ಸ್ವಾಮೀಜಿ, ಬೆಂಬಲಿಗರ ಶಕ್ತಿ ಬಳಸದೇ ಸೌಮ್ಯ ನಿರ್ಗಮನ; ಸಿದ್ದರಾಮಯ್ಯರ ಸಂಯಮದ ನಡೆಗೆ ಭಾರೀ ಮೆಚ್ಚುಗೆ
ಬೆಂಗಳೂರು: ಜನಪರ ಆಡಳಿತ ನೀಡಿ ಅಪಾರ ಅಭಿಮಾನಿ ಬಳಗ, ಸದಾ ತಮ್ಮನ್ನು ಬೆಂಬಲಿಸುವ ದೊಡ್ಡ ಆಪ್ತರ ಬಣವನ್ನೂ ಹೊಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಿದ ನಡೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ರಾಜೀನಾಮೆಯೊಂದಿಗೆ 'ಮೌಲ್ಯಯುತ ರಾಜಕಾರಣದ ಯುಗಾಂತ್ಯ' ಅಂತಲೂ ಬಣ್ಣಿಸಿದ್ದಾರೆ. ಅಷ್ಟರ ಮಟ್ಟಿಗಿನ ರಾಜಕೀಯ ಛಾಪು ಮೂಡಿಸಿದ್ದ ಸಿದ್ದರಾಮಯ್ಯ ಅವರು ತುಸು ಭಾವುಕರಾಗಿ ಪದತ್ಯಾಗ ಮಾಡಿದ್ದಾರೆ. ದೆಹಲಿ ಸಭೆಯಿಂದ ಇಂದಿನ ರಾಜೀನಾಮೆ ಪ್ರಕ್ರಿಯೆವರೆಗೂ ಅವರು ನಡೆದುಕೊಂಡ ರೀತಿ, ತೋರಿದ ಮುತ್ಸದ್ಧಿತನವು ಅವರ ಮೇಲೆ ಹೆಮ್ಮೆ ಹೆಚ್ಚಾಗುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೌದು, ಸಿದ್ದರಾಮಯ್ಯ ಅವರಿಗೆ ತಾವು ಮುಖ್ಯಮಂತ್ರಿ ಸ್ಥಾನದಿಂದ ಹೊರ ಬರಬೇಕಾಗುತ್ತದೆ. ಇದಕ್ಕೆ ದಿನಾಂಕ, ಸಮಯ ಎಲ್ಲವು ನಿಗದಿ ಆಗಿದೆ ಎಂದು ದೆಹಲಿಯಲ್ಲಿದ್ದಾಗಲೇ ಗೊತ್ತಾಗಿತ್ತು. ಹೀಗಿದ್ದರು ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ರಾಜಕಾರಣಕ್ಕೆ ಮಾದರಿ ಎಂದರೆ ತಪ್ಪಾಗಲಾರದು. ರಾಜೀನಾಮೆ ಕೊಡುವುದು ಖಚಿತವಾಗುತ್ತಿದ್ದಂತೆ ಪಕ್ಷಕ್ಕೆ ತೊಂದರೆ ಆಗದಂತೆ ಅವರ ವಹಿಸಿದ ಕಾಳಜಿ ಎದ್ದು ಕಾಣುತ್ತಿತ್ತು. ಕಾಂಗ್ರೆಸ್ಗೆ ಕಿಂಚಿತ್ತು ತೊಂದರೆ ಆಗದಂತೆ, ಮುಜುಗರ ಬಾರದಂತೆ, ವರಿಷ್ಠ ಮೇಲೆ ಯಾರೊಬ್ಬರು ಮುನಿಸಿಕೊಳ್ಳದೇ 'ನುಡಿದಂತೆ ನಡೆದಿಕೊಳ್ಳುವ' ಸಿದ್ದರಾಮಯ್ಯರ ನಿರ್ಧಾರಕ್ಕೆ ಬೆಂಬಲಿಗರು ಬದ್ಧರಾಗುವಂತೆ ಮಾಡಿದರು.

ಅಹಿಂದ ನಾಯಕ ಸಿದ್ದರಾಮಯ್ಯ ನಡೆ ಮಾದರಿ
ಸಿದ್ದರಾಮಯ್ಯ ಅಲ್ಪಸಂಖ್ಯಾತ, ಹಿಂದುಳಿತ ಹಾಗೂ ದಲಿತ (ಅಹಿಂದ) ಸಮುದಾಯಗಳ ನಾಯಕ ಎಂಬುದು ಎಲ್ಲರಿಗೂ ಗೊತ್ತು. ಸರ್ಕಾರ ರಚನೆ ವೇಳೆ ಇವರೇ ಸಿಎಂ ಆಗಬೇಕು ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದ ಅವರ ಆಪ್ತರ ಬಳಗವು ಇವತ್ತು ಅವರೊಂದಿಗಿತ್ತು. ಮನಸ್ಸು ಮಾಡಿದ್ದರೆ ಈ ವೇಳೆ ಬೆಂಬಲಿತ ಸಮುದಾಯ ಸ್ವಾಮೀಜಿಗಳು ಬೆಂಬಲ ಪಡೆಯಬಹುದಿತ್ತು. ಶಾಸಕರು, ಸಚಿವರಿಂದ ಹೈಕಮಾಂಡ್ ಮೇಲೆ ಒತ್ತಡ ಹೇರಬಹುದಿತ್ತು. ವರಿಷ್ಠರ ನಿರ್ಧಾರವನ್ನು ಆಕ್ಷೇಪಿಸಲು, ಪ್ರಶ್ನಿಸಲು, ಅದರ ವಿರುದ್ಧ ಧ್ವನಿ ಎತ್ತಲು ಸಾಕಷ್ಟು ಅವಕಾಶಗಳು ಇತ್ತು. ಎದುರಾಗುವ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಚಾಣಾಕ್ಷತನವು ಸಿದ್ದರಾಮಯ್ಯ ಅವರಲ್ಲಿತ್ತು. ಆದರೆ ಅವರು ಸಂಯಮ ಮೀರಲಿಲ್ಲ.
ಇದ್ಯಾವುದನ್ನು ಮಾಡದೇ ರಾಜೀನಾಮೆ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಿದ್ದು ಸ್ವತಃ ಸಿದ್ದರಾಮಯ್ಯ ಅವರು. ಸದ್ದು ಗದ್ದಲವಿಲ್ಲದೇ ಕೊನೆಯ ಹಂತದವರೆಗೂ ತಾವು ಕೊಟ್ಟ ಮಾತಿನಂತೆ ನಡೆದುಕೊಂಡು ಅಧಿಕಾರದಿಂದ ನಿರ್ಗಮಿಸಿದರು. ಸಿದ್ದರಾಮಯ್ಯರ ಈ ಮುತ್ಸದ್ಧಿತನದ ನಡೆಗೆ ಅವರನ್ನು ಬಲ್ಲ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ನಡೆ ಇತರರಿಗೂ ಮಾದರಿ ಎಂದು ಹಾಡಿ ಹೊಗಳಿದ್ದಾರೆ. ಸಿದ್ದರಾಮಯ್ಯ ಅವರ ಇಂದಿನ ಭಾವುಕ ಸನ್ನಿವೇಶದಲ್ಲಿ ಎಲ್ಲರೂ ಜೊತೆಯಾಗಿದ್ದಾರೆ. ರಾಜಕೀಯದಲ್ಲಿ ಇಂತಹ ಬೆಳವಣಿಗೆಗಳು ಸಿದ್ದರಾಮಯ್ಯ ಅವರಿಂದ ಮಾತ್ರವೇ ಸಾಧ್ಯ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ಜೀವನ ಸುಗಮವಾಗುವಂತೆ ಹರಿಸಿದ್ದಾರೆ.













Click it and Unblock the Notifications