ಆರ್ ಬಿಐ ಹೇಳಿದ್ದು ಒಂದು, ಮ್ಯಾನೇಜರ್ ಮಾಡಿದ್ದು ಇನ್ನೊಂದು!
ಕಪ್ಪುಹಣವನ್ನು ತಡೆಯುತ್ತೇವೆ ಎನ್ನುತ್ತಿರುವ ಕೇಂದ್ರ ಸರಕಾರ ಜನಸಾಮಾನ್ಯರು ಸ್ವಲ್ಪ ಮಟ್ಟಿಗೆ ತೊಂದರೆ ಸಹಿಸಬೇಕು ಎನ್ನುತ್ತಿದೆ. ಎಂಥ ತೊಂದರೆ, ಎಷ್ಟು ದಿನ ಎಂಬುದನ್ನು ನಿಖರವಾಗಿ ತಿಳಿಸುತ್ತಿಲ್ಲ.
ಸೋಮವಾರ ನಿಜಕ್ಕೂ ಆಕ್ರೋಶದ ದಿನ ಆಗಬಹುದು ಎಂಬ ನಿರೀಕ್ಷೆ ನನಗಿರಲಿಲ್ಲ. ಆದರೆ ಬ್ಯಾಂಕ್ ನಲ್ಲಿ ಚೆಕ್ ಹಾಕಲು ಹೋದಾಗ ಮ್ಯಾನೇಜರ್ ನೀಡಿದ ಉತ್ತರ ಇತ್ತಲ್ಲಾ ಅದನ್ನು ಕೇಳಿ ಸುಮ್ಮನಿದ್ದರೆ ಪ್ರಯೋಜನವಿಲ್ಲ ಅನಿಸಿ, ಹೀಗೊಂದು ಪತ್ರ ಬರೆಯಬೇಕಾಯಿತು. ನನ್ನ ಹೆಸರು ಶ್ರೀನಿವಾಸ, ಕೆನರಾ ಬ್ಯಾಂಕ್ ನ ಬೆಂಗಳೂರಿನ ಬನಶಂಕರಿ ಮೂರನೇ ಹಂತದ ಡಿಎಸ್ ಇ ಆರ್ ಟಿ ಶಾಖೆಯಲ್ಲಿ ಉಳಿತಾಯ ಖಾತೆ ಇದೆ.
ಕಳೆದ ಶುಕ್ರವಾರ ಬ್ಯಾಂಕ್ ಖಾತೆಗೆ 28 ಸಾವಿರ ರುಪಾಯಿ (1000ದ ನೋಟುಗಳು) ಹಾಕಿ, ಚೆಕ್ ಮೂಲಕ 24 ಹಣ ತೆಗೆಯುವಂತೆ ನನ್ನ ಹೆಂಡತಿಗೆ ಹೇಳಿದ್ದೆ. ಆಕೆ ಅದೇ ರೀತಿ ದುಡ್ಡು ಹಾಕಿ, ಚೆಕ್ ಹಾಕಲು ಮುಂದಾಗಿದ್ದಾಳೆ. 'ಈಗ ಶಾಖೆಯಲ್ಲಿ ಅಷ್ಟು ಹಣ ಇಲ್ಲ. ಸೋಮವಾರ ಬನ್ನಿ' ಅಂತ ಹೇಳಿದ ಮ್ಯಾನೇಜರ್ ವಾಪಸ್ ಕಳಿಸಿದ್ದಾರೆ.[ನೋಟು ನಿಷೇಧ ಪರಿಣಾಮ: ರೂ.500ರಲ್ಲಿ ಮುಗಿದ ಮದುವೆ!]
ಅವರು ತಿಳಿಸಿದ ರೀತಿಯಲ್ಲೇ ಸೋಮವಾರ ಬೆಳಗ್ಗೆ ಮತ್ತೆ ಬ್ಯಾಂಕ್ ಗೆ ಹೋಗಿ ಇಪ್ಪತ್ನಾಲ್ಕು ಸಾವಿರದ ಚೆಕ್ ಹಾಕಿದರೆ, 'ಇಲ್ಲ, ನಾಲ್ಕು ಸಾವಿರದ ಮೇಲೆ ಹಣ ಡ್ರಾ ಮಾಡಲು ಸಾಧ್ಯವಿಲ್ಲ. ನಮಗೆ ಎರಡೇ ಲಕ್ಷ ರುಪಾಯಿ ಹಣ ಬಂದಿದೆ' ಎಂದು ಮತ್ತೆ ಅದೇ ಮಾತನ್ನು ಹೇಳಿದ ಮ್ಯಾನೇಜರ್, ಉಳಿದ ಶಾಖೆಗಳಲ್ಲಿ ಎರಡು ಸಾವಿರ ನೀಡ್ತಿದ್ದಾರೆ, ನಾವು ನಾಲ್ಕು ಸಾವಿರ ಕೊಡ್ತಿದ್ದೀವಿ' ಎಂದು ವಾಪಸ್ ಕಳಿಸಿದ್ದಾರೆ.[ನೋಟು ರದ್ದು ಸಲಹೆಗಾರನಿಗೇ ಸರಕಾರದ ಕ್ರಮ ಖುಷಿ ತಂದಿಲ್ಲ!]
ಚೆಕ್ ನ ಹಾಕಿ, ಹಣ ನೀಡುವುದಿಲ್ಲ ಎಂದಾದರೆ ಅದರ ಹಿಂಭಾಗ ಕಾರಣವನ್ನು ತಿಳಿಸಬೇಕಲ್ಲವೇ? ಉಹುಂ, ಅದಕ್ಕೆ ಕೂಡ ಬ್ಯಾಂಕ್ ಮ್ಯಾನೇಜರ್ ಸಿದ್ಧರಿಲ್ಲ. ರಿಸರ್ವ್ ಬ್ಯಾಂಕ್ ನಿಂದ ಹಣ ಬಂದಿಲ್ಲ ಎಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ ವಿನಾ, ಚೆಕ್ ನ ಹಾಕಿದ ನಂತರ ಕಾರಣವನ್ನು ಲಿಖಿತ ರೂಪದಲ್ಲಿ ನೀಡಲು ಸುತರಾಂ ತಯಾರಿಲ್ಲ.
ನನ್ನ ಸ್ನೇಹಿತನ ತಂಗಿ ಮದುವೆಗಾಗಿ ನನ್ನ ಬಳಿ ಆತ ಇಪ್ಪತ್ತೈದು ಸಾವಿರ ಹಣ ಕೇಳಿದ್ದ. ಡಿಸೆಂಬರ್ 1ಕ್ಕೆ ಮದುವೆ. ಹೋಟೆಲ್ ಗೆ, ಚಪ್ಪರ ಹಾಕಿದವರಿಗೆ ಇತರ ತುರ್ತು ಕೆಲಸಗಳಿಗೆ ಹಣ ಕೊಡಲೇಬೇಕಿತ್ತು. ಅದಕ್ಕಾಗಿ ಹಣ ನೀಡಲು ನಾನು ಒಪ್ಪಿದ್ದೆ. ವಾರದಲ್ಲಿ ಇಪ್ಪತ್ನಾಲ್ಕು ಸಾವಿರ ಡ್ರಾ ಮಾಡುವ ಅವಕಾಶವಿದೆ. ನನ್ನದೇನೂ ಕಪ್ಪುಹಣವಲ್ಲ. ನಿಯಮದ ಪ್ರಕಾರ ಚೆಕ್ ಹಾಕಿದ್ದೇನೆ. ಇಷ್ಟೆಲ್ಲ ಆದ ನಂತರವೂ ಹಣ ಕೊಡುವುದಿಕ್ಕೆ ಅಗಲ್ಲ ಎಂದು ಮ್ಯಾನೇಜರ್ ಹೇಳಿದ್ದನ್ನು ಹೇಗೆ ಸಹಿಸಿಕೊಳ್ಳಬಹುದು?[ನೋಟಿನ ನಂಟು ಬಿಡಿಸಿಕೊಂಡು ಇಹಲೋಕ ತ್ಯಜಿಸಿದವರು 55 ಮಂದಿ]
ನನ್ನ ಸ್ನೇಹಿತ ನಾನು ಹಣ ಕೊಡುತ್ತೀನಿ ಎಂದು ಹೇಳಿದ್ದನ್ನೇ ನಂಬಿ ಉಳಿದ ಖರ್ಚನ್ನು ಸಂಭಾಳಿಸಿದ್ದಾನೆ. ಈ ಸರಕಾರದ ನಿಯಮಗಳು ಜನಸಾಮಾನ್ಯರ ಪರವಾಗಿದೆಯಂತೆ. ಒಂದಿಷ್ಟು ಸಹಿಸಿದರೆ ಸುಭಿಕ್ಷವಾದ ದೇಶ ನಮ್ಮದಾಗುತ್ತದಂತೆ. ಸ್ನೇಹಿತನಿಗೆ ಮಾತು ಕೊಟ್ಟು, ಮದುವೆ ವೇಳೆ ಹೀಗಾದರೆ ಹೇಗೆ ಸಹಿಸ್ತಾರೆ?
ಇದು ನನ್ನೊಬ್ಬನ ಸ್ಥಿತಿ ಅಲ್ಲ. ಇನ್ನೊಬ್ಬ ಸ್ನೇಹಿತ ಹೌಸಿಂಗ್ ಲೋನ್ ತೆಗೆದುಕೊಂಡು ಮನೆ ಕಟ್ಟಿಸ್ತಿದ್ದಾನೆ. ಅವನಿಗೂ ಅಂಥದ್ದೇ ಸಮಸ್ಯೆ. ಹೌಸಿಂಗ್ ಲೋನ್ ತೆಗೆದುಕೊಂಡಿರುವುದಕ್ಕೆ ಸಾಕ್ಷಿ ಇದೆ. ಹಣ ಖಾತೆಗೆ ಜಮೆಯಾಗಿರುವುದಕೂ ಸಾಕ್ಷ್ಯ ಇದೆ. ಆದರೆ ಡ್ರಾ ಮಾಡುವುದಕ್ಕೆ ಮಿತಿ ಅಂತೆ.[10 ಪ್ರಶ್ನೆಗಳನ್ನು ಹುಟ್ಟುಹಾಕಿದ ದಿಢೀರ್ ತೀರ್ಮಾನಗಳು]
ವಾರವಾರ ಕೂಲಿ ಹಣ ಕೊಡುವುದಕ್ಕೆ ಅಗದೆ, ಮಟೀರಿಯಲ್ ತರಿಸುವುದಕ್ಕೆ ಆಗದೆ ಅವನು ಪಡುತ್ತಿರುವ ಪಾಡು ನೋಡಲಿಕ್ಕೆ ಆಗುವುದಿಲ್ಲ. ಜನ ಸಾಮಾನ್ಯರ ಎದುರು ನೋಟು ಮುದ್ರಣದ ಸ್ಥಿತಿ ಏನು ಅಂತ ಆರ್ ಬಿಐ ತಿಳಿಸಲಿ. ಇಪ್ಪತ್ನಾಲ್ಕು ಸಾವಿರ ತೆಗೆದುಕೊಳ್ಳಬಹುದು ಎಂದು ಸುಮ್ಮ ಸುಮ್ಮನೆ ಹಾಕೋದು. ಬ್ಯಾಂಕ್ ಹತ್ತಿರ ಹೋದ ಮೇಲೆ ಇಲ್ಲದಿರುವುದು- ಇದಾ ಪರಿಸ್ಥಿತಿಯನ್ನು ನಿಭಾಯಿಸುವ ರೀತಿ?
ಕೆನರಾ ಬ್ಯಾಂಕ್ ನ ಬೆಂಗಳೂರಿನ ಬನಶಂಕರಿ ಮೂರನೇ ಹಂತದ ಡಿಎಸ್ ಇ ಆರ್ ಟಿ ಶಾಖೆ ದೂರವಾಣಿ ಸಂಖ್ಯೆ 080-26423088.