ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವನಸಮುದ್ರದ ಜಲಸಿರಿಗೆ ಜಾನಪದ ರಂಗು

By * ಶಿವರುದ್ರಪ್ಪ, ಮಳವಳ್ಳಿ
|
Google Oneindia Kannada News

ಮಂಡ್ಯ, ಆ. 9: ಮಳವಳ್ಳಿ ತಾಲೂಕಿನ ಶಿವನಸಮುದ್ರದ ಎರಡು ದಿನಗಳ 'ಗಗನಚುಕ್ಕಿ ಜಲಪಾತೋತ್ಸವ'ಕ್ಕೆ ನಾಡಿನ ವಿವಿಧ ಭಾಗಗಳಿಂದ ಜನಸಾಗರವೇ ಹರಿದುಬರುತ್ತಿದ್ದು, ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆದ ಜಾನಪದ ಝರಿ ಕಾರ್ಯಕ್ರಮ ಜಲಪಾತೋತ್ಸವಕ್ಕೆ ಹೊಸ ಮೆರುಗನ್ನು ನೀಡಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಜಲಪಾತೋತ್ಸವ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳು ಸೇರಿದಂತೆ ನಾಡಿನ ಹಲವಾರು ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದು, ಜಲಪಾತೋತ್ಸವಕ್ಕೆ ಒಂದು ರೀತಿಯ ಮೆರುಗನ್ನು ತಂದಿದೆ.ಜಲಪಾತೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸಾರಿಗೆ ಬಸ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ದೀಪಾಲಂಕಾರ ನೋಡುಗರ ಕಣ್ಮನಸೆಳೆಯುತ್ತಿದೆ.

ಜಾನಪದ ಝುರಿ
ಭವ್ಯವಾದ ಶಿವವೇದಿಕೆಯಲ್ಲಿ ನಡೆದ ಕಾರ್ಯಕ್ರಮಕ್ಕೂ ಮುನ್ನ ನಡೆದ ಜನಪದ ಝರಿ ಜಲಪಾತೋತ್ಸವಕ್ಕೆ ಮೆರುಗು ನೀಡಿತು. ವೇದಿಕೆಯಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ, ಗಾರುಡಿಗಗೊಂಬೆ, ಗೊರವರ ಕುಣಿತ, ಸುಗಮ ಸಂಗೀತ, ಜನಪದ ಗೀತೆಗಳು ಮುದನೀಡಿದವು. ಸ್ಥಳೀಯ ಕಲಾವಿದರಾದ ಬಸವಯ್ಯ ಮತ್ತು ತಂಡದವರು ನೀಡಿದ ಜಾನಪದ ಗೀತೆಗಳು ಮತ್ತೊಮ್ಮೆ ಕೇಳುವಂತಿದ್ದವು. ಮಂಗಳೂರಿನ ಕೀಲುಕುದುರೆ, ಕಾರವಾರದ ಸುಗ್ಗಿ ಕುಣಿತ, ಹಾಸನದ ಚಿಟ್‌ಮೇಳ ಸೇರಿದಂತೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಸಹ ಜನಮನ ಸೂರೆಗೊಂಡವು.

ಶನಿವಾರದಂದು ಉದ್ಘಾಟನೆಗೂ ಮುನ್ನ ಖ್ಯಾತ ಸುಗಮ ಸಂಗೀತ ಗಾಯಕರಾದ ಸಿ.ಅಶ್ವಥ್, ಕಿಕ್ಕೇರಿ ಕೃಷ್ಣಮೂರ್ತಿ, ಮಂಗಳ ರವಿ, ಸುನಿತಾ ಅವರ ತಂಡ ನಡೆಸಿಕೊಟ್ಟ 'ಕನ್ನಡವೇ ಸತ್ಯ' ಸಂಗೀತ ರಸಸಂಜೆ ಕಾರ್ಯಕ್ರಮ ವೇದಿಕೆ ಮುಂದೆ ಕುಳಿತಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾಮಚಂದ್ರಗೌಡ, ಕಾರ್ಯಕ್ರಮದ ಆಯೋಜಕರಾದದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ನರೇಂದ್ರ ಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರ ತಲೆದೂಗುವಂತೆ ಮಾಡಿತು.

ಸಿ.ಅಶ್ವಥ್‌ರವರ ಗಾಯನಕ್ಕೆ ನೆರದಿದ್ದ ಜನತೆ ಹುಚ್ಚೆದ್ದು ಕುಣಿದರು. ಕಾಂಕ್ರಮದ ಉದ್ಘಾಟನೆಯ ಬಳಿಕ ಸುರಮಣಿ ಪ್ರವೀಣ್ ಗೋಡ್ಖಿಂಡಿ ನಡಸಿಕೊಟ್ಟ ಕೃಷ್ಣ ದ ಫ್ಯೂಜನ್ ಬ್ಯಾಂಡ್ ಕಾರ್ಯಕ್ರಮ ಪ್ರವಾಸಿಗರನ್ನು ತಣಿಸಿತು. ಅಭಿನೇತ್ರಿ ನಿರುಪಮಾ ರಾಜೇಂದ್ರ ಅವರ ಸಂಭ್ರಮ ನೃತ್ಯ ರೂಪಕ ಗಮನ ಸೆಳೆಯಿತು. ರಾತ್ರಿ 10 ಗಂಟೆಗೆ ನಡೆದ ಲೇಜರ್ ಷೋ ಪ್ರವಾಸಿಗರನ್ನು ಮನಸೂರೆಮಾಡಿತು. ಲೇಜರ್ ಷೋನ ಕಿರಣಗಳು ಆಕಾಶದಲ್ಲಿ ಹರಿದಾಡಿದನ್ನು ಹಲವಾರು ಮಂದಿ ತಮ್ಮ ಕ್ಯಾಮರಾ ಮತ್ತು ಮೊಬೈಲ್‌ನಲ್ಲಿ ಸೆರೆಹಿಡಿದು ಸಂತಸಪಟ್ಟರು.

ಕರ್ನಾಟಕದ ಹೆಮ್ಮೆಯ ಗಗನಚುಕ್ಕಿ, ಭರಚುಕ್ಕಿ
*ಪ್ರಪಂಚದ ಪ್ರಮುಖ ಆಕರ್ಷಣೀಯ ತಡಸಲುಗಳ ಸಾಲಲ್ಲಿ ಗಗನಚುಕ್ಕಿ ಜಲಪಾತವೂ ಒಂದು.
*ಜಲಪಾತೋತ್ಸವವನ್ನು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರ ಆಯೋಜಿಸಿರುವ ಕಾರ್ಯಕ್ರಮ.
*ಕೃಷ್ಣರಾಜಸಾಗರ, ಕಬಿನಿ ಜಲಾಶಯಗಳು ಭರ್ತಿ ಆದ ಕಾರಣ ಗಗನಚುಕ್ಕಿ, ಭರಚುಕ್ಕಿ ಮೈದುಂಬಿ ಹರಿಯುತ್ತಿವೆ.
*1902 ರಲ್ಲಿ ಏಷ್ಯಾದ ಪ್ರಪ್ರಥಮ ಜಲವಿದ್ಯುತ್ ಯೋಜನೆ, ಶಿವನಸಮುದ್ರದಲ್ಲಿ ಸ್ಥಾಪಿಸಲಾಯಿತು.
*ಜಲಪಾತಕ್ಕೆ ವಿದ್ಯುತ್ ಅಲಂಕಾರದ ಮೆರುಗನ್ನು ನೀಡಿ ಅಂದಗಾಣಿಸಿದವರು ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ.
*2001ರಲ್ಲಿ ಮೊದಲ ಬಾರಿಗೆ ಜಲಪಾತೋತ್ಸವವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಗಿತ್ತು.

ಉಳಿದುಕೊಳ್ಳಲು ಸೂಕ್ತ ಮಾಹಿತಿಗೆ ಸಂಪರ್ಕಿಸಬೇಕಾದ ವಿಳಾಸ:

Georgia Sunshine Village
Hebbani Village, Shimshapura Road,
P.O. Box no.5, Malavalli Taluk-571430,
Mandya Dist, Karnataka,
Ph: 08231-247646/247783

(ದಟ್ಸ್ ಕನ್ನಡ ಪ್ರವಾಸೋದ್ಯಮ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X