಗೆ 9.44 ರಾತ್ರಿ ಆಗಮಿಸಿ, 9.45ಕ್ಕೆ ನಿರ್ಗಮಿಸಲಿದೆ.
ಜುಲೈ 21ರಿಂದ ಅನ್ವಯವಾಗುವಂತೆ ರೈಲು ನಂಬರ್ 22231 ಕಲಬುರಗಿ- ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವಿನ ವಂದೇ ಭಾರತ್ ರೈಲು ಯಾದಗಿರಿಗೆ ಬೆಳಗ್ಗೆ 5.44ಕ್ಕೆ ಆಗಮಿಸಿ, 5.55ಕ್ಕೆ ಹೊರಡಲಿದೆ.
ರೈಲು ನಿಲುಗಡೆಗೆ ಬೇಡಿಕೆ: ಈ ವಂದೇ ಭಾರತ್ ರೈಲು ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್, ಅನಂತಪುರ ಮತ್ತು ಯಲಹಂಕದಲ್ಲಿ ನಿಲುಗಡೆ ಹೊಂದಿದೆ. ಆದರೆ ಯಾದಗಿರಿಯಲ್ಲಿ ನಿಲುಗಡೆ ನೀಡಬೇಕು ಎಂದು ಪ್ರಯಾಣಿಕರು, ಯಾದಗಿರಿಯ ಜನರು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದರು. ಮಾರ್ಚ್ನಲ್ಲಿ ಈ ಕುರಿತು ಅಂತಿಮ ತೀರ್ಮಾನ ಮಾಡಲಾಗಿತ್ತು. ಆದರೆ ರೈಲು ನಿಲುಗಡೆ ದಿನಾಂಕವನ್ನು ನಿಗದಿ ಮಾಡಿರಲಿಲ್ಲ.
ರೈಲುಗಳ ನಿಲುಗಡೆ ವಿಚಾರದಲ್ಲಿ ಯಾದಗಿರಿಗೆ ಸದಾ ಅನ್ಯಾಯವಾಗುತ್ತಿದೆ. ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ರೈಲನ್ನು ಸಹ ಯಾದಗಿರಿಯಲ್ಲಿ ನಿಲ್ಲಿಸುತ್ತಿಲ್ಲ ಎಂದು ರೈಲ್ವೇ ಹೋರಾಟಗಾರರು, ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಯಾದಗಿರಿ ಜಿಲ್ಲೆಯಾಗಿ 14 ವರ್ಷಗಳು ಕಳೆದಿದೆ. ಆದರೆ ಇಂದಿಗೂ ಸಹ 8 ರಿಂದ 10 ಪ್ರಮುಖ ರೈಲುಗಳು ನಿಲುಗಡೆಗೊಳ್ಳುತ್ತಿಲ್ಲ. ಈಗ ವಂದೇ ಭಾರತ್ ಸಹ ನಿಲುಗಡೆ ಇಲ್ಲ. ರೈಲ್ವೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಯಾದಗಿರಿಯಲ್ಲಿ ರೈಲು ನಿಲ್ಲಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದರು.
ಕಲಬುರಗಿ-ಎಸ್ಎಂವಿ ಬೆಂಗಳೂರು ನಡುವೆ ರೈಲು ಸಂಖ್ಯೆ 22231 ಮತ್ತು ಎಸ್ಎಂವಿ ಬೆಂಗಳೂರು-ಕಲಬುರಗಿ ನಡುವೆ ರೈಲು ಸಂಖ್ಯೆ 22232 ರೈಲು ಸಂಚಾರ ನಡೆಸುತ್ತಿದೆ. ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳ ಕಾಲ ವಂದೇ ಭಾರತ್ ರೈಲು ಸಂಚರಿಸುತ್ತದೆ. ಈಗ ರೈಲು ಯಾದಗಿರಿಯಲ್ಲಿ ನಿಲುಗಡೆಗೊಳ್ಳುವುದರಿಂದ ಯಾದಗಿರಿಯ ಜನರಿಗೂ ಅನುಕೂಲವಾಗಲಿದೆ.












Click it and Unblock the Notifications