'ಸಮಸ್ಯೆ ಇರುವುದು ರಾಹುಲ್ ಗಾಂಧಿಯಲ್ಲಿ': ಚುನಾವಣಾ ಚಾಣಕ್ಯನ ಹೊಸ ಬಾಂಬ್
ನವದೆಹಲಿ, ಅಕ್ಟೋಬರ್ 28: "ಹಲವು ದಶಕಗಳು ಕಳೆದರೂ ಬಿಜೆಪಿ ಎಲ್ಲಿಗೂ ಹೋಗುವುದಿಲ್ಲ. ಈಗ ಸಮಸ್ಯೆ ಇರುವುದು ರಾಹುಲ್ ಗಾಂಧಿಯಲ್ಲಿ, ಈ ನೈಜ ವಿಚಾರಗಳನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳುತ್ತಿಲ್ಲ, ಅರಿತುಕೊಳ್ಳುತ್ತಿಲ್ಲ," ಎಂದು ಹೇಳುವ ಮೂಲಕ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಹೊಸ ಬಾಂಬ್ ಹಾಕಿದ್ದಾರೆ.
ಗೋವಾದಲ್ಲಿ ಬುಧವಾರ ನಡೆದ ಪ್ರಶ್ನೆ ಹಾಗೂ ಉತ್ತರ ಅಧಿವೇಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, "ದಶಕಗಳು ಕಳೆದರೂ ಬಿಜೆಪಿ ಎಲ್ಲಿಗೂ ಹೋಗಲ್ಲ. ಇದನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳುತ್ತಿಲ್ಲ," ಎಂದಿದ್ದಾರೆ. ಈ ಮೂಲಕ ಗಾಂಧಿಗಳ ಜೊತೆ ಪ್ರಶಾಂತ್ ಕಿಶೋರ್ ಹಲವಾರು ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ ಎಂಬ ಸೂಚನೆ ದೊರೆತಿದೆ.
"ಹಲವಾರು ವರ್ಷಗಳ ಕಾಲ ಬಿಜೆಪಿಯು ಭಾರತ ರಾಜಕೀಯದಲ್ಲಿ ಕೇಂದ್ರದಲ್ಲಿ ಇರಲಿದೆ. ಅದು ಸೋಲಲಿ ಗೆಲ್ಲಲಿ. ಅದು ಬೇರೆ ವಿಚಾರ ಆದರೆ ಬಿಜೆಪಿ ಇರಲಿದೆ. ಸ್ವಾತಂತ್ಯ್ರ ದೊರೆತ 40 ವರ್ಷಗಳ ಕಾಲ ಕಾಂಗ್ರೆಸ್ ಹೇಗೆ ಇತ್ತೋ, ಅದೇ ರೀತಿಯಲ್ಲಿ ಬಿಜೆಪಿ ಇರಲಿದೆ," ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಎಲ್ಲಿಗೂ ಹೋಗಲ್ಲ ಇಲ್ಲಿಯೇ ಇರಲಿದೆ
"ಭಾರತದ ರಾಜಕೀಯದಲ್ಲಿ ಬಿಜೆಪಿಯು ಕೇಂದ್ರವಾಗಿರಲಿದೆ. ಬಿಜೆಪಿ ಗೆಲಲ್ಲಿ ಸೋಲಲಿ, 40 ವರ್ಷ ಕಾಂಗ್ರೆಸ್ ಹೇಗೆ ಇತ್ತೋ ಹಾಗೆಯೇ ಬಿಜೆಪಿ ಇರಲಿದೆ. ಬಿಜೆಪಿ ಎಲ್ಲಿಗೂ ಹೋಗುವುದಿಲ್ಲ. ಒಂದು ಬಾರಿ ಭಾರತದಲ್ಲಿ ಶೇಕಡ 30 ರಷ್ಟು ಮತವನ್ನು ಪಡೆದರೆ ಬಳಿಕ ಶೀಘ್ರವೇ ರಾಜಕೀಯದಿಂದ ಹೊರ ಹೋಗಲಾರರು. ಆದ್ದರಿಂದ ಜನರು ಆಕ್ರೋಶಿತರಾಗಿದ್ದಾರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ದೂರ ಮಾಡುತ್ತಾರೆ ಎಂಬ ಮಾತುಗಳ ಬಲೆಗೆ ಬೀಳಬೇಡಿ," ಎಂದು ಹೇಳಿದ್ದಾರೆ.

ಸಮಸ್ಯೆ ಇರುವುದು ರಾಹುಲ್ ಗಾಂಧಿಯಲ್ಲಿ
"ಜನರು ನರೇಂದ್ರ ಮೋದಿಯನ್ನು ರಾಜಕೀಯದಿಂದ ಎಸೆಯಬಹುದು. ಆದರೆ ಬಿಜೆಪಿಯು ಎಲ್ಲಿಗೂ ಹೋಗಲ್ಲ. ಬಿಜೆಪಿಯವರು ಇಲ್ಲಿಯೇ ಇರುತ್ತಾರೆ. ಹಲವಾರು ದಶಕಗಳ ಕಾಲ ರಾಜಕೀಯದಲ್ಲೇ ಇರುತ್ತಾರೆ. ಯಾವುದೇ ಅವಸರವಿಲ್ಲ. ಆದರೆ ಇಲ್ಲಿ ಸಮಸ್ಯೆ ಇರುವುದು ರಾಹುಲ್ ಗಾಂಧಿಯಲ್ಲಿ. ಪ್ರಧಾನಿ ಮೋದಿಯನ್ನು ಪ್ರಧಾನಿ ಸ್ಥಾನದಿಂದ ಕಿತ್ತೆಸೆಯುವುದು ಕೆಲವೇ ಕ್ಷಣಗಳ ಕೆಲಸ ಎಂದು ರಾಹುಲ್ ಗಾಂಧಿ ಅಂದು ಕೊಂಡಿದ್ದಾರೆ. ಆದರೆ ಆ ರೀತಿ ಆಗುವುದಿಲ್ಲ," ಎಂದು ತಿಳಿಸಿದರು. "ಶಕ್ತಿ ಎಷ್ಟಿದೆ ಎಂಬ ಬಗ್ಗೆ ನೀವು ಪರಿಶೀಲನೆ ನಡೆಸದ, ಅರ್ಥ ಮಾಡಿಕೊಳ್ಳದ ಹಾಗೂ ಅರಿತುಕೊಳ್ಳದ ಹೊರತಾಗಿ ನಿಮಗೆ ಅವರ ವಿರುದ್ಧವಾಗಿ ಹೋರಾಡಲು, ಅವರನ್ನು ಸೋಲಿಸಲು ಸಾಧ್ಯವಾಗುವುದಿಲ್ಲ," ಎಂದು ಕೂಡಾ ಪ್ರಶಾಂತ್ ಕಿಶೋರ್ ಉಲ್ಲೇಖ ಮಾಡಿದ್ದಾರೆ.

ಬಿಜೆಪಿ ನಾಯಕರು ಹೇಳುವುದು ಏನು?
ಇನ್ನು ಪ್ರಶಾಂತ್ ಕಿಶೋರ್ನ ವಿಡಿಯೋವನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿರುವ ಬಿಜೆಪಿಯ ಅಜಯ್ ಸೆಹ್ರಾವತ್, "ಮುಂಬರುವ ದಶಕಗಳಲ್ಲಿ ಭಾರತೀಯ ರಾಜಕೀಯದಲ್ಲಿ ಬಿಜೆಪಿಯು ಒಂದು ಪ್ರಬಲ ಶಕ್ತಿಯಾಗಿ ಮುಂದುವರಿಯಲಿದೆ ಎಂದು ಅಂತಿಮವಾಗಿ ಪ್ರಶಾಂತ್ ಕಿಶೋರ್ ಒಪ್ಪಿಕೊಂಡಿದ್ದಾರೆ. ಆದರೆ ಅಮಿತ್ ಶಾ ಜೀ ಈ ಹಿಂದೆಯೇ ಇದನ್ನು ಘೋಷಣೆ ಮಾಡಿದ್ದಾರೆ," ಎಂದು ಬರೆದುಕೊಂಡಿದ್ದಾರೆ.

ಗಾಂಧಿಗಳ ಜೊತೆ ಪ್ರಶಾಂತ್ ಮಾತುಕತೆ ವಿಫಲ?
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಗೋವಾದಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ನ ಪ್ರಚಾರದ ಕಾರ್ಯಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುತ್ತಿದ್ದಾರೆ. ಮುಂಬರುವ ವರ್ಷ ಗೋವಾದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿಯನ್ನು ತೃಣಮೂಲ ಕಾಂಗ್ರೆಸ್ ಮಾಡಿಕೊಳ್ಳುತ್ತಿದೆ. ಈಗಾಗಲೇ ಕಾಂಗ್ರೆಸ್ನ ನಾಯಕರುಗಳು ಟಿಎಂಸಿಗೆ ಸೇರ್ಪಡೆ ಆಗಿದ್ದಾರೆ. ಚುನಾವಣಾ ಚಾಣಕ್ಯ ಎಂದೇ ಹೆಸರುವಾಸಿಯಾದ ಪ್ರಶಾಂತ್ ಕಿಶೋರ್ ಎಂ ಕೆ ಸ್ಟಾಲಿನ್ ಹಾಗೂ ಮಮತಾ ಬ್ಯಾನರ್ಜಿಯ ಗೆಲುವಿಗೂ ಮುನ್ನ ಇವರಿಬ್ಬರ ಪ್ರಚಾರ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಆ ಬಳಿಕ ಇತ್ತೀಚೆಗೆ ಹಲವು ಬಾರಿ ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆಯಲ್ಲಿ ಪ್ರಶಾಂತ್ ಕಿಶೋರ್ ಮಾತುಕತೆ ನಡೆಸಿದ್ದರು. ಆದರೆ ಈಗ ಪ್ರಶಾಂತ್ ಕಿಶೋರ್ನ ಹೇಳಿಕೆಯನ್ನು ನೋಡಿದಾಗ ಈ ಮಾತುಕತೆ ಫಲಿಸಿಲ್ಲ ಎಂಬ ಸೂಚನೆಯು ದೊರೆತಿದೆ. ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್ನಲ್ಲಿ ಇರುವ ಬೇರೆ ಸಮಸ್ಯೆಗಳ ಬಗ್ಗೆ ಬೊಟ್ಟು ಮಾಡಿ ತೋರಿಸಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications